ಬೆಂಗಳೂರು: ರಾಜ್ಯ ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಪೌರ ರಕ್ಷಣೆ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ ನಾಳೆ (ಜು.13) ಬೆಳಗ್ಗೆ 11:30 ಗಂಟೆಗೆ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಂದನೆಗಳನ್ನು ಸ್ವೀಕರಿಸಿ ಪದಕಗಳನ್ಉ ಪ್ರದಾನ ಮಾಡಲಿದ್ದಾರೆ. ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕರು, ಗೃಹರಕ್ಷಕ ದಳದ ಮಹಾ ಸಮಾದೇಷ್ಟರು, ಪೌರ ರಕ್ಷಣೆ ನಿರ್ದೇಶಕರು ಅಗ್ನಿಶಾಮ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರು ಮತ್ತು ವಿಪತ್ತು ಸ್ಪಂದನಾ ಪಡೆಯ ಮಹಾನಿರ್ದೇಶಕರ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ.
ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಹಾಗೂ ಮುಖ್ಯಮಂತ್ರಿ ಪದಕ ವಿಚೇತರಾದ ದ.ಕ ಜಿಲ್ಲೆಯ ಉಳ್ಳಾಲ ಘಟಕದ ಗೃಹರಕ್ಷಕರಾದ ಹೂವಪ್ಪ ಬೆಳ್ಳಾರೆ, ಬೆಳ್ತಂಗಡಿ ಘಟಕದ ಶ್ರೀ ಅಪ್ಪು ಮತ್ತು ಉಡುಪಿ ಜಿಲ್ಲೆಯ ಕಾಪು ಘಟಕದ ಲಕ್ಷ್ಮೀನಾರಾಯಣ ರಾವ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
2015, 2016, 2018 ಮತ್ತು 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ನೀಡಿ ಗೃಹರಕ್ಷಕರನ್ನು ಗೌರವಿಸಲಾಗುತ್ತಿದೆ. ಒಟ್ಟು 63 ಮಂದಿ ಈ ಬಾರಿ ಪದಕಗಳನ್ನು ಪಡೆಯಲಿದ್ದಾರೆ.
ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು 2019ನೇ ಸಾಲಿನ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಸಮಾದೇಷ್ಟರಾದ ಡಾ. ಕೆ. ಪ್ರಶಾಂತ್ ಶೆಟ್ಟಿ ಅವರು 2015ನೇ ಸಾಲಿನ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
Key Words: Home Guards, CM Medals, Civil Defence, ಗೃಹರಕ್ಷಕ ದಳ, ಮುಖ್ಯಮಂತ್ರಿಗಳ ಪದಕ ಪ್ರದಾನ