ಧಾರ್ಮಿಕ ಆಚರಣೆಗಳ ಮೂಲಕ ಸ್ವಾವಲಂಬಿ, ಸಾಮರಸ್ಯ ಸಮಾಜ ನಿರ್ಮಾಣವಾಗಲಿ: ರಮೇಶ್ ಹೊಸು
ಬಂಟ್ವಾಳ: ಪುದು, ಕೊಡ್ಮಾಣ್, ಕಳ್ಳಿಗೆ, ತುಂಬೆ, ಅರ್ಕುಳ ಮತ್ತು ಮೇರಮಜಲು ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಕಳೆದ 48 ದಿನಗಳಿಂದ ಪ್ರತಿ ಮನೆ ಮನಗಳಲ್ಲಿ ಸಾಮೂಹಿಕ ರಾಮ ಮಂತ್ರ ಪಠನದೊಂದಿಗೆ ಆರಂಭಗೊಂಡ ಶ್ರೀ ರಾಮ ನಾಮ ತಾರಕ ಜಪ ಯಜ್ಞ ಇಂದು ವೇದಮೂರ್ತಿ ಕಶೆಕೊಡಿ ಸೂರ್ಯ ನಾರಾಯಣ ಭಟ್ ನೇತೃತ್ವದಲ್ಲಿ ಯಜ್ಞ ಆರಂಭಗೊಂಡು ಆಗಮಿಸಿದ ಎಲ್ಲಾ ರಾಮ ಭಕ್ತರು 10 ಕುಂಡಗಳಲ್ಲಿ ಕುಟುಂಬ ಸಮೇತರಾಗಿ ಭಕ್ತಿ ಭಾವದಿಂದ ಹವಿಸ್ಸು ಅರ್ಪಿಸುವ ಮೂಲಕ ಪೂರ್ಣಾಹುತಿಗೊಂಡು ಮಂಗಳಾರತಿಯೊಂದಿಗೆ ಯಾಗ ಸಂಪನ್ನಗೊಂಡಿತು.
ಬೆಳಿಗ್ಗೆ 6 ಗಂಟೆಗೆ ಯಾಗ ಸ್ಥಳದಲ್ಲಿ ಗಣಪತಿ ಹೋಮ ನಡೆದು ಬಳಿಕ ಧ್ವಜಾರೋಹಣ ಹಾಗೂ ಗೋ ಪೂಜೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ನೆರವೇರಿಸಿದರು.
ಬಳಿಕ ನಡೆದ ಸುಧರ್ಮ ಸಭೆಯಲ್ಲಿ ಅಖಿಲ ಭಾರತ ಗ್ರಾಮ ವಿಕಾಸ ಟೋಳಿ ಸದಸ್ಯರಾದ ರಮೇಶ್ ಹೊಸು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಹೋಮ, ಹವನ, ಪೂಜೆಯನ್ನು ನಮ್ಮ ಸಮಾಜದಲ್ಲಿ ವ್ಯಕ್ತಿಗತ ಸಾಧನೆಗಾಗಿ ಮಾಡುವ ಸಂಪ್ರದಾಯವಿದೆ. ಆದರೆ ಇಲ್ಲಿ ರಾಮ ತಾರಕ ಯಜ್ಞದ ಮೂಲಕ ಸಮಸ್ತ ಸಮಾಜದ ಹಿತಕ್ಕಾಗಿ ಆಯೋಜಿಸಿರುವುದು ವಿಶೇಷ, ಸಕಲ ಜೀವ ಸಂಕುಲಕ್ಕೋ ಸುಖವನ್ನು ಬಯಸುವ ಧರ್ಮ ಹಿಂದೂ ಧರ್ಮ, ಆದರೆ ನಾವು ಇಂದು ಗುಲಾಮಗಿರಿ ಹಾಗೂ ಇಂಗ್ಲಿಷ್ ವ್ಯಾಮೋಹದಿಂದ ನಮ್ಮ ನೈಜ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದದ ಸಂಗತಿ. ಆದ್ದರಿಂದ ಇಂತಹ ಧಾರ್ಮಿಕ ಆಚರಣೆಗಳು ಹಿಂದೂ ಸಮಾಜದ ಸಂಘಟಿಸಿ, ಜಾಗೃತಿಗೊಳಿಸಿ ನಮ್ಮತನವನ್ನು ಉಳಿಸಿ ಬೆಳೆಸಿ ಸ್ವಾವಲಂಬಿ ಬದುಕಿಗೆ ಹಾಗೂ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ್ ಕೆ ಆರ್ ಕೊಡ್ಮಾಣ್ ಮಾತನಾಡಿ, ಪವಿತ್ರ ಜಾಗ ನೆತ್ತರಕೆರೆಯಲ್ಲಿ ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನು ಒಟ್ಟುಗೂಡಿಸಿ ಸಾಮೂಹಿಕ ರಾಮ ನಾಮ ಜಪ ಯೋಜಿಸಿದ ಸತ್ಯ ದರ್ಶನ ಮಾಡಿದ ಎಲ್ಲರಿಗೂ ಶ್ರೀ ರಾಮನ ಆಶೀರ್ವಾದ, ಅನುಗ್ರಹವಿರಲಿ ಎಂದು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಾಲಕ ಡಾ ಬಾಲಕೃಷ್ಣ, ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಕಾರ್ಯದರ್ಶಿ ಬಿನುತ್ ಕುಮಾರ್, ಕೋಶಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಶ್ರೀ ರಾಮ ತಾರಕ ಜಪ ಯಜ್ಞದ ಸಂಯೋಜಕರು ದಾಮೋದರ ನೆತ್ತರಕೆರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಯೋಜಕರಾದ ತೇವು ತಾರಾನಾಥ ಕೊಟ್ಟಾರಿ ಧನ್ಯವಾದವಿತ್ತು, ಮನಿಷಾ ಮಾತಾಜಿ ಹಾಗೂ ಲತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


