ಸುಭಾಷಿತ: ಫಲವನ್ನು ಬಯಸುವವರು ತೀರಾ ತಗ್ಗಬಾರದು, ಸೆಟೆದು ನಿಲ್ಲಲೂ ಬಾರದು

Upayuktha
0



ನಾತಿನೀಚೈರ್ನ ಚಾಪ್ಯುಚ್ಚೈರ್

ಭವಿತವ್ಯಂ ಫಲಾರ್ಥಿಭಿಃ । 

ಸ್ತೋಕಂ ನತ್ವಾ ಪಿಬನ್ನಂಭಃ 

ಕುಂಭಃ ಪ್ರಾಪ್ನೋತಿ ಪೂರ್ಣತಾಮ್ ||

(ಸುಭಾಷಿತ ಹಾರಾವಲಿ)


"ಫಲವನ್ನು ಬಯಸುವವರು ತೀರಾ ತಗ್ಗಬಾರದು. ಸೆಟೆದು ನಿಲ್ಲಲೂ ಬಾರದು. ಕೊಡವು ಸ್ವಲ್ಪವೇ ಬಗ್ಗಿ ನೀರನ್ನು ಕುಡಿದು ಕುಡಿದು ಪೂರ್ಣವಾಗುತ್ತದೆ."


ಫಲಾಪೇಕ್ಷೆ ಎಲ್ಲರಿಗೂ ಇರುತ್ತದೆ. ಫಲಪ್ರಾಪ್ತಿಗಾಗಿ ಪ್ರಯತ್ನವನ್ನೂ ನಡೆಸುತ್ತಾರೆ. ಆ ಪ್ರಯತ್ನ ಸರಿಯಾದ ದಾರಿಯಲ್ಲಿ ಮುಂದುವರೆದರೆ ಫಲವನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಪ್ರಯತ್ನದ ಕೂಸೇ ಫಲ.


ಕೆಲವರಿರುತ್ತಾರೆ. ಫಲ ಸಿಗುವವರೆಗೆ ತೀರಾ ತಗ್ಗಿ ಬಗ್ಗಿ ನಡೆದುಕೊಳ್ಳುತ್ತಾರೆ. ಫಲ ಪಡೆಯುವುದಕ್ಕಾಗಿ ತಗ್ಗಬೇಕಾಗಿಲ್ಲ. ಪ್ರಾಮಾಣಿಕರಾಗಿರಬೇಕು, ನಂಬಿಕೆಗೆ ಪಾತ್ರರಾಗಿರಬೇಕು. ತೀರಾ ಬಗ್ಗಿ ನಡೆದರೆ ಸಂದೇಹ ಬರುತ್ತದೆ. 'ಅತಿವಿನಯಂ ಧೂರ್ತ ಲಕ್ಷಣಂ'_ ಎಂಬ ಮಾತಿದೆ. ಅತಿಯಾದ ವಿನಯ ತೋರಿಸುವುದು, ತಗ್ಗಿ ನಡೆಯುವುದು ಷಡ್ಯಂತ್ರದ ಪ್ರತೀಕ. ಇದನ್ನು ಲೋಕ ಅರ್ಥ ಮಾಡಿಕೊಂಡಾಗ ಸಿಗುವ ಫಲವೂ ಸಿಗುವುದಿಲ್ಲ. ಹಾಗಂತ ತಗ್ಗಬೇಕಾದಲ್ಲಿ ತಗ್ಗಬೇಕು, ಬಗ್ಗಬೇಕಾದಲ್ಲಿ ಬಗ್ಗಬೇಕು. ವಿನಯ ತೋರಿಸುವಲ್ಲಿ ವಿನಯ ತೋರಿಸಬೇಕು. ಇವು ತನ್ನ ವ್ಯಾಪ್ತಿಯನ್ನು ಮೀರಬಾರದಷ್ಟೆ. ಸೆಟೆದು ನಿಂತು ಫಲವನ್ನು ಅಪೇಕ್ಷಿಸಬಾರದು. ಅದು ದರ್ಪಾಹಂಕಾರವನ್ನು ಸೂಚಿಸುತ್ತದೆ. ನಮ್ಮ ಸ್ವಭಾವವನ್ನು ನೋಡಿದವರು ಕಿಂಚಿತ್ತೂ ಸೌಜನ್ಯವಿಲ್ಲದ ಇವನಿಗೇಕೆ ನೀಡಬೇಕು ಎಂದು ಯೋಚಿಸಿದರೆ ತಪ್ಪಲ್ಲ, ಸೆಟೆದು ನಿಂತು ಫಲವನ್ನು ನಿರೀಕ್ಷಿಸುವುದು ಸಭ್ಯತೆಯೂ ಅಲ್ಲ, ಫಲವನ್ನು ಪಡೆಯುವವವರು ನೀಡುವವರ ಮನೋ ಇಂಗಿತವನ್ನರಿತು ವ್ಯವಹರಿಸಬೇಕಾದುದು ಧರ್ಮ.


ತಗ್ಗಿ ನಡೆಯಬೇಕಾದಲ್ಲಿ ತಗ್ಗಿ ನಡೆದು, ಸೆಟೆದು ನಿಲ್ಲಬೇಕಾದಲ್ಲಿ ಸೆಟೆದು ನಿಂತು ವ್ಯವಹಾರವನ್ನು ಕುದುರಿಸಬೇಕಾಗುತ್ತದೆ. ಇದು ವ್ಯವಹಾರ ಧರ್ಮ. ಇದನ್ನು ಅರಿತು ಸರಿಯಾಗಿ ನಡೆದುಕೊಳ್ಳುವವರು ಫಲವನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಇದು ಒಂದು ಬಗೆಯ ಜಾಣ್ಮೆಯ ನಡೆ ಕೂಡ. ಈ ವಿಷಯವು ಸರಿಯಾಗಿ ಮನದಟ್ಟು ಮಾಡಲು ಕವಿಯು 'ಕೂಪ-ಕುಂಭ' ನ್ಯಾಯವನ್ನು ವಿವರಿಸುತ್ತಾನೆ. ಕೂಪ ಎಂದರೆ ಬಾವಿ, ಕುಂಭ ಎಂದರೆ ಕೊಡ. ಬಾವಿಯಿಂದ ನೀರನ್ನು ತೆಗೆಯಬೇಕಾದರೆ ಬಾವಿ ಹಗ್ಗದ ಕುಣಿಕೆಗೆ ಕೊಡವನ್ನು ಹಾಕಿ ಬಾವಿಯ ಒಳಗೆ ಇಳಿಬಿಡುತ್ತೇವೆ. ಕೊಡ ನೀರನ್ನು ತುಂಬಿಕೊಳ್ಳಬೇಕಾದರೆ ಒಂದು ನಿಯಮವಿದೆ. ಕೊಡ ಮೇಲ್ಮುಖವಾಗಿದ್ದರೂ ನೀರು ತುಂಬುವುದಿಲ್ಲ. ಕೊಡ ಬೋರಲಾಗಿದ್ದರೂ ನೀರು ತುಂಬುವುದಿಲ್ಲ. ಅರ್ಥಾತ್ ಸೆಟೆದು ನಿಂತರೂ ನೀರಿಲ್ಲ. ಪೂರ್ತಿ ತಗ್ಗಿದರೂ ನೀರಿಲ್ಲ. ಅರ್ಧ ಭಾಗಬೇಕು. ಆಗ ಕ್ರಮೇಣ ನೀರು ಹರಿದು ಕೊಡ ತುಂಬುತ್ತದೆ. ಇದೇ ನೀರು ತುಂಬಿಸುವ ಸರಿಯಾದ ಕ್ರಮ. ಈ ಕ್ರಮ ಮಾತ್ರ, ನೀರನ್ನು ನೀಡಬಲ್ಲದು. ಪ್ರಯತ್ನಶಾಲಿಯು ನೀರನ್ನು ಪಡೆದುಕೊಳ್ಳಲು ಸಮರ್ಥನಾಗುವುದು ಆಗ ಮಾತ್ರ. ಫಲವನ್ನು ಬಯಸುವವನು 'ಕೂಪ-ಕುಂಭ' ನ್ಯಾಯವನ್ನು ಅನುಸರಿಸಬೇಕು. ಆಗ ಫಲಪ್ರಾಪ್ತಿ ಶತಃಸಿದ್ಧ.


- (ಶ್ಲೋಕಸಾಗರ- ಸೋಂದಾ ಭಾಸ್ಕರ ಭಟ್)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top