ಮಣಿಪಾಲ : ನಮ್ಮ ಮಕ್ಕಳನ್ನು ಬೇರೆಯವರ ಮಕ್ಕಳ ಜೊತೆ ತುಲನೆ ಮಾಡುವುದನ್ನು ಇನ್ನಾದರೂ ಬಿಟ್ಟುಬಿಡಿ ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು ಕರೆ ನೀಡಿದರು.
ಅವರು, ರಾಜಾಪುರ ಸಾರಸ್ವತ ಸಭಾ (ರಿ) ಪರ್ಕಳ, ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಆರ್.ಎಸ್.ಬಿ ಸಂಘ ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಮಣಿಪಾಲದಲ್ಲಿ ವಿದ್ಯಾರ್ಥಿ ಮತ್ತು ಪೋಷಕರಿಗೆ ಜೀವನ ಕೌಶಲ್ಯ ಬೆಳವಣಿಗೆ, ಎಸ್ ಎಲ್ ಸಿ ಮತ್ತು ಪಿಯುಸಿ ನಂತರ ಮುಂದೇನು, ವಿವಿಧ ವಿದ್ಯಾರ್ಥಿ ವೇತನ ಕುರಿತು ಸೆ 13 ರಂದು ಮಣಿಪಾಲ ಆರ್ಎಸ್ಬಿ ಸಭಾ ಭವನದಲ್ಲಿ ನಡೆದ ಕಾಯಾ೯ಗಾರದಲ್ಲಿ ಮಾತನಾಡಿದರು.
ಜೀವನದಲ್ಲಿ ಸ್ಪಷ್ಟ ಉದ್ದೇಶ ಮತ್ತು ನಿರಂತರ ಶ್ರಮ ಇದ್ದಾಗ ಯಶಸ್ಸು ಸಿಗಲು ಸಾಧ್ಯ ಎಂದರು. ಅದೇ ರೀತಿ ವಿವಿಧ ಸಂಸ್ಥೆಗಳಿಂದ ಮತ್ತು ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ನೀಡಿದರು. ಧನ್ವಂತರಿ ನರ್ಸಿಂಗ್ ಕಾಲೇಜಿನ ಆಡಳಿತ ಅಧಿಕಾರಿ ಉದಯಕುಮಾರ್ ಎಸೆಸೆಲ್ಸಿ ಮತ್ತು ಪಿಯುಸಿ ನಂತರ ಇರುವ ವಿವಿಧ ರೀತಿಯ ಶಿಕ್ಷಣದ ಅವಕಾಶ ಮತ್ತು ಉದ್ಯೋಗದ ವಿಚಾರದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಾಪುರ ಸಾರಸ್ವತ ಸಭಾ (ರಿ) ಪರ್ಕಳ ಅಧ್ಯಕ್ಷ ಪಾಂಡುರಂಗ ಕಾಮತ್ ವಹಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೈಗಾರಿಕ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ನೆರವೇರಿಸಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿದ್ದು ಇದರ ಸದುಪಯೋಗ ಮಾಡಬೇಕು ಸಂಸ್ಥೆ ವತಿಯಿಂದ ನಡೆಯುವ ಕಾರ್ಯಾಗಾರ ಅತ್ಯಂತ ಅಗತ್ಯವಾಗಿದೆ ಎಂದರು.
ವೇದಿಕೆಯಲ್ಲಿ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನರಸಿಂಹ ನಾಯಕ್ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಉಪೇಂದ್ರ ನಾಯಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುರೇಂದ್ರ ನಾಯಕ್ ವಂದಿಸಿದರು. ದೀಪಕ್ ನಿರೂಪಿಸಿದರು.