ಡಾ ಪಿ.ಎಸ್ ಶಂಕರ್ ಪ್ರತಿಷ್ಠಾನದ ವಿದ್ಯಾರ್ಥಿ ಪುರಸ್ಕಾರ ಪ್ರತಿಭೆ ಮತ್ತು ಭವಿಷ್ಯ ನಿರ್ಮಾಣದ ಹೂಡಿಕೆ: ಕಮಿಷನರ್ ಡಾ. ಶರಣಪ್ಪ

Upayuktha
0

ವೈದ್ಯಶ್ರೀ, ವೈದ್ಯ ಸಾಹಿತ್ಯ, ವಿದ್ಯಾರ್ಥಿ ಪುರಸ್ಕಾರ ಪ್ರದಾನ




ಕಲಬುರಗಿ: ಡಾ. ಪಿ.ಎಸ್ ಶಂಕರ್ ಪ್ರತಿಷ್ಠಾನ ಕಳೆದ 26 ವರ್ಷಗಳಿಂದ ನೀಡುತ್ತಿರುವ ವಿದ್ಯಾರ್ಥಿ ಪುರಸ್ಕಾರವು ಪ್ರತಿಭೆ ಮತ್ತು ಭವಿಷ್ಯದ ಮೇಲಿನ ಹೂಡಿಕೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್. ಡಿ ಹೇಳಿದರು. 


ಕಲಬುರಗಿಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನ ವಿಶ್ವೇಶ್ವರಯ್ಯ ಭವನದಲ್ಲಿ ಜನವರಿ 1 ರಂದು ಡಾ ಪಿ.ಎಸ್ ಶಂಕರ್ ಪ್ರತಿಷ್ಠಾನದ ವತಿಯಿಂದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿಜ್ಞಾನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಸ್ವತಃ ವೈದ್ಯರಾಗಿದ್ದರೂ ಹಲವಾರು ಸಮಾಜಮುಖಿ ಗುಣಗಳನ್ನು ಅಳವಡಿಸಿಕೊಂಡು 26 ವರ್ಷಗಳಿಂದ ನಡೆಯುತ್ತಿರುವ ಶ್ಲಾಘನೀಯ ಕಾರ್ಯವಾಗಿದೆ. ವಿಜ್ಞಾನದ ಕ್ಯಾಲೆಂಡರ್ ಬಿಡುಗಡೆ ಮೂಲಕ ವೈಜ್ಞಾನಿಕ ಮನೋಭಾವ ಪ್ರಸಾರದ ಜೊತೆಗೆ ಯುವ ಮನಸ್ಸುಗಳಿಗೆ ವಿಜ್ಞಾನ ಮಾಹಿತಿ ಒದಗಿಸುವ  ಸಂಪನ್ಮೂಲವು ವಿದ್ಯಾರ್ಥಿಗಳ ಪಾಲಿಗೆ ಸಿಗುತ್ತಿದೆ. ವಿದ್ಯಾರ್ಥಿ ವೇತನವು ಶಿಕ್ಷಣಕ್ಕೆ ಅತ್ಯಂತ ಶಕ್ತಿ ನೀಡುತ್ತದೆ. ತಾನು ಕೂಡ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆದು 600 ತಿಂಗಳ ವಿದ್ಯಾರ್ಥಿ ವೇತನ ಪಡೆದಿರುವುದನ್ನು ನೆನಪಿಸಿಕೊಳ್ಳುತ್ತಾ ಪ್ರತಿಷ್ಠಾನದ ಕೆಲಸ ಕಾರ್ಯವು ರಾಷ್ಟ್ರ ನಿರ್ಮಾಣದ ಕೆಲಸವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರತಿಷ್ಠಾನದ ಕೆಲಸ ಮೆಚ್ಚುವಂಥದ್ದು ಅದಕ್ಕಾಗಿ ಅಭಿನಂದಿಸುತ್ತೇನೆ ಎಂದರು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ ವಿಜಯಪುರ ಬಿಎಲ್‌ಡಿಇ ಸಮಕುಲಪತಿಗಳಾದ ಪ್ರೊ. ವೈ ಎಂ ಜೈರಾಜ್ ಮಾತನಾಡಿ, ವೈದ್ಯಕೀಯ ಕ್ಷೇತ್ರ ಅಪಾರ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಕೇಂದ್ರ ಸರ್ಕಾರವು ತನ್ನ ನೀತಿಗಳ ಮೂಲಕ ಹೆಚ್ಚಿನ ನೆರವು ನೀಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿ ಈಗಾಗಲೇ ದೇಶದಲ್ಲಿ 800ಕ್ಕೂ ಹೆಚ್ಚು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿದ್ದು 1 ಲಕ್ಷದ 50 ಸಾವಿರ ವೈದ್ಯ ಸೀಟುಗಳಿವೆ. 2030ರಲ್ಲಿ ಈ ಸಂಖ್ಯೆಯು ಎರಡು ಲಕ್ಷಕ್ಕೆ ಹೆಚ್ಚಾಗಲಿದ್ದು ಸ್ನಾತಕ ಪದವಿ ಸೀಟುಗಳು ಒಂದು ಲಕ್ಷಕ್ಕೆ ಹೆಚ್ಚಾಗಲಿದೆ. ಇಂತಹ ವೇಳೆಯಲ್ಲಿ ಪ್ರತಿಷ್ಠಾನದ ಕೆಲಸ ಕಾರ್ಯಗಳು ಡಾ ಪಿ ಎಸ್ ಶಂಕರ್ ಮಾರ್ಗದರ್ಶನದಲ್ಲಿ ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ  ಮೆಚ್ಚುಗೆ ಇದೆ ಎಂದರು.


ಡಾ ಪಿ ಎಸ್ ಶಂಕರ್ ರಾಷ್ಟ್ರೀಯ ವೈದ್ಯ ಶ್ರೀ ಪ್ರಶಸ್ತಿ ಪುರಸ್ಕೃತರಾದ ನಿಮಾನ್ಸ್ ನ ವಿಶ್ರಾಂತಿ ಕುಲಪತಿಗಳು ಹಾಗೂ ನಿರ್ದೇಶಕರಾದ ಡಾ. ಬಿ ಎನ್ ಗಂಗಾಧರ ಮಾತನಾಡಿ, ವೈದ್ಯಕ್ಕೆ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಪ್ರತಿಷ್ಠಾನವು ವಿದ್ಯಾರ್ಥಿಗಳಿಗೆ ನೈತಿಕ ಬಲ ತುಂಬುತ್ತಿದೆ. ಶ್ರೇಷ್ಠ ವೈದ್ಯ ಶಂಕರ್ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕಾಗಿ ನೀಡಿದ 15 ಸಾವಿರ ರೂಪಾಯಿಗಳನ್ನು ಪ್ರತಿಷ್ಠಾನದ ಉತ್ತಮ ಕೆಲಸಕ್ಕಾಗಿ ವಿನಿಯೋಗಿಸಲು ವಾಪಸ್ ಮಾಡುತ್ತಿದ್ದೇನೆ ಎಂದು ಪ್ರಕಟಿಸಿದರು


ಡಾ. ಪಿ ಎಸ್ ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಗೆ ಹಾಜನರಾದ ಬೆಳಗಾವಿಯ ಅಥಣಿಯ ಡಾ ಅಣ್ಣಪ್ಪ ಪಾಂಗಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ 45 ವರ್ಷಗಳಿಂದ ವೈದ್ಯ ವೃತ್ತಿಯನ್ನು ಮಾಡುತ್ತಿದ್ದು ತನ್ನ ರೋಗಿಗಳಿಗಾಗಿ ಬರೆದ ಕನ್ನಡದ ಪುಸ್ತಕಗಳನ್ನು ಗೌರವಿಸಿ ಇಂಥ ಪ್ರಶಸ್ತಿ ಲಭಿಸಿರುವುದು ಸಂತೋಷಕರ ಮತ್ತು ಈ ಪ್ರಶಸ್ತಿಯ ಕೀರ್ತಿಯನ್ನು ನನ್ನ ಎಲ್ಲಾ ರೋಗಿಗಳಿಗೆ ನೀಡುತ್ತೇನೆ ಮತ್ತು ಇದಕ್ಕಾಗಿ ನೀಡಿದ 7500 ನಗದು ಪುರಸ್ಕಾರವನ್ನು ಪ್ರತಿಷ್ಠಾನದ ಉತ್ತಮ ಕೆಲಸಗಳಿಗಾಗಿ ವಿನಿಯೋಗಿಸಲು ವಾಪಸ್ ಮಾಡುವುದಾಗಿ ಹೇಳಿದರು.


ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಅಂಬಿಕಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪಿ.ಎಸ್ ಶಂಕರ್, ಡಾ. ಜಿ ಡಿ ಹುನಕುಂಟಿ, ಡಾ ವೀಣಾ ಸಿದ್ದಾ ರೆಡ್ಡಿ, ಡಾಕ್ಟರ್ ಮಲ್ಲಿಕಾರ್ಜುನ ಕುರಾಲ್, ಶ್ರೀಮತಿ ಲಕ್ಷ್ಮಿ ದೇವಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಡಾ ಹೆಚ್. ವೀರಭದ್ರಪ್ಪ, ಸ್ವಾಗತಿಸಿದರು. ಡಾ ಪಿ ಎಂ ಬಿರಾದಾರ್, ಡಾಕ್ಟರ್ ಸದಾನಂದ ಪೆರ್ಲ ಡಾ. ಎಸ್ಎ ಮಾಲಿ ಪಾಟೀಲ್ ಸದಾನಂದ ಮಹಾ ಗಾಂವಕರ್, ಶಿವಾನಂದ ಹೆಬ್ಬಂಡಿ ಮತ್ತಿತರ ಉಪಸ್ಥಿತರಿದ್ದರು. ಕಾರ್ಯದರ್ಶಿ ನರೇಂದ್ರ ಬಡಶೇಷಿ ನಿರೂಪಣೆ ಮಾಡಿದರು. ರಾಜೇಶ್ವರಿ ಪ್ರಾರ್ಥನ ಗೀತೆ ಹಾಡಿದರು. ಡಾ ರಾಮಕೃಷ್ಣ ರೆಡ್ಡಿ ಧನ್ಯವಾದವಿತ್ತರು.


10 ವೈದ್ಯಕೀಯ, 3 ಇಂಜಿನಿಯರ್ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ


2025-26 ನೇ ಸಾಲಿನ ವೈದ್ಯ ಪುರಸ್ಕಾರವನ್ನು ಅರಸಿಕೆರೆ ಹಾರನಹಳ್ಳಿಯ ಪಾಂಡುರಂಗ ಜಿ.ಪಿ, ಭದ್ರಾವತಿಯ ನಂದನ್ ಗಣೇಶ, ಹುಲಿಯೂರಿನ ಆದಿತ್ಯ ಎಚ್.ಎಸ್, ಚಿಕ್ಕಮಗಳೂರಿನ ಅಜಿತ್ ಸಿಪಿ ಬಾಲ್ಕಿ ಗೋರ್ ಚಿಂಚೋಳಿಯ ಪಲ್ಲವಿ ಬಿರಾದಾರ, ಗದಗ ಬಿಂಕದಕಟ್ಟಿಯ ಅಮೋಘ ರೆಡ್ಡಿ ಯಡ್ರಾಮಿ ಬೆಳವಟ್ಟಿಯ ಅಭಿಷೇಕ್ ಚಿತ್ತಾಪುರ ಭೀಮನಹಳ್ಳಿಯ ಶಾಂಭವಿ ಅಂಬರ್, ಕಾರಟಗಿ ಮೈಲಾಪುರದ ಕಿರಣ್ ಕುಮಾರ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ನೇಹ ಎಸ್ ಭಾಗ್ಯಶ್ರೀ ಮತ್ತು ಚೇತನ್ ಅವರಿಗೆ ನೀಡಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top