ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ದಿನಗಳಲ್ಲಿ, ಮಾನವೀಯ ಸಂಬಂಧ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿ ಸಂಬಂಧ ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಶಃ ಎಲ್ಲ ವೈದ್ಯರಿಗೂ ಅನ್ವಯಿಸಲಾರದು. ಅದೇ ರೀತಿ, ಇಂದಿನ ರೋಗಿಗಳು ಕೂಡ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಿಲ್ಲಿಲ್ಲ. ತನ್ನ ವೃತ್ತಿ ಜೀವನ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತನ್ನ ತಪ್ಪು ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು ಸಾಧನೆ ಮಜಲುಗಳತ್ತ ಹಿನ್ನೋಟ ಬೀರಿ, ತನ್ನ ತನು ಮನ ಧನಗಳನ್ನು ತನ್ನ ವೃತ್ತಿಗೆ ಪುನಃ ಅರ್ಪಿಸಿಕೊಳ್ಳುವ ಸುದಿನ.
ಜುಲೈ 1, 1982ರಂದು ಭಾರತ ಕಂಡ ಮಹಾನ್ ವೈದ್ಯ, ಪ್ರಾಮಾಣಿಕ ರಾಜಕಾರಣಿ ಅಪ್ರತಿಮ ದೇಶಸೇವಕ ಮತ್ತು ಮಹಾನ್ ಸ್ವಾತಂತ್ರ ಹೋರಾಟಗಾರ, ಶಿಕ್ಷಣ ತಜ್ಞ ಡಾ| ಬಿಧಾನ್ ಚಂದ್ರ ರಾಯ್ ಜನ್ಮವೆತ್ತ ದಿನ. ಈ ಮಹಾನ್ ಚೇತನದ ನೆನಪಿನ ಕುರುಹಾಗಿ ದೇಶದ್ಯಾಂತ ಜುಲೈ 1ರಂದು ವೈದ್ಯರ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಮಾರು 80 ವರ್ಷಗಳ ಕಾಲ ತುಂಬು ಜೀವನ ನಡೆಸಿದ ಡಾ| ಬಿ.ಸಿ ರಾಯ್ ಜೀವನದುದ್ದಕ್ಕೂ ಸರಳ ಮತ್ತು ಉದಾತ್ತ ಜೀವನ ನಡೆಸಿ ಬಡ ಬಗ್ಗರ, ದೀನದಲಿತರ, ನೊಂದ ಜೀವಗಳ ಸಾಂತ್ವನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. Poor are my patients, god pays for them ಎಂಬಂತೆ ಯಾವತ್ತೂ ಬಡವರಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆಯನ್ನು ಜೀವನ ಪರ್ಯಂತ ಮೆರೆದರು.
ಗಾಂಧೀಜಿಯವರ ಜೀವನ ಆದರ್ಶಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದ ಶ್ರೀಯುತರು ಬಡವರ ಉದ್ದಾರಕ್ಕಾಗಿ ಯಾವತ್ತೂ ಶ್ರಮಿಸುತ್ತಿದ್ದರು. ಬಡವರಿಗಾಗಿ ಬಂಗಾಳದ ಕಲ್ಕತ್ತಾದಲ್ಲಿ ಆಸ್ಪತ್ರೆಯನ್ನು ತೆರೆದರು. ಕಲ್ಕತ್ತಾದಲ್ಲಿ ಪ್ರಾಥಮಿಕ ವೈದ್ಯಕೀಯ ಶಿಕ್ಷಣ ಪಡೆದು ಇಂಗ್ಲೆಂಡ್ನಲ್ಲಿ ಉನ್ನತ ಶಿಕ್ಷಣ (MRCP, FRCS) ಕಲಿತ ಬಳಿಕ ತಾಯ್ನಾಡಿನ ಸೆಳೆತಕ್ಕೊಳಗಾಗಿ ಭಾರತಕ್ಕೆ ಹಿಂದಿರುಗಿದರು. ತಾವು ನಂಬಿದ ತತ್ವ ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನೂ ಪ್ರಾಮಾಣಿವಾಗಿ ನಡೆಸಿ ನುಡಿದಂತೆ ನಡೆದು ಇತರರಿಗೂ ಆದರ್ಶ ಪ್ರಾಯರಾದರು.
ಸ್ವಾತಂತ್ರ ನಂತರದ ದಿನಗಳಲ್ಲಿ ಗಾಂಧೀಜಿಯವರ ಆದೇಶದಂತೆ ರಾಜಕೀಯ ಪ್ರವೇಶಿಸಿ 1948ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದರು. ಮುಖ್ಯಮಂತ್ರಿಯಾದ ಬಳಿಕವೂ ಹಲವಾರು ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡಿದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ನೀಡಿಸಿದರು. ಹೀಗೆ ರಾಜಕೀಯ, ವೈದ್ಯಕೀಯ, ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸಲು ಜೀವನ ಪರ್ಯಾಂತ ಶ್ರೀಗಂಧದ ಕೊರಡಿನಂತೆ ತಮ್ಮ ಜೀವನವನ್ನು ಸವೆಸಿದರು. ಹೀಗೆ 80 ವರ್ಷಗಳ ತುಂಬು ಜೀವನ ನಡೆಸಿ 1962ರ ಜುಲೈ ಒಂದರಂದು ವಿಧಿವಶರಾದರು.
ಅವರ ಅಪ್ರತಿಮ ಸೇವೆಗಾಗಿ ಭಾರತ ಸರ್ಕಾರ 1961ರಲ್ಲಿ ಭಾರತ ರತ್ನ ನೀಡಿ ಗೌರವವಿತ್ತು. 1976ರಿಂದ ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ವೈದ್ಯರಿಗಾಗಿ ಬಿ.ಸಿ.ರಾಯ್ ಪ್ರಶಸ್ತಿಯನ್ನು ಆರಂಭಿಸಲಾಯಿತು. ಇದು ವೈದ್ಯಕೀಯ ಕ್ಷೇತ್ರದ ಪರಮೋಚ್ಛ ಪ್ರಶಸ್ತಿ ಎಂದರೂ ತಪ್ಪಲ್ಲ. ಇಂತಹ ಮಹಾನ್ ಚೇತನದ ನೆನಪಿಗಾಗಿ ದೇಶಾದ್ಯಂತ ಜುಲೈ 1ರಂದು ವೈದ್ಯರ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಹಾಗೆಯೇ ದೇಶಾದ್ಯಂತ ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನ ಮಜಲುಗಳತ್ತ ದೃಷ್ಟಿ ಹಾಯಿಸಿಕೊಂಡು ತಪ್ಪನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡಿಕೊಂಡು ಮಾನವಕುಲದ ಸೇವೆಗೆ ತಮ್ಮನ್ನು ಮಗದೊಮ್ಮೆ ಸಮರ್ಪಿಸಿಕೊಳ್ಳುವ ಸುದಿನ.
ಆರೋಗ್ಯವೇ ಭಾಗ್ಯ. ಪ್ರತಿಯೊಬ್ಬರು ಆರೋಗ್ಯವಂತರಾಗಿ ಬಾಳಿದಾಗ ಪಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದರೆ ಇಂದು ಪ್ರತಿಯೊಬ್ಬರೂ ಒತ್ತಡದ ಜೀವನದಿಂದಾಗಿ ಹತ್ತಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರುವುದು ಅವಶ್ಯ.
ಜುಲೈ ಒಂದರಂದು ಭಾರತದಲ್ಲಿ ವೈದ್ಯರ ದಿನ ಆಚರಿಸಲಾಗುತ್ತದೆ. ಆಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೇಗೆ ಹತ್ತಾರು ವಿಧಾನಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆಸಿಕೊಂಡು ಮನುಕುಲದ ಏಳ್ಗೆಗೆ ಬದುಕನ್ನು ಸಮರ್ಪಿಸಿಕೊಂಡಿರುವ ವೈದ್ಯರನ್ನು ಅಭಿನಂದಿಸುವ ಕೃತಜ್ಞತೆ ಸೂಚಿಸುವ ದಿನ. ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ್ಯ ಬಂದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ ನೆನಪಿಸಿಕೊಳ್ಳುವ ಮತ್ತು ಆದರಿಸುವ ಸ್ಮರಣೀಯವಾದ ದಿನವಿದು.
ಏನಿದು ಆರೋಗ್ಯ?
ಆರೋಗ್ಯ ಎಂದರೇನು ಎಂಬುದು ಬಹುತೇಕ ಜನರಿಗೆ ಇನ್ನು ತಿಳಿದಿಲ್ಲ. ರೋಗವಿಲ್ಲದಿರುವುದೇ ಆರೋಗ್ಯ (Health is absense of disease) ಎಂಬುದಾಗಿ ಬಹುತೇಕ ಮಂದಿ ತಪ್ಪು ತಿಳುವಳಿಕೆ ಹೊಂದಿದ್ದಾರೆ. ನಮ್ಮ ಈಗಿನ ಜೀವನ ಶೈಲಿ, ಆಹಾರ ಪದ್ಧತಿ, ಕೆಲಸದ ವಾತಾವರಣಗಳಿಂದಾಗಿ ರೋಗವಿಲ್ಲದ ಮನುಷ್ಯನನ್ನು ದುರ್ಬಿನು ಹಾಕಿ ಹುಡುಕಿದರೂ ದೊರಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಕೆಟ್ಟ ಜೀವನ ಶೈಲಿಯ ರೋಗಗಳಾದ ಮಧುಮೇಹ, ರಕ್ತದೊತ್ತಡ, ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನುವುದು ಜಾಗತಿಕ ಸತ್ಯ. ಭಾರತದ ಮೆಟ್ರೊನಗರಗಳಾದ ಡೆಲ್ಲಿ, ಬೆಂಗಳೂರು, ಕಲ್ಕತ್ತಾ, ಮದ್ರಾಸ್, ಬಾಂಬೆಗಳಲ್ಲಿ ಪ್ರತಿ ಐವರಲ್ಲಿ ಒಬ್ಬರಿಗೆ ಮಧುಮೇಹ, ಪ್ರತಿ ಏಳರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಮತ್ತು ಪ್ರತಿ ಹತ್ತರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಪರಿಪೂರ್ಣ ಆರೋಗ್ಯವಂತ ವ್ಯಕ್ತಿ ಸಿಗುವುದು ದುರ್ಲಭವೇ.
ಈ ಕಾರಣದಿಂದಲೇ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಎಂದರೆ ಕೆಲಸ ಮಾಡುವ ಹುರುಪು (Enthusiasm to work) ಎಂಬುದಾಗಿ ಬದಲಿಸಬೇಕು ಎಂದು ಎಲ್ಲೆಡೆ ಕೇಳಿ ಬರುತ್ತಿದೆ. ಯಾಕೆಂದರೆ ಬೆಳಗೆದ್ದು ದಿನನಿತ್ಯದ ಕೆಲಸ ಮಾಡುವ ಹುರುಪು ಇದ್ದಲ್ಲಿ ಆತ ನಿರೋಗಿ ಎಂದು ತಿಳಿಯಬಹುದು. ದೇಹಕ್ಕೆ ರೋಗವಿದ್ದರೂ ಮನಸ್ಸು ಉಲ್ಲಸಿತವಾಗಿದ್ದಲ್ಲಿ ಆತ ನಿರೋಗಿ ಎಂದು ತಿಳಿಯಬೇಕು ಎಂಬ ವಾದವನ್ನು ತಳ್ಳಿ ಹಾಕುವಂತಿಲ್ಲ. ಈ ಕಾರಣಕ್ಕಾಗಿಯೇ ದಲೈಲಾಮ ಅವರು ಹೇಳಿದ ಮಾತು Happiness is the highest form of health. ಅಂದರೆ ಸಂತಸವೇ ಆರೋಗ್ಯದ ಪರಮಾವಧಿ ಎಂಬ ಮಾತು ನೂರಕ್ಕೆ ನೂರು ಸತ್ಯ.
ಈ ನಿಟ್ಟಿನಲ್ಲಿ ದೇಹಕ್ಕೆ ರೋಗವಿದ್ದರೂ ಮನಸ್ಸು ಉಲ್ಲಸಿತವಾಗಿ, ರೋಗಿ ಯಾವತ್ತೂ ಸಂತಸವಾಗಿರುವಂತೆ ಮಾಡುವ ಗುರುತರ ಜವಾಬ್ದಾರಿ ವೈದ್ಯರ ಮೇಲೆ ಇದೆ. ಬರೀ ಔಷಧಿ ನೀಡಿ ದೇಹಕ್ಕೆ ಒಂದು ರೋಗ ಗುಣಪಡಿಸಿದವರು ವೈದ್ಯರಾಗುವುದಿಲ್ಲ. ರೋಗಿಯ ದೈಹಿಕ ಪರಿಸ್ಥಿತಿ, ಮಾನಸಿಕ ಸ್ಥಿತಿಗಳನ್ನು ಅಭ್ಯಸಿಸಿ, ದೇಹಕ್ಕೆ ಬಂದ ರೋಗವನ್ನು ಗುಣಪಡಿಸುವುದರ ಜೊತೆಗೆ ಮಾನಸಿಕವಾಗಿ ರೋಗಿ ಹೆಚ್ಚು ಸದೃಢರಾಗಲು ಬೇಕಾದ ಮನೋಸ್ಥರ್ಯ, ಧೈರ್ಯ ಪ್ರೇರಣೆ ಮತ್ತು ವಿಶ್ವಾಸ ಮೂಡುವಂತಹ ಕಾರ್ಯಗಳನ್ನು ವೈದ್ಯರು ಮಾಡಬೇಕು. ಹಾಗಾದಲ್ಲಿ ಮಾತ್ರ ವೈದ್ಯರು ತಮ್ಮ ವೃತ್ತಿಗೆ ಹೆಚ್ಚು ಸಂಪೂರ್ಣ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ದಿನದಂದು ವೈದ್ಯರುಗಳು ತಮ್ಮನ್ನು ಮತ್ತಷ್ಟು ಪರಾಮರ್ಷಿಸಿಕೊಂಡು, ತಮ್ಮ ತಪ್ಪು ಒಪ್ಪುಗಳನ್ನು ವಿಮರ್ಷಿಸಿ ಮಗದೊಮ್ಮೆ ತಮ್ಮನ್ನು ಮನುಕುಲದಲ್ಲಿ ಸೇವೆಗೆ ಸಮರ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಬದಲಾಗುತ್ತಿರುವ ವೈದ್ಯಕೀಯ ಕ್ಷೇತ್ರ
ಡಾಕ್ಟರ್ ಎಂಬ ಶಬ್ದ ಡೆಕ್ ಎಂಬ ಶಬ್ದದಿಂದ ಉಗಮವಾಗಿದ್ದು, ಇದರ ಅರ್ಥ ಉಪಯುಕ್ತಕರ ಇಲ್ಲವೇ ಒಪ್ಪಿಗೆಯಾಗುವಂತಹ ಎಂಬುದಾಗಿದೆ. ಇದು ಲ್ಯಾಟಿನ್ನಲ್ಲಿ ಡೊಸೇರ್ ಎಂದಾಯಿತು. ಅದರ ಅರ್ಥ ಕಲಿಸು ಎಂಬುದಾಗಿದೆ. ಈ ಕಾರಣದಿಂದಲೇ ವೈದ್ಯರಿಗೆ ಗುರುವಿನ ಸ್ಥಾನವೂ ದಕ್ಕಿತು. ಹಾಗೆಯೇ ಡೊಸೇರ್ ಎಂದರೆ ಕಲಿ ಅಥವಾ ಶಿಷ್ಯ ಎಂಬರ್ಥ ನೀಡುತ್ತದೆ. ಗ್ರೀಕ್ನಲ್ಲಿ ಇದು ಒಪ್ಪಿಗೆ ಯಾಗುವಂತೆ ಕಲಿಸುವಿಕೆ ಎಂಬ ಅರ್ಥ ನೀಡುತ್ತದೆ. ಒಟ್ಟಿನಲ್ಲಿ ವೈದ್ಯನಾದವನು ನಿರಂತರವಾಗಿ ಕಲಿಯುತ್ತಾ, ಕಲಿಸುತ್ತಾ, ವೈದ್ಯ ಮತ್ತು ಗುರುವಿನ ಸ್ಥಾನವನ್ನು ಪಡೆಯುತ್ತಾನೆ. ವೈದ್ಯಕೀಯ ವೃತ್ತಿಯು ಅತ್ಯಂತ ಗೌರವಯುತ ವೃತ್ತಿಯೆಂದು ಪರಿಗಣಿತವಾಗಿದೆ.
ಹಿಂದಿನ ಕಾಲದಲ್ಲಿ ಊರಿಗೊಬ್ಬರೇ ವೈದ್ಯರಿದ್ದರು. ಅವರು ಕುಟುಂಬ ವೈದ್ಯರಾಗಿ, ಕುಟುಂಬದ ಎಲ್ಲ ಸದಸ್ಯರ ಎಲ್ಲ ಬಗೆಯ ರೋಗಗಳಿಗೆ ಚಿಕಿತ್ಸೆ ಕೊಡಬಲ್ಲವರಾಗಿದ್ದರು. ರೋಗಿಯ ಚರಿತ್ರೆ, ಹಿನ್ನೆಲೆ, ಶಿಕ್ಷಣ, ಸಾಮಾಜಿಕ ಸಂಬಂಧಗಳು, ಕೌಟುಂಬಿಕ ಹಿನ್ನೆಲೆ ಹೀಗೆ ಎಲ್ಲವನ್ನೂ ಅಮೂಲಾಗ್ರವಾಗಿ ತಿಳಿದು ಆತ್ಮೀಯತೆಯಿಂದ ಸಲಹೆ ನೀಡಬಲ್ಲ ಹಿತೈಷಿಯಾಗಿರುತ್ತಿದ್ದರು. ಅವರು ಕೇವಲ ವೈದ್ಯರಾಗಿರದೆ, ಸ್ನೇಹಿತ, ಬಂಧು ಮತ್ತು ಗುರುವಿನಂತೆ ಇರುತ್ತಿದ್ದರು. ಕೇವಲ ತನ್ನ ಸ್ಟೆತೋಸ್ಕೋಪ್, ನಾಡಿಬಡಿತ ಮತ್ತು ರೋಗದ ಲಕ್ಷಣ ಹಾಗೂ ರೋಗದ ಚರಿತ್ರೆಗಳಿಂದ ರೋಗ ನಿರ್ಣಯ ಮಾಡುವ ಕಲೆಯನ್ನು ಅವರು ಹೊಂದಿದ್ದರು. ಪ್ರೀತಿಯಿಂದ ಮಾತನಾಡಿ ಬೆನ್ನು ಸವರಿ, ಒಂದಷ್ಟು ಕಷಾಯದಂತಹ ಔಷಧಿ ನೀಡಿ, ನಾಲ್ಕು ಸಾಂತ್ವನದ ನುಡಿ ಆಡಿದಾಗ ಅರ್ಧ ರೋಗ ಮಾಯವಾಗುತ್ತಿತ್ತು.
ಈಗ ವೈದ್ಯರಿಗೆ CT, MRI, ರಕ್ತ ಪರೀಕ್ಷೆ ಹೀಗೆ ಬಗೆಬಗೆಯ ಯಂತ್ರಗಳು ಮತ್ತು ನೂರಾರು ಪರೀಕ್ಷೆಗಳು ಲಭ್ಯವಿದೆ. ಈಗ ಪ್ರತಿ ರೋಗಕ್ಕೆ ಒಬ್ಬರಂತೆ ವೈದ್ಯರಿದ್ದಾರೆ. ರೋಗಿಯನ್ನು ನೋಡದೆ, ರೋಗಿಯನ್ನು ಮುಟ್ಟದೆ ಬರೀ ಪರೀಕ್ಷೆಯ ವರದಿ ನೋಡಿ, ಯಂತ್ರಗಳ ಸಂದೇಶ ಆಧರಿಸಿ ರೋಗ ನಿರ್ಣಯ ಮಾಡಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಕೋವಿಡ್-19 ಎಂಬ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ರೋಗಿ ಮತ್ತು ವೈದ್ಯರ ನಡುವೆ ಒಂದು ಗೋಡೆ ಬಂದು ನಿಂತಿದೆ. ಎಲ್ಲವೂ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಟೆಲಿಫೋನ್ ಮುಖಾಂತರ ಮಾತನಾಡಿ ವಾಟ್ಸಪ್ ಮುಖಾಂತರ ರೋಗಿಯ ಚಿತ್ರ ಕಳುಹಿಸಿ, ವಿಡಿಯೋ ಕಾಲ್ ಮುಖಾಂತರ ಚರಿತ್ರೆ ಪಡೆದು ಕಂಪ್ಯೂಟರ್ ಮುಖಾಂತರ ಔಷಧಿ ನೀಡುವ ಕಲಿಯುಗದಲ್ಲಿ ನಾವಿದ್ದೇವೆ.
ರೋಗಿ ಮತ್ತು ವೈದ್ಯರ ನಡುವಿನ ಆತ್ಮೀಯತೆ, ಸಂಬಂಧ ಮತ್ತು ಒಟನಾಟ ಮೊದಲಿನಂತಿಲ್ಲ. ಎಲ್ಲವೂ ವ್ಯಾಪಾರೀಕರಣವಾಗಿದೆ. ಈಗ ವೈದ್ಯ ಮತ್ತು ರೋಗಿ ನಡುವೆ ಕೇವಲ ವ್ಯಾವಹಾರಿಕ ಸಂಬಂಧವಾಗಿ ಬದಲಾಗುತ್ತಿದೆ. ಒಬ್ಬ ರೋಗಿ ಒಂದೇ ವೈದ್ಯನ ಬಳಿ ಹೋಗುವುದಿಲ್ಲ. ನಾಲ್ಕು ವೈದ್ಯರನ್ನು ಸಂದರ್ಶಿಸಿ, ತಮಗಿಷ್ಟವಾದ ತಮ್ಮ ಅಭಿರುಚಿಗೆ ಹೊಂದುವ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವಷ್ಟು ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ತಮಗೆ ವೈದ್ಯರು ನೀಡಿದ ಚಿಕಿತ್ಸೆ ಹಿತವಾಗಿಲ್ಲ ಅಥವಾ ತೃಪ್ತಿಕರವಾಗಿಲ್ಲ ಎಂದಲ್ಲಿ ವೈದ್ಯರನ್ನು ಕೋರ್ಟಿನ ಕಟೆಕಟೆಗೂ ಎಳೆದು ತರುವ ಸಾಮರ್ಥ್ಯ ಹೊಂದಿದ್ದಾನೆ. ಅಲ್ಲಿಯವರೆಗೂ ಕಾಯುವ ವ್ಯವಧಾನ ಇಲ್ಲದಿದ್ದಲ್ಲಿ ತಕ್ಷಣವೇ ವೈದ್ಯರ ಮೇಲೆ ದಾಳಿ ಮಾಡಿ ತನ್ನ ತೀಟೆ ತೀರಿಸಿಕೊಳ್ಳುವಷ್ಟು ಸ್ವೇಚ್ಛಾಚಾರವನ್ನು ರೋಗಿ ಮತ್ತು ಆತನ ಸಂಬಂಧಿಕರು ಹೊಂದಿರುವುದು ಅಪಾಯಕಾರಿ ಬೆಳವಣಿಗೆ.
ವೈದ್ಯರ ಜವಾಬ್ದಾರಿ ಏನು?
ಯಾವುದೇ ಒಂದು ವೃತ್ತಿಗೆ ವೃತ್ತಿಧರ್ಮ ಅಥವಾ ವೃತ್ತಿಯ ಸಾಮಾಜಿಕ ಹೊಣೆಗಾರಿಕೆ ಎಂಬುದಿರುತ್ತದೆ. ಪ್ರತಿ ವೃತ್ತಿಯ ಅತ್ಯಂತ ಗುರುತರವಾದ ಜವಾಬ್ದಾರಿಯನ್ನು ರಾಜಧರ್ಮ ಎನ್ನುತ್ತಾರೆ. ಹಾಗಾದರೆ ವೈದ್ಯ ವೃತ್ತಿಯ ರಾಜಧರ್ಮ ಯಾವುದು ಎಂಬುದರ ಕುತೂಹಲ ಎಲ್ಲರಿಗೂ ಇರುತ್ತದೆ. ಒಬ್ಬ ವೈದ್ಯ ರೋಗಿಗಳನ್ನು ಚಿಕಿತ್ಸೆ ಮಾಡುವುದನ್ನು ರಾಜಧರ್ಮ ಎನ್ನಲಾಗದು. ಅದು ಅವರ ಪ್ರಾಥಮಿಕವಾದ ಜವಾಬ್ದಾರಿ. ಒಬ್ಬ ವ್ಯಕ್ತಿ ವೈದ್ಯನಾದ ಮೇಲೆ ಆತ ರೋಗಿಗೆ ಚಿಕಿತ್ಸೆ ನೀಡಲೇಬೇಕು. ಹೇಗೆ ಒಬ್ಬ ಪೊಲೀಸ್ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಸಮಾಜವನ್ನು ಕೊಲೆ, ಸುಲಿಗೆ, ಕಳ್ಳತನ, ಆತ್ಯಚಾರ ಮುಕ್ತವಾಗಿಸಿ ರಾಮರಾಜ್ಯವಾಗುವಂತೆ ಮಾಡುತ್ತಾನೆಯೋ ಹಾಗೆಯೇ ವೈದ್ಯರೂ ಕೂಡಾ ಸಮಾಜದಲ್ಲಿ ರೋಗಿಗಳ ಸಂಖ್ಯೆ ಇಲ್ಲದಂತೆ ಮಾಡುವುದೇ ವೈದ್ಯ ವೃತ್ತಿಯ ರಾಜಧರ್ಮ ಎನ್ನಬಹುದು.
ರೋಗದ ಚಿಕಿತ್ಸೆ ಮಾಡಿ ರೋಗಿಗಳ ಸಂಖ್ಯೆ ಇಳಿ ಮುಖ ಮಾಡುವುದು ದೊಡ್ಡ ವಿಚಾರವೇನಲ್ಲ ವೈದ್ಯರಾದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಲೇಬೇಕು. ಆದರೆ ರೋಗ ಬರದಂತೆ ರೋಗವನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ವೈದ್ಯರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಆರೋಗ್ಯ ಪ್ರಜ್ಞೆ ಬರುವಂತೆ ಮಾಡುವುದೇ ವೈದ್ಯರ ರಾಜಧರ್ಮವಾಗಬೇಕು. ಜೀವನ ಶೈಲಿಯ ರೋಗಗಳಾದ ಮಧುಮೇಹ, ಅಧಿಕ ರಕ್ತದೊತ್ತಡ ಖಿನ್ನತೆ ಮುಂತಾದವುಗಳ ಬಂದ ಬಳಿಕ ಚಿಕಿತ್ಸೆ ಅನಿವಾರ್ಯ. ಆದರೆ ಅಂತಹಾ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ರೋಗ ಬರುವ ಸೂಚನೆಗಳನ್ನು ಮೊದಲೇ ಅರಿತುಕೊಂಡು ಜನರನ್ನು ಎಚ್ಚರಿಸಿ, ರೋಗ ಬರದಂತೆ ಮಾಡುವ ಗುರುತರ ಸಾಮಾಜಿಕ ಹೊಣೆಗಾರಿಕೆ ವೈದ್ಯರ ಮೇಲಿದೆ.
ಈ ನಿಟ್ಟಿನಲ್ಲಿ ಸರಕಾರ ಕೂಡಾ ವೈದ್ಯರ ಜೊತೆ ಕೈಜೋಡಿಸಬೇಕು. ಕೇವಲ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸಿ, ವೈದ್ಯರ ಸಂಖ್ಯೆ ಜಾಸ್ತಿ ಮಾಡಿ ಉಚಿತ ಜೆನೆರಿಕ್ ಔಷಧಿ ನೀಡುವುದರಿಂದ ಸಮಾಜದ ಮತ್ತು ಜನರ ಆರೋಗ್ಯ ವೃದ್ಧಿಸುವುದಿಲ್ಲ. ಮೂಲಭೂತ ಸೌಕರ್ಯಗಳಾದ ಶುದ್ಧಗಾಳಿ, ಶುದ್ಧ ನೀರು, ಬೆಳಕು ಸಿಗುವಂತಹಾ ವ್ಯವಸ್ಥೆ ಸರಕಾರ ಮಾಡಬೇಕು. ಪರಿಸರ ಮಾಲಿನ್ಯ, ವಾತಾವರಣ ಕಲುಷಿತವಾಗದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಹೊಣೆಗಾರಿಕೆ ಜನರಿಗೆ ಮತ್ತು ಸರಕಾರಕ್ಕೂ ಇದೆ ಎಂಬುದನ್ನು ಜನರು ಅರಿತುಕೊಳ್ಳಲೇಬೇಕು.
ಸರಕಾರ ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಹೋಗುವುದಿಲ್ಲ. ಅವರು ಖಡ್ಡಾಯವಾಗಿ ಹೋಗಬೇಕು ಎನ್ನುವುದು ಬಹಳ ಹಾಸ್ಯಾಸ್ಪದ ವಿಚಾರ. ಎಷ್ಟೋ ಜನ ನಿರುದ್ಯೋಗಿ ವೈದ್ಯರು ಈಗಲೂ ಸಮಾಜದಲ್ಲಿ ಇದ್ದಾರೆ. ಸರಕಾರ ಮನಸ್ಸು ಮಾಡಿದರೆ ಒಂದು ದಿನದಲ್ಲಿ ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಬಹುದು. ಬರೀ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತದೆಯೇ ಹೊರತು ವೈದ್ಯರ ನಿರಶಕ್ತಿ ಅಲ್ಲ ಎಂಬುದನ್ನು ಜನರು ಗಮನಿಸಬೇಕು. ಇವತ್ತಿಗೂ ಗ್ರಾಮೀಣ ಪ್ರದೇಶಗಳು ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಖಾಸಗೀ ವೈದ್ಯರೂ ಇದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಇದರ ಜೊತೆಗೆ ವೈದ್ಯರ ಗ್ರಾಮೀಣ ಪ್ರದೇಶಗಳಿಗೆ ಹೋಗುವಂತಹ ಪೂರಕವಾದ ವ್ಯವಸ್ಥೆಗಳನ್ನು ಸರಕಾರ ಮಾಡಲೇ ಬೇಕು. ಒಬ್ಬ ಉನ್ನತ ಶಿಕ್ಷಣ ಕಲಿತ ಹೆರಿಗೆ ತಜ್ಞನನ್ನು ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ಬರೀ ಔಷಧಿ ನೀಡಲು ಸೇರಿಸುವುದು ಮೂರ್ಖತನದ ಪರಮಾವಧಿ. ಅವರವರ ಯೋಗ್ಯತೆಗೆ ತಕ್ಕಂತೆ ಮೂಲಭೂತ ಸೌಕರ್ಯ ನೀಡಿ ನೇಮಕ ಮಾಡಿದಲ್ಲಿ ಮಾತ್ರ ವೃತ್ತಿಗೆ ನ್ಯಾಯ ಸಂದಾಯವಾಗಬಹುದು.
ಭಗವದ್ಗೀತೆಯಲ್ಲಿ ಒಂದು ಮಾತು ಇದೆ. ನಮ್ಮ ದಿನನಿತ್ಯದ ಕೆಲಸಗಳಲ್ಲಿ ಎರಡು ವಿಧಗಳಿದೆ. ಒಂದು ಕ್ರಿಯೆ. ಇನ್ನೊಂದು ಕರ್ಮ. ನಾವು ನಮ್ಮ ಜೀವನೋಪಾಯಕ್ಕಾಗಿ ಮಾಡುವುದನ್ನು ಕ್ರಿಯೆ ಎನ್ನುತ್ತೇವೆ. ನಮ್ಮ ಆಹಾರಕ್ಕೆ, ನಮ್ಮ ಬದುಕಿನ ಭದ್ರತೆಗೆ, ಮಕ್ಕಳ ಭವಿಷ್ಯಕ್ಕಾಗಿ ನಾವು ಮಾಡುವುದು ನಮ್ಮ ಕ್ರಿಯೆಗಳು. ಇದನ್ನು ಪ್ರತಿಯೊಂದು ಪ್ರಾಣಿಗಳೂ ಮಾಡುತ್ತದೆ. ನಮ್ಮ ಅಸ್ಥಿತ್ವಕ್ಕೆ ಜೀವನೋಪಾಯಕ್ಕೆ ಮಾಡುವಂತಹಾ ಎಲ್ಲ ಕೆಲಸಗಳಿಗೂ ಕ್ರಿಯೆ ಎನ್ನುತ್ತಾರೆ. ಆದರೆ ಕರ್ಮ ಎನ್ನುವುದು ಇದಕ್ಕಿಂತ ಭಿನ್ನವಾದುದು. ಕರ್ಮ ಎನ್ನುವುದು ನಾವು ಇನ್ನೊಬ್ಬರ ಜೀವನದಲ್ಲಿ ಬದಲಾವಣೆ ತರಲು ಮಾಡುವ ಕೆಲಸ. ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಕ್ರಿಯೆ ಮತ್ತು ಕರ್ಮವನ್ನು ಸಮಾನವಾಗಿ ಮಾಡಲೇಬೇಕು ಹಾಗಿದ್ದಲ್ಲಿ ಮಾತ್ರ ನಾವು ಮನುಷ್ಯರಾಗುತ್ತೇವೆ.
ನಾವು ವೈದ್ಯರಾದ ಮೇಲೆ ರೋಗಿಗಳನ್ನು ಚಿಕಿತ್ಸೆ ಮಾಡುವುದು ನಮ್ಮ ಕ್ರಿಯೆಯಾಗುತ್ತದೆಯೇ ಹೊರತು ಅದು ನಮ್ಮ ಕರ್ಮವಾಗುವುದಿಲ್ಲ. ನಾವು ವೈದ್ಯರಾಗಿ ವೈದ್ಯವೃತ್ತಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ರೋಗಿಗಳ ಚಿಕಿತ್ಸೆ ಮಾಡುವುದು ನಮ್ಮ ಕ್ರಿಯೆಯಾಗುತ್ತದೆ ಮತ್ತು ಅದು ನಮ್ಮ ಪ್ರಾಥಮಿಕ ಕರ್ತವ್ಯವೂ ಹೌದು. ರೋಗಿಗಳ ಚಿಕಿತ್ಸೆ ಮಾಡಿ ನಾವು ಏನನ್ನೊ ಸಾಧಿಸಿದ್ದೇನೆ ಎಂದು ತಿಳಿದಿದ್ದರೆ ಅದು ತಪ್ಪಾದೀತು. ಯಾವುದೇ ಫಲಾಪೇಕ್ಷೆ ಇಲ್ಲದೆ ಇತರರ ಸೇವೆ ಮಾಡುವುದೇ ನಿಜವಾದ ಕರ್ಮ. ಆದರೆ ಹೆಚ್ಚಿನ ವೈದ್ಯರು ನಾವು ಮಾಡುವ ಕ್ರಿಯೆಯನ್ನು ಕರ್ಮ ಎಂದು ಭಾವಿಸಿ ತಮ್ಮನ್ನು ತಾವು ದೇವರು ಎಂದು ಹೋಲಿಸಿಕೊಳ್ಳುವುದು ಮೂರ್ಖತನದ ಪರಮಾವಧಿ. ಈ ನಿಟ್ಟಿನಲ್ಲಿ ಎಲ್ಲ ವೈದ್ಯರುಗಳು ತಮ್ಮನ್ನು ಮಗದೊಮ್ಮೆ ವಿಮರ್ಶೆಗೆ ಒಡ್ಡಿಕೊಂಡು ತಾವು ಮಾಡುವ ಕ್ರಿಯೆಗಳ ಜೊತೆಗೆ ಮತ್ತಷ್ಟು ಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಸೇವೆಗೆ ಹೆಚ್ಚು ಒತ್ತು ಕೊಟ್ಟು ವೈದ್ಯವೃತ್ತಿಯ ರಾಜಧರ್ಮವನ್ನು ಪಾಲಿಸಿದಲ್ಲಿ ಒಂದು ಸುಂದರ ಸದೃಢ ರಾಮರಾಜ್ಯದ ನಿರ್ಮಾಣ ಮಾಡಲು ಖಂಡಿತ ಸಾಧ್ಯವಾಗಬಹುದು.
ವ್ಯಾಪಾರಿ ಪ್ರವೃತ್ತಿಗೆ ಕಡಿವಾಣ ಅಗತ್ಯ:
ನಮಗೆ ಸ್ವಾತಂತ್ರ್ಯ ಲಭಿಸಿ 60ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಕಾಲ ಬದಲಾದಂತೆ ನಮ್ಮ ಜೀವನಶೈಲಿ, ಆದರ್ಶಗಳೂ ಬದಲಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಗಳು, ಅವಿಷ್ಕಾರ ನಡೆದಿದೆ. ಹೊಸ ಹೊಸ ರೋಗಗಳು ಹೊಸ ಹೊಸ ಔಷಧಿಗಳಾಗಿ ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವಾನಾತ್ಮಕ ಸಂಬಂಧ ಶಿಥಿಲವಾಗುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವ ವಿಷಾದನೀಯ ವಿಚಾರ.
ವೈದ್ಯ ಶಿಕ್ಷಣ ವೈದ್ಯಕೀಯ ವೃತ್ತಿ, ಸಂಶೋಧನೆಗಳೇ ಇರಲಿ ಎಲ್ಲ ಕಡೆಯೂ ಧನಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ ಪರಿಶ್ರಮಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ. ಇದು ಸುಂದರ, ಸ್ವಸ್ಥ ಸಮಾಜಕ್ಕೆ ಖಂಡಿತ ಮಾರಕ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನತೆ ಸಂಘ-ಸಂಸ್ಥೆಗಳು ಮತ್ತು ಸರ್ಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲು ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆತಲಾಂತರಗಳಿಂದ ಬಾಧಿಸುತ್ತಿರುವ ರೋಗಗಳಿಗೂ ಕಡಿವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಂಡು ವೈದ್ಯರನ್ನು ಗುರುತಿಸಿ ಕಾರ್ಯ ನಡೆಯಬೇಕು.
ರೋಗಿಗಳಿಗೂ ಒಂದೆರಡು ಕಿವಿಮಾತು. ದಯವಿಟ್ಟು ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ವೈದ್ಯರೂ ನಿಮ್ಮಂತೆಯೇ ಇರುವ ಇನ್ನೊಂದು ಜೀವ. ಅವರಿಗೆ ಆಸೆ, ಆಕಾಂಕ್ಷೆ, ವೈಯಕ್ತಿಕ ಸಮಸ್ಯೆ, ಭಾವನೆಗಳು ಇರುತ್ತವೆ. ಅವರ ಭಾವನೆಗಳಿಗೆ, ನೋವುಗಳಿಗೂ ರೋಗಿಗಳು ಸ್ಪಂದಿಸಬೇಕು. ಹಾಗಿದ್ದಲ್ಲಿ ಮಾತ್ರ ವೈದ್ಯ –ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ನೆನಪಿಡಿ, ಈಗಿರುವ ಕಾಲಘಟ್ಟದಲ್ಲಿ ರೋಗಿಗಳು ವೈದ್ಯರಿಲ್ಲದೆ ಬದುಕಬಹುದು. ಆದರೆ ವೈದ್ಯರು ರೋಗಿಗಳು ವೈದ್ಯರಿಲ್ಲದೆ ಬದುಕಬಹುದು. ಆದರೆ ವೈದ್ಯರು ರೋಗಿಗಳಿಲ್ಲದ ಬದುಕುವುದು ಅಸಾಧ್ಯ ಎಂಬ ಮಾತು ಬಂದರೆ ಅತಿಶಯೋಕ್ತಿಯಲ್ಲ.
ರೋಗಿಗಳು ಕೂಡ ವೈದ್ಯರಿಗೆ ರೋಗದ ಬಗ್ಗೆ ಸಂಪೂರ್ಣ ಪರಾಮರ್ಶೆ ಮಾಡಲು ಕಾಲಾವಕಾಶ ನೀಡಬೇಕು. ದಿನ ಬೆಳಗಾಗುವುದರೊಳಗೆ ಕಾಯಿಲೆ ವಾಸಿಯಾಗಬೇಕು. ಎಂದು ವೈದ್ಯರ ಮೇಲೆ ಅನಗತ್ಯ ಒತ್ತಡ ಹಾಕಬೇಡಿ. ಅನಗತ್ಯ ಪ್ರಶ್ನೆ ಕೇಳಿ ಅಂತರ್ಜಾಲದ ಮಾಹಿತಿಯನ್ನು ವೈದ್ಯರ ಬಳಿ ತಿಳಿಸಿ, ತಮ್ಮ ಅಲ್ಪ ಸ್ವಲ್ಪ ಜ್ಞಾನದಿಂದ ವೈದ್ಯರ ದಾರಿ ಕೆಡಿಸಬೇಡಿ. ಪ್ರತಿಶತ ಮೂವತ್ತರಷ್ಟು ರೋಗ, ವೈದ್ಯರ ಮೇಲಿನ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ.
ದೇಹದ ರೋಗವನ್ನು ವೈದ್ಯರು ಗುಣಪಡಿಸಬಹುದು. ಆದರೆ ಮನಸ್ಸಿನ ರೋಗ ಗುಣಪಡಿಸಲು ವೈದ್ಯರಿಂದ ಅಸಾಧ್ಯ ಎನ್ನುವುದನ್ನು ಅರಿತುಕೊಂಡರೆ, ವೈದ್ಯರ ಕೆಲಸ ಸರಳ ವೈದ್ಯರೂ ಆತ್ಮವಿಮರ್ಶೆ ಮಾಡಿಕೊಂಡು ತಮ್ಮ ವೃತ್ತಿ ಪಲಿಸಿದಲ್ಲಿ ಸುಂದರ ಸದೃಢ ಸಮಾಜ ನಿರ್ಮಾಣ ಸಾಧ್ಯ.
ಕೊನೆಮಾತು:
ಮೊದಲೆಲ್ಲಾ ವೈದ್ಯ ವೃತ್ತಿಯನ್ನು ಪವಿತ್ರವಾದ ವೃತ್ತಿ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಬಹಳಷ್ಟು ಬದಲಾವಣೆಗಳಾದವು. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಕಾಲಘಟ್ಟದಲ್ಲಿ ವೈದ್ಯಕೀಯ ವೃತ್ತಿಯಲ್ಲಿಯೂ ಬಹಳಷ್ಟು ಪರಿವರ್ತನೆಯಾಯಿತು. ಮೊದಲಿದ್ದ ವೈದ್ಯ- ರೋಗಿಯ ಸಂಬಂಧ ಈಗೀಗ ಮೊದಲಿನಂತೆ ಉಳಿದಿಲ್ಲ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರಲ್ಲಿ ರೋಗಿ ಮತ್ತು ವೈದ್ಯರ ತಪ್ಪೂಇದೆ. ಪ್ರತಿ ವೈದ್ಯ ಮತ್ತು ರೋಗಿ ತನ್ನ ಹೊಣೆಗಾರಿಕೆ, ವೃತ್ತಿ ಧರ್ಮ ಮತ್ತು ಇತಿಮಿತಿಯೊಳಗೆ ವ್ಯವರಿಸಿದ್ದಲ್ಲಿ ಈ ರೀತಿಯ ಸಂಘರ್ಷ ತಪ್ಪಿಸಬಹುದು. ಅದರಲ್ಲಿಯೇ ಇಬ್ಬರ ಒಳಿತು ಮತ್ತು ಸಮಾಜದ ಒಳಿತೂ ಅಡಗಿದೆ.
ಸಾವು ಸಮೀಪಿಸಿದಾಗ ವೈದ್ಯ ದೇವರಾಗಿಯೂ, ಚಿಕಿತ್ಸೆ ಆರಂಭಿಸಿದಾಗ ದೇವಮಾನವನಾಗಿಯೂ, ಚಿಕಿತ್ಸೆ ಫಲಿಸಿದಾಗ ಸಾಮಾನ್ಯ ಮನುಷ್ಯನಾಗಿಯೂ, ಶುಲ್ಕ ಕೇಳಿದಾಗ ಧನದಾಹಿ ಎಂದೂ, ಚಿಕಿತ್ಸೆ ಫಲಿಸದಾಗ ಕೊಲೆಗಡುಕ ಎಂದೂ ಜನರು ವೈದ್ಯರನ್ನೂ ಹಾಡಿ ಹೊಗಳುತ್ತಾರೆ ಮತ್ತು ತೆಗಳುತ್ತಾರೆ. ಆದರೆ ಈ ಎಲ್ಲಾ ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸಮಚಿತ್ತದಿಂದ ವರ್ತಿಸಿ ವೃತ್ತಿ ಧರ್ಮವನ್ನು ಪಾಲಿಸಿ ರೋಗಿಯು ಗುಣಮುಖವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ನಿಜವಾದ ವೈದ್ಯ. ಅಂತಹ ವೈದ್ಯ ನಾರಾಯಣನಾಗದಿದ್ದರೂ ಮನುಷ್ಯನಾಗುವುದಂತೂ ಖಂಡಿತ ಸತ್ಯ.
ಈ ರೀತಿ ತನ್ನ ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಸೇವೆ ಮಾಡುತ್ತಿರುವ ಸಾವಿರಾರು ವೈದ್ಯರು ನಮ್ಮ ಸಮಾಜದಲ್ಲಿ ಇದ್ದಾರೆ. ಅವರು ಹಾಕಿದ ಆದರ್ಶ ಮತ್ತು ತತ್ವಗಳು ಇತರರಿಗೆ ಮಾದರಿಯಾಗಲಿ. ವೈದ್ಯರ ದಿನದಂದು ನನ್ನೆಲ್ಲಾ ವೈದ್ಯ ಸಹೋದ್ಯೋಗಿ ಬಂಧುಗಳಿಗೆ ಶುಭಾಶಯ ಕೋರುತ್ತೇನೆ.
ಗೆಳೆಯರೇ, ಇನ್ಯಾಕೆ ತಡಮಾಡುತ್ತೀರಾ, ಮೊಬೈಲ್ ಎತ್ತಿಕೊಂಡು ನಿಮ್ಮ ವ್ಶೆದ್ಯರಿಗೆ ಪ್ರೀತ್ಯಾದರದಿಂದ ಅಭಿನಂದನೆ ಸಲ್ಲಿಸುವ ಸಂದೇಶ ಅಥವಾ ವಾಟ್ಸಪ್ ಸಂದೇಶ ಇಲ್ಲವೇ ವೈಬರ್ ಸಂದೇಶ ಕಳುಹಿಸಿ. ಹಗಲಿರುಳು ನಿಮ್ಮ ನೋವುಗಳಿಗೆ ಸ್ಪಂದಿಸುವ ಆ ಜೀವಕ್ಕೆ ನಿಮ್ಮ ಪ್ರೀತಿಯ ಸಂದೇಶ ಅಮೃತ ಸಿಂಚನ ಮಾಡೀತು ಮತ್ತು ವ್ಶೆದ್ಯರಿಗೆ ನವಚೈತನ್ಯ ನೀಡಿ ಇನ್ನೊಂದು ಜೀವ ಉಳಿಸುವ ಮತ್ತು ನೋವು ಶಮನಗೊಳಿಸುವ ಶಕ್ತಿ ನೀಡಲೂ ಬಹುದು.
-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787
Key Words: National Doctors Day, Doctors Day, ವೈದ್ಯರ ದಿನ, ರಾಷ್ಟ್ರೀಯ ವೈದ್ಯರ ದಿನ, ಜುಲೈ 1 ವೈದ್ಯರ ದಿನ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ