ಭಾದ್ರಪದ ಮಾಸದ ಅಮಾವಾಸ್ಯೆಗೆ 'ಮಹಾಲಯ ಅಮಾವಾಸ್ಯೆ' ಎನ್ನುತ್ತೇವೆ.ಈ ಹದಿನೈದು ದಿನಗಳಲ್ಲಿ ಪಿಂಡದಾನ,ಶ್ರಾದ್ಧ ಮಾಡಲಿಲ್ಲವೆಂದಾದರೆ ಈ ವಿಶೇಷ ದಿನದಂದು ಆಚರಣೆ ಮಾಡುವುದು ರೂಢಿ.
ನಮ್ಮನ್ನು ಅಗಲಿದ ಹಿರಿಯರಿಗೆ ಆಹಾರವನ್ನು ನೀಡುವ ದಿನ. ಪಿತೃಪಕ್ಷದ ಕೊನೇ ದಿನ ಅಗಲಿದ ಎಲ್ಲಾ ಹಿರಿಯರನ್ನು ನೆನಪಿಸಿ, ಅವರಿಗೆ ತರ್ಪಣ ನೀಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಅವರು ಅಗಲಿದ ದಿನಾಂಕ ನೆನಪಿಲ್ಲವೆಂದಾದರೂ ಈ ದಿನ ನಾವು ಶ್ರದ್ಧೆಯಿಂದ ಶ್ರಾದ್ಧ ,ತರ್ಪಣದ ಮೂಲಕ ಅವರನ್ನು ತೃಪ್ತಿ ಪಡಿಸಿ, ನಮಗವರು ಆಶೀರ್ವಾದ ನೀಡುತ್ತಾರೆ ಎಂಬ ನಂಬಿಕೆ ನಮ್ಮ ಧರ್ಮ ಗ್ರಂಥಗಳಲ್ಲಿ ಅಡಗಿದೆ. ಹಿರಿಯರಿಂದಲೂ ನಡೆದುಕೊಂಡು ಬಂದ ಆಚರಣೆಗಳಾಗಿವೆ.
ಇವುಗಳನ್ನು ಆಚರಿಸುವುದರಿಂದ ಏನು ಲಾಭವೆಂದು ಯೋಚಿಸಿದರೆ ನಮ್ಮ ಹಿರಿಯರು ನಮಗಾಗಿ ಏನೆಲ್ಲಾ ತ್ಯಾಗ ಮಾಡಿದ್ದಾರೆ ? ತಂದೆತಾಯಿ ಋಣ ತೀರಿಸಲು ಸಾಧ್ಯವೇ? ಅವರಿಂದಾಗಿ ನಾವು ಭೂಮಿಯ ಬೆಳಕನ್ನು ಕಂಡವರು. ಆ ಋಣಭಾರ ನಮ್ಮ ಮೇಲಿದೆ. ನಾವು ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡಿರುತ್ತೇವೆ. ಈ ಆಚರಣೆಯ ಮೂಲಕ ಅದನ್ನು ನಿವಾರಿಸಿ, ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿ ಆಶೀರ್ವಚನ ಪಡೆಯಬಹುದು.
ಪಂಚ ಮಹಾಯಜ್ಞಗಳಲ್ಲಿ ಒಂದು ಈ ಆಚರಣೆ, ಫಲ ದೊರೆಯುತ್ತದೆ ಎಂಬ ನಂಬಿಕೆಯ ಉಲ್ಲೇಖ ಗ್ರಂಥದಲ್ಲಿ ಓದಬಹುದು. ಮನೆಯಲ್ಲಿ, ಕುಟುಂಬದಲ್ಲಿ ಇರುವ ನಕಾರಾತ್ಮಕ ಶಕ್ತಿಗಳ ಹೋಗಲಾಡಿಸುವಿಕೆ, ಕ್ಷೇಮ, ಸೌಖ್ಯಕ್ಕಾಗಿ ಆಚರಣೆ. ಪಿಂಡ ತರ್ಪಣ ಮಾಡಿ ವಾಯಸಬಲಿ, ಹಸುಗಳಿಗೆ ,ಪಕ್ಷಿಗಳಿಗೆ ಆಹಾರ ನೀಡಿ, ದಾನಧರ್ಮಾದಿಗಳನ್ನು ಮಾಡಿ ವಿವಿಧ ಬಗೆಯ ಸಾತ್ವಿಕ ಖಾದ್ಯಗಳನ್ನು ತಯಾರಿಸಿ ಅಗಲಿದ ಹಿರಿಯರನ್ನು ಕುಲಪುರೋಹಿತರ ಮಾರ್ಗದರ್ಶನದಂತೆ ಸಂತೃಪ್ತಿ ಪಡಿಸಿ ಉಣ್ಣುತ್ತೇವೆ. ಎಲ್ಲಾ ಆಚರಣೆಗಳೂ ಧಾರ್ಮಿಕ ನೆಲೆಗಟ್ಟಿನಡಿಯೇ ನಿಂತಿದೆ.
ಅಗಲಿದ ಮೂರು ತಲೆಮಾರಿನವರನ್ನು,ಒಡಹುಟ್ಟಿದ ಸಹೋದರ ಸಹೋದರಿಯರನ್ನು,ಬಂಧು ಬಾಂಧವರನ್ನು,,ಆಚಾರ್ಯರನ್ನು,ಮಿತ್ರರನ್ನು,ಸಹಕರಿಸಿದ ಎಲ್ಲರನ್ನೂ,ನಮ್ಮನ್ನು ಅಗಲಿದ ಎಲ್ಲರಿಗೂ ತಿಲ ತರ್ಪಣ,ಪಿಂಡದಾನ,ಗೋಗ್ರಾಸ,ಜಲತರ್ಪಣವನ್ನು ಬಿಟ್ಟು ಸ್ಮರಿಸಲಾಗುವುದು.ಯಥಾಶಕ್ತಿ ಅನ್ನದಾನ,ವಸ್ತ್ರದಾನ ಮಾಡುವರು.ಕೆಲವರಲ್ಲಿ'ಎಡೆ ಇಡುವ'ಪದ್ಧತಿಯಿದೆ.ಇಲ್ಲಿ ಶುಚಿತ್ವ ಮತ್ತು ಶ್ರದ್ಧೆಗೆ ಪ್ರಾಶಸ್ತ್ಯ.ಮೋಕ್ಷಕ್ಕೆ ದಾರಿಯೆಂಬ ನಂಬಿಕೆ.
ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಮಹಾಲಯ ಅಮಾವಾಸ್ಯೆಯ ಮರುದಿನದಿಂದ ದುರ್ಗಾ ಪೂಜೆ ಆರಂಭ. ಪಿತೃಪಕ್ಷದ ಕೊನೆ ದೇವಿಯ ಆರಾಧನೆಗೆ ಆಹ್ವಾನ,ನವರಾತ್ರಿ ಪ್ರಾರಂಭ. ನವದುರ್ಗೆಯರ ಪೂಜೆಗೆ ನಾಂದಿ. ಒಟ್ಟಿನಲ್ಲಿ ಎಲ್ಲವೂ ಧಾರ್ಮಿಕ ನಂಬಿಕೆಗಳಡಿಯಲ್ಲಿ ಆಚರಿಸಲ್ಪಡುತ್ತದೆ.
✍️ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


