ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಒಗ್ಗಟ್ಟಾಗುವ ಪ್ರಯತ್ನ: ಮಯೂರ್ ಉಳ್ಳಾಲ್
ಮುಂಬಯಿ: ಮಂಗಳಾ ದೇವಿಯ ಕುಲಾಲ ಭವನ ಕುಲಾಲ ಸಮಾಜದ ಹೆಮ್ಮೆ ಹಾಗೂ ಕುಲಾಲ ಸಮಾಜದ ಕಿರೀಟಕ್ಕೆ ಒಂದು ಗರಿ. ಇದರ ಉದ್ಘಾಟನೆಯ ಕಾರ್ಯ ಬಹಳ ಅದ್ದೂರಿಯಾಗಿ ನಡೆಯುವಲ್ಲಿ ಈಗಾಗಲೇ ನಾವು ಮಂಗಳೂರು ಮಾತ್ರವಲ್ಲ, ನೆರೆಯ ಜಿಲ್ಲೆಗಳಿಂದ ಸುಮಾರು 40 ಬಸ್ಸುಗಳಲ್ಲಿ 5,000 ಗಿಂತಲೂ ಹೆಚ್ಚು ಸಮಾಜ ಬಾಂಧವರು ಆಗಮಿಸುವಂತೆ ಮಾಡುವ ಎಲ್ಲಾ ಕಾರ್ಯವು ನಡೆಯುತ್ತಿದೆ. ನಮ್ಮ ಕುಲಾಲ ಭವನ ಇತರ ಸಮುದಾಯವು ಹೆಮ್ಮೆ ಪಡೆಯುವಂತಾಗಿದೆ. ಸಮಾಜದ ಮಾತೃ ಮಾತೃ ಸಂಘಟನೆ 99ನೇ ವರ್ಷದಲ್ಲಿದ್ದು 100ನೇ ವರ್ಷದಲ್ಲಿ ಮಹಿಳಾ ಹಾಸ್ಟೆಲ್ ನ್ನು ಲೋಕಾರ್ಪಣೆ ಮಾಡಲಿದ್ದೇವೆ. ನಾವು ಈ ರೀತಿ ಒಗ್ಗಟ್ಟಿನಿಂದ ಇದ್ದು ನಮ್ಮ ಶಕ್ತಿಯನ್ನು ಪ್ರದರ್ಶಿಸಿದಲ್ಲಿ ನಮ್ಮವರಿಗೆ ಐಎಎಸ್, ಐಪಿಎಸ್ ಮಾತ್ರವಲ್ಲ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಗುವುದರಲ್ಲಿ ಸಂದೇಹವಿಲ್ಲ ಎಂದು. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಳ್ ನುಡಿದರು.
ನ. 23 ರಂದು ನಡೆಯಲಿರುವ ಮಂಗಳೂರಿನ ಮಂಗಳಾದೇವಿ ಸಮೀಪದ ಕುಲಾಲ ಭವನ ಮಂಗಳೂರು ಇದರ ಲೋಕಾರ್ಪಣೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅ. 5 ರಂದು ಸಂತಾಕ್ರೂಸ್ ಪೂರ್ವ ಪ್ರಭಾತ್ ಕಾಲೋನಿಯ ಪೇಜಾವರ ಮಠದಲ್ಲಿ ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ರಘು ಮೂಲ್ಯ ಪಾದಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಕುಲಾಲ ಭವನ ಮಂಗಳೂರು ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಾಲ ಸಂಘ ಮುಂಬಯಿ ಅಧ್ಯಕ್ಷ ರಘು ಮೂಲ್ಯ ಪಾದಬೆಟ್ಟು ಅವರು ಮಾತನಾಡುತ್ತಾ, ನಮ್ಮ ಎಲ್ಲಾ ಕಾರ್ಯಗಳಿಗೆ ಸಹಕರಿಸಿದ ಹಾಗೂ ಪ್ರೋತ್ಸಾಹಿಸುತ್ತ ಬಂದಿರುವ ಪ್ರತಿಯೊಬ್ಬರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಿರುವೆ. ಮಯೂರ್ ಉಳ್ಳಾಲ್ ಅವರು ಹೇಳಿದ ಊರಿನಲ್ಲಿನ ಮಹಿಳಾ ಹಾಸ್ಟೆಲಿಗೆ ಮುಂಬಯಿಯ ಸಮಾಜ ಬಾಂಧವರ ಸಹಕಾರ ಸದಾ ಇದೆ. ನಮ್ಮ ಸಂಘದಲ್ಲಿ ಕೆಲಸ ಮಾಡಲು ಯುವ ಜನಾಂಗವು ಮುಂದೆ ಬರಬೇಕು. ಎಲ್ಲರೂ ಕೈಜೋಡಿಸಿ ನಮ್ಮ ಮುಂದಿನ ಎಲ್ಲಾ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರೋಣ ಎಂದರು. ನ. 23 ರಂದು ಕುಲಾಲ ಭವನ ಮಂಗಳೂರು ಇದರ ಲೋಕಾರ್ಪಣೆ ಸಮಾರಂಭಕ್ಕೆ ಮುಂಬಯಿಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲ್ಲಬೇಕು. ಕುಲಾಲ ಭವನ ಮುಂಬೈ ಕುಲಾಲರ ಅಸ್ಮಿತೆಯಾಗಿದೆ ಎಂದರು.
ಕುಲಾಲ ಸಂಘ ಮುಂಬಯಿಯ ಮಂಗಳೂರಿನ ಯೋಜನೆಯಾದ ಕುಲಾಲ ಭವನ ಮಂಗಳೂರು ಲೋಕಾರ್ಪಣೆಯ ಆಮಂತ್ರಣ ಪತ್ರಿಕೆಯು ಪವಿತ್ರವಾದ ಶ್ರೀಕೃಷ್ಣನ ಸನ್ನಿಧಿಯಾದ ಪೇಜಾವರ ಮಠದಲ್ಲಿ ಬಿಡುಗಡೆಗೊಳ್ಳುವುದರೊಂದಿಗೆ ಭಗವಂತನ ಆಶೀರ್ವಾದದಿಂದ ಮುಂದಿನ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವುದು. ಶತಮಾನದತ್ತ ಮುನ್ನಡೆಯುತ್ತಿರುವ ಕುಲಾಲ ಸಂಘ ಮುಂಬಯಿ ಇದೀಗ ಮಂಗಳೂರಲ್ಲಿ ಕುಲಾಲ ಭವನವನ್ನು ಲೋಕಾರ್ಪಣೆ ಮಾಡುತ್ತಿದ್ದು ಸಂಘದ ಮುಂದಿನ ಯೋಜನೆಯು ಸಮಾಜದ ಮಕ್ಕಳನ್ನು ಉತ್ತಮ ಶಿಕ್ಷಣದ ಮೂಲಕ ದೇಶದ ಉತ್ತಮ ನಾಗರಿಕರನ್ನಾಗಿ ಮಾಡಲು ಸಂಘದ್ದೇ ಆದ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲಿ ಭವನ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿಎಂದು ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಸಿ.ಎಂ.ಡಿ. ಹಾಗೂ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿಯವರು ಶುಭ ಹಾರೈಸಿದರು.
ಅವರನ್ನು ಜೀವ ವಿಮಾ ಕ್ಷೇತ್ರದಲ್ಲಿ ತಾನು ಮಾಡಿದ ಸಾಧನೆ ಗಿನ್ನೆಸ್ ಬುಕ್ಸ್ ಆಫ್ ರೆಕಾರ್ಡ್ ಸೇರಿದ್ದ ಸಂದರ್ಭದಲ್ಲಿ ಕುಲಾಲ ಸಂಘ ಮುಂಬಯಿಯ ಸನ್ಮಾನವನ್ನು ಮಾಡಲಾಯಿತು.
ಆಶೀರ್ವಚನ ನೀಡಿದ ಸಂತಾಕ್ರೂಸ್ ಮಂತ್ರದೇವತೆ ಚಾರಿಟೇಬಲ್ ಟ್ರಸ್ಠ್ ನ ಆಡಳಿತ ಮೊಕ್ತೇಸರ ವಾಸುದೇವ ಕೆ. ಬಂಜನ್ ಅವರು ಕುಲಾಲ ಭವನ ಮಂಗಳೂರು ನಮ್ಮ ಕಾಲದಲ್ಲೆ ಲೋಕಾರ್ಪಣೆಗೊಳ್ಳುತಿರುವುದು ನಮ್ಮ ಸೌಭಾಗ್ಯ. ಭವನ ಭಗವಂತನ ವನವಾಗಿದ್ದು ಬೃಂದಾವನವಾಗಲಿ. ಹಂತ ಹಂತವಾಗಿ ಹೆಮ್ಮರವಾಗಲಿ. ಹನಿ ಕೂಡಿ ಹಳ್ಳ ಎಂಬಂತೆ ಎಲ್ಲರೂ ಕೂಡಿ ಸಹಕರಿಸುತ್ತಾ ಈ ರಥವನ್ನು ಮುಂದಕ್ಕೆ ಸಾಗಿಸೋಣ. ಮುಂದಿನ ಪೀಳಿಗೆಗೆ ಇದು ಪ್ರಯೋಜನಕಾರಿಯಾಗಲಿ ಎಂದು ಶುಭ ಹಾರೈಸಿದರು.
ಕಟ್ಟಡದ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ಬಂಟ್ವಾಳ ಮಾತನಾಡಿ, ನ. 23ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಮುಂಬೈಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಹೋಗಿ ಸಮಾರಂಭದಲ್ಲಿ ಭಾಗವಹಿಸುವಂತಾಗಬೇಕು ಎಂದು ವಿನಂತಿಸಿದರು.
ಕಟ್ಟಡದ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುನಿಲ್ ಆರ್ ಸಾಲ್ಯಾನ್ ಮಾತನಾಡುತ್ತಾ, ಸಮಾಜದ ಅಭಿವೃದ್ಧಿಗೆ ದಿ. ಪಿ ಕೆ ಸಾಲ್ಯಾನ್ ಮತ್ತು ಬಾಬು ಸಾಲಿಯಾನ್ ಅವರ ಕೊಡುಗೆ ಬಗ್ಗೆ ಮಾತನಾಡುತ್ತಾ ನಮ್ಮ ಸಮಾಜದಲ್ಲಿ ಮಯೂರ್ ಉಳ್ಳಾಲ್ ರವರಂತಹ ಸಮರ್ಥ ನಾಯಕತ್ವ ಬೇಕಾಗಿದೆ. ಅದರೊಂದಿಗೆ ಎಲ್ಲರೂ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಸಮಾನವಾಗಿ ಕೈಜೋಡಿಸುವ ಅಗತ್ಯವಿದೆ. ಸಮಜದ ಎಲ್ಲಾ ಉಪ ಬಳಿಯವರು ಹೆಸರು ಭವನದಲ್ಲಿ ಕಾಣುವಂತಾಗಬೇಕು ಅದಕ್ಕೆ ಬೇರೆ ಬೇರೆ ಬಳಿಯವರು ಸಹಕಾರ ನೀಡಬೇಕು ಎಂದರು.
ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಡಿ ಬಂಜನ್ ಮಾತನಾಡುತ್ತಾ ನವೆಂಬರ್ 23 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ವಿನಂತಿಸಿದರು.
ವೇದಿಕೆಯಲ್ಲಿ ಉದ್ಯಮಿ ಜಗದೀಶ್ ಆರ್ ಬಂಜನ್ ಅಮರನಾಥ್, ಸಂಘದ ಉಪಾಧ್ಯಕ್ಷ ಡಿ ಐ ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲ್ಯಾನ್, ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ್ ಕೆ ಕುಲಾಲ್, ಠಾಣೆ ಕಸಾರ ಕರ್ಜತ್ ಮತ್ತು ಭಿವಂಡಿ, ಠಾಣೆ ಕಸಾರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ ಮೂಲ್ಯ, ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಎಸ್ ಕುಲಾಲ್, ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಬಂಗೇರ, ಸಿಎಸ್ಟಿ ಮೂಲೂಂಡ್ ಮಾನ್ಕುರ್ಡ್ ಸಮಿತಿಯ ಕಾರ್ಯಾಧ್ಯಕ್ಷ ಉದಯ ಅತ್ತಾವರ್, ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿಯ ಉಪಕಾರ್ಯಧ್ಯಕ್ಷ ಮೋಹನ್ ಬಂಜನ್, ಅಮೂಲ್ಯ ಸಂಪಾದಕ ಆನಂದ ಬಿ ಮೂಲ್ಯ, ಕುಲಾಲ ಭವನ ಉದ್ಘಾಟನಾ ಸಮಿತಿಯ ಕಾರ್ಯಧ್ಯಕ್ಷ ಬಿ ದಿನೇಶ್ ಕುಲಾಲ್ ಉಪಸ್ಥಿತರಿದ್ದರು.
ರಘು ಮೂಲ್ಯ ಪಾದಬೆಟ್ಟು ಹಾಗೂ ಡಾ. ಆರ್. ಕೆ. ಶೆಟ್ಟಿ ಯವರೊಂದಿಗೆ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ದಿ. ಪಿ. ಕೆ. ಸಾಲ್ಯಾನ್ ಅವರ ಧರ್ಮಪತ್ನಿ ಶ್ರೀಮತಿ ಸಾವಿತ್ರಿ ಪಿ.ಕೆ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು. ಅವರ ಪುತ್ರ ಜಯರಾಜ್ ಪಿ. ಸಾಲ್ಯಾನ್, ಪುತ್ರಿ ಆರತಿ ಉಪಸ್ಥಿತರಿದ್ದರು.
ಕುಲಾಲ ಸಂಘ ಮುಂಬಯಿಯ ಗೌರವ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಅವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವನೆ ನುಡಿಗಳನ್ನಾಡಿದರು. ಕಟ್ಟಡ ಸಮಿತಿಯ ಕಾರ್ಯದರ್ಶಿ ಉಮೇಶ್ ಎಂ ಬಂಗೇರ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಕವಿತಾ ಹಂಡ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್ ಅವರು ವಂದಿಸಿದರು. ಪ್ರಾರ್ಥನೆಯನ್ನು ಪ್ರೇಮ ಮೂಲ್ಯ ಕಲ್ಯಾಣ್ ಮತ್ತು ಜಯಂತಿ ಬಂಗೇರ ಮೀರಾ ರೋಡ್ ಮಾಡಿದರು.
ಸಮಾರಂಭದಲ್ಲಿ ಸಂಘದ ಸ್ಥಳೀಯ ಸಮಿತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕುಣಿತ ಭಜನೆ, ಮ್ಯಾಜಿಶಿಯನ್ ಕುಂದರ್ಸ್ ಮ್ಯಾಜಿಕ್ ಶೋ ಇವರಿಂದ ಮ್ಯಾಜಿಕ್ ಶೋ ನಡೆಯಿತು.