ಮೂಡುಬಿದಿರೆ: ವೈದ್ಯಕೀಯ ವೃತ್ತಿಯಲ್ಲಿ ರೋಗಿಯ ಸುರಕ್ಷತೆ, ನೈತಿಕತೆ ಹಾಗೂ ಸೇವಾ ಮನೋಭಾವವೇ ಅತ್ಯಂತ ಪ್ರಮುಖ ಮೌಲ್ಯಗಳಾಗಿದ್ದು, ವೈದ್ಯ-ರೋಗಿ ಸಂಬಂಧವು ಪರಸ್ಪರ ನಂಬಿಕೆ ಮತ್ತು ಜವಾಬ್ದಾರಿಯ ಆಧಾರದ ಮೇಲೆ ನಿರ್ಮಾಣವಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಮೂಡುಬಿದಿರೆಯ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮೂಡುಬಿದಿರೆ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈದ್ಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸಮಾಜದ ಸೇವೆಯ ಪವಿತ್ರ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಸಿಗುವಷ್ಟು ಆತ್ಮತೃಪ್ತಿ ಮತ್ತು ಗೌರವ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ. ಕಾಲಾನಂತರದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ವೈದ್ಯರು ಹೊಸ ತಂತ್ರಜ್ಞಾನ ಹಾಗೂ ಜ್ಞಾನಕ್ಕೆ ಹೊಂದಿಕೊಳ್ಳಬೇಕು ಎಂದು ಅವರು ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಹಲವು ಅವಕಾಶಗಳಿದ್ದು, ಮೂಡುಬಿದಿರೆಯ ಐಎಂಎ ಘಟಕದೊಂದಿಗೆ ಕೈಜೋಡಿಸಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಡಾ. ಮೋಹನ ಆಳ್ವ ಭರವಸೆ ನೀಡಿದರು.
ಐಎಂಎ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ಟಿ.ಎ. ವೀರಭದ್ರಯ್ಯ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘವು ವಿಶ್ವದ ಅತಿದೊಡ್ಡ ವೈದ್ಯರ ಸಂಘಟನೆಗಳಲ್ಲಿ ಒಂದಾಗಿದೆ. ವೈದ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು, ಸದಸ್ಯರಿಗೆ ಅಗತ್ಯ ಬೆಂಬಲ ನೀಡುವುದು ಹಾಗೂ ವೈದ್ಯರ ಹಿತ ಕಾಪಾಡುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ವೈದ್ಯರಿಗೆ ಸಂಘಟನೆಯಿಂದ ವಿಮೆ, ಭದ್ರತೆ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ದೊರೆಯುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಐಎಂಎ ಸದಸ್ಯರಾಗುವ ಮೂಲಕ ಸಂಘವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ಸಂಸ್ಕೃತಿಗೂ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಮೂಡುಬಿದಿರೆಯನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬೆಳೆಸುವಲ್ಲಿ ಆಳ್ವಾಸ್ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ ಎಂದರು. ಐಎಂಎ ಮೂಡುಬಿದಿರೆ ಘಟಕಕ್ಕೆ ಸೇರ್ಪಡೆಯಾದ 26 ವೈದ್ಯರ ಮೇಲೆ ಸಾವಿರಾರು ಜನರ ಆರೋಗ್ಯದ ಜವಾಬ್ದಾರಿ ಇದೆ. ವೈದ್ಯರು ತಮ್ಮ ವೃತ್ತಿಯನ್ನು ಸೇವಾ ಕ್ಷೇತ್ರವಾಗಿ ಪರಿಗಣಿಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು. ವೈದ್ಯಕೀಯ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಸೇವೆಯ ಜೊತೆಗೆ ಉದ್ಯಮ ಕ್ಷೇತ್ರವಾಗಿಯೂ ಬೆಳೆಯುತ್ತಿದೆ. ಆದರೆ ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡರೆ ಯಾವುದೇ ಸಮಸ್ಯೆ ಎದುರಾಗದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವವು ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ಐದು ಖಾಸಗಿ ಆಸ್ಪತ್ರೆಗಳು ಆರೋಗ್ಯ ಸೇವೆಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿವೆ ಎಂದರು. ಆಳ್ವಾಸ್ ಸಂಸ್ಥೆಯು ಈಗಾಗಲೇ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದೊಂದಿಗೆ ಸಹಕಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳ್ತಂಗಡಿಯಲ್ಲಿಯೂ ಇದೇ ರೀತಿಯ ಸಹಭಾಗಿತ್ವದ ನಿರೀಕ್ಷೆ ಇದೆ ಎಂದು ಹೇಳಿದರು.
ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಅಧೀಕ್ಷಕ ಡಾ. ಡಿ.ಎಸ್. ಶಿವಪ್ರಕಾಶ್ ಮಾತನಾಡಿ, ವೈದ್ಯರು ವೃತ್ತಿಪರ ಅಸೂಯೆ, ಸಮರ್ಪಕ ಸಂವಹನದ ಕೊರತೆ ಹಾಗೂ ತಪ್ಪು ತಿಳುವಳಿಕೆಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಿ ವೈದ್ಯಕೀಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದರು.
ಐಎಂಎ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೂಡುಬಿದಿರೆಯಲ್ಲಿ ಐಎಂಎಯ 183ನೇ ಘಟಕ ಸ್ಥಾಪನೆಯಾಗುತ್ತಿರುವುದು ಸಂತಸದ ಸಂಗತಿ. ಆರಂಭದಲ್ಲಿಯೇ 26 ವೈದ್ಯರು ಸದಸ್ಯತ್ವ ಪಡೆದಿದ್ದು, ಮುಂದಿನ ದಿನಗಳಲ್ಲಿ ಘಟಕವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಐಎಮ್ಒ ಕರ್ನಾಟಕ ಘಟಕ ವಿಭಾಗೀಯ ಸಂಯೋಜಕ ಡಾ. ಜಿ.ಕೆ. ಭಟ್ ಮಾತನಾಡಿ, ವೈದ್ಯರು ಒಟ್ಟಾಗಿ ತಮ್ಮ ವೃತ್ತಿಯ ಗೌರವ ಹಾಗೂ ಏಳಿಗೆಗಾಗಿ ಶ್ರಮಿಸಬೇಕು. ವೈದ್ಯರ ಮೇಲೆ ನಡೆಯುವ ಅನಗತ್ಯ ದಾಳಿಗಳನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಡಾ. ಪ್ರಭಾಚಂದ್ರ ಜೈನ್, ಡಾ. ಕೆ.ಆರ್. ಜೋಯಿಷಿ, ಡಾ. ಜಯಗೋಪಾಲ್ ತೊಳ್ಪಾಡಿ ಹಾಗೂ ಡಾ. ಲೀಲಾ ಎಸ್. ಭಟ್, ಡಾ ಪ್ರದೀಪ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮೂಡುಬಿದಿರೆಯ ಚೊಚ್ಚಲ ಐಎಂಎ ಘಟಕದ ನೂತನ ಪದಾಧಿಕಾರಿಗಳಿಗೆ ಪದಗ್ರಹಣದ ಬ್ಯಾಡ್ಜ್ ಧ್ವಜವಂದನೆಯನ್ನು ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಹರೀಶ್ ದೇಲಂತಬೆಟ್ಟು, ಡಾ. ಮೋಹನ್ ಅಪ್ಪಾಜಿ, ಡಾ. ಅವಿನ್ ಆಳ್ವ, ಡಾ. ವೆಂಕಟಾಚಲಪತಿ, ಡಾ. ವಿನಯ ಆಳ್ವ, ವಿವೇಕ್ ಆಳ್ವ, ಡಾ ಹನ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಶಮಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಡಾ. ಆಶೀಶ್ ಶರ್ಮ ವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಘಟಕದ ಕೋಶಾಧಿಕಾರಿ ಡಾ. ದಿಲೀಪ್ ಕುಮಾರ್ ಪ್ರತಿಜ್ಞಾವಿಧಿ ಧ್ವಜವಂದನೆಯನ್ನು ನೆರೆವೇರಿಸಿದರು. ಡಾ ಮೀನಾ ಕಿರಣ್ ಸನ್ಮಾನಿತರರನ್ನು ಪರಿಚಯಿಸಿದರು.



