ಮೂಡುಬಿದಿರೆ: ಉದ್ಯಮದಲ್ಲಿ ಯಶಸ್ಸು ಸಾಧಿಸಲು ಕೇವಲ ಹೊಸ ಕಲ್ಪನೆಗಳನ್ನು ಹೊಂದಿರುವುದಷ್ಟೇ ಸಾಲದು; ಅವುಗಳನ್ನು ಕಾರ್ಯರೂಪಕ್ಕೆ ತರುವ ಸಮರ್ಥ ತಂತ್ರ, ದೃಢ ಪ್ರಕ್ರಿಯೆ, ನಿರಂತರ ಪ್ರಯತ್ನ ಮತ್ತು ಶಿಸ್ತು ಅಗತ್ಯ ಎಂದು ಖ್ಯಾತ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಹಾಗೂ ಮಾಸ್ಟರ್ಚೆಫ್ ಇಂಡಿಯಾ ಸೆಮಿಫೈನಲಿಸ್ಟ್ ವೇಣು ಶರ್ಮಾ ಅಭಿಪ್ರಾಯಪಟ್ಟರು.
ಅವರು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗ ಆಯೋಜಿಸಿದ್ದ ‘ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವುವ ಬಗೆ’ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಹೊಸ ಕಲ್ಪನೆಗಳಿಗಿಂತ ಅವುಗಳನ್ನು ಸರಿಯಾದ ತಂತ್ರದ ಮೂಲಕ ಅನುಷ್ಠಾನಗೊಳಿಸುವ ಸಾಮರ್ಥ್ಯವೇ ಪ್ರಮುಖವಾಗಿದೆ. ಉತ್ತಮ ಯೋಜನೆ, ನಿರಂತರ ಸುಧಾರಣೆ ಹಾಗೂ ಶಿಸ್ತಿನ ಕಾರ್ಯಪದ್ಧತಿ ಯಾವುದೇ ಸಂಸ್ಥೆಯ ಬೆಳವಣಿಗೆಗೆ ಬಲವಾದ ಅಡಿಪಾಯವಾಗುತ್ತದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ಕುರಿತು ವ್ಯಕ್ತವಾಗುತ್ತಿರುವ ಆತಂಕಗಳನ್ನು ಉಲ್ಲೇಖಿಸಿದ ಅವರು, ಎಐ ಭಾರತಕ್ಕೆ ಬಂದರೆ ಉದ್ಯೋಗಗಳು ಕಡಿಮೆಯಾಗುತ್ತವೆ ಎಂಬ ಭಯ ಬೇಡ. ಭಾರತವು ಅಪಾರ ಜನಸಂಖ್ಯೆ ಹಾಗೂ ವೈವಿಧ್ಯಮಯ ಅಗತ್ಯಗಳನ್ನು ಹೊಂದಿರುವ ದೊಡ್ಡ ದೇಶ. ಇಲ್ಲಿ ತಂತ್ರಜ್ಞಾನವು ಉದ್ಯೋಗಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳುವುದಕ್ಕಿಂತ ಕೆಲಸದ ಗುಣಮಟ್ಟ, ಉತ್ಪಾದಕತೆ ಹಾಗೂ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ಇತಿಹಾಸವನ್ನು ನೆನಪಿಸಿಕೊಂಡ ಅವರು, ಕಂಪ್ಯೂಟರ್ ಬಂದಾಗಲೂ ಉದ್ಯೋಗಗಳು ನಾಶವಾಗುತ್ತವೆ ಎಂದು ಹೇಳಲಾಗಿತ್ತು. ಮೊಬೈಲ್ ಫೋನ್ಗಳು ಜನಪ್ರಿಯವಾದಾಗಲೂ ಇದೇ ರೀತಿಯ ಆತಂಕ ವ್ಯಕ್ತವಾಗಿತ್ತು. ಕೈಗಾರಿಕೀಕರಣ ಆರಂಭವಾದಾಗಲೂ ಇದೇ ರೀತಿಯ ಚರ್ಚೆಗಳು ನಡೆದಿದ್ದವು. ಆದರೆ ಪ್ರತಿಯೊಂದು ಹೊಸ ತಂತ್ರಜ್ಞಾನವೂ ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಇಂದು ಎಐ ಕೂಡ ಅದೇ ರೀತಿಯಲ್ಲಿ ಹೊಸ ಕೌಶಲ್ಯಗಳಿಗೆ, ಹೊಸ ಉದ್ಯಮಗಳಿಗೆ ಮತ್ತು ಹೊಸ ಉದ್ಯೋಗಗಳಿಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.
ವಿಶೇಷವಾಗಿ ಎಂಬಿಎ ವಿದ್ಯಾರ್ಥಿಗಳು ಉದ್ಯೋಗ ಅರಸುವ ಮನೋಭಾವದಿಂದ ಹೊರಬಂದು ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು. ಹೊಸ ಕಂಪನಿಗಳನ್ನು ಆರಂಭಿಸುವ ಧೈರ್ಯ, ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಹಿಡಿಯುವ ಮನೋಭಾವ ಹಾಗೂ ಸಂಸ್ಥೆಗಳಲ್ಲಿನ ಪ್ರತಿಯೊಂದು ಪ್ರಕ್ರಿಯೆಯನ್ನು ನಿರಂತರವಾಗಿ ಸುಧಾರಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮರ್ಥ ನಾಯಕ ಎಂದರೆ ಕೇವಲ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಲ್ಲ; ಸರಿಯಾದ ಸಮಯದಲ್ಲಿ ಸರಿಯಾದ ತಂತ್ರ ರೂಪಿಸಿ, ತಂಡವನ್ನು ಗುರಿಯತ್ತ ಮುನ್ನಡೆಸುವ ವ್ಯಕ್ತಿ. ಅದಕ್ಕಾಗಿ ವಿಶ್ಲೇಷಣಾತ್ಮಕ ಚಿಂತನೆ, ದೂರದೃಷ್ಟಿ, ಬದಲಾವಣೆಗಳನ್ನು ಸ್ವೀಕರಿಸುವ ಮನೋಭಾವ ಹಾಗೂ ನಿರಂತರ ಕಲಿಕೆಯ ಹಂಬಲ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಮಾಸ್ಟರ್ಚೆಫ್ ಇಂಡಿಯಾ ಸೆಮಿಫೈನಲಿಸ್ಟ್ ಆಗಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವೇಣು ಶರ್ಮಾರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಉಪಸ್ಥಿತರಿದ್ದರು. ಹೃಷಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಮಾನ್ ಕಾರ್ಯಕ್ರಮವನ್ನು ಸಂಯೋಜಿಸಿದರು.


