ಕನ್ನಡಪರ ಸಂಘಟನೆಗಳಿಗೆ ಪಾರದರ್ಶಕತೆ, ಪ್ರಾಮಾಣಿಕತೆ ಬಹಳ ಮುಖ್ಯ
ಆಲೂರು: ನಾಡು-ನುಡಿ ಸೇವೆಯಲ್ಲಿ ತೊಡಗಿರುವ ಕನ್ನಡಪರ ಸಂಘಟನೆಗಳಿಗೆ ಪಾರದರ್ಶಕ ಹಾಗೂ ಪ್ರಮಾಣಿಕ ವ್ಯವಹಾರ ದೃಷ್ಠಿಕೋನಗಳು ಬಹಳ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ಕಳೆದ ಮೂರೂ ತಾಲ್ಲೂಕು ಸಮ್ಮೇಳನಗಳ ಖರ್ಚುವೆಚ್ಚಗಳನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲ್ಲೂಕು ಘಟಕ ಪಾರದರ್ಶಕವಾಗಿ ನೀಡಿರುವುದು ಸ್ತುತ್ಯಾರ್ಹ ಸಂಗತಿ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕು ಘಟಕ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾಷಿಕ ಸಭೆಯಲ್ಲಿ ಪಾಲ್ಗೊಂಡು ತಾಲ್ಲೂಕು ಕಾರ್ಯದರ್ಶಿ ಧರ್ಮ ಕೆರಲೂರು ವಾರ್ಷಿಕ ವರದಿ ಹಾಗೂ ಆಯ-ವ್ಯಯ ಮಂಡನೆ ಮಾಡಿದ ನಂತರ ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರದ ಅನುದಾನ ಪಡೆದು ಸಮ್ಮೇಳನಗಳನ್ನು ಮಾಡುವ ಕನ್ನಡಪರ ಸಂಸ್ಥೆಗಳು ಸಾರ್ವಜನಿಕರ ಹಣವನ್ನು ಕೋಟಿಗಟ್ಟಲೇ ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಿ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿರುವುದು ದುರಂತ. ಕನ್ನಡ ನಾಡುನುಡಿ ಹೆಸರಿನಲ್ಲಿ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳುವ, ಅಧಿಕಾರಶಾಹಿ ವ್ಯಕ್ತಿಗಳನ್ನು ಸಮಾಜ ಖಂಡಿಸಬೇಕಿದೆ ಎಂದರು.
ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಪ್ರಾರಂಭದಿಂದಲೂ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸುವ ಹಿನ್ನೆಲಯಲ್ಲಿ ಸರಳ ಹಾಗೂ ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಕನ್ನಡಪರ ಮನಸ್ಸುಗಳನ್ನು ಒಂದುಗೂಡಿಸಿ ಉತ್ತಮೋತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ದಿಸೆಯಲ್ಲಿ ಪ್ರಾರಂಭದಿಂದಲೂ ಆಲೂರು ತಾಲ್ಲೂಕಿನಲ್ಲಿ ಮಾಧ್ಯಮ ಬಂಧುಗಳ ಜೊತೆಗೆ ಬಾಲಣ್ಣ, ಶಿವಮೂರ್ತಿ, ಡಾ. ಜಯರಾಜ್, ಪುಟ್ಟಣ್ಣ, ರವಿ ನಾಕಲಗೂಡು, ಎಂ. ಪಿ. ಹರೀಶ್, ನಟರಾಜ್ ನಾಕಲಗೂಡು, ಎಚ್.ವಿ.ರಾಘವೇಂದ್ರ, ಎಚ್.ಜೆ. ಪೃಥ್ವಿ, ಟಿ.ಕೆ.ನಾಗರಾಜ್, ಟಿ.ಕೆ.ಕುಮಾರಸ್ವಾಮಿ, ರಂಗಸ್ವಾಮಿ, ನವೀನ್, ಸತೀಶ್, ಪ್ರದೀಪ್, ದ್ಯಾವಪ್ಪ, ಕೃಷ್ಣೇಗೌಡ, ಧರ್ಮ ಕೆರಲೂರು, ಚಂದ್ರಕಲಾ, ಫಾದರ್ ಬಸವರಾಜ್ ಸೇರಿದಂತೆ ನೂರಾರು ಮನಸ್ಸುಗಳು ಕೈಜೋಡಿಸಿ ತಾಲ್ಲೂಕು ಘಟಕವನ್ನು ಕ್ರಿಯಾಶೀಲವಾಗಿಟ್ಟಿದೆ. ಹರಿಹಳ್ಳಿಯಲ್ಲಿ ನಡೆದ ಆಲೂರು ತಾಲ್ಲೂಕು ಮೂರನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಸತ್ಯನಾರಾಯಣ ಹರಿಹಳ್ಳಿ, ಎಚ್.ಡಿ.ಸೋಮೇಶ್ ಮುಂತಾದ ಸ್ನೇಹಿತರ ಕೊಡುಗೆ ಅಪಾರವಿದೆ ಎಂದರು.
ಸಾಹಿತ್ಯ ವೇದಿಕೆಯ ಪೋಷಕರಾದ ಡಾ. ಎಂ. ಇ. ಜಯರಾಜ್ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಳೆದ ಐದಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಬಂದಿದೆ. ವೇದಿಕೆಯ ವತಿಯಿಂದ ಮೇ ತಿಂಗಳಿನಲ್ಲಿ ಮುಂಬಯಿ ಮಹಾನಗರಿಯಲ್ಲಿ ನಡೆದ ಅಖಿಲ ಭಾರತ ಸಮ್ಮೇಳನವನ್ನು ಮರೆಯುವಂತಿಲ್ಲ. ಹೊರರಾಜ್ಯದಲ್ಲಿಯೂ ತನ್ನ ಛಾಪನ್ನು ಮೂಡಿಸಿರುವ ವೇದಿಕೆಯ ಎಲ್ಲಾ ಕಾರ್ಯಗಳಿಗೂ ನಾವೆಲ್ಲಾ ಒತ್ತಾಸೆಯಾಗಿ ನಿಲ್ಲುತ್ತೇವೆ ಎಂದರು.
ವೇದಿಕೆಯ ತಾಲ್ಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ ಮಾತನಾಡಿ ಸಾಹಿತ್ಯ ವೇದಿಕೆ ಮೊದಲಿನಿಂದಲೂ ಸಾಧಕರನ್ನು ಗುರುತಿಸುತ್ತಾ, ಪ್ರೋತ್ಸಾಹಿಸುತ್ತಾ, ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಗಳನ್ನು ಒದಗಿಸುತ್ತಾ ಬಂದಿದೆ. ಇದರ ಒಟ್ಟೊಟ್ಟಿಗೆ ನಾವು ನಮ್ಮ ಕೈಲಾದಮಟ್ಟಿಗೆ ಸಹಕಾರವನ್ನು ನೀಡುತ್ತಾ ವೇದಿಕೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇವೆ. ಮುಂದೆಯೂ ನಮ್ಮ ಸ್ಪಂದನೆ ನಿರಂತರವಾಗಿರುತ್ತದೆ ಎಂದರು.
ತಾಲ್ಲೂಕು ಕಾರ್ಯದರ್ಶಿ ಧರ್ಮ ಕೆರಲೂರು ವಾರ್ಷಿಕ ವರದಿ ಮಂಡನೆ ಮಾಡಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹುಟ್ಟಿರುವುದೇ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರ ಬೆಳೆಸುವುದಕ್ಕಾಗಿ. ತಾಲ್ಲೂಕು ಘಟಕ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಇಲ್ಲಿಯವರೆಗೂ ಪಾರದರ್ಶಕ ಲೆಕ್ಕಪತ್ರಗಳನ್ನು ವೇದಿಕೆ ನೀಡುತ್ತಾ ಬಂದಿದ್ದು ಇತ್ತೀಚೆಗೆ ತಾಲ್ಲೂಕಿನ ಹರಿಹಳ್ಳಿಯಲ್ಲಿ ಅಲ್ಲಿಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಆಲೂರು ತಾಲ್ಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಫಾದರ್ ಬಸವರಾಜ್ 1000, ಟಿ. ಕೆ. ನಾಗರಾಜ್ 1000, ಧರ್ಮ ಕೆರಲೂರು 1000, ವಾಸು ಸಮುದ್ರವಳ್ಳಿ 1000, ರೈತ ಸಂಘದ ಜಯಣ್ಣ 5000, ಮಣಿಪುರ ಕೃಷ್ಣೇಗೌಡ 2000, ರವಿ ನಾಕಲಗೂಡು 15000, ಎಂ. ಪಿ. ಹರೀಶ್ 2000, ಎಂ. ಚಂದ್ರಕಲಾ 5000, ಡಾ. ಎಂ. ಇ. ಜಯರಾಜ್ 4000, ಎಂ. ಬಾಲಕೃಷ್ಣ 3000, ಕಟ್ಟೆಗದ್ದೆ ನಾಗರಾಜ್ 8500, ಮಂಗಳ ಕಲಾ ಸಾಹಿತ್ಯ ವೇದಿಕೆ 7500, ಎಚ್.ಡಿ.ಸೋಮೇಶ್ 500, ಮಾಣಿಕ್ಯ ಪ್ರಕಾಶನ (ರಿ.), ಹಾಸನ 10,000 ಇವರುಗಳಿಂದ ಒಟ್ಟು 66,500-00 ರೂ. ದೇಣಿಗೆ ಸಂಗ್ರಹವಾಗಿ ಅದರಲ್ಲಿ 67,840-00 ರೂ ಖರ್ಚಾಗಿದ್ದು 1340-00 ಹೆಚ್ಚಿನ ವ್ಯಯವಾಗಿದೆ. ಸಮ್ಮೇಳನಕ್ಕೆ ಸಹಕಾರ ನೀಡಿದ ಎಲ್ಲರನ್ನೂ ವೇದಿಕೆ ಗೌರವಿಸುತ್ತದೆ ಎಂದರು.
ವೇದಿಕೆಯ ವತಿಯಿಂದ ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಉಪಾಧ್ಯಕ್ಷ ಟಿ.ಕೆ.ನಾಗರಾಜ್ ಹಾಗೂ ಸಂಘಟನಾ ಕಾರ್ಯದರ್ಶಿ ಡಿ.ಸಿ.ಬಸವರಾಜ್ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿ ವಾಸು ಸಮುದ್ರವಳ್ಳಿ, ಪತ್ರಿಕಾ ಕಾರ್ಯದರ್ಶಿ ಎಚ್.ಡಿ. ಪ್ರದೀಪ್, ದಲಿತ ಮುಖಂಡ ಅರಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ