ಸಂಸ್ಕೃತಿಯ ಉಳಿವಿಗಾಗಿ ಸಂಸ್ಕೃತದ ಉಳಿವು ಮುಖ್ಯವಾಗಿದೆ: ಡಾ. ಕಲ್ಲಡ್ಕ ಪ್ರಭಾಕರ ಭಟ್

Upayuktha
0

 


ಕಲ್ಲಡ್ಕ: "ಸಂಸ್ಕೃತಿಯ ಉಳಿವಿಗಾಗಿ ಸಂಸ್ಕೃತದ ಉಳಿಯುವಿಗೆ ಮುಖ್ಯವಾಗಿದೆ. ಸಂಸ್ಕೃತವು ನಶಿಸಿದರೆ ನಮ್ಮ ಜೀವನ ಹಾಗೂ ಸಂಸ್ಕೃತಿ ಬೋನ್ಸಾಯ್ ಗಿಡದಂತೆ ಕುಬ್ಜವಾಗುತ್ತದೆ. ಆದ್ದರಿಂದ ಸಂಸ್ಕೃತದ ಕಲಿಕೆ ರಕ್ಷಣೆಗಾಗಿ ಎಲ್ಲರೂ ಶ್ರಮಿಸಬೇಕು. ಸ್ವಾತಂತ್ರ್ಯ ಪಡೆದು ಅನೇಕ ವರ್ಷಗಳು ಸಂದರೂ ಗುಲಾಮಿತನ ಇನ್ನೂ ಉಳಿದುಕೊಂಡಿದೆ. ಇನ್ನೂ ಆಂಗ್ಲಭಾಷೆಯ ದಾಸ್ಯವನ್ನು ಬಿಟ್ಟು ನಮ್ಮ ತನವನ್ನು ಉಳಿಸಿ ಕೊಳ್ಳಬೇಕಾಗಿದೆ" ಎಂದು  ಡಾ. ಕಲ್ಲಡ್ಕ ಪ್ರಭಾಕರ ಭಟ್ ನುಡಿದರು.


ಇವರು ಕಲ್ಲಡ್ಕದ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಶ್ರೀರಾಮ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರಿಗಾಗಿ ನಡೆದ ಒಂದು ದಿನದ ಕಾರ್ಯಾಗಾರ ಹಾಗೂ ವಾರ್ಷಿಕ ಸಭೆ ಉದ್ಘಾಟಿಸಿ ಹಾಗೂ ನೂತನ ಲಾಂಛನ ಅನಾವರಣ ಮಾಡಿ ಮಾತನಾಡಿದರು. 


ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ. ಇವರು ಮಾತನಾಡಿ 'ಸಂಸ್ಕೃತ ನಮ್ಮಭಾಷೆ ಅದರಿಂದ ನಮ್ಮ ಆಧ್ಯಾತ್ಮಿಕ ಸಾಮರ್ಥ್ಯವನ್ನು ವರ್ಧಿಸಿಕೊಳ್ಳಲು ಅನುಕೂಲವಾಗುತ್ತದೆ. ಸಿದ್ದೇಶ್ವರ ಸ್ವಾಮಿಗಳು ಹೇಳುವಂತೆ ನಮ್ಮನ್ನು ನಾವು ಗೆದ್ದರೆ ಜಗತ್ತನ್ನೇ ಗೆಲ್ಲಬಹುದು. ಪ್ರತಿನಿತ್ಯವೂ ಎಲ್ಲ ಉಪನ್ಯಾಸಕರು ಹೊಸ ಹೊಸ ವಿಷಯವನ್ನು ಅರಿತುಕೊಳ್ಳವ ವಿದ್ಯಾರ್ಥಿಗಳಾಗಬೇಕು. ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಉಪನ್ಯಾಸಕರ ಕೌಶಲ ಮತ್ತು ಜ್ಞಾನ ವೃದ್ಧಿಯಾಗಿ ವಿದ್ಯಾರ್ಥಿಗಳ ಏಳ್ಗೆಗೆ ಸಹಕಾರಿಯಾಗುತ್ತದೆ. ನಾವು ಸಂಘಟಿತರಾಗಿ ಕೆಲಸ ಮಾಡಿದರೆ ಯಾರಿಗೂ ಹೆದರಬೇಕಾಗಿಲ್ಲ. ಉತ್ತಮ ಕಾರ್ಯಗಳಿಗೆ ಪ್ರಾಂಶುಪಾಲರ ಸಂಘ ಬೆಂಬಲವಾಗಿ ನಿಲ್ಲುತ್ತದೆ' ಎಂದು ನುಡಿದರು.


ಕಳೆದ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಪೂರ್ಣಾಂಕ ಪಡೆದು ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ರಚಿತಾ ರಾಘವೇಂದ್ರ, ವೃಷಾ, ಗ್ರೀಷ್ಮ ಹಾಗೂ ನಿಜ ಕುಲಾಲ್ ಇವರನ್ನು ಹಾಗೂ ಹೆತ್ತವರನ್ನು ಗೌರವಿಸಲಾಯಿತು. 


ಅಭ್ಯಾಗತರಾದ ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ವಸಂತ ಬಲ್ಲಾಳ್ ಉಪಸ್ಥಿತರಿದ್ದರು. ಗೌರವಾಧ್ಯಕ್ಷರಾದ ರಮೇಶ್ ಆಚಾರ್ಯರು ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಸುರೇಖಾ ತಂತ್ರಿ ವಂದಿಸಿದರು. ಶ್ರೀರಾಮ ಪ.ಪೂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಹೇಂದ್ರ ಭಟ್ ನಿರ್ವಹಿಸಿದರು. 


ಮುಂದೆ ನಡೆದ ಗೋಷ್ಠಿಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಪರಮೇಶ್ವರ ಹೆಗಡೆಯವರು 'ಸಂಸ್ಕೃತ ಕಥಾ ಸಾಹಿತ್ಯ' ಎಂಬ ವಿಚಾರವಾಗಿ ಡಾ. ಪದ್ಮನಾಭ ಮರಾಠೆ ಅವರು ಪ್ರಾಚೀನ ಸಂಸ್ಕೃತ ಗ್ರಂಥಗಳು ಹೊಸ ಪರಿಷ್ಕರಣೆ' ಎಂಬ ವಿಷಯವನ್ನು ನಿರೂಪಿಸಿದರು. ಶಿರಸಿಯ ಸಂಸ್ಕೃತ ಭಾಷಾ ಉಪನ್ಯಾಸಕರಾದ ಡಾ. ಸೂರ್ಯನಾರಾಯಣ ಹೆಗಡೆ ಇವರು ಸಂಸ್ಕೃತ ಪ್ರಶ್ನೆಪತ್ರಿಕೆಗಳ ಸ್ವರೂಪದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವರಿಸಿದರು.


ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿಗಳಾದ ವಿಠಲ ಇವರು 'ಸಂಘಟನೆಯ ಬಲಗೊಳ್ಳಬೇಕು ಮತ್ತು ಪ್ರತಿಯೊಂದು ಪಠ್ಯ ವಿಷಯದ ಬಗ್ಗೆ ಸರಿಯಾದಂತಹ ಮಾಹಿತಿ ಪಡೆದುಕೊಳ್ಳಬೇಕು ಮತ್ತು ನಾವು ಸಂಘಟಿತರಾದರೆ ಏನನ್ನು ಸಾಧಿಸಬಹುದು' ಎಂದು ಹೇಳಿದರು. 


ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಪ್ರಸನ್ನಕುಮಾರ ಐತಾಳ್ ಇವರು ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾದ ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ ಸಮಾರೋಪ ಭಾಷಣ ಮಾಡಿದರು.  ಉಪನ್ಯಾಸಕರಾದ ವೆಂಕಟರಮಣ ಪೈಕ ಕಾರ್ಯಕ್ರಮ ನಿರ್ವಹಿಸಿ, ಶ್ರೀನಿವಾಸ ಮಧ್ಯಸ್ಥ ವಂದಿಸಿದರು. ಮೂವತ್ತಕ್ಕೂ ಹೆಚ್ಚಿನ ಕಾಲೇಜುಗಳ ಸಂಸ್ಕೃತ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top