ಮಂಗಳೂರು: ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಸೈಕಲ್ ಪ್ರವಾಸವಾದ ಟೂರ್ ಆಫ್ ನೀಲಗಿರೀಸ್ನ 16ನೇ ಆವೃತ್ತಿ ಈ ಬಾರಿ ಮಂಗಳೂರಿನಿಂದ ಆರಂಭವಾಗಲಿದೆ. ಡಿಸೆಂಬರ್ 14 ರಿಂದ 20ರವರೆಗೆ ನಡೆಯುವ ಈ ಯಾತ್ರೆಯಲ್ಲಿ 110 ಸೈಕ್ಲಿಸ್ಟ್ಗಳು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ರಮಣೀಯ ಪರಿಸರದ ಮೂಲಕ 700ಕ್ಕೂ ಅಧಿಕ ಕಿಲೋಮೀಟರ್ ದೂರ ಸಂಚರಿಸುವರು.
ಡಿಸೆಂಬರ್ 14 ರಂದು ಮಂಗಳೂರಿನ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ನಿಂದ ಪ್ರಾರಂಭವಾಗುವ ಯಾತ್ರೆಯಲ್ಲಿ ಸೈಕ್ಲಿಸ್ಟ್ಗಳು ವಿರಾಜಪೇಟೆ, ಸುಲ್ತಾನ್ ಬತ್ತೇರಿಯ ಮೂಲಕ 3ನೇ ದಿನ ಉದಕಮಂಡಲಂ (ಊಟಿ) ತಲುಪುತ್ತಾರೆ. ಒಂದು ದಿನದ ವಿಶ್ರಾಂತಿಯ ನಂತರ, 5, 6 ಮತ್ತು 7 ನೇ ದಿನಗಳಲ್ಲಿ ಸೈಕ್ಲಿಸ್ಟ್ಗಳು ಊಟಿಯ ಅದ್ಭುತ ಹೊರವಲಯದಲ್ಲಿ 3 ವಿಭಿನ್ನ ಲೂಪ್ಗಳಲ್ಲಿ ಪೆಡಲ್ ಮಾಡಲಿದ್ದು, ಡಿಸೆಂಬರ್ 20 ರಂದು ಊಟಿಯಲ್ಲಿ ಕೊನೆಗೊಳ್ಳುತ್ತದೆ ಎಂದು ಸಹ-ಸಂಸ್ಥಾಪಕ ದೀಪಕ್ ಮಜಿಪಾಟೀಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಮೊದಲು ಬೆಂಗಳೂರು ಹಾಗೂ ಮೈಸೂರಿನಿಂದ ಆರಂಭವಾಗುತ್ತಿದ್ದ ಈ ಜನಪ್ರಿಯ ಯಾತ್ರೆ ಈ ಬಾರಿ ಮೊದಲ ಬಾರಿಗೆ ಮಂಗಳೂರಿನಿಂದ ಚಾಲನೆಗೊಳ್ಳುತ್ತಿದೆ. ಟಿಎಫ್ಎನ್ನಲ್ಲಿ 9 ಮಹಿಳೆಯರು ಮತ್ತು 18 ವಿದೇಶಿ ಸೈಕ್ಲಿಸ್ಟ್ಗಳು ಸೇರಿದಂತೆ 110 ಭಾಗವಹಿಸುವರು. ಸಮುದ್ರಮಟ್ಟದಿಂದ 13500 ಮೀಟರ್ ಎತ್ತರಕ್ಕೆ ಪ್ರಯಾಣ ಕೈಗೊಳ್ಳುವುದು ವಿಶೇಷ. ಪ್ರವಾಸದ ಉದ್ದಕ್ಕೂ ಸೈಕ್ಲಿಸ್ಟ್ಗಳಿಗೆ 53 ಮಂದಿ ಬೆಂಬಲ ಸಿಬ್ಬಂದಿ ಇರುತ್ತಾರೆ. ಕರ್ನಾಟಕ, ತಮಿಳುನಾಡು, ಕೇರಳ, ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಎನ್ಸಿಆರ್, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಸೈಕ್ಲಿಸ್ಟ್ಗಳು ಈ ಬಾರಿ ಭಾಗವಹಿಸುತ್ತಿದ್ದು, ಡೆನ್ಮಾರ್ಕ್, ಐಲೆರ್ಂಡ್, ಇಟಲಿ, ಸಿಂಗಾಪುರ, ಯುಎಇ, ಬ್ರಿಟನ್ ಮತ್ತು ಅಮೆರಿಕದ ಯಾತ್ರಿಗಳು ಇದ್ದಾರೆ.
ಮೂರು ಪ್ರಸಿದ್ಧ ವನ್ಯಜೀವಿ ಅಭಯಾರಣ್ಯಗಳು ಮತ್ತು ನೀಲಗಿರಿ ಜಿಲ್ಲೆಯ ಪ್ರಾಚೀನ ಗ್ರಾಮಾಂತರವನ್ನು ಒಳಗೊಂಡಂತೆ ನೀಲಗಿರಿ ಜೀವಗೋಳದ ಮೂಲಕ ಸೈಕ್ಲಿಂಗ್ ಮಾಡುವ ರೋಮಾಂಚನವು ಪ್ರವಾಸದ ಪ್ರಮುಖ ಅಂಶವಾಗಿದೆ. ಈ ಯಾತ್ರೆ ಭಾರತವನ್ನು ಜಾಗತಿಕ ಸೈಕ್ಲಿಂಗ್ ನಕ್ಷೆಯಲ್ಲಿ ಇರಿಸಿದ್ದು, ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರೀತಿಯ ಸೈಕಲ್ ಪ್ರವಾಸವಾಗಿ ಹೊರಹೊಮ್ಮಿದೆ ಎಂದು ಪ್ರಕಟಣೆ ವಿವರಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




