ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ಅ.18ರಂದು ಆಯೋಜಿಸಲಾಗಿತ್ತು. ರಕ್ಷಕ- ಶಿಕ್ಷಕ ಸಂಘದ 2024- 25 ನೇ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ರಕ್ಷಕ- ಶಿಕ್ಷಕ ಸಂಘದ ಸಂಚಾಲಕ ಪ್ರೊ. ಸಂತೋಷ್ ಪ್ರಭು ಎಂ ಇವರು ಮಂಡಿಸಿದರು.
ನಂತರ 2024- 25ನೇ ಸಾಲಿನಲ್ಲಿ ಕಾಲೇಜಿನ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಕಾಲೇಜಿನ 2024- 25 ನೇ ಸಾಲಿನ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದ ಶ್ಯಾಮರಾವ್ ಉಂಡೆಮನೆ ಇವರ ಅಮೂಲ್ಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಇದರ ನಂತರ 2025 -26ನೇ ಸಾಲಿನ ನೂತನ ರಕ್ಷಕ ಶಿಕ್ಷಕ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಗಣೇಶ ಆಚಾರ್ಯ ಆಯ್ಕೆಯಾದರು.
ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಇದರ ನಿರ್ದೇಶಕರಾದ ಪ್ರೊ. ಸೀತಾರಾಮ ಕೇವಳ ಇವರು ತಮ್ಮ ಭಾಷಣದಲ್ಲಿ "ಮಕ್ಕಳ ಜೀವನವನ್ನು ರೂಪಿಸುವಲ್ಲಿ ಪೋಷಕರ ಪಾತ್ರ", ಹಾಗೂ "ಸಹಕಾರದಿಂದಲೇ ಸಾಧನೆ" ಎಂದು ಪೋಷಕರ ಮನಮುಟ್ಟುವ ಪ್ರೇರಣಾದಾಯಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಪ್ರೊ.ಮಾಧವ ಅವರು ಕಾಲೇಜಿನ ಅಭಿವೃದ್ಧಿಯಲ್ಲಿ ರಕ್ಷಕ ಶಿಕ್ಷಕ ಸಂಘದ ಸಹಕಾರವನ್ನು ಉಲ್ಲೇಖಿಸಿ, ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ರಕ್ಷಕ- ಶಿಕ್ಷಕ ಸಂಘದ ಸಂಚಾಲಕರಾದ ಪ್ರೊ. ಸಂತೋಷ್ ಪ್ರಭು ಎಂ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವೈಶಾಲಿ ಯು, ಐಕ್ಯೂಎಸಿ ಸಂಚಾಲಕರಾದ ಡಾ. ಅವಿತಾ ಮರಿಯಾ ಕ್ವಾಡ್ರಸ್, ರಕ್ಷಕ- ಶಿಕ್ಷಕ ಸಂಘದ ಸಹ ಸಂಚಾಲಕರಾದ ಪ್ರೊ. ಪ್ರವೀಣ್ ಇವರು ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಚಾಲಕರಾದ ಡಾ. ಅವಿತಾ ಮರಿಯಾ ಕ್ವಾಡ್ರಸ್ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವೈಶಾಲಿ ಯು ವಂದಿಸಿದರು, ಹಾಗೂ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಪ್ರೊ. ರೇಖಾ ಯು.ಎನ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

