ಈ ಭುವಿಯಲ್ಲಿ ಮನುಷ್ಯನಾಗಿ ಹುಟ್ಟುವುದು ಅತ್ಯಂತ ಅಪರೂಪದ ವರ. ಆದರೆ ಮನುಷ್ಯನಾಗಿದ್ದು ಮಾತ್ರ ಸಾಕಾಗುವುದಿಲ್ಲ – ಮನುಷ್ಯತ್ವವನ್ನು ಧರಿಸುವುದೇ ಅಸ್ತಿತ್ವದ ಸಾರ್ಥಕತೆ. ಮನುಷ್ಯನು ಹುಟ್ಟಿನಿಂದಲೇ ಎಲ್ಲವನ್ನು ಅರಿಯಲಾರ. ಅವನು ತನ್ನ ಅನುಭವ, ಶಿಕ್ಷಣ, ಸಮಾಜ ಮತ್ತು ಸಂಸ್ಕೃತಿಯಿಂದ ಒಳ್ಳೆಯದನ್ನು ಹಾಗೂ ಕೆಟ್ಟದನ್ನು ಗುರುತಿಸಲು ಕಲಿಯುತ್ತಾನೆ.
ಇಂದು ಹಲವರು ತಮ್ಮೊಳಗಿನ "ಅಹಂ" ಯಿಂದಾಗಿ “ನಾನು ಎಲ್ಲರಿಗಿಂತ ಶ್ರೇಷ್ಠ” ಎಂಬ ಭಾವನೆಯಲ್ಲಿ ಮುಳುಗಿ, ಮನುಷ್ಯತ್ವವನ್ನು ಮರೆತಿದ್ದರು. ಆದರೆ ಜೀವನವೇ ಒಬ್ಬ ವ್ಯಕ್ತಿಗೆ ತನ್ನ ದೋಷಗಳನ್ನು ತೋರಿಸಿ, ಅವನ ಅಹಂಕಾರವನ್ನು ಒಡೆದುಹಾಕುವಂತಹ ಪಾಠಗಳನ್ನು ಕಲಿಸುತ್ತಿರುತ್ತದೆ. ಅಂತಹ ಸಮಯದಲ್ಲೇ ನಿಜವಾದ ಮನುಷ್ಯನ ರೂಪ ಪರಿಪಕ್ವಗೊಳ್ಳುತ್ತದೆ.
ಮನುಷ್ಯ ಜನ್ಮವೆಂದರೆ ಕೇವಲ ಶ್ವಾಸೋಚ್ಛ್ವಾಸವಲ್ಲ. ಇದು ಪುಣ್ಯದ ಫಲ. ಈ ಪವಿತ್ರ ಜನ್ಮದಲ್ಲಿ ಜೀವಿಸುತ್ತಾ, ತನ್ನಲ್ಲಿ ಮೌಲ್ಯಗಳನ್ನು ಬೆಳಸಿಕೊಳ್ಳುವುದು – ಪರೋಪಕಾರ, ಸಹಾನುಭೂತಿ, ದಯೆ, ಶ್ರದ್ಧೆ ಮತ್ತು ಸತ್ಯನಿಷ್ಠೆ ಇವುಗಳನ್ನು ಅಭ್ಯಾಸ ಮಾಡುವಾಗ ಮಾತ್ರ ಮನುಷ್ಯ ತನ್ನ ಜನ್ಮವನ್ನು ಸಾರ್ಥಕಗೊಳಿಸುತ್ತಾನೆ.
ಅಸಂಖ್ಯಾತರು ಭೂಮಿಯ ಮೇಲೇ ಬಡತನದಲ್ಲಿ ಬದುಕುತ್ತಿದ್ದಾರೆ. ಕೆಲವರಿಗೆ ಭಕ್ಷ್ಯವಿಲ್ಲ, ಬಟ್ಟೆ ಇಲ್ಲ, ವಾಸಸ್ಥಾನವಿಲ್ಲ. ಆದರೆ ಇನ್ನೆಡೆಗೆ ಎಲ್ಲವೂ ಹೊಂದಿರುವವರು ಇನ್ನೂ ಹೆಚ್ಚು ಬೇಕೆಂಬ ಅತಿಯಾಸೆಯಿಂದ ತಮಗಿರುವ ಶಾಂತಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ, ಇತರರ ನೋವಿನಲ್ಲಿ ಹೆಗಲು ನೀಡಬಲ್ಲ, ಸಹಾಯಹಸ್ತ ಚಾಚಬಲ್ಲ, ಸುಖದ ಜೊತೆ ದುಃಖವನ್ನೂ ಹಂಚಿಕೊಳ್ಳಬಲ್ಲ ವ್ಯಕ್ತಿಯೇ ನಿಜವಾದ ಮನುಷ್ಯ.
ಇಂತಹ ಮನಸ್ಸು ಬೆಳೆಯುವಾಗಲೇ ಮನುಷ್ಯತನಕ್ಕೂ ಅರ್ಥ ಸಿಗುತ್ತದೆ. ಎಷ್ಟು ಸಂಪತ್ತು, ಎಷ್ಟು ವಿದ್ಯೆ ಇದ್ದರೂ, ಹೃದಯದಲ್ಲಿ ದಯೆಯಿರದಿದ್ದರೆ ಅದು ವ್ಯರ್ಥ. ಹೆಚ್ಚು ಲಾಭ, ಹಣ, ಹಿರಿಮೆ ಎಲ್ಲವೂ ಇಂದಿನ ಮನುಷ್ಯನ ಧ್ಯೇಯವಾಗಿದೆ. ಆದರೆ, ಅಂತಹ ಗುರಿಗಳ ಹಿಂದೆ ಓಡುತ್ತಾ ತನ್ನ ಆತ್ಮದ ಶುದ್ಧತೆಯನ್ನು ಮರೆಯಬಾರದು.
ದೀಕ್ಷಿತ ಹೆಚ್. ಜಿ( ಹಾಸನ)
ಪ್ರಥಮ ಬಿ. ಎಡ್
ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ, ಪುತ್ತೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


