ತನು ಮತ್ತು ಮನಸ್ಸುಗಳ ಏಕಾಗ್ರತೆ ಹಾಗೂ ಸದೃಢತೆಗೆ ಯೋಗ ಬಹಳ ಮುಖ್ಯ: ಪ್ರಾಂಶುಪಾಲ ಬಿ.ಎಚ್. ಪ್ರಕಾಶ್
ಆಲೂರು: ವ್ಯಕ್ತಿ ಸರ್ವಾಂಗೀಣ ಅಭಿವೃದ್ಧಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಹಳ ಮುಖ್ಯ. ತನು ಮತ್ತು ಮನಸ್ಸುಗಳ ಏಕಾಗ್ರತೆ ಹಾಗೂ ಸದೃಢತೆಗೆ ಯೋಗ ಬಹಳ ಮುಖ್ಯ ಎಂದು ಮರಸು ಹೊಸಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಬಿ. ಎಚ್. ಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ, ವಕೀಲರ ಸಂಘ ಆಲೂರು ವತಿಯಿಂದ ಎಂಡಿಆರ್ಎಸ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ಒತ್ತಡದ ದೈನಂದಿನ ಬದುಕಿನಲ್ಲಿ ಚಂಚಲಗೊಂಡು ಮಾನಸಿಕ ನೆಮ್ಮದಿ ಕಳೆದುಕೊಂಡು ಹತಾಶರಾಗುತ್ತಿದ್ದೇವೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಪ್ರಸ್ತುತ ಈ ಮಾನಸಿಕ ಒತ್ತಡದಿಂದಾಗಿಯೇ ಚಿಕ್ಕ ಮಕ್ಕಳಿಂದ ವಯೋವೃದ್ಧರೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆಲ್ಲಾ ಮಾನಸಿಕ ವಿಶ್ರಾಂತಿ ಇಲ್ಲದಿರುವುದೇ ಕಾರಣ. ಆದ್ದರಿಂದ ಇಂದಿನ ತುರ್ತು ಬದುಕಿಗೆ ಯೋಗ ವರವಾಗಿ ಪರಿಣಮಿಸಲಿದೆ. ದಿನ ನಿತ್ಯದ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ ಎಂದರು.
ತಾಲ್ಲೂಕು ಕಾರ್ಯದರ್ಶಿ ಹಾಗೂ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ್ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥೀಗಳ ಸರ್ವಾಂಗೀಣ ಬೆಳವಣಿಗೆಗಾಗಿಯೇ ಹುಟ್ಟಿದ ಬಹುಮುಖ್ಯ ಹಾಗೂ ಮಹತ್ವದ ಜಾಗತಿಕ ಸಂಸ್ಥೆಯಾಗಿದೆ. 200ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ನಮ್ಮ ಸಂಸ್ಥೆ ಹಗಲಿರುಳೂ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ಕಾರ್ಯೋನ್ಮುಖವಾಗಿದೆ. ಇಂದು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗ ಎಂಬುದು ಭಾರತ ಇಡೀ ಜಗತ್ತಿಗೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ. ದೇಹ ಮತ್ತು ಮನಸ್ಸನ್ನು ಸಮನ್ವಯಗೊಳಿಸುವುದೇ ಯೋಗ. ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ಉಂಟುಮಾಡುವ ಶಕ್ತಿ ಯೋಗಕ್ಕಿದೆ. ವಿದ್ಯಾರ್ಥೀ ಜೀವನದಲ್ಲಿ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಬಹಳ ಮುಖ್ಯ. ಯೋಗ ಮಾನಸಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ಮಕ್ಕಳು ತಮ್ಮ ಆರೋಗ್ಯದ ಜೊತೆಗೆ ಅವರಿಗಿರುವ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ತಿಳಿಯಬೇಕಿದೆ. ಹದಿಹರೆಯದ ಮಕ್ಕಳೇ ಇಂದು ಹೆಚ್ಚಾಗಿ ಬೈಕ್ಗಳನ್ನು ಚಾಲನೆ ಮಾಡುತ್ತಾ ಅಪಘಾತಕ್ಕೆ ತುತ್ತಾಗಿ ಜೀವನವನ್ನೇ ನರಕವನ್ನಾಗಿಸಿಕೊಳ್ಳುತ್ತಿದ್ದಾರೆ. ನಮ್ಮ ಸಂವಿಧಾನ ನೀಡಿದ ಅವಕಾಶಗಳನ್ನು ನಾವೆಲ್ಲಾ ಸದ್ಬಳಕೆ ಮಾಡಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವುದರ ಜೊತೆಗೆ ಆರೋಗ್ಯದಾಯಕ ಸಮಾಜವನ್ನು ಕಟ್ಟಬೇಕಿದೆ ಎಂದರು.
ಗೈಡ್ ಕ್ಯಾಪ್ಟನ್ ಕಾವ್ಯ ಹಾಗೂ ಸಹ ಶಿಕ್ಷಕ ಅಣ್ಣಪ್ಪರವರುಗಳು ಮಕ್ಕಳಿಗೆ ಯೋಗವನ್ನು ಪ್ರಾಯೋಗಿಕವಾಗಿ ಮಾಡಿಸುತ್ತಾ, ಅವುಗಳ ಮಹತ್ವ ವಿವರಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿ ಮಂಜೇಗೌಡ, ಶಿರಸ್ತೇದಾರ್ ನಾಗರಾಜ್, ಹಿರಿಯ ಗೈಡ್ ಕ್ಯಾಪ್ಟನ್ ಸುನೀತಾ, ಸ್ಕೌಟ್ ಮಾಸ್ಟರ್ ಸುಬ್ರಹ್ಮಣ್ಯ, ಸಹ ಶಿಕ್ಷಕ ಲೋಕೇಶ್ ಸೇರಿದಂತೆ ಶಿಕ್ಷಕರು, ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ