ಈಡಿಗ, ಬಿಲ್ಲವ ಕ್ರಿಶ್ಚಿಯನ್ ಪದ ಕೈಬಿಡದಿದ್ದರೆ ಉಗ್ರ ಹೋರಾಟ

Upayuktha
0

ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಎಚ್ಚರಿಕೆ





ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲು ಹೊರಡಿಸಿದ ಆದೇಶದಲ್ಲಿ ಈಡಿಗ ಬಿಲ್ಲವ ಜಾತಿಗಳನ್ನು ಕ್ರೈಸ್ತರೆಂದು ಗುರುತಿಸುವುದನ್ನು ಕೂಡಲೇ ಕೈಬಿಡಬೇಕು ಇಲ್ಲವಾದರೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಪ್ರಬಲ ಎಚ್ಚರಿಕೆ ನೀಡಿದೆ.


ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳಲ್ಲಿ ಗುರುತಿಸಿಕೊಂಡ ಜಾತಿ ಸಮುದಾಯದ ಮುಂದೆ ಕ್ರಿಶ್ಚಿಯನ್ ಎಂದು ಅಧಿಕೃತವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹೊರಡಿಸಿದ ಪ್ರಕಟಣೆಯಲ್ಲಿ ಗುರುತಿಸಿರುವುದು ಮತಾಂತರಕ್ಕೆ ನೀಡುವ ಪ್ರೋತ್ಸಾಹದ ಹುನ್ನಾರವಾಗಿದೆ. ಕೂಡಲೇ ಜಾತಿ ಪಟ್ಟಿಯಿಂದ ಬಿಲ್ಲವ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ನಾಡಾರ್ ಕ್ರಿಶ್ಚಿಯನ್, ತುಳು ಕ್ರಿಶ್ಚಿಯನ್ ಮುಂತಾದವುಗಳನ್ನು ಪಟ್ಟಿಯಿಂದ ಕೈಬಿಡಬೇಕು ಇಲ್ಲವಾದಲ್ಲಿ ಈ ಆದೇಶದ ವಿರುದ್ಧ ಸಮಿತಿಯು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಮತ್ತು ಪ್ರಧಾನಎಂ ಕಾರ್ಯದರ್ಶಿ ವೆಂಕಟೇಶ್ ಕಡೇಚೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಜಾತಿಯ ಮುಂದೆ ಅಲ್ಪಸಂಖ್ಯಾತ ಪಟ್ಟಿಗೆ ಸೇರಿರುವ ಕ್ರಿಶ್ಚಿಯನ್ ಉಲ್ಲೇಖ ಮಾಡಿ ಅಧಿಕೃತವಾಗಿ ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿ ಈ ಸಮುದಾಯದ ಸೌಲಭ್ಯ ಕಡಿತಕ್ಕೆ ಮುಂದಾಗಿದೆ. ಅಲ್ಪಸಂಖ್ಯಾತ ಪಂಗಡಗಳೊಂದಿಗೆ ಸೇರಿರುವ ಕ್ರಿಶ್ಚಿಯನ್ ಪದವನ್ನು ಬಿಟ್ಟು ಹಿಂದುಳಿದ ವರ್ಗಗಳ ಜಾತಿ ಕುರಿತಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು.ಈ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗಳು ತಕ್ಷಣ ಸ್ಪಷ್ಟೀಕರಣ ಪ್ರಕಟಿಸುವಂತೆ ಹೋರಾಟ ಸಮಿತಿಯು ಒತ್ತಾಯಿಸಿದೆ.


ಈಗಾಗಲೇ ರಾಜ್ಯದ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ನಾಯಕರು ಚರ್ಚೆ ನಡೆಸುತ್ತಿದ್ದು ಸಮಾನ ವೇದಿಕೆ ನಿರ್ಮಾಣ ಮಾಡಿ ಆಯೋಗದ ಪ್ರಕಟಣೆಯ ವಿರುದ್ಧ ಹೋರಾಟ ನಡೆಸಲು ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಈ ರೀತಿ ಜಾತಿಗಳ ಮುಂದೆ ಅನ್ಯ ಧರ್ಮದ ಹೆಸರು ಸೇರಿಸಿ ಸೌಲಭ್ಯ ಒದಗಿಸಲು ಸರ್ಕಾರವೇ ಮುಂದಾಗಿರುವುದು ಇದು ಮತಾಂತರಕ್ಕೆ ನೀಡುವ ಪ್ರೋತ್ಸಾಹದ ಭಾಗವಾಗಿದೆ ಎಂದು ಆರೋಪಿಸಿದರು. 


ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಆಗಸ್ಟ್ 22ರಂದು ಪ್ರಕಟಿಸಿದ ಜಾತಿ ಮತ್ತು ಉಪಜಾತಿಗಳ (ಆಂಗ್ಲ ವರ್ಣಮಾಲೆ) ಪಟ್ಟಿಯನ್ನು ತಿದ್ದುಪಡಿ ಮಾಡುವಂತೆ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಸದಸ್ಯರಾದ ಡಾ. ಸದಾನಂದ ಪೆರ್ಲ, ರಾಜೇಶ್ ಡಿ ಗುತ್ತೇದಾರ್, ಪಂಚಮಿ ಸಂತೋಷ್ ಪೂಜಾರಿ, ಪ್ರವೀಣ್ ಜತ್ತನ್, ದಯಾನಂದ ಪೂಜಾರಿ,ಕುಪೇಂದ್ರ ಗುತ್ತೇದಾರ್ ನಾಗೂರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್ ಶರಣಯ್ಯ ಗುತ್ತೇದಾರ್ ಕೊಂಚೂರು, ಸುರೇಶ್ ಗುತ್ತೇದಾರ್, ತಿಮ್ಮಪ್ಪ ಗಂಗಾವತಿ, ಬಸವರಾಜ ಜೀವಣಗಿ, ಮಲ್ಲಿಕಾರ್ಜುನ ಕುಕ್ಕುಂದ, ಮಹೇಶ್, ಹೋಳಕುಂದ, ಅಂಬಯ್ಯ ಗುತ್ತೇದಾರ್ ಶಾಬಾದಿ, ಜಗದೇವ ಗುತ್ತೇದಾರ್ ಕಲ್ ಬೇನೂರು, ಅನಿಲ್ ಯರಗೋಳ ಮಲ್ಲಿಕಾರ್ಜುನ ಕಡೇಚೂರ್ ಸುರಪುರ ಸೋಮರಾಯ ಶಾಖಾಪುರ, ಮಹೇಶ್ ಯರಗೋಳ್, ಆನಂದ ಬಳೂರ್ಗಿ ಮತ್ತಿತರರು ಒತ್ತಾಯಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top