ಒಡಿಯೂರು ಸ್ವಾಮೀಜಿ ಷಷ್ಠ್ಯಬ್ಧಿ ಪ್ರಯುಕ್ತ ಆನ್ ಲೈನ್ ಯೋಗ ಶಿಬಿರ

Upayuktha
0

 ಯೋಗದಿಂದ ರೋಗ ದೂರ: ಭಾಸ್ಕರ ರೈ ಕುಕ್ಕುವಳ್ಳಿ


ಮಂಗಳೂರು: 'ಯೋಗದಿಂದ ಶಾರೀರಿಕ ಕ್ಷಮತೆ ಹೆಚ್ಚುತ್ತದೆ. ಅಂಗಸಾಧನೆಯೊಂದಿಗೆ ಆತ್ಮಾನುಸಂಧಾನಕ್ಕೆ ಅನುವು ಮಾಡುವ ಯೋಗಸಾಧನೆ ನಮ್ಮ ದಿನಚರಿಯ ಭಾಗವಾಗಬೇಕು. ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುವುದದಿಂದ ಎಂತಹ ಮಾರಕ ರೋಗಗಳನ್ನೂ ದೂರ ಮಾಡಬಹುದು. ಕೊರೋನಾದಂತಹ ಮಹಾಮಾರಿಗೆ ತುತ್ತಾಗದಂತೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯೋಗ ಸಹಕಾರಿ' ಎಂದು ಯಕ್ಷಗಾನ ವಿದ್ವಾಂಸ-ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.


ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಟ್ಯಬ್ದ ವರ್ಷಾಚರಣೆ ಪ್ರಯುಕ್ತ ಯೋಗ ಗುರು ಡಾ. ಎಂ. ಜಗದೀಶ್ ಶೆಟ್ಟಿ ಬಿಜೈ ಇವರ ನೇತೃತ್ವದಲ್ಲಿ ಆಯೋಜಿಸಿರುವ ಆನ್ಲೈನ್ ಉಚಿತ ಯೋಗ ಶಿಬಿರದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.


ಆತ್ಮ ಸಂಯಮ:

'ದೇಶದ ಗಡಿ ಮೀರಿ ಯೋಗ ಶಿಕ್ಷಣ ನೀಡಿ ಜಗತ್ತನ್ನು ಒಟ್ಟು ಮಾಡಿದ ಸಾಧಕರು ಡಾ ಎಂ ಜಗದೀಶ್ ಶೆಟ್ಟಿ .ಪ್ರಪಂಚವೇ ತಲ್ಲಣಗೊಳ್ಳುತ್ತಿರುವ ಪ್ರಸಕ್ತ ಸ್ಥಿತಿಯಲ್ಲಿ ಯೋಗಾಭ್ಯಾಸದ ಮೂಲಕ ಆರೋಗ್ಯವನ್ನು ಸ್ಥಿರಗೊಳಿಸುವುದು ಒಂದು ರೀತಿಯ ಸಾಧನೆಯೇ ಸರಿ' ಎಂದ ಅವರು 'ಯೋಗದ ಮೂಲಕ ಶರೀರ ಸ್ವಾಸ್ಥ್ಯವನ್ನು ಕಾಯ್ದುಕೊಂಡು ಪ್ರೀತಿಯಿಂದ, ಮಾನವೀಯ ನಡವಳಿಕೆ ಹಾಗೂ ಸೌಹಾರ್ದತೆಯಿಂದ ಉತ್ತಮ ಜೀವನವನ್ನು ಸಾಧಿಸಬಹುದು; ನಮ್ಮದೇ ಅಂಗಗಳು ನಮಗೇ ಶತ್ರುವಾಗುವ ಸಂಭವವಿದೆ. ಕಿವಿ, ನಾಲಗೆ, ಕಣ್ಣು ಮುಂತಾದ ನಮ್ಮ ಇಂದ್ರಿಯಗಳು ಬೇಡದ್ದನ್ನು ಕೇಳುವ - ನೋಡುವ, ಅತಿಯಾಗಿ ಸವಿಯುವ ಚಪಲತೆಯನ್ನು ನಿಗ್ರಹಿಸಲು ಆತ್ಮ ಸಂಯಮವಿರಬೇಕು. ಈ ನಿಯಂತ್ರಕ ಶಕ್ತಿಯನ್ನು ನಮ್ಮ ದೇಹದಲ್ಲಿ ಉತ್ಪಾದಿಸಲು ಯೋಗಾಭ್ಯಾಸಕ್ಕಿಂತ ದೊಡ್ಡ ಮಾರ್ಗ ಬೇರೊಂದಿಲ್ಲ. ತಮ್ಮ ಸರ್ವ ಶಕ್ತಿಯನ್ನು ಧಾರೆಯೆರೆದು ಸಮಾಜಕ್ಕೆ ಉಪಯೋಗವಾಗುವಂತೆ ಬದುಕುವ ಧ್ಯೇಯ ನಮ್ಮದಾಗಬೇಕು' ಎಂದು ನುಡಿದರು.


ಭಾರತದ ಕೊಡುಗೆ:

'ವಿಶ್ವ ಸಂಸ್ಥೆಯೆದುರು ಯೋಗದ ಮಹತ್ವವನ್ನು ಸ್ಥಾಪಿಸಿದ ನಮ್ಮ ಪ್ರಧಾನ ಮಂತ್ರಿಗಳು ವರ್ಷದಲ್ಲೇ ಹೆಚ್ಚು ಸುಧೀರ್ಘವಾದ ಜೂನ್ 21ರಂದು ವಿಶ್ವಾದ್ಯಂತ ಯೋಗ ದಿನಾಚರಣೆಯನ್ನು ಘೋಷಿಸುವಂತೆ  ಮಾಡಿ  ಇಡೀ ಪ್ರಪಂಚಕ್ಕೆ ಭಾರತದ ಕೊಡುಗೆಯನ್ನು ಸಾರಿದರು' ಎಂದು ಹೇಳಿದ ಭಾಸ್ಕರ ರೈ 'ಧೀ ಶಕ್ತಿಯನ್ನು ಉದ್ದೀಪನಗೊಳಿಸುವ ಶಕ್ತಿಯಿರುವುದು ಸೂರ್ಯ ದೇವರಿಗೆ. ಅದಕ್ಕಾಗಿ ಸೂರ್ಯೋಪಾಸನೆಯೊಂದಿಗೆ ನಮ್ಮ ಜ್ಞಾನವನ್ನು ಬೆಳಗಿಸಲು ಮತ್ತು ದ್ವೇಷ, ಅಸೂಯೆ, ಮಾತ್ಸರ್ಯಗಳನ್ನು ನಿವಾರಿಸಿ, ಕೆಟ್ಟ ಕೆಲಸಗಳನ್ನು ಕೈ ಬಿಡಲು ಪತಂಜಲಿ ಮಹರ್ಷಿಗಳು ಚಿತ್ತ ವೃತ್ತಿ ನಿರೋಧ ಶಕ್ತಿಯನ್ನು ಪರಿಚಯಿಸಿ ಮನಸ್ಸನ್ನು ನಿಯಂತ್ರಿಸುವುದರೊಂದಿಗೆ ಸದಾಚಾರದಲ್ಲಿ ನಡೆದು ಮನುಷ್ಯನನ್ನು ನೈಜ ಮಾನವನನ್ನಾಗಿ ಮಾಡುವ ಕಲೆ ಯೋಗಕ್ಕಿದೆ ಎಂದು ಸಾಧಿಸಿ ತೋರಿಸಿದ್ದಾರೆ' ಎಂದರು.


'ಯಾವುದನ್ನೂ ನಾವು ಎಣಿಸಿ ಕೇಳಿ ಬಂದವರಲ್ಲ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ನಡುವೆ ಇರುವ ಬಾಳನ್ನು ಗೆದ್ದು ಸಾಧಿಸಬೇಕು, ಚಿಂತೆ ಹೋಗಿ ಸುಖದ ಬಾಳು ಬದುಕಬೇಕು, ಅಲ್ಪ ತೃಪ್ತ ಭಾವ ಬಿಟ್ಟು ಸಂತೃಪ್ತಿಯಿಂದ ಬಾಳಬೇಕು. ಬಾಲ್ಯ ಆಟ ಪಾಠಗಳಲ್ಲಿ, ಯೌವ್ವನ ಭೋಗ ಲಾಲಸೆ ಸುಖದ ಉನ್ಮಾದದಲ್ಲಿ, ವೃದ್ಧಾಪ್ಯ ಹತಾಶೆ ಪ್ರಾಯಶ್ಚಿತ್ತಗಳಲ್ಲಿ ಕಳೆದು ಹೋಗುತ್ತವೆ. ಈ ಚಿಂತನೆಗಳಿಂದ ದೂರ ಉಳಿಯಲು ನಾವು ಸ್ಥಿತಪ್ರಜ್ಞರಾಗಬೇಕು. ನಮ್ಮನ್ನು ನಾವೇ ಸಮಾಧಾನ ಪಡಿಸಬೇಕು. ಕಾಲ ಬಂದಾಗ ಯಾರನ್ನೂ ನಿಲ್ಲಿಸಲಾಗುವುದಿಲ್ಲ. ಆದ್ದರಿಂದ ಮರಣದ ಭಯ ಬಿಟ್ಟು ನಿಶ್ಚಿಂತೆಯಿಂದಿರಬೇಕು. ನಿನ್ನೆಯೆಂಬುದು ಸತ್ತಿದೆ, ನಾಳೆಯೆಂಬುದು ಹುಟ್ಟಲಿಲ್ಲ.ವರ್ತಮಾನ ನಮ್ಮದು' ಎಂದು ಸ್ಪಷ್ಟ ಪಡಿಸಿದರು.


ರಾಜಯೋಗ:

'ಆತ್ಮ ಪ್ರಶಂಸೆ ಸಲ್ಲದು, ಒತ್ತಡದ ಬದುಕಿನಿಂದ ಹೊರ ಬರಬೇಕು, ಹಿರಿಯರ ಕುರಿತಾಗಿ ಕಾಳಜಿ ಅಗತ್ಯ. ನಾವೆಷ್ಟು ಜನರ ಋಣ ಸಂದಾಯ ಮಾಡಬೇಕೆಂಬ ಪ್ರಜ್ಞೆ ಇರಬೇಕು. ಜೀವನವನ್ನು ಸುಗಮವಾಗಿ ಸಾಗಿಸಲು ಮನಸ್ಸು ಮುಖ್ಯ. ಇಂದ್ರಿಯಗಳ ದಾಸರಾಗದೆ ನಮ್ಮನ್ನು ನಾವು ನಿಯಂತ್ರಿಸುವ ಅಂಗ ಸಾಧನೆ ಮಾಡಬೇಕು. ಶರೀರ ಶುದ್ಧಿ, ಮನಶ್ಶಾಂತಿ ಹಾಗೂ ಆತ್ಮವನ್ನು ಪರಮಾತ್ಮನೊಂದಿಗೆ ಅನುಸಂಧಾನಗೊಳಿಸುವ ಪ್ರಕ್ರಿಯೆ ಯೋಗದಿಂದ ಸಾಧ್ಯ. ಈಯೆಲ್ಲಾ ಗುಣಗಳಿಂದಲೇ ಯೋಗವನ್ನು ರಾಜಯೋಗವೆನ್ನುವುದು'


'ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಷ್ಟಾಂಗ ಯೋಗ, ಅನುಪಾನ, ಆಚಾರ ವಿಚಾರ, ಶುಚಿ ರುಚಿಯ ಜೀವನ ನಡೆಸುವುದು, ಶರೀರದಲ್ಲಿರುವ ಪಂಚ ಪ್ರಾಣಗಳನ್ನು ಸಂಯಮದಲ್ಲಿಟ್ಟುಕೊಂಡು ದೈನಂದಿನ ಚಟುವಟಿಕೆಗಳನ್ನು, ವಿವಿಧ ಕ್ರಿಯೆಗಳನ್ನು ಹಾಗೂ ದೇಹದ 76,000 ನಾಡಿಗಳನ್ನು ಶುದ್ಧ ಮಾಡಿ ಮಾನಸಿಕವಾದ ಶಾಂತಿ ನೆಮ್ಮದಿಯನ್ನು ಪಡೆಯಲು ಪ್ರಾಣಾಯಾಮ ಪರಿಣಾಮಕಾರಿ. ಚಿತ್ತದ ಚಿಂತೆಯನ್ನು ದೂರಮಾಡಿ ಮನೋಬಲವನ್ನು ಧನಾತ್ಮಕವಾಗಿ ಪಡೆಯುವ ರಾಜಮಾರ್ಗವೇ ಯೋಗ' ಎಂದು ಭಾಸ್ಕರ ರೈ ಕುಕ್ಕುವಳ್ಳಿ ಅಭಿಪ್ರಾಯಪಟ್ಟರು.


ದೀಪದಿಂದ ದೀಪ:

'ಪತಂಜಲಿಯ ಯೋಗ ಸೂತ್ರವನ್ನು ಅಭ್ಯಸಿಸಿ ಸಮರ್ಪಣಾ ಭಾವದಿಂದ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ಜಗದೀಶ ಶೆಟ್ಟರಂತಹ ಗುರುಗಳು ಯೋಗದೊಂದಿಗೆ ಅಧ್ಯಾತ್ಮದ ಅರಿವನ್ನು ಸತ್ಸಂಗದ ಮೂಲಕ ನೀಡುವುದು ಸ್ತುತ್ಯ. ಅದೂ ಒಂದು ಯೋಗಾಯೋಗ.  ಒಂದು ದೀಪ ಸಹಸ್ರಾರು ದೀಪವನ್ನು ಬೆಳಗಿಸಿದ ಹಾಗೆ ಇಂತಹ ಯೋಗ ಗುರುಗಳು ಮತ್ತಷ್ಟು ಹೆಚ್ಚಿ ಯೋಗಾಭ್ಯಾಸ ವಿಶ್ವ ವ್ಯಾಪಿಯಾಗಿ ವಿಶ್ವ ಬಾಂಧವ್ಯದ ಸಂದೇಶ ಸಾರುವಂತಾಗಲಿ' ಎಂದವರು ಹಾರೈಸಿದರು.


ಶಿಬಿರದ ನಿರ್ದೇಶಕ, ಯೋಗಗುರು ಡಾ.ಎಂ.ಜಗದೀಶ್ ಶೆಟ್ಟಿ ಬಿಜೈ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರತಿದಿನ ಯೋಗಾಸನದೊಂದಿಗೆ ಸತ್ಸಂಗ ಕಾರ್ಯಕ್ರಮವನ್ನೂ  ಆಯೋಜಿಸಿರುವ ಆನ್ ಲೈನ್  ಯೋಗ ಶಿಬಿರದಲ್ಲಿ ಒಡಿಯೂರು ಸ್ವಾಮೀಜಿ ಷಷ್ಠ್ಯಬ್ಧ ಸಮಿತಿ ಪದಾಧಿಕಾರಿಗಳು ಹಾಗೂ ದೇಶ ವಿದೇಶಗಳ ನೂರಾರು ಶಿಬಿರಾರ್ಥಿಗಳು ಭಾಗವಹಿಸಿದ್ದರು.


ಸದ್ವಿಚಾರ- ಸಂದೇಶ:

ಭಗವದ್ಗೀತೆ, ಕಗ್ಗ, ಉಪನಿಷತ್ತಿನ ಒಳ್ಳೆಯ ವಿಚಾರಗಳು. ಪ್ರಪಂಚದಲ್ಲಿ ಎಲ್ಲವೂ ಅಸ್ಥಿರ. ಧರ್ಮ ಹಾಗೂ ಕೀರ್ತಿ ಎರಡು ಮಾತ್ರ ಸ್ಥಿರ. ಸತ್ಕಾರ್ಯ ಗಳನ್ನು ಪ್ರಚಾರಕ್ಕಾಗಿ ಮಾಡಬಾರದು- ಎಂಬಿತ್ಯಾದಿ ಸದ್ವಿಚಾರಗಳ ಮೂಲಕ ಉತ್ತಮ ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾಂಸರಾದ ಭಾಸ್ಕರ ರೈ ಕುಕ್ಕುವಳ್ಳಿಯವರಿಗೆ ಹಾಗೂ ಈ ಅವಕಾಶವನ್ನು ಒದಗಿಸಿ ಕೊಟ್ಟ ಯೋಗ ಗುರುಗಳಿಗೂ ಹೃತ್ಪೂರ್ವಕ ಧನ್ಯವಾದಗಳು.

-ಶ್ಯಾಮಲಾ ರಾವ್, ಶಿಬಿರಾರ್ಥಿ


ಉತ್ತಮ ಪ್ರವಚನ:

ಭಾಸ್ಕರ ರೈ ಕುಕ್ಕುವಳ್ಳಿಯವರು ಉತ್ತಮ ವಾಗ್ಮಿ. ಯಕ್ಷಗಾನದಿಂದ ಆರಂಭಿಸಿ ಎಲ್ಲಾ ರೀತಿಯ ವೇದಿಕೆಯಲ್ಲಿ ಮಾತನಾಡುವ ಸಾಮರ್ಥ್ಯ ಉಳ್ಳವರು. ಬಹಳ ಉತ್ತಮ ಪ್ರವಚನ. ಗುರುಗಳಿಗೂ ಧನ್ಯವಾದಗಳು.

-ಹೇಮಲತಾ, ಶಿಬಿರಾರ್ಥಿ


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top