ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಿಪಟೂರು ತಾಲ್ಲೂಕು ಘಟಕದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ತಿಪಟೂರು: ಬಸವಾದಿ ಪ್ರಮಥರು ಕಂಡ ಸಮ ಸಮಾಜದ ಕನಸು ನನಸಾಗಬೇಕಾದರೆ ಶರಣ ಸಾಹಿತ್ಯದ ಸಾರವನ್ನು ಅರಿಯಬೇಕಲ್ಲದೇ ಅವರು ರಚಿಸಿದ ವಚನಗಳಲ್ಲಿನ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕು ಆಗ ಮಾತ್ರ ನಮ್ಮ ಸಮಾಜ ಸುಸ್ಥಿರತೆಯಲ್ಲಿದ್ದು ಸಮ ಸಮಾಜವಾಗುತ್ತದೆ ಎಂದು ಉದಯೋನ್ಮುಖ ಸಾಹಿತಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಅಧ್ಯಕ್ಷೆ ಲತಾಮಣಿ ಎಂ. ಕೆ. ತುರುವೇಕೆರೆ ಅಭಿಪ್ರಾಯಪಟ್ಟರು.
ಅವರು ಶರಣ ಸಾಹಿತ್ಯ ಪರಿಷತ್ತು ತಿಪಟೂರು ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶರಣೆ ಶಿವಗಂಗಮ್ಮ, ಶರಣ ಪಿ. ಸಿ. ರಾಜಶೇಖರಯ್ಯನವರ ಸಂಸ್ಮರಣ ದತ್ತಿ ಉಪನ್ಯಾಸ ಕಾರ್ಯಕ್ರಮದ ಶರಣ ತತ್ವ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಶರಣರ ತತ್ವಗಳು, ಚಿಂತನೆಗಳು ಕೇವಲ ಉಪನ್ಯಾಸಕ್ಕಷ್ಟೇ ಮೀಸಲಾಗಿದೆ. ಇವುಗಳನ್ನು ಕೇಳುವವರು ಓದುವವರು ಅರ್ಥೈಸಿಕೊಳ್ಳುತ್ತಾರೆಯೇ ಹೊರತು ಅಳವಡಿಸಿಕೊಂಡು ಆಚರಿಸಿ ಅನುಸರಿಸುವುದಿಲ್ಲ. ಇದರಿಂದ ಬಸವಾದಿ ಶರಣರು ಸೇರಿದಂತೆ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಅನೇಕ ಸಮಾಜ ಸುಧಾರಕರು ಕಂಡ ಸಮ ಸಮಾಜದ ಕನಸು ಇನ್ನೂ ಕನಸಾಗಿಯೇ ಉಳಿದಿದೆ, ಆ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ನಡೆಯೋಣ, ಜಾತ್ಯತೀತ ಲಿಂಗಾತೀತ, ಧರ್ಮಾತೀತವಾಗಿ ಸಮಾಜವನ್ನು ಸುಸ್ಥಿರತೆಯತ್ತ ಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣ ಟಿ. ಎನ್. ಪರಮಶಿವಯ್ಯ, ಕೊಬ್ಬರಿ ವರ್ತಕರು, ತಿಪಟೂರು. ಅವರು ಮಾತನಾಡಿ ಇಂತಹ ದತ್ತಿ ಕಾರ್ಯಕ್ರಮಗಳು ಯಥೇಚ್ಛವಾಗಿ ನಡೆಯುವ ಮೂಲಕ ಶರಣ ಚಿಂತನೆಗಳನ್ನು ಮನೆಮನಗಳಿಗೂ ಮುಟ್ಟಿಸಬೇಕು ಎಂದು ಹೇಳಿದರು.
ತಿಪಟೂರಿನಲ್ಲಿ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ, ಆರಂಭದಲ್ಲಿ ಐದು ದತ್ತಿಗಳನ್ನು ಹೊಂದಿದ್ದ ಘಟಕ ಇಂದು ಇಪ್ಪತ್ತೆರಡು ದತ್ತಿಗಳನ್ನು ಹೊಂದಿದೆ ಎಂದರೆ ಅದಕ್ಕೆ ಕಾರಣ ಸಮರ್ಥ ಹಾಗೂ ದಕ್ಷ ಅಧ್ಯಕ್ಷ ಶರಣ ಪಿ. ಆರ್. ಗುರುಸ್ವಾಮಿಯವರು, ಅವರ ಚಾಕಚಕ್ಯತೆ ಹಾಗೂ ಸಂಘಟನಾ ಶೈಲಿ ಪ್ರಶಂಸನೀಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಿಪಟೂರು ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಶರಣ ಹೆಚ್. ಎಸ್. ಜಗದೀಶಯ್ಯ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ 21ನೇ ದತ್ತಿಯನ್ನು ನಿವೃತ್ತ ಮುಖ್ಯ ಶಿಕ್ಷಕ ಶರಣ ಎಸ್. ಕೆ. ಸಿದ್ದಪ್ಪ ದಂಪತಿಗಳು ಕಲ್ಲುಸಾದರಹಳ್ಳಿ, ಅರಸೀಕೆರೆ ತಾಲ್ಲೂಕು ಇವರು ನೀಡಿದರು.
ಕಾರ್ಯಕ್ರಮದಲ್ಲಿ ಶರಣ ಶಿವಗಂಗಪ್ಪನವರು ಪ್ರಾಸ್ತಾವಿಕ ನುಡಿ ನುಡಿದರು. ಶರಣ ಪಿ. ಆರ್. ಗುರುಸ್ವಾಮಿಯವರು ಸ್ವಾಗತಿಸಿದರು. ಶರಣ ದಿವಾಕರ್ ನಿರೂಪಿಸಿದರೆ, ಶರಣ ಟಿ. ಎ. ಗಂಗಾಧರ್ ವಂದಿಸಿದರು ಹಾಗೂ ಶರಣರಾದ ಡಿ. ಎಸ್. ಮರುಳಪ್ಪ, ಲೋಕೇಶ್ವರ, ಕೆ. ಎಂ. ರಾಜಣ್ಣ, ಎಂ. ಆರ್. ಸಂಗಮೇಶ್, ಲಿಂಗರಾಜು, ಗಂಗಾಧರ್, ಶರಣೆ ಸ್ವರ್ಣಗೌರಮ್ಮ ಹಾಗೂ ಪಿ ಕೆ ಸಿ ಕುಟುಂಬದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ