ಮತ್ತೆ ಬಂದಿದೆ ಯುಗಾದಿ ಎಂಬಂತೆ ಮತ್ತೆ ಬಂದಿದೆ ನವೆಂಬರ್ 1. ಎಲ್ಲಾ ರಾಜ್ಯಗಳಲ್ಲೂ ಈ ದಿನವನ್ನು ರಾಜ್ಯೋತ್ಸವವಾಗಿ ಆಚರಿಸುವ ಸಂಪ್ರದಾಯವಿದೆ. ಕರ್ನಾಟಕದಲ್ಲಂತೂ ಇದನ್ನು ತುಂಬಾ ವಿಜೃಂಭಣೆಯಿಂದ, ಸಂಭ್ರಮದಿಂದ ಆಚರಿಸುತ್ತಾರೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ನಿರ್ದಿಷ್ಟ ಸಂಖ್ಯೆಯ ಸಾಧಕರನ್ನು ಗೌರವಿಸುತ್ತಾರೆ. ಇದೆಲ್ಲಾ ಸಂತೋಷದ ವಿಷಯವೇ. ಆದರೆ ಕಾಸರಗೋಡಿನ ಕನ್ನಡಿಗರ ಪಾಲಿಗೆ ಇಂತಹ ಸಂತೋಷವಾಗಲಿ, ಸಂಭ್ರಮವಾಗಲಿ ಯಾವುದೇ ರೀತಿಯ ಪರಿಣಾಮವನ್ನು ಕೊಡದಂತಹ ಒಂದು ಸ್ಥಿತಿ ಅಥವಾ ದುಸ್ಥಿತಿ ಪ್ರಾಪ್ತವಾಗಿದೆ.
ಕಾರಣ ಏನು ಅನ್ನುವುದು ನಮಗೆಲ್ಲಾ ಗೊತ್ತಿದೆ. ಆದ್ದರಿಂದಲೇ ನಾವು ಅದನ್ನು ಕರಾಳ ದಿನವಾಗಿ ಅನೇಕ ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ರಾಜ್ಯ ಪುನರ್ ವಿಂಗಡಣೆ ಆಗಿ ಸುಮಾರು ಅರುವತ್ತು ವರ್ಷಗಳಿಗೂ ಹೆಚ್ಚಿನ ಕಾಲ ಕಳೆದು ಹೋಗಿದೆ. ಬೇರೆ ಬೇರೆ ರೀತಿಯಲ್ಲಿ ಗರಿಷ್ಠ ಪ್ರಮಾಣದ ಹೋರಾಟಗಳು ನಡೆದಿವೆ. ಆದರೆ ಪರಿಣಾಮ ಮಾತ್ರ ಶೂನ್ಯವೇ ಹೊರತು ನಮ್ಮ ಉದ್ದೇಶ ಯಾವ ರೀತಿಯಿಂದಲೂ ಮಾನ್ಯವಾಗಲಿಲ್ಲ. ಈಗಾಗಲೇ "ಕರ್ನಾಟಕದೊಂದಿಗೆ ಸಾಂಸ್ಕೃತಿಕ ವಿಲೀನಿಕರಣ" ಎನ್ನುವ ಸೂತ್ರವನ್ನು ನಾನು ಸರಕಾರಗಳ ಗಮನಕ್ಕೆ ತಂದಿದ್ದೇನೆ ಮತ್ತು ಕನ್ನಡಿಗರ, ಕನ್ನಡ ಭಾಷೆಯ, ಸಂಸ್ಕೃತಿಯ ಹಿತದೃಷ್ಟಿಯಿಂದ ಶುಭವನ್ನು ಹಾರೈಸುವ ಎಲ್ಲರ ಗಮನಕ್ಕೂ ವಿವಿಧ ಸಂವಹನ ಮಾಧ್ಯಮಗಳ ಮೂಲಕ ತರಲಾಗಿದೆ.
ಆ ಸೂತ್ರದ ಬಗ್ಗೆ ಮಾತಾಡುವುದಕ್ಕೆ ಮೊದಲು ಒಂದು ಅತ್ಯಂತ ಪ್ರಸ್ತುತವಾದ ಪ್ರಶ್ನೆಯನ್ನು ನಾವು ಎತ್ತಬೇಕು. ಭಾಷಾ ನೆಲೆಯಲ್ಲಿ ಅಥವಾ ಸಂಸ್ಕೃತಿಯ ನೆಲೆಯಲ್ಲಿ ಕಾಸರಗೋಡಿನ ಸ್ಥಾನಮಾನ ಏನು ಎನ್ನುವುದಕ್ಕೆ ಕರ್ನಾಟಕ ಸರಕಾರದ ದೃಷ್ಟಿಯಿಂದ ಸ್ಪಷ್ಟೀಕರಣ ಇನ್ನೂ ನಮಗೆ ದೊರೆತಿಲ್ಲ. ಆದರೆ ಕಾಸರಗೋಡನ್ನು ಗಡಿನಾಡು ಎನ್ನುವ ವಿಭಾಗಕ್ಕೆ ಸೇರಿಸಿ (ವಿವಾದಿತ ಪ್ರದೇಶ) ಬೇರೆ ಬೇರೆ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕೇಂದ್ರ ಸರಕಾರವೂ ಆಂಶಿಕವಾಗಿಯಾದರೂ ಇದನ್ನು ಒಪ್ಪಿಕೊಂಡಿದೆ ಎನ್ನುವುದಕ್ಕೆ ಇತ್ತೀಚೆಗಿನ ಒಂದು ಜ್ವಲಂತ ನಿದರ್ಶನವನ್ನು ಎತ್ತಿ ಹೇಳುವುದಾದರೆ ಗೌರವಾನ್ವಿತ ರಾಷ್ಟ್ರಾಧ್ಯಕ್ಷರಾಗಿರುವ ದ್ರೌಪದಿ ಮುರ್ಮು ಅವರು ಕಾಸರಗೋಡಿಗೆ ಆದ ಅನ್ಯಾಯವನ್ನು ತಿದ್ದುವಲ್ಲಿ ತತ್ ಕ್ಷಣ ತನ್ನದೇ ಆದ ರೀತಿಯಿಂದ ಸ್ಪಂದಿಸಿದ್ದಾರೆ.
ಒಳನಾಡು, ಹೊರನಾಡು, ಗಡಿನಾಡು ಎಂಬ ವಿಭಾಗೀಕರಣ ಇದೆ. ಇದರಲ್ಲಿ ನಿಜವಾದ ಅರ್ಥದಲ್ಲಿ ಗಡಿನಾಡು ಯಾವುದು? ಕಾಸರಗೋಡು ಮತ್ತು ನಾನು ತಿಳಿದಂತೆ ಇನ್ನು ಒಂದೆರಡು ಪ್ರದೇಶಗಳು ಗಡಿನಾಡು ಎಂದರೆ ವಿವಾದಾಸ್ಪದ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ. ಈ ಗಡಿನಾಡಿಗೆ ಪ್ರತ್ಯೇಕವಾದಂತಹ ಕೆಲವು ನಿಯಾಮಾವಳಿಗಳು ಇವೆ ಎನ್ನುವುದನ್ನು ಸರಕಾರವೂ ಒಪ್ಪಿಕೊಂಡಿದೆ ಎಂಬ ಕಾರಣದಿಂದಾಗಿಯೇ ವರ್ಷಗಳ ಅಂತರದಲ್ಲಿ ಅಲ್ಪಸಂಖ್ಯಾತರ ಆಯೋಗ ಈ ಪ್ರದೇಶಕ್ಕೆ ಬಂದು ಇಲ್ಲಿನ ಜನರ ಯೋಗಕ್ಷೇಮವನ್ನು ವಿಚಾರಿಸುತ್ತಿರುವುದನ್ನು ನಾವು ನೋಡಿದ್ದೇವೆ.
ಆದರೆ ಗಡಿನಾಡು ಎನ್ನುವ ಪ್ರತ್ಯೇಕವಾದ ಅಸ್ತಿತ್ವ ಇರುವುದೇ ಹೌದಾದರೆ ಕೇರಳ ಸರಕಾರ ಕೂಡಾ ಈ ಸತ್ಯವನ್ನು ಅಂಗೀಕರಿಸಬೇಕಾಗುತ್ತದೆ. ಕೇರಳ ಸರಕಾರ ಈಗ ಇದನ್ನು ಗಡಿನಾಡು ಎಂದು ಗುರುತಿಸಿದ ಚಿಹ್ನೆಗಳು ಮಾತ್ರ ಕಾಣಿಸುತ್ತಿಲ್ಲ. ಅದರ ಬದಲು ಇದನ್ನು ಒಳನಾಡು ಎಂಬಂತೆ ಅವರು ನಡೆಸಿಕೊಂಡಿದ್ದಾರೆ. ಇದರಿಂದ ಗಡಿನಾಡಿನ ಭಾಷೆ, ಸಂಸ್ಕೃತಿಯ ಅಸ್ತಿತ್ವಕ್ಕೆ, ಅದರ ಸಂರಕ್ಷಣೆಗೆ ತುಂಬಾ ಅಪಾಯದ ವಿದ್ಯಾಮಾನಗಳು ಸಂಭವಿಸುತ್ತಿವೆ. ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ. ಅಭಿವೃದ್ಧಿ ಕ್ಷೇತ್ರದಲ್ಲು ಕೂಡಾ ಈ ಪ್ರದೇಶ ಅವಗಣನೆಗೆ ಒಳಗಾಗಿದೆ ಎನ್ನುವುದು ಪ್ರತ್ಯೇಕವಾಗಿ ಗಮನಾರ್ಹವಾದ ವಿಷಯ.
ಕೇರಳದ ಒಳನಾಡಿಗೆ ನಾವು ಸಂಬಂಧಿಸಿದವರಾದರೆ ಇಲ್ಲಿನ ಕನ್ನಡಿಗರ ಅರ್ಥಾತ್ ಸಮಷ್ಟಿ ಕೇರಳಿಗರೊಂದಿಗೆ ವಿಲೀನಗೊಂಡಿರುವ ಕನ್ನಡಿಗರ ಸುಖ ದುಃಖವನ್ನು ಸಂಪೂರ್ಣವಾಗಿ ನಿರ್ವಹಿಸಬೇಕಾದ ಹೊಣೆಗಾರಿಕೆ ಕೇರಳ ಸರಕಾರಕ್ಕಿದೆ. ಅದರೊಂದಿಗೆ ಗಡಿನಾಡು ಎಂಬ ನೆಲೆಯಲ್ಲಿ ವಿವಾದಿತ ಪ್ರದೇಶಕ್ಕೆ ಏನೆಲ್ಲಾ ವಿಶೇಷ ಸೌಲಭ್ಯಗಳನ್ನು ಕೊಡಬೇಕೋ ಅದೆಲ್ಲವನ್ನು ನೀಡುವುದು ಕೇರಳ ಸರಕಾರದ ಕರ್ತವ್ಯವಾಗಿದೆ. ಇಲ್ಲಿನ ಸಂಸ್ಕೃತಿಗೆ ಬಾಧಕವಾಗದ ಹಾಗೆ ಸರಕಾರದ ಸುತ್ತೋಲೆಗಳನ್ನು ಒಳಗೊಂಡಂತೆ ಎಲ್ಲವನ್ನು ಕನ್ನಡದಲ್ಲಿ ಅಥವಾ ಇಂಗ್ಲೀಷಿನಲ್ಲಾದರೂ ಒದಗಿಸಬೇಕಾದ್ದು ಈ ಕರ್ತವ್ಯದಲ್ಲಿ ಒಳಗೊಳ್ಳುತ್ತದೆ. ಫಲವತ್ತಾದಂತಹ ಕಾಸರಗೋಡು ಪ್ರದೇಶವನ್ನು ಕೇರಳ ಸರಕಾರ ತನ್ನದು ಎಂದು ಬಾಚಿಕೊಂಡಲ್ಲಿಂದ ಈ ಕರ್ತವ್ಯದಿಂದ ಅಥವಾ ಹೊಣೆಗಾರಿಕೆಯಿಂದ ಯಾವ ದೃಷ್ಟಿಯಿಂದಲೂ ಅವರು ತಪ್ಪಿಸಿಕೊಳ್ಳುವ ಹಾಗಿಲ್ಲ. ಕಾರಣ ಇನ್ನೊಮ್ಮೆ ಹೇಳುತ್ತೇನೆ. ಇಲ್ಲಿಯ ಎಲ್ಲಾ ಕಂದಾಯ, ತೆರಿಗೆ, ಇತ್ಯಾದಿಗಳು ಸಲ್ಲಿಸಲ್ಪಡುವುದು ಕೇರಳ ಸರಕಾರಕ್ಕೆ.
ಕರ್ನಾಟಕ ಸರಕಾರ ಈ ಬಗ್ಗೆ ಏನು ನಿಲುವನ್ನು ಹೊಂದಿದೆ ಎನ್ನುವುದು ಅತ್ಯಂತ ಪ್ರಸ್ತುತವಾದಂತಹ ಒಂದು ಪ್ರಶ್ನೆ. ಆದರೆ ಇದಕ್ಕೆ ಸ್ಪಷ್ಟವಾದ ಉತ್ತರ ಕರ್ನಾಟಕ ಸರಕಾರದ ಪರವಾಗಿ ನಮಗೆ ಸಿಗುವುದಿಲ್ಲ.
ಒಳನಾಡು ಎಂದು ಗುರುತಿಸಿದ್ದರೆ ಒಳನಾಡಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ನಮಗೆ ಸಿಗಬೇಕು. ಅದು ಸಾಧ್ಯವೂ ಅಲ್ಲ ಮತ್ತು ಅದನ್ನು ಭಾಷಾವಾರು ರಾಜ್ಯ ರಚನೆಯ ಸಂದರ್ಭದಲ್ಲಿ ಶಾಸನಬದ್ಧವಾಗಿ ಯಾರೂ ಒಪ್ಪಿಕೊಳ್ಳುವ ಹಾಗಿಲ್ಲ. ಹಾಗಾದರೆ ಇದನ್ನು ಹೊರನಾಡೂ ಎಂದು ಗುರುತಿಸಿದರೇ, ಅಥವಾ ಗಡಿನಾಡು ಎಂದು ಗುರುತಿಸಿದರೆ? ಇಲ್ಲಿಗೆ ಕರ್ನಾಟಕ ಸರಕಾರ ಕೊಡಬೇಕಾದ ಸೌಲಭ್ಯಗಳು ಯಾವುವು? ಅಥವಾ ಕರ್ನಾಟಕ ಸರಕಾರ ಇಲ್ಲಿ ವಾಸಿಸುತ್ತಿರುವ ಕನ್ನಡಿಗರ ಪರವಾಗಿ, ಸಮಸ್ತ ಕಾಸರಗೋಡು ಪ್ರಶ್ನೆಯ ಪರವಾಗಿ ಏನು ಧೋರಣೆಯನ್ನು ಹೊಂದಿದೆ? ಮಹಾಜನ ಆಯೋಗ ಇದು ಕರ್ನಾಟಕಕ್ಕೆ ಸೇರಬೇಕಾದ ಭೂಪ್ರದೇಶ ಎಂದು ಆ ಅಸಂಧಿಗ್ದವಾದ ಮಾತುಗಳಲ್ಲಿ ತನ್ನ ವರದಿಯನ್ನು ಒಪ್ಪಿಸಿದೆ. ಈ ವರದಿ ಇಂದಿಗೂ ನಮ್ಮ ಸಂಸತ್ತಿನ ಕಡತದಲ್ಲಿ ಹಾಗೇ ಉಳಿದಿದೆ. ನೇರವಾಗಿ ನಾವು ಪ್ರಶ್ನಿಸುವುದಕ್ಕೆ ಬಯಸುವುದು ನಮ್ಮಲ್ಲಿಂದ ಚುನಾಯಿತರಾಗಿ ಹೋದ ಸಂಸತ್ತ್ ಸದಸ್ಯರೂ ಮತ್ತು ಅಲ್ಲಿ ಕಾಲದಿಂದ ಕಾಲಕ್ಕೆ ಸಚಿವರಾಗಿ ನೇಮಿಸಲ್ಪಟ್ಟವರೂ ಯಾವ ಕಾರಣಕ್ಕೆ ಈ ಮಹಾಜನ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಿಲ್ಲ? ಇದು ಅತ್ಯಂತ ಗಂಭೀರವಾದ ಪ್ರಶ್ನೆ. ಈ ನೆಲೆಯಲ್ಲಿ ಒಂದು ರೀತಿಯ ಅನಾಥ ಪ್ರಜ್ಞೆ ಕಾಸರಗೋಡಿನ ಕನ್ನಡಿಗರನ್ನು ಬಾಧಿಸುವುದಕ್ಕೆ ಪ್ರಾರಂಭಿಸಿದೆ ಎನ್ನುವುದರಲ್ಲಿ ಏನೇನೂ ಸಂದೇಹವಿಲ್ಲ.
ಈಗ ಮತ್ತೆ ನಾವು ಕೇಳುವ ಪ್ರಶ್ನೆ ಕರ್ನಾಟಕ ಸರಕಾರ ಕಾಸರಗೋಡು ಪ್ರಶ್ನೆಯನ್ನು ಯಾವ ರೀತಿ ನಿಭಾಯಿಸುವುದಕ್ಕೆ ಬಯಸುತ್ತದೆ? ಮತ್ತು ಇದನ್ನು ಯಾವ ರೀತಿಯಿಂದ ಪರಿಹರಿಸುವುದಕ್ಕೆ ಬಯಸುತ್ತದೆ? ಹೊರನಾಡು ಎಂಬ ರೀತಿಯಿಂದ ಕಾಸರಗೋಡಿನ ಕನ್ನಡಿರನ್ನು ಕಾಣುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಎಲ್ಲಿಯೋ ದುಬೈಯಲ್ಲಿ ಅಥವಾ ಅಮೇರಿಕಾದಲ್ಲಿ ಇರುವ ಕನ್ನಡಿಗರ ಭಾಷಾಭಿಮಾನವನ್ನು ನಾವು ಪೂರ್ಣವಾಗಿ ಗೌರವಿಸಿದರೂ ಅಲ್ಲಿ ನೆಲೆಸಿರುವ ಕನ್ನಡಿಗರನ್ನು ಕಾಸರಗೋಡಿನ ಕನ್ನಡಿಗರೊಂದಿಗೆ ಸಮೀಕರಿಸುವುದು ಅನ್ಯಾಯದ ಪರಮಾವಧಿ ಎಂದೇ ಹೇಳಬೇಕಾಗುತ್ತದೆ. ಯಾಕೆಂದರೆ ಇಲ್ಲಿರುವ ಕನ್ನಡ ಮನಸ್ಸುಗಳಿಗೆ ಅದರಿಂದ ಆಗುವ ನೋವನ್ನು ನಾವು ಶಬ್ಧಗಳಿಂದ ವರ್ಣಿಸುವುದಕ್ಕೆ ಆಗುವುದಿಲ್ಲ. ಒಂದೋ ಇದನ್ನು ಸಂಪೂರ್ಣ ಒಳನಾಡು ಎಂಬ ನೆಲೆಯಲ್ಲಿ ಮಹಾಜನ ವರದಿಯನ್ನು ಉದ್ಧರಿಸಿ ನೀವು ಪ್ರತಿಪಾದಿಸಬೇಕು. ಇಲ್ಲ, ಗಡಿನಾಡು ಎಂಬ ನೆಲೆಯಲ್ಲಿ ಇಲ್ಲಿ ಸಾಂಸ್ಕೃತಿಕ ವಿಲೀನಿಕರಣದೊಂದಿಗೆ ಎಲ್ಲಾ ಸಂಸ್ಕೃತಿಯ ಸಂರಕ್ಷಣೆ, ಸಂವರ್ಧನೆ ನಡೆಯುವುದಕ್ಕೆ ಶಾಸನಬದ್ಧವಾಗಿ ಕಟಿಬದ್ಧರಾಗಬೇಕು. ಎಲ್ಲ ಗೌರವ ಪ್ರಶಸ್ತಿಗಳು ಕಾಸರಗೋಡಿನ ಕನ್ನಡಿಗರಿಗೂ ಸಿಗಬೇಕು ಹೊರತು ಬರೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಥವಾ ಗಡಿನಾಡು ಪ್ರಾಧಿಕಾರದಿಂದ ಅನುದಾನವನ್ನು ಕೊಡುವುದು ಈ ಕಾಸರಗೋಡು ಸಮಸ್ಯೆಗಾಗಲೀ, ಕಾಸರಗೋಡು ಜನರ ದುಸ್ಥಿತಿಯನ್ನು ನಿವಾರಿಸುವುದಕ್ಕಾಗಲಿ ಯಾವ ರೀತಿಯಿಂದಲೂ ಪೂರಕವಾಗಲಾರದು. ಅನುದಾನವನ್ನು ಕೊಡುವುದೇ ಆದರೆ ಅದಕ್ಕೂ ಸ್ಪಷ್ಟವಾದ ನಿಯಾಮಾವಳಿಗಳು ಇರಬೇಕಾಗುತ್ತವೆ.
ಆದ್ದರಿಂದ ಕಾಸರಗೋಡಿನ ಕನ್ನಡಿಗರು ಎರಡೂ ಸರಕಾರಗಳ ಮುಂದೆ ಮಾತ್ರವಲ್ಲ ಕೇಂದ್ರದ ಮುಂದೆ ಕೂಡ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಬೇಕು ಮತ್ತು ಸಮಸ್ಯೆಯ ಕುರಿತಾದ ಖಚಿತವಾದ ನಿಲುವು, ಧೋರಣೆಗಳನ್ನು ಅವರಿಂದ ಪಡೆಯಬೇಕು. ಅಲ್ಲದೇ ಹೋದರೆ ಅನಿರ್ದಿಷ್ಟವಾಗಿ ಇಲ್ಲಿರುವ ಲಕ್ಷಾಂತರ ಕನ್ನಡಿಗರು ಅನಾಥರಾಗಿಯೇ ಉಳಿಯಬೇಕಾಗುತ್ತದೆ. ಪ್ರಜಾಸತ್ತೆಯ ವ್ಯವಸ್ಥೆಗೆ ಇದು ಯಾವ ದೃಷ್ಟಿಯಿಂದಲೂ ಆರೋಗ್ಯಕರವಲ್ಲ.
- ಡಾ. ರಮಾನಂದ ಬನಾರಿ, ಮಂಜೇಶ್ವರ
ನಿಸರ್ಗ ಕಲಾ ನಿಲಯ, ಗುಡ್ಡಡ್ಕ
ಅಂಚೆ : ಪೆರ್ನಾಜೆ
ಸುಳ್ಯ ತಾಲೂಕು
ದಕ್ಷಿಣ ಕನ್ನಡ - 574239

