ಜೂನ್ 8- ವಿಶ್ವ ಸಾಗರ ದಿನ: ಬನ್ನಿ, ಜೀವ ವೈವಿಧ್ಯಗಳನ್ನು ಉಳಿಸೋಣ

Upayuktha
0


ಪ್ರತಿ ವರ್ಷ ಜೂನ್ 8ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಸಮುದ್ರದ ಉಪಯುಕ್ತತೆಯನ್ನು ಸಾರುವುದಕ್ಕಾಗಿ, ಸಾಗರದಲ್ಲಿ ವಾಸ ಮಾಡುವ ಅಪರೂಪದ ಜೀವ ಸಂಕುಲಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಈ ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ.


ನಮ್ಮ ನಿಸರ್ಗದಲ್ಲಿ ಸಾಗರಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಸಪ್ತ ಸಾಗರಗಳ ಉಲ್ಲೇಖವನ್ನು ನಮ್ಮ ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ನೋಡ ಬಹುದು.


ಸಾಗರಗಳ ಸ್ಥಾನ ತುಂಬ ಹಿರಿದಾದುದು. ಅವು ಕೇವಲ ಉಪ್ಪನ್ನು  ಉತ್ಪಾದಿಸಲು ಮಾತ್ರವಲ್ಲ, ಮತ್ಸ್ಯ ಸಂಕುಲಗಳ ಸ್ಥಾನವು ಹೌದು. ತಿಮಿಂಗಿಲ, ಶಾರ್ಕ್‌ದಂತಹ ಬೃಹತ್ ಜೀವಿಗಳನ್ನು ತನ್ನ ಉದರದಲ್ಲಿ ಇಟ್ಟುಕೊಂಡು ಸಲಹುವ ಸಾಗರ ಪರಿಸರ ಸಮತೋಲನೆಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿದೆ.


ಆದರೆ ಬುದ್ಧಿಗೇಡಿಯಾದ ಮನುಷ್ಯ ಅದನ್ನು ಮಾಲಿನ್ಯಗೊಳಿಸದೆ ಬಿಡುತ್ತಿಲ್ಲ, ಡೀಸೆಲ್ ಬೋಟುಗಳನ್ನು ಉಪಯೋಗಿಸುತ್ತಾ ಸಮುದ್ರ ಜೀವಿಗಳಿಗೆ ಎಷ್ಟು ಬೇಕೋ ಅಷ್ಟು ಉಪದ್ರವ ಕೊಡುತ್ತಿದ್ದಾನೆ. ಸದ್ದಾಂ ಹುಸೇನ್ ಕಾಲದಲ್ಲಿ ಸೀಮೆ ಎಣ್ಣೆ ಮತ್ತು ಪೆಟ್ರೋಲ್ ಸಮುದ್ರಕ್ಕೆ ಸುರುವಿ ಎಷ್ಟೋ ಜೀವಿಗಳ ಮಾರಣ ಹೋಮಕ್ಕೆ ಕಾರಣನಾದ.


ಈಗಲೂ ಯಾಂತ್ರೀಕೃತ ಸಾಧನಗಳನ್ನು ಉಪಯೋಗಿಸಿ ಚಿಕ್ಕ ಚಿಕ್ಕ ಮೀನುಗಳನ್ನು ಬಿಡದೇ ಮತ್ಸ್ಯಕ್ಷಾಮಕ್ಕೆ ಕಾರಣನಾಗುತ್ತಿದ್ದಾನೆ. 

ಹಿಂದೆ ಮಳೆಗಾಲ ಸಮಯದಲ್ಲಿ, ಮೀನುಗಳು ಗರ್ಭ ಧರಿಸುವ ಕಾಲದಲ್ಲಿ ಮೀನುಗಾರರು ಸಮುದ್ರಕ್ಕೆ  ಹೋಗುತ್ತಿರಲಿಲ್ಲ. ಇದರಿಂದ ಮೀನುಗಳ  ಸಂಖ್ಯೆ ಹೆಚ್ಚಾಗಿ ಸಮತೋಲನ ಕಾಯ್ದು ಕೊಳ್ಳಲಾಗುತ್ತಿತ್ತು. ಆದರೆ ನಾಲಿಗೆ ಚಪಲ ಹಚ್ಚಿಕೊಂಡು ಎಳೆಯ ಮೀನುಗಳನ್ನು ಬಿಡದೆ ಮತ್ಸ್ಯ ಕ್ಷಾಮಕ್ಕೆ ಕಾರಣ ಆಗುತ್ತಿದೆ.


ನಾವು ಸಾಗರಗಳನ್ನು ಸರಿಯಾಗಿ ರಕ್ಷಿಸಿದರೆ, ಕೇವಲ ಜೀವ ವೈವಿಧ್ಯ ಮಾತ್ರವಲ್ಲ, ನಮ್ಮ ಮುಂದಿನ ಜನಾಂಗಕ್ಕೆ ಸಂಸ್ಕೃತಿಯನ್ನು ಸಹ  ರಕ್ಷಿಸಿ ಕೊಟ್ಟಂತೆ ಆಗುತ್ತದೆ.


"ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ", "ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ" ಎಂಬ ವಾಕ್ಯಗಳು ಸಾಗರ ನಮ್ಮ ಜೀವನಕ್ಕೆ ಎಷ್ಟು ಹತ್ತಿರ ವಾಗಿವೆ ಎಂಬುದನ್ನು ತೋರಿಸಿ ಕೊಡುತ್ತದೆ.


ಬನ್ನಿ, ನಮ್ಮ ಮುಂದಿನ ಜನಾಂಗಕ್ಕೆ ಈ  ಶ್ರೀಮಂತ ಜಲ ಸಂಪನ್ಮೂಲಗಳನ್ನು ಕಾಣಿಕೆಯಾಗಿ ನೀಡೋಣ . ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top