ಬೆಂಗಳೂರು: ಕಲೆಯತ್ತ ಆಸಕ್ತಿ ಮತ್ತು ಕಾಳಜಿ ವ್ಯಕ್ತಿಯ ದೈಹಿಕ-ಮಾನಸಿಕ ಆರೋಗ್ಯವನ್ನು ಸಮತೋಲನಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಅಂತರರಾಷ್ಟ್ರೀಯ ಮನ್ನಣೆ ಪಡೆದ ಸಾವಧಾನತೆ ಜೀವನ ತರಬೇತುದಾರ್ತಿ ಹಾಗೂ ಕಲಾಚಿಕಿತ್ಸಕಿ ಅಶ್ವತಿ ಸುಬ್ರಮಣಿಯನ್ ಹೇಳಿದರು.
ನಿಟ್ಟೆ ಯೂನಿವರ್ಸಿಟಿಯ ಅಂಗಸಂಸ್ಥೆಯಾದ ನಿಟ್ಟೆ ಮೀನಾಕ್ಷಿ ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ (ಎನ್ಎಂಐಟಿ) ಮಹಿಳಾ ಒಕ್ಕೂಟ ‘ಆರಾ’ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
“ಯಾವ ವೃತ್ತಿಯಲ್ಲಿದ್ದರೂ ವ್ಯಕ್ತಿಯೊಳಗಿನ ಕಲೆಯ ಮೇಲಿನ ಅನುರಾಗವು ಅನೇಕ ಸಂದರ್ಭಗಳಲ್ಲಿ ಅನಾರೋಗ್ಯವನ್ನು ನಿವಾರಿಸುವ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಇಂದಿನ ದಿನಗಳಲ್ಲಿ ವಿಶ್ವದಾದ್ಯಂತ ಕಲಾಚಿಕಿತ್ಸೆ (ಆರ್ಟ್ ಥೆರಪಿ) ಮಾನಸಿಕ ಚಿಕಿತ್ಸೆಯ ಪ್ರಮುಖ ಅಂಗವಾಗಿ ಪರಿಗಣಿಸಲಾಗಿದೆ. ಇದು ಮಾನಸಿಕ ಉದ್ವೇಗವನ್ನು ಕಡಿಮೆ ಮಾಡುವುದರ ಜೊತೆಗೆ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಅಲ್ಲದೆ ಅನಿರೀಕ್ಷಿತ ಆಘಾತಗಳಿಂದ ಚೇತರಿಸಿಕೊಳ್ಳಲು ಅಗತ್ಯವಾದ ಅರಿವು ಮತ್ತು ಮನೋಬಲವನ್ನು ವೃದ್ಧಿಸಲು ಸಹಾಯಕವಾಗುತ್ತದೆ,” ಎಂದು ಅವರು ತಿಳಿಸಿದರು.
ತಮ್ಮ ವೈಯಕ್ತಿಕ ಜೀವನದ ಅನುಭವವನ್ನು ಹಂಚಿಕೊಂಡ ಅವರು, “ನನ್ನ 26ನೇ ವಯಸ್ಸಿನಲ್ಲಿ ನರಾಂಗದ ಅವನತಿಯಿಂದ ದೇಹ ಮತ್ತು ಮನಸ್ಸು ಎರಡೂ ಜರ್ಜರಿತವಾಗಿದ್ದವು. ಆ ಸಮಯದಲ್ಲಿ ಸಾವಧಾನತೆ ಮತ್ತು ಕಲಾಚಿಕಿತ್ಸೆಯ ವಿಧಾನವೇ ನನಗೆ ಸವಾಲುಗಳನ್ನು ಎದುರಿಸಲು ಪ್ರೇರಣೆಯಾಯಿತು. ಅಸ್ವಸ್ಥಳಾಗುವ ಮೊದಲು ನಾನು ಭರತನಾಟ್ಯ ಕಲಾವಿದೆಯಾಗಿದ್ದೆ. ಅದೇ ಕಲೆ ನನಗೆ ಔಷಧಿಯಂತೆ ಕೆಲಸಮಾಡಿ, ಗಾಲಿಕುರ್ಚಿಯಲ್ಲಿಯೇ ಹೊಸ ಬದುಕು ಕಟ್ಟಿಕೊಳ್ಳಲು ಶಕ್ತಿ ನೀಡಿತು,” ಎಂದು ವಿವರಿಸಿದರು.
ನಂತರ ಅವರು ಕಲಾಚಿಕಿತ್ಸೆಯ ಪ್ರಾತ್ಯಕ್ಷಿಕೆಯನ್ನು ನಡೆಸಿ, ಎಲ್ಲರೂ ವಿಶೇಷವಾಗಿ ದೃಶ್ಯಕಲೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ಘಟಕ ‘ಆರಾ’ದ ಅಧ್ಯಕ್ಷೆ ಡಾ. ಎನ್. ನಳಿನಿ ವಾರ್ಷಿಕ ವರದಿ ಮಂಡಿಸಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಪಠ್ಯಕ್ರಮ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಜೆ. ಸುಧೀರ್ ರೆಡ್ಡಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಹಿತಾ ಡಿ. ಶೆಟ್ಟಿ ಹಾಗೂ ‘ಆರಾ’ ಸಂಯೋಜಕಿ ಮೋನಿಕಾ ರಾಣಿ ಹೆಚ್.ಜಿ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳಾ ಸಿಬ್ಬಂದಿಯವರು ನೀಡಿದ ವಿವಿಧ ಕಲಾಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

