ಹಲೋ ಹೇಗಿದ್ದೀರಾ?
ಬದುಕು ಸುಖ ಮತ್ತು ದುಃಖದ ಮಿಶ್ರಣ. ಕವಿವಾಣಿಯಂತೆ ಸುಖ ದುಃಖಗಳ ಮೇಳೈಸಿ ಬದುಕು. ಆದರೆ ಇಲ್ಲಿ ಸಮರಸವೇ ಜೀವನವಾಗಲು, ಹೊಂದಾಣಿಕೆ ಅತ್ಯಗತ್ಯ. ಆದರೆ ಹೊಂದಾಣಿಕೆ ಇರದಿದ್ದರೆ ನಮ್ಮ ಜೀವನ ಇದ್ದು ಇಲ್ಲದಂತಾಗುತ್ತದೆ. ಹೊಂದಾಣಿಕೆ ಇರದಿದ್ದರೆ ನಮ್ಮಲ್ಲಿ ಎಲ್ಲರನ್ನೂ ಸಂಶಯ ವತಿಯಿಂದ ನೋಡುವ ಗುಣ. ಬಂದು ನಮ್ಮ ಜೀವನವು ಮರುಭೂಮಿಯಂತೆ ನೀರಸ ಆಗುತ್ತದೆ.
ಹಾಸ್ಟೆಲ್ನಲ್ಲಿ ಊಟ ಸೇರುತ್ತಿಲ್ಲವೆಂದು ಹಾಸ್ಟೆಲ್ ಬಿಟ್ಟು ಮನೆಗೆ ಓಡಿ ಬರುವ ವಿದ್ಯಾರ್ಥಿ, ಅವಿಭಕ್ತ ಕುಟುಂಬದಲ್ಲಿ ಹೊಂದಿಕೊಳ್ಳಲಾಗದೇ ತವರು ಸೇರುವ ಸೊಸೆ, ಮಗ ಮತ್ತು ಸೊಸೆಯ ಜೊತೆ ಹೊಂದಿಕೊಳ್ಳಲಾಗದೆ ಬೇರೆ ಮನೆ ಮಾಡಿಕೊಂಡು ಇರುವ ವೃದ್ಧ ತಂದೆ, ತಾಯಿ, ನೌಕರಿಯಲ್ಲಿ ಬಾಸ್ ಜೊತೆ ಹೊಂದಿಕೊಂಡು ಕೆಲಸ ಮಾಡದೆ ರಾಜೀನಾಮೆ ಕೊಡುವ ಉದ್ಯೋಗಿ, ಇವರೆಲ್ಲರೂ ಹೊಂದಾಣಿಕೆಯನ್ನು ಮರೆತವರೇ ಆಗಿದ್ದಾರೆ.
ಹೊಂದಾಣಿಕೆ ಇರದಿದ್ದರೆ ಒಮ್ಮೊಮ್ಮೆ ನಮ್ಮ ಜೀವನ ನರಕದಂತೆ ಭಾಸವಾಗುವುದು.
ಹೊಂದಾಣಿಕೆ ಎಂದರೆ ಗುಂಪಿನೊಳಗೆ ಗೋವಿಂದ ಆಗುವುದಲ್ಲ. ಬದಲಾಗಿ ನಮ್ಮತನವನ್ನು ಕಾಯ್ದುಕೊಂಡು ಇನ್ನೊಬ್ಬರ ಜೊತೆಗೆ ಸಮರಸದಿಂದ ಬದುಕುವುದು.
ಮನುಷ್ಯನು ಮೂಲತಃ ಸಂಘ ಜೀವಿ. ಇಲ್ಲಿ ಒಂಟಿತನ ಎನ್ನುವುದು ಒಂದು ಶಿಕ್ಷೆ ಆಗುವುದು ನಿಶ್ಚಿತ. ನಮ್ಮ ಸುತ್ತಲೂ ಇಲ್ಲದ ಒಣ ಪ್ರತಿಷ್ಠೆಯ ಗೋಡೆ ಕಟ್ಟಿ ಕೊಂಡು ಒಂಟಿ ಜೀವನದ ಬದುಕು ಬದುಕಿ ನಿಸ್ಸಾರ ಅನಿಸುವುದು.
ಎಷ್ಟೋ ಡೈವೋರ್ಸ್ಗಳಿಗೆ, ವೃದ್ಧಾಶ್ರಮಗಳ ಸೃಷ್ಟಿಗೆ ಹೊಂದಾಣಿಕೆಯ ಕೊರತೆಯೇ ಕಾರಣ. ನಮ್ಮ ನಮ್ಮವರ ಜೊತೆಗೆ ಹೊಂದಿಕೊಳ್ಳಲಾಗದ ಜೀವನ ಪ್ರಾಣಿಗಿಂತ ಕಡೆ. ಪ್ರಾಣಿಗಳು ಕೂಡ ತಮ್ಮ ತಮ್ಮ ಸಮೂಹದಲ್ಲಿ ಜೊತೆಯಾಗಿರುತ್ತವೆ. ಆದರೆ ನಾವು ಹೊಂದಾಣಿಕೆಯನ್ನು ಬಿಟ್ಟು ನಮ್ಮ ಒಣ ಪ್ರತಿಷ್ಠೆ ಮೆರೆಸುತ್ತ ಹೋದರೆ ಯಾವ ಭಾವನೆಗಳು ಇಲ್ಲದ ಶಿಲಾ ಯುಗದ ಜೀವನ ನಮ್ಮ ಪಾಲಿಗೆ ಕಟ್ಟಿಟ್ಟ ಬುತ್ತಿ.
ಬನ್ನಿ, ಎಲ್ಲರ ಜೊತೆಗೆ ಸಮರಸವಾಗಿ ಬದುಕಿ ಖುಷಿ ಪಡೋಣ. ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ