ಪೋಲಿಸ್ ಕಾನ್ಸ್ಟೇಬಲ್ ನಿರ್ಗಮನ ಪಥ ಸಂಚಲನ

Upayuktha
0

ಸಂವಿಧಾನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿ : ಅಮಿತ್ ಸಿಂಗ್ 

     




ಉಡುಪಿ: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಉಡುಪಿ ಇದರ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್‌ಗಳ 14 ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮವು ಡಿಎಆರ್ ಪೊಲೀಸ್ ಗ್ರೌಂಡ್ ಚಂದು ಮೈದಾನ ಇಲ್ಲಿ ನಡೆಯಿತು.

 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಗೌರವ ರಕ್ಷೆ ಸ್ವೀಕರಿಸಿ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿ, ಹತ್ತು ತಿಂಗಳ ತರಬೇತಿ ಪಡೆದು ಇಂದು ನಿರ್ಗಮಿಸುತ್ತಿರುವ ಪ್ರಶಿಕ್ಷಣಾರ್ಥಿಗಳು ತಮ್ಮ ಜೀವನವನ್ನು ಜನರ ಸೇವೆಗೆ ಮುಡುಪಾಗಿಡಬೇಕು. ಸೇವೆ, ತ್ಯಾಗ, ಬದ್ಧತೆ ಜೀವನದ ಉದ್ದೇಶವಾಗಿರಬೇಕು. ಇದು ಜೀವಮಾನಪೂರ್ತಿ ನೆನಪಿನಲ್ಲಿ ಇಡಬೇಕಾದ ದಿನ. ತರಬೇತಿಯ ಮೊದಲು ಮತ್ತು ತರಬೇತಿಯ ನಂತರ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ ಇಂದಿನಿಂದ ಅರಿವಿಗೆ ಬರುತ್ತದೆ ಎಂದರು. 

 

ಪೊಲೀಸ್ ಇಲಾಖೆ ಎನ್ನುವುದು ಶಿಸ್ತಿನ ಇಲಾಖೆ. ಪ್ರಶಿಕ್ಷಣಾರ್ಥಿಗಳು ಶಿಸ್ತನ್ನು ಸರಿಯಾಗಿ ಪಾಲಿಸಬೇಕು. ಅಸಾಧಾರಣ ಸಂದರ್ಭದಲ್ಲಿಯೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಯಾವುದೇ ಸಮಯದಲ್ಲಿಯೂ ಕರ್ತವ್ಯ ನಿರ್ವಹಿಸಲು ಸನ್ನದ್ಧರಾಗಿರಬೇಕು ಎನ್ನುವ ಕಾರಣಕ್ಕೆ ಕಠಿಣ ತರಬೇತಿ ನೀಡಲಾಗಿದೆ. ಸಂವಿಧಾನದ ಆಶಯಕ್ಕೆ ಬದ್ಧವಾಗಿ ಕರ್ತವ್ಯ ನಿರ್ವಹಿಸಿ ಸಮವಸ್ತ್ರಕ್ಕೆ ನ್ಯಾಯ ಒದಗಿಸಬೇಕು ಎಂದರು. 

 

ವೃತ್ತಿಪರತೆ, ಧೈರ್ಯ, ಸಂಯಮದಿಂದ ಕಾರ್ಯನಿರ್ವಹಿಸಬೇಕು. ನೈತಿಕತೆ, ನೇರ ನಡೆ-ನುಡಿ ಹೊಂದಿ ಪ್ರಾಮಾಣಿಕರಾಗಿ ಕೆಲಸ ನಿರ್ವಹಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದು ನಿಯಮಿತ ವ್ಯಾಯಾಮಗಳನ್ನು ಮಾಡುತ್ತಾ ಒತ್ತಡ ನಿರ್ವಹಣೆಯನ್ನು ಮಾಡಬೇಕು. ಹಿರಿ-ಕಿರಿಯ ಅಧಿಕಾರಿಗಳನ್ನು ಗೌರವಿಸಬೇಕು. ಇಲಾಖೆಯ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಬೇಕು. ಕರ್ತವ್ಯ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಾ ಜೀವನದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಹೊಂದಬೇಕು ಎಂದರು.


13 ಜನ ಮಾಜಿ ಸೈನಿಕರು ಸೇರಿದಂತೆ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿ ಪಡೆದ ಒಟ್ಟು 99 ಜನ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದು ನಿರ್ಗಮನ ಪಥ ಸಂಚಲನ ನಡೆಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 


ಇಲಾಖೆಯ ಹಿರಿ- ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಪೋಷಕರು ಹಾಜರಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸ್ವಾಗತಿಸಿದರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯಕ್ ಪ್ರತಿಜ್ಞಾವಿಧಿ ಬೋಧಿಸಿ ವರದಿ ವಾಚಿಸಿ ವಂದಿಸಿ, ಎಪಿಸಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top