ಉಡುಪಿ: ಮಂದಾರ್ತಿ ಮೇಳದ ಕಲಾವಿದರಾದ ಸುರೇಶ್ ಆಚಾರ್ಯ ಇವರಿಗೆ ಬ್ರಹ್ಮಾವರ ತಾಲೂಕಿನ ಪೇತ್ರಿಯ ಕನ್ನಾರಿನಲ್ಲಿ ಮಂದಾರ್ತಿ ಕೃಷ್ಣ ಅಡಿಗರ ಸ್ಮರಣೆಯಲ್ಲಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್, ಹೆಬ್ರಿ ಇದರ ಪ್ರಾಯೋಜಕತ್ವದಲ್ಲಿ 6.50 ಲಕ್ಷ ರೂ.ವೆಚ್ಚದಲ್ಲಿ, ಕೇವಲ 40 ದಿನಗಳಲ್ಲಿ ನಿರ್ಮಿಸಿದ 'ಶಾರದಾಕೃಷ್ಣ' ಮನೆಯನ್ನು ಗುರುವಾರ (ಮೇ 29) ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಎಲ್ಲವೂ ಕೃಷ್ಣ ಸಂಕಲ್ಪ, ಬಿರುಗಾಳಿ ಸುರೇಶ ಆಚಾರ್ಯರ ಮನೆಯನ್ನು ಹಾರಿಸಿತು. ಇದು ಅವರಿಗೆ ಅನುಕೂಲವೇ ಆಯಿತು. ಭಾರ್ಗವಿ ಮತ್ತು ರಾಮಚಂದ್ರ ಐತಾಳ ದಂಪತಿಗಳು ದಾನಿಗಳಾಗಿ ದೊರೆತರು. ದಾನಿಗಳನ್ನೂ ಫಲಾನುಭವಿಗಳನ್ನೂ ಜೋಡಿಸುವ ಕೆಲಸವನ್ನು ಯಕ್ಷಗಾನ ಕಲಾರಂಗ ಬಹಳ ಚೆನ್ನಾಗಿ ನಿರ್ವಹಿಸುತ್ತಾ ಬಂದಿದೆ. ಮೌನವಾಗಿ ಸಮಾಜದಲ್ಲಿ ಅವರು ಮಾಡುತ್ತಿರುವ ಕಾರ್ಯ ಅನನ್ಯ ಎಂದು ಶ್ರೀಗಳು ನುಡಿದರು.
ದಾನಿಗಳಾದ ಡಾ. ಭಾರ್ಗವಿ ಆರ್. ಐತಾಳ ಮಾತನಾಡಿ, ನನಗೆ ತಂದೆ ಕೃಷ್ಣ ಉಡುಪರೇ ಆದರ್ಶ. ದಾನ ಗುಣಕ್ಕೆ ಅವರ ಮಾತೇ ಪ್ರೇರಣೆ. ಸಂಸ್ಥೆಯ ವಾರ್ಷಿಕ ಸಂಚಿಕೆ "ಕಲಾಂತರಂಗ" ಓದಿ ಕಲಾರಂಗ ಮಾಡುತ್ತಿರುವ ಸಾಮಾಜಿಕ ಕಾರ್ಯದ ಪರಿಚಯವಾಯಿತು. ತಂದೆಯ ಹೆಸರಿನಲ್ಲಿ ಮನೆ ನಿರ್ಮಿಸಿ ಕೊಡಬೇಕೆಂಬ ಕನಸನ್ನು ನನಸು ಮಾಡಿದ್ದಕ್ಕೆ ಸಂಸ್ಥೆಗೆ ನಾವು ಕೃತಜ್ಞರಾಗಿದ್ದೇವೆ ಎಂದರು.
ಅಭ್ಯಾಗತ ವೈಕುಂಠ ಹೇರ್ಳೆ ಕಲಾರಂಗದ ಸದಸ್ಯನೆನ್ನಲು ಅಭಿಮಾನವಾಗುತ್ತದೆ. ಸಂಸ್ಥೆಗೆ ದಾನಿಗಳು ನೀಡಿದ ಒಂದು ರೂಪಾಯಿಯೂ ವ್ಯರ್ಥವಾಗದಂತೆ ಫಲಾನುಭವಿಗಳಿಗೆ ತಲಪಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. ಸೂರ್ಯನಾರಾಯಣ ಅಡಿಗ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾವಿದ ಗಣೇಶ ಬೈಕಾಡಿ ಮಾತನಾಡಿ ಯಕ್ಷಗಾನ ಕಲಾರಂಗ ಕಲಾವಿದರ ಕಾಮಧೇನು. ಇಪ್ಪತ್ತೈದು ವರ್ಷಗಳಿಂದ ಯಕ್ಷನಿಧಿಯ ಮೂಲಕ ಕಲಾವಿದರ ಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸುವ ರೀತಿಗೆ ಕಲಾವಿದ ಸಮೂಹದ ಪರವಾಗಿ ಕೃತಜ್ಞತೆ ಹೇಳುತ್ತೇನೆ ಎಂದರು.
ಈ ದಿನ ನನ್ನ ಬದುಕಿನ ಸಾರ್ಥಕ ಕ್ಷಣ ಎಂದು ಭಾವುಕರಾಗಿ ಸುರೇಶ್ ಆಚಾರ್ಯರು ಕಲಾವಿದ ಸುಮಂತ ಆಚಾರ್ಯ ಈ ಸಂದರ್ಭದಲ್ಲಿ ದಾನಿಗಳನ್ನು ಹಾಗೂ ಸಂಸ್ಥೆಯನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರಾದ ರಾಮಕೃಷ್ಣ ಆಚಾರ್, ಐರೋಡಿ ಸತ್ಯಾನಂದ ಕಾರಂತ, ರಾಮದಾಸ ಕಾರಂತ, ರಾಜಾರಾಮ ಮಯ್ಯ, ಸಾಮಾಜಿಕ ಕಾರ್ಯಕರ್ತರಾದ ಕಮಲಾಕ್ಷ ಹೆಬ್ಬಾರ್, ಚೇರ್ಕಾಡಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ ಮುದ್ರಾಡಿ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಡಾ. ರಾಜೇಶ್ ನಾವುಡ,ಅಜಿತ್ ಕುಮಾರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ರವಿರಾಜ್ ಎಚ್.ಪಿ., ರಾಘವೇಂದ್ರ ಪ್ರಭು ಕರ್ವಾಲು ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ