ಬೆಂಗಳೂರು: ಸ್ತ್ರೀಯರು ಸಂಘಟಿತರಾಗಿ ಕಾರ್ಯನಿರ್ವಹಿಸಿದರೆ, ಉತ್ತಮ ಸಾಧನೆ ಮಾಡುತ್ತಾರೆ. ಸ್ತ್ರೀಸಂಘಟನೆಗೆ ಅತುಲಬಲವಿದೆ ಎಂದು ಸುವಿದ್ಯೇಂದ್ರ ತೀರ್ಥರು ನುಡಿದರು. ಅವರು ಇತ್ತೀಚೆಗೆ ಬೆಂಗಳೂರಿನ ಬಸವನ ಗುಡಿಯ, ಉತ್ತರಾದಿ ಮಠದಲ್ಲಿ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಯಾವುದೇ ಕಾರ್ಯಕ್ರಮ ಮಾಡುವಲ್ಲಿ ಅನೇಕ ಎಡರು ತೊಡರುಗಳು ಎದುರಾಗುತ್ತವೆ. ದೀಪವು ಕಸಕಡ್ಡಿಯನ್ನು ಬಿಟ್ಟು ಎಣ್ಣೆಯನ್ನು ಮಾತ್ರ ಹೀರಿಕೊಂಡು ಬೆಳಕು ಕೊಡುತ್ತದೆಯೋ ಹಾಗೆ, ಟೀಕೆ ಟಿಪ್ಪಣಿಗಳನ್ನು ಬದಿಗೊತ್ತಿ, ಕೆಲಸದಲ್ಲಿ ತೊಡಗಿಕೊಳ್ಳಿರಿ. ಇಂದು ಜನ್ಮತಾಳಿದ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಬೆಳೆದು ತಾರುಣ್ಯವನ್ನು ಪಡೆದುಕೊಳ್ಳಲಿ. ಮುಪ್ಪು ಬಾರದಿರಲಿ ಎಂದು ಶುಭ ಹಾರೈಸಿದರು.
ಇನ್ನೊಬ್ಬ ಮುಖ್ಯ ಅತಿಥಿಗಳಾದ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿಯವರು "ಪ್ರಾಚೀನ ಕಾಲದಿಂದಲೂ ಮಹಿಳೆಯರೇ ಮಕ್ಕಳನ್ನು ಪೋಷಿಸುವ ಬೆಳೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವರೇ ದಾಸ ಸಾಹಿತ್ಯವನ್ನು ಮಕ್ಕಳಿಗೆ ಹೇಳಿ ಕೊಟ್ಟಿದ್ದಾರೆ. ಹೀಗಾಗಿ ಮಹಿಳೆಯರು ಈ ಕಾರ್ಯವನ್ನು ಸಮರ್ಥವಾಗಿ ಮಾಡಬಲ್ಲರು ಎಂದು ಹೇಳಿ ಶುಭ ಹಾರೈಸಿದರು.
ವೇದಿಕೆಯ ಮೇಲೆ ಪಂಡಿತ ವಿದ್ಯಾಧೀಶಾಚಾರ್ ಗುತ್ತಲ, ಡಾ.ರವೀಂದ್ರ ಕುಷ್ಟಗಿ, ನಿವೃತ್ತ ನ್ಯಾಯಮೂರ್ತಿ ಶ್ರೀಮತಿ ಮೀನಾಕ್ಷಿ ಸಾವಳಗಿ, ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾ.ವಿದ್ಯಾ ಕಸಬೆ ಸಂಪಾದಿತ, "ಪ್ರಮುಖ ಮಹಿಳಾ ಹರಿದಾಸರು" ಎಂಬ ಕೃತಿಯನ್ನು ಬಿಡುಗಡೆಗೊಳಿಸಿದರು.
ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ವತಿಯಿಂದ ದಾಸ ಸಾಹಿತ್ಯದಲ್ಲಿ ಸಾಧನೆ ಮಾಡಿದ ಡಾ.ಎನ್.ಜಿ.ವಿಜಯಲಕ್ಷ್ಮಿ, ಬೆಂಗಳೂರು, ಶ್ರೀಮತಿ ಕಮಲಾಕ್ಷಿಬಾಯಿ ಬೆಂಗಳೂರು, ಡಾ.ಸುಮನಾ ಬದರಿನಾಥ ಬೆಂಗಳೂರು, ಶ್ರೀಮತಿ ಶೋಭಾಮೂರ್ತಿ ರಾಯಚೂರು, ಶ್ರೀಮತಿ ಬಿ. ಕೆ. ಶ್ರೀಮತಿರಾವ್ ಮಂಗಳೂರು, ಶ್ರೀಮತಿ ವಿಜಯಲಕ್ಷ್ಮಿ ರಾಘವೇಂದ್ರರಾವ ಹುಬ್ಬಳ್ಳಿ,ಮಹಿಳಾ ಹರಿದಾಸರಿಗೆ "ಜೀವಮಾನ ಸಾಧನೆ" ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ, ಚಿ.ವಿಭವ ನಾಡಗೌಡಾ, ಚಿ.ಕೌಸ್ತುಭ ಕುಲ್ಕರ್ಣಿ, ಚಿ.ಸುಮಧ್ವ ಕುಲ್ಕರ್ಣಿ, ಚಿ.ಸುಮೇಧ ಕುಲ್ಕರ್ಣಿ ಇವರನ್ನು ಸನ್ಮಾನಿಸಲಾಯಿತು. ಬಾಲ್ಯದಲ್ಲಿಯೇ ಜ್ಞಾನ ಮಾರ್ಗದಲ್ಲಿ ವಿಶೇಷ ಸಾಧನೆ ಮಾಡಿದ ಚಿ.ಅಪ್ರಮೇಯ ಚಿ. ಅಥರ್ವ ಮತ್ತು ಚಿ. ಸತ್ಯಪೂರ್ಣ ಸನ್ಮಾನಿಸಲಾಯಿತು. ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ್ನು ನೊಂದಣಿ ಮಾಡಿಸಿಕೊಟ್ಟ ಶ್ರೀಮತಿ ಗೌರಿ ಜಡೆಯವರಿಗೆ ಮೊರದ ಬಾಗಿಣ ನೀಡಿ ಗೌರವಿಸಲಾಯಿತು. ದಾಸ ಸಾಹಿತ್ಯದಲ್ಲಿ ಸಂಶೋಧನೆ ಸಂಘಟನಾ ಕಾರ್ಯದಲ್ಲಿ ನಿರತರಾದ ಹಿರಿಯ ವಿದ್ವಾಂಸರನ್ನೂ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ನಾಯ್ಯಾಧೀಶರಾದ ಶ್ರೀಮತಿ ಮೀನಾಕ್ಷಿ ಸಾವಳಗಿ ಅವರು, ಮೈತ್ರೇಯಿ ಬ್ರಹ್ಮಜ್ಞಾನಿ. ಅನೇಕ ಮಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾಳೆ. ಯಾಜ್ಞವಲ್ಕ್ಯರ ಪತ್ನಿಯಾಗಿ, ಆಧ್ಯಾತ್ಮಿಕ ಸಾಧನೆ ಮಾಡಿದ ಈಕೆಯ ಹೆಸರು ಅನ್ವರ್ಥಕವಾಗಲಿ ಎಂದು ಕರೆಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಜಯಲಕ್ಷ್ಮೀ ಮಂಗಳಮೂರ್ತಿಯವರು "ಈ ಸಂಘಟನೆಯು ಮಹದಾಶಯವನ್ನು ಹೊತ್ತುಕೊಂಡು ಸ್ಥಾಪಿತವಾಗಿದೆ. ಈ ಸಂಘಟನೆಯ ಕಾರ್ಯಕ್ರಮಗಳು ವಿಶ್ವವ್ಯಾಪಿಯಾಗಿ ಪಸರಿಸಲಿ ಎಂದು ಹಾರೈಸಿದರು.
ಮೊದಲಿಗೆ ಚಿ.ಅಪ್ರಮೇಯ ಮತ್ತು ಸತ್ಯಪೂರ್ಣ ಇವರ ವೇದಘೋಷದಿಂದ ಆರಂಭವಾಯಿತು.
ಶ್ರೀಮತಿ ಮಾನಸಾ ಜಯರಾಜ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಸ್ವಾಗತವನ್ನು ಡಾ.ಗುರುರಾಜ ಪೋಶಟ್ಟಿಹಳ್ಳಿ ನೆರವೇರಿಸಿದರು. ಡಾ.ಸುಧಾ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶೀಲಾ ದಾಸ ಆಶಯ ನುಡಿಗಳನ್ನು ಹೇಳಿದರು ಡಾ.ವಿದ್ಯಾ ಕಸಬೆ ಪುಸ್ತಕ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಡಾ.ಶಾಂತಾ ರಘೋತ್ತಮ, ಶ್ರೀಮತಿ ವೃಂದಾ ಸಂಗಮ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಡಾ. ವಿದ್ಯಾಶ್ರೀ ಕುಲ್ಕರ್ಣಿ, ಶ್ರೀಮತಿ ಮಾನಸ ಕುಲ್ಕರ್ಣಿ ಹಾಗೂ ದಾಸವಾಣಿ ಕರ್ನಾಟಕದ ನಿರ್ವಾಹಕ ಜಯರಾಜ ಕುಲ್ಕರ್ಣಿ ಇವರು ಕಾರ್ಯಕ್ರಮದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸದಸ್ಯರು, ಹರಿದಾಸಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.
ಶ್ರೀಮತಿ ಪ್ರವೀಣಾ ಕುಲ್ಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಸುಧಾ ದೇಶಪಾಂಡೆಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ