ಹಾಸನ: ಹಾಸನದ ಹಳೆ ಈದ್ಗಾ ಮೈದಾನ, ಹೊಸ ಲೈನ್ ರಸ್ತೆಯಲ್ಲಿರುವ "ಶಾಹೀನ್ ಲರ್ನ್ ಅಕಾಡೆಮಿ ಶಾಲೆ"ಯಲ್ಲಿ ಇಂದು (ನ.1) 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತಿ, ಶಿಕ್ಷಕಿ, ಸಾಮಾಜಿಕ ಚಿಂತಕಿ ಹಾಗೂ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಹೆಚ್. ಎಸ್. ಪ್ರತಿಮಾ ಹಾಸನ್ ಭಾಗವಹಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಉಳಿಸುವುದೇ ದೊಡ್ಡ ಸವಾಲು ಆಗಿಬಿಟ್ಟಿದೆ. ಅದರ ಉಳಿವಿನತ್ತ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಕರುನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರು ತನ್ನ ಜನ್ಮದ ಋಣ ತೀರಿಸಿಕೊಳ್ಳಬೇಕೆಂದರೆ ಕರುನಾಡು ಹಾಗೂ ಕನ್ನಡಕ್ಕೆ ಋಣಿಯಾಗಿರಬೇಕು. ಕನ್ನಡ ನಾಡು ನುಡಿಯನ್ನು ಉಳಿಸಬೇಕಾದರೆ ನಮ್ಮ ಮನೆಗಳಿಂದಲೇ ಕನ್ನಡವನ್ನು ಹೇಳಿಕೊಡುತ್ತ ಮಾತನಾಡಬೇಕು. ಸಾವಿರಾರು ವರ್ಷ ಇತಿಹಾಸವನ್ನು ಹೊಂದಿರುವ ಕನ್ನಡಕ್ಕೆ ತನ್ನದೇ ಆದ ಅಸ್ತಿತ್ವವಿದೆ. ಕನ್ನಡ ಭಾಷೆಗೆ ಯಾವ ಧರ್ಮವು ಇಲ್ಲ ಯಾವ ಜಾತಿಯೂ ಇಲ್ಲ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಹ ಕನ್ನಡವನ್ನು ಮಾತನಾಡುತ್ತಾ ಕನ್ನಡದ ಭಾಷೆಯ ಮಹತ್ವ ತಿಳಿದು ಕನ್ನಡ ಬರದವರಿಗೆ ಹೇಳಿಕೊಡುವ ಕೆಲಸವನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಇಂದು ಈ ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಮಕ್ಕಳಿಗೆ ಕರ್ನಾಟಕದ ಹಾಗೂ ಕನ್ನಡದ ಮಹತ್ವವನ್ನು ತಿಳಿಸುತ್ತಾ ಶಾಲೆಯ ಅಭಿವೃದ್ಧಿ ಹೊಂದಲು ಪ್ರಯತ್ನಪಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಪ್ರತಿಮಾ ಹಾಸನ್ ತಿಳಿಸಿದರು.
ಶಾಲೆಯ ಮಕ್ಕಳಿಗೆ ಕರ್ನಾಟಕದ ಹಾಗೂ ಕನ್ನಡದ ಬಾವುಟದ ಚಿತ್ರವನ್ನು ಬಿಡಿಸಲು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮವಾಗಿ ಬಿಡಿಸಿದಂತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿ ಎಲ್ಲ ಮಕ್ಕಳಿಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಶಾಲೆಯ ಎಲ್ಲ ಮಕ್ಕಳಿಗೂ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ನಸರುಲ್ಲಾ ಮುಸಮಿಲ್ ಪಾಷ ಸಂಯೋಜಕರು, ಅಧ್ಯಕ್ಷರು ಇಂಥಿಯಸ್ ಪಾಷ, ಷಮಾ ಅಂಬ್ರಿನ್, ಶಿಕ್ಷಕ ವೃಂದವರು, ಇನ್ನು ಹಲವಾರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

