ಧೂಮಪಾನದಿಂದ ದೇಶದ ಮೇಲಾಗುತ್ತಿರುವ ದುಷ್ಪರಿಣಾಮಗಳು

Upayuktha
0


ಭಾರತದ ಜನಸಂಖ್ಯೆಯ ಬಹುಪಾಲು ಯುವ ಜನರು.‌ ಅದರಲ್ಲೂ ಮಧ್ಯಮ ವರ್ಗದ ಜನರು ದೇಶದ ವರ್ತಮಾನ ಮತ್ತು ಭವಿಷ್ಯವನ್ನು ತೀರ್ಮಾನ ಮಾಡುವ ಶಕ್ತಿ ಉಳ್ಳವರಾಗಿದ್ದಾರೆ. ಆದರೆ ಭಾರತದ ಹೆಚ್ಚಿನ ಧೂಮಪಾನಿಗಳು ಹರೆಯದಲ್ಲಿ ಅಥವಾ ತರುಣಾವಸ್ಥೆಯಲ್ಲಿ‌ ಧೂಮಪಾನ ಮಾಡಲು ಆರಂಭ ಮಾಡುತ್ತಾರೆ. ಕೆಲವರು ತಿಳುವಳಿಕೆಯ ಕೊರತೆಯಿಂದಾಗಿ, ಇನ್ನೂ ಕೆಲವರು ಅದರ ದುಷ್ಪರಿಣಾಮ ಗೊತ್ತಿದ್ದರೂ ಧೂಮಪಾನದ ಬಲೆಗೆ ಬೀಳುತ್ತಿದ್ದಾರೆ. ಅದರಲ್ಲೂ ಭಾರತದ ಕೆಳ ವರ್ಗದ ಹಾಗೂ ಮೇಲ್ವರ್ಗದ ಯುವಕರಲ್ಲಿ ಬಹುಪಾಲು ಜನರು ತಮ್ಮ ಹರೆಯದಲ್ಲೇ ಧೂಮಪಾನದ ಚಟಕ್ಕೆ ಬಿದ್ದು ಬಲಿಯಾಗುತ್ತಿದ್ದಾರೆ. ಉಚ್ಛವರ್ಗದ ಮಾದರಿಗಳು ಮತ್ತು ಜತೆಯವರು ಕೂಡ ಧೂಮಪಾನಕ್ಕೆ ಪ್ರೋತ್ಸಾಹ ನೀಡುತ್ತವೆ. ಹದಿಹರೆಯದವರು ತಮ್ಮ ಹಿರಿಯರಿಗಿಂತ ಹೆಚ್ಚಾಗಿ ಜತೆಯವರ ಪ್ರಭಾವಕ್ಕೊಳಗಾಗುವುದರಿಂದ ಸಿಗರೆಟ್‌ಗಳ ಸೇವನೆಯನ್ನು ಆರಂಭಿಸದಂತೆ ತಡೆಯುವ ಹಿರಿಯರ, ಶಾಲೆಗಳ ಮತ್ತು ಆರೋಗ್ಯ ಅಧಿಕಾರಿಗಳ ಪ್ರಯತ್ನಗಳು ಸಾಮಾನ್ಯವಾಗಿ ಯಶಸ್ವಿಯಾಗುತ್ತಿಲ್ಲ‌. ಈ ಚಟಕ್ಕೆ ಬೀಳುತ್ತಿರುವ ಯುವಕರ ಸಂಖ್ಯೆ ಕೂಡ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಲೇ ಇದೆ. ತಂಬಾಕು ಸೇವನೆ ಎಗ್ಗಿಲ್ಲದಂತೆ ಮುಂದುವರೆದಿದೆ. ಗುಟ್ಕಾ ಸಂಸ್ಕೃತಿ ಹದಿಹರೆಯದಲ್ಲೇ ಶುರುವಾಗಿದೆ. ಹೆಣ್ಣುಮಕ್ಕಳೂ ಸಹ ಬಾಯಲ್ಲಿ ಸಿಗರೇಟ್ ಹೊಗೆ ಬಿಡುತ್ತಾ ಪಬ್‌ಗಳತ್ತ ನಡೆದಿರುವುದು ನೋಡುತ್ತಿದ್ದೇವೆ. 


ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಇಡೀ ಪ್ರಪಂಚದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ತಂಬಾಕು ಸೇವನೆಯಿಂದ ಜಾಗತಿಕವಾಗಿ ಪ್ರತಿವರ್ಷ ಸಾಯುವವರ ಸಂಖ್ಯೆ 70 ಲಕ್ಷಕ್ಕಿಂತ ಅಧಿಕ. ಭಾರತದಲ್ಲಿ 10 ಲಕ್ಷ ಜನರು ಬೀಡಿ, ಸಿಗರೇಟ್‌, ತಂಬಾಕಿನ ನೇರ ಸೇವನೆಯಿಂದ ಉಂಟಾಗುವ ಕ್ಯಾನ್ಸರ್‌ ಹಾಗೂ ಇತರೆ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ನಮ್ಮ ರಾಜ್ಯದಲ್ಲೇ ಈ ಪ್ರಮಾಣ 8 ಸಾವಿರವಿದೆ. 


ಧೂಮಪಾನವು ಕೇವಲ ವೈಯಕ್ತಿಕ ನೆಲೆಯಲ್ಲಿ ನಷ್ಟ ಮಾಡುವುದಲ್ಲದೇ, ಸಮಾಜದ ಸ್ವಾಸ್ಥ್ಯವನ್ನು ಕೂಡ ಹಾಳುಮಾಡುತ್ತದೆ. ನಮ್ಮ ಸಂಸ್ಕೃತಿಯ ಮೇಲೂ ಪ್ರಭಾವ ಬೀರುತ್ತದೆ. ಸ್ವ ವಿನಾಶದ ಪ್ರವೃತ್ತಿ ಬೆಳೆಯುತ್ತದೆ‌. ಒಂದು ಸಮಾಜವನ್ನು ಹಾದಿ ತಪ್ಪಿಸುವ, ತಪ್ಪು ದಾರಿಯಲ್ಲಿ ಹೋಗುವಂತೆ ಮಾಡುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ನೆಲೆಗಟ್ಟಿನಲ್ಲಿ ಕೂಡ ಧೂಮಪಾನವು ದೇಶದ ಬೆಳವಣಿಗೆ ಮಾರಕವಾಗಿ ಕಂಡುಬರುತ್ತದೆ. 


ಧೂಮಪಾನದ ಅತಿವ್ಯಸನಿಗಳು ಸಾಮಾನ್ಯ ಜನತೆಗಿಂತ ಸಣ್ಣವಯಸ್ಸಿನಲ್ಲಿಯೇ ತೀವ್ರಮಟ್ಟದ ರೋಗಗಳಿಗೆ ತುತ್ತಾಗುತ್ತಾರೆ. ಹೃದಯದ ಕಾಯಿಲೆಗಳಿಂದುಂಟಾದ ಐದು ಮರಣಗಳಲ್ಲಿ ಒಂದಕ್ಕೆ ಕಾರಣ ಸಿಗರೇಟ್ ಸೇವನೆ. ಚಿಕ್ಕ ವಯಸ್ಸಿನಲ್ಲಾಗುವ ಹೃದಯ ಸಂಬಂಧೀ ಸಾವುಗಳಲ್ಲಿ ಶೇ. 75 ರಷ್ಟು ಸಾವಿಗೆ ಸಿಗರೇಟ್ ಕಾರಣವಾಗಿದೆ. ದೇಶವನ್ನು ಕಟ್ಟಬೇಕಾದ ಯುವ ಜನತೆ, ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಮೊದಲೇ ಧೂಮಪಾನದಿಂದ ಬಲಿಯಾಗುತ್ತಿದ್ದಾರೆ. 


ಇದನ್ನು ತಡೆಗಟ್ಟಲೆಂದೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವುದಕ್ಕೋಸ್ಕರ 2003ರಲ್ಲಿ ‘ಸಿಗರೇಟ್ಸ್‌ ಮತ್ತು ಇತರೆ ತಂಬಾಕು ಉತ್ಪನ್ನ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯಿದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್‌ ಸೇದುವವರಿಗೆ 200 ರೂಪಾಯಿ ದಂಡ ಹಾಕಲಾಗುತ್ತಿದ್ದು ಅದನ್ನು 1000 ರೂಪಾಯಿಗೇರಿಸುವ ಚಿಂತನೆ ಸರಕಾರದ ಮಟ್ಟದಲ್ಲಿ ನಡೆದಿದೆ. ಇದು ಸ್ವಾಗತಾರ್ಹ.


ಬಸ್‌, ರೈಲು ನಿಲ್ದಾಣ, ಚಿತ್ರಮಂದಿರ, ಸರಕಾರಿ ಆಸ್ಪತ್ರೆ, ಗ್ರಂಥಾಲಯ, ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ದಂಡದ ಮೊತ್ತ ಹೆಚ್ಚಿದರೆ ಧೂಮಪಾನಿಗಳು ಸಾರ್ವಜನಿಕವಾಗಿ ಸಿಗರೇಟ್‌ ಸೇದುವ ಸಾಧ್ಯತೆ ಕಡಿಮೆಯಾಗುತ್ತದೆ. ಇದಲ್ಲದೆ ಸರಕು ಮತ್ತು ಸೇವೆಗಳ ಕಾಯಿದೆ (ಜಿಎಸ್‌ಟಿ)ಯಲ್ಲಿ ತಂಬಾಕು ಉತ್ಪನ್ನಗಳಿಗೆ ಶೇ.28 ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈ ಉಪಕ್ರಮಗಳು ನಿಜಕ್ಕೂ ಸ್ವಾಗತಾರ್ಹ. ಆದರೆ ನಮ್ಮ ಕಾನೂನು ಜಾರಿ ಸಂಸ್ಥೆಗಳ ವೈಫಲ್ಯದಿಂದ ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಆಗುತ್ತಿಲ್ಲ.

ಈ ನಿಟ್ಟಿನಲ್ಲಿ ಸುಧಾರಣೆಯಾಗಬೇಕು ನಿಜ ಆದರೆ ಇದಲ್ಲೆದಕ್ಕಿಂತ ಮಿಗಿಲಾಗಿ, ತಂಬಾಕು ಸೇವನೆ ವಿರುದ್ಧ ದೊಡ್ಡ ಮಟ್ಟದ ಅರಿವು ಮೂಡಿಸಬೇಕಾಗಿದೆ. 


ಇನ್ನಾದರೂ ಇದರ ವಿರುದ್ಧ ಎಚ್ಚರಗೊಳ್ಳದಿದ್ದರೆ, ಮುಂದೊಂದು ದಿನ ಚಿಕ್ಕ ಮಕ್ಕಳು ಲಾಲಿಪಪ್ ಕೊಳ್ಳುವ ಬದಲು ಬೀಡಿ, ಸಿಗರೇಟ್ ಕೊಳ್ಳಲು ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬಹುದು. ಸದ್ಯದ ಪರಿಸ್ಥಿತಿ ನೋಡಿದರೆ ಆ ದಿನಗಳು ಕೂಡ ದೂರವಿಲ್ಲ ಎಂಬ ಕೆಟ್ಟ ಪರಿಸ್ಥಿತಿಯಿದೆ‌. ಇನ್ನಾದರೂ ನಮ್ಮ ಸಮಾಜ ಎಚ್ಚೆತ್ತರೆ ನಿಮ್ಮ ಕಣ್ಣೇದುರೇ ನಿಮ್ಮ ಮಕ್ಕಳ ಸಾವುಗಳನ್ನು ನೋಡುವುದನ್ನು ತಪ್ಪಿಸಬಹುದು. ಧೂಮಪಾನ ಮುಕ್ತ ಭಾರತವನ್ನು ಕಟ್ಟಬಹುದು. ಒಮ್ಮೆ ಆಲೋಚಿಸಿ.




- ನಮಿತಾ

ಎಸ್‌ಡಿಎಂ ಕಾಲೇಜು ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top