ಮಂಗಳೂರು: ಮಾನವೀಯ ಸೇವೆಯ ಮೂಲಕ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಬಿರುವೆರ್ ಕುಡ್ಲ ಸಂಘಟನೆಯ ನೇತೃತ್ವದಲ್ಲಿ, ದುಬಾಯಿ ಘಟಕದ ಆಶ್ರಯದಲ್ಲಿ ಎರಡು ಅಸಹಾಯಕ ಕುಟುಂಬಗಳಿಗೆ ಒಟ್ಟು ₹1,65,000 ಆರ್ಥಿಕ ನೆರವನ್ನು ವಿತರಿಸಲಾಯಿತು.
ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ₹55,000 ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ದುರ್ಗಾಪ್ರಸಾದ್ ಅವರ ಚಿಕಿತ್ಸೆಗೆ ₹1,10,000 ನೆರವನ್ನು ಸಂಘಟನೆಯ ಪದಾಧಿಕಾರಿಗಳು ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ಅವರು, "ಬಿರುವೆರ್ ಕುಡ್ಲ ಸಂಘಟನೆಯು ಕಳೆದ ಹಲವು ವರ್ಷಗಳಿಂದ ಜಾತಿ-ಧರ್ಮ-ಭೇದ ಮೀರಿ ಸೇವೆ ಮಾಡುತ್ತಿದೆ. ದುಬಾಯಿಯಲ್ಲಿ ದುಡಿಯುವ ಕನ್ನಡಿಗರು ಕೂಡ ತಮ್ಮ ಊರಿನ ಜನರಿಗಾಗಿ ಈ ರೀತಿ ಕೈಜೋಡಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಂತಹ ಸಂಘಟನೆಗಳೇ ನಿಜವಾದ ಸಮಾಜದ ಬೆನ್ನೆಲುಬು" ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತನಾಡಿ, "ಬಿರುವೆರ್ ಕುಡ್ಲದ ಉದಯ ಪೂಜಾರಿ ಮತ್ತು ತಂಡದವರು ಮಾಡುತ್ತಿರುವ ಉತ್ತಮ ಸೇವಾಕಾರ್ಯ ಮುಂದೆಯೂ ಹೀಗೆ ನಿರಂತರವಾಗಿ ನಡೆಯಲಿ. ಯುವಕರ ಈ ಸಮಾಜಮುಖಿ ಕೆಲಸಕ್ಕೆ ನನ್ನ ಪೂರ್ಣ ಬೆಂಬಲವಿದೆ" ಎಂದು ಹಾರೈಸಿದರು.
ಸಂಘಟನೆಯ ಸೇವೆಯನ್ನು ಕೊಂಡಾಡಿದ ನಾಯಕರು:
ಬಿರುವೆರ್ ಕುಡ್ಲ ಸಂಘಟನೆಯು ಕಳೆದ 8 ವರ್ಷಗಳಲ್ಲಿ ₹10 ಕೋಟಿಗೂ ಹೆಚ್ಚು ಮೌಲ್ಯದ ವೈದ್ಯಕೀಯ, ಶೈಕ್ಷಣಿಕ ಮತ್ತು ಮನೆ ನಿರ್ಮಾಣ ನೆರವನ್ನು ನೀಡಿದೆ. ಕೋವಿಡ್ ಸಮಯದಲ್ಲಿ ಉಚಿತ ಆಂಬ್ಯುಲೆನ್ಸ್, ರೇಷನ್ ಕಿಟ್ ವಿತರಿಸಿ ಮಾದರಿಯಾಗಿದೆ. ದುಬಾಯಿಯಂತಹ ವಿದೇಶದಲ್ಲೂ ಸಂಘಟನೆಯ ಘಟಕ ತೆರೆದು ನೆರವು ನೀಡುತ್ತಿರುವುದು ನಾಡಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಾಜಿ ಅಧ್ಯಕ್ಷರಾದ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಸುಭಾಶ್ ಬೋಳೂರು, ವಸಂತ್ ಪೂಜಾರಿ, ಏಸ್ ಡೆವಲಪ್ಪೆರ್ಸ್ ಮಾಲಕ, ದಾನಿ ದರ್ಶನ್ ಜೈನ್, ರಣ್ದೀಪ್ ಕಾಂಚನ್, ಬಿರುವೆರ್ ಕುಡ್ಲ ಸಂಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ, ಅಧ್ಯಕ್ಷ ರಾಕೇಶ್ ಬಲ್ಲಾಳ್ ಬಾಗ್, ದುಬಾಯಿ ಘಟಕದ ಅಧ್ಯಕ್ಷ ಸಂದೀಪ್ ಕೋಟ್ಯಾನ್ ಕಾರ್ಕಳ, ಅಶ್ವಿನ್ ರಾಜ್ ಚಿಲಿಂಬಿ, ಲೋಹಿತ್ ಗಟ್ಟಿ, ರಾಮ್ ಎಕ್ಕೂರು, ದಿನಿಲ್ ಬಲ್ಲಾಲ್ ಭಾಗ್, ಗಿರೀಶ್ ಬೋಳೂರು, ಗಣೇಶ್ ಎಕ್ಕೂರು, ದುಬೈ ಘಟಕದ ರಿತೇಶ್ ಉಳ್ಳಾಲ, ಸಂಘಟನೆಯ ಜಿಲ್ಲಾ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ದಾನಿಗಳು ಹಾಗೂ ಫಲಾನುಭವಿಗಳ ಕುಟುಂಬದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

