ನೆನಪಿನಾಳದಿಂದ: ಆರೋಗ್ಯದ ಸೀಕ್ರೆಟ್- ಪ್ರಕೃತಿ ಮೇಡಂ, ಸಂಸ್ಕೃತಿ ಮೇಡಂ ಪಾಠ ಅನುಸರಿಸಿ....!

Upayuktha
0



ಲಂಘನಂ ಪರಮೌಷಧಂ ಅಥವಾ ರೋಗಕ್ಕೆ ಉಪವಾಸವೇ ಮದ್ದು ಎಂಬುದು ಯಾರಾದರೂ ಹುಶಾರು ತಪ್ಪಿದಾಗ ಹೇಳುವ ಗಾದೆಮಾತು. ಪ್ರಾಣಿಪಕ್ಷಿಗಳೆಲ್ಲ ಅದನ್ನೇ ಮಾಡಿ ರೋಗ ಶಮನ ಮಾಡಿಕೊಳ್ಳುತ್ತವೆ. ಮೈ ಸರಿಯಾಗುವವರೆಗೆ ಅವು ಆಹಾರ ಸೇವನೆ ಮಾಡುವುದಿಲ್ಲವೆಂದು ಪ್ರಾಣಿಪ್ರೇಮಿಗಳು ಗಮನಿಸಿ ದಾಖಲಿಸಿದ್ದಾರೆ. ಆದ್ದರಿಂದ ಹೊಟ್ಟೆ ತುಂಬಾ ಉಂಡು ತಿಂದು ಮೈಕೈ ತುಂಬಿಕೊಂಡು ಮಕ್ಕಳು, ಮೊಮ್ಮಕ್ಕಳು ಬೆಳೆಯುತ್ತಿದ್ದಾರೆಂದು ಸಂಭ್ರಮ ಪಡುವ ಹಿರಿಯರೇ ಹುಷಾರ್‍‌...!


ವಾರಕ್ಕೊಂದೋ, ಎರಡೋ ದಿನ ಉಪವಾಸ ನಿಯತವಾಗಿ ಮಾಡುತ್ತಿದ್ದರೆ ಕಿರಿಯರಿಂದ ಹಿರಿಯರ ವರೆಗೂ ಆರೋಗ್ಯಕ್ಕೊಳ್ಳೆಯದು. ಪ್ರಧಾನಿ ಮೋದಿಯವರು ಬಿಡುವಿಲ್ಲದ ಅಮೇರಿಕಾ ಪ್ರವಾಸದ ದಿನಗಳಲ್ಲಿ ನವರಾತ್ರಿ ಉಪವಾಸದಲ್ಲಿದ್ದುದು- ಅಂದರೆ ಕೇವಲ ಬಿಸಿನೀರು ಕುಡಿದು ಚಟುವಟಿಕೆಯಿಂದಿದ್ದುದು ಜಗತ್ತನ್ನೇ ಚಕಿತಗೊಳಿಸಿದೆ. ಅಲ್ಲಿನ ವೈದ್ಯಕೀಯ ಪ್ರಪಂಚ ಈ ಬಗ್ಗೆ ಸಂಶೋಧನೆಗೆ ತೊಡಗಿದೆ.


'ಎ ಸೌಂಡ್ ಮೈಂಡ್ ಇನ್ ಹೆಲ್ತಿ ಬಾಡಿ' ಆಗಲು ಬಾಯಿಚಪಲ ಬಿಡಬೇಕು. ಅದಕ್ಕೆ ಮನೋಸ್ಥೈರ್ಯ ಸಾಕು. ಉಪವಾಸವೆಂಬುದು ಅನೇಕ ರೋಗರುಜಿನಗಳಿಗೆ ಸುಲಭ ವೆಚ್ಚದ, ಪರಿಣಾಮಕಾರೀ ಪ್ರಕೃತಿದತ್ತ ಪರಿಹಾರ. ಸರಳ, ತ್ವರಿತ ಹಾಗೂ ಅತ್ಯಂತ ಸಮರ್ಥ ದೇಹ ಶುದ್ಧೀಕರಣ ವಿಧಾನ. ಮನುಷ್ಯ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಅತಿಯಾಗಿ ಆಹಾರವೇನೂ ಬೇಡ. ಸಣ್ಣ ಪ್ರಮಾಣದ ಇನ್‌ಟೇಕ್ ಸಾಕು. ಇದು ಭಾರತೀಯ ಸಂಸ್ಕೃತಿ ಮೇಡಂ, ಪ್ರಕೃತಿ ಮೇಡಂನಿಂದ ಕಲಿತ ಅನುಭವ ಪಾಠ.


ನಮ್ಮ ಅನೇಕ ಯತಿಗಳು ದಿನಕ್ಕೆ ಗುಬ್ಬಚ್ಚಿ ತಿನ್ನುವಷ್ಟು ಆಹಾರ ಸೇವಿಸಿ ಚಟುವಟಿಕೆಯಿಂದ ಬದುಕುತ್ತಿಲ್ಲವೇನು! ಹಾಗೆಯೇ, ಹಿಮಾಲಯ ಪರ್ವತದಲ್ಲಿ ತಡೆಯಲಾರದ ಮಂಜುಗಡ್ಡೆ ಚಳಿಯ ನಡುವೆ ಕೇವಲ ಗಾಳಿ ಸೇವಿಸಿ, ಆರೋಗ್ಯವಂತ ದೇಹ ಕಾಪಾಡಿಕೊಂಡು ಸಾಧಕರುಗಳು ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಿದ್ದಾರೆಂದು ಅನೇಕರು ಹೋಗಿ, ಕಂಡು ಬರೆದ ಪುಸ್ತಕಗಳು ತಿಳಿಸಿವೆ. ಆದರೂ, ನಾವು ಬಹುತೇಕ ಮಂದಿ 'ಹಸಿವೇನಿಲ್ಲ' ಎಂದು ಕೊಂಡೇ ತುತ್ತಿನ ಚೀಲ ತುಂಬಿಸಿ ಕೊಳ್ಳುತ್ತಲಿರುತ್ತೇವೆ. ಅದಕ್ಕೆ ಹೊತ್ತಿಲ್ಲ, ಗೊತ್ತಿಲ್ಲ. ಅದು ನಮ್ಮ ದುರಂತ.


ನಮ್ಮ ಮನೆಯಲ್ಲೊಬ್ಬ ಹುಡುಗನಿದ್ದ. ಮುಂಜಾನೆಯೇ ಎದ್ದು ಅಕ್ಕನೊಂದಿಗೆ, ಅಜ್ಜಿಯೊಂದಿಗೆ, ಮನೆಯ ಇತರರೊಂದಿಗೆ ಮೂರು ಬಾರಿ ಬ್ರೇಕ್‌ಫಾಸ್ಟ್ ಮುಗಿಸಿ 'ಅಪ್ಪಾ, ಅಪ್ಪಾ, ಅಮ್ಮ ತಿಂಡಿಕೊಡಲ್ಲಾ...' ಎಂದು ದೂರಿತ್ತು ಅಳುತ್ತಿದ್ದ. ಅಪ್ಪ- ಅಮ್ಮನತ್ತ ತಿರುಗಿ 'ಏನೇ ಎಳೆ ಮಗುವಿಗೆ ಹೊತ್ತು, ಹೊತ್ತಿಗೆ ತಿನ್ನಲು ಕೊಡಲು ನಿನಗೇನೇ ಧಾಡಿ" ಎಂದು ಅಬ್ಬರಿಸಿದಾಗ "ಅಗ್ನಿಗೆ ಈಗಾಗಲೇ ಮೂರು ಬಾರಿ ತಿಂಡಿಯಾಗಿದೆ. ಇನ್ನು ನಿಮ್ಜೊತೆ ಮತ್ತೆ ತಿನ್ನಲು ಕೂರುತ್ತಾನೆ" ಎಂದು ಗೊಣಗಾಟದ ಉತ್ತರ ಬರುತ್ತಿತ್ತು. ಮುದ್ದು ಕುವರನನ್ನೇ ವಿಚಾರಿಸಿದಾಗ'' ಈಗ್ಲೆ ಇನ್ನೊಮ್ಮೆ ತಿಂಡಿ ತಿನ್ನದಿದ್ದರೆ, ಆಮೇಲೆ ನಿಂಜೊತೆ ತಿಂಡಿ ತಿನ್ನೋದಿಕ್ಕೆ ಹಸಿವಾಗಲ್ಲಾ..'' ಎಂದು ಮತ್ತೆ ಗೋಗರೆದು ಅಳುತ್ತಿದ್ದ. ಅವನ ಆಳು ಸುಮ್ಮನಾಗಿಸಲು ದೋಸೆಯೆರಡು ಹೊಟ್ಟೆಗೆ ಬೀಳಲೇ ಬೇಕಿತ್ತು.


ಅತಿಯಾದ ತಿನ್ನುವಿಕೆ ಹಿರಿಯರ ಮುದ್ದಿನಿಂದ ಬರುವ ಸಂಸ್ಕೃತಿ. ಹೊತ್ತು ಹೊತ್ತಿಗೆ ಹೊಟ್ಟೆಗೆ ಬೀಳುವಂತೆ, ಕ್ರಮಾಗತ ಉಪವಾಸವೂ ಮುಖ್ಯವೆಂಬುದನ್ನು ಮಕ್ಕಳಿಗೆ ಎಳವೆಯಿಂದಲೇ ಹೇಳಿಕೊಡುವ ನಮ್ಮ ಮನೆಯೊಳಗಣ ಸಂಸ್ಕೃತಿ ಈ ನಡುವೆ ನಶಿಸಿ ಹೋಗುತ್ತಿದೆ. ಇನ್ನು, ಉಪವಾಸವೆಂದರೆ ಶಿಕ್ಷೆ ಎಂ ಭಾವನೆ ಹುಟ್ಟದಿರುತ್ತದೆಯೇ? ಅನೇಕ ದಿನಗಳ ಕಾಲ ಉಪವಾಸ ಕೂತರೂ ಆಯುಸ್ಸು ಮುಗಿಯದೆ ಯಾರೂ ಸಾಯುವುದಿಲ್ಲವೆಂಬುದು ಸಾಬೀತಾಗಿದೆ. ಮನಸ್ವೀ ತಿನ್ನುವ ಹೊಟ್ಟೆಬಾಕರಿಗೇ ಯಮನ ಕರೆ ಬರುವುದು ಹೆಚ್ಚಂತೆ. ಏಕೆಂದರೆ ರುಚಿರುಚಿಯೆಂದು ಆಹಾರ ಮುಕ್ಕುವವರಿಗೆ ಕರೆಯದೇ ಸೀಕುಗಳು ಬರುತ್ತವೆ.


ಕೆಲವು ವರ್ಷಗಳ ಹಿಂದೆ ಅಮೇರಿಕಾದ ನಗರವೊಂದರಲ್ಲಿ ಅತಿಯಾದ ಹಿಮವರ್ಷದಲ್ಲಿ ಹೂತುಹೋಗಿದ್ದ ಕಾರೊಂದನ್ನು 48 ದಿನಗಳ ಬಳಿಕ ಹೊರತೆಗೆಯಲಾಯಿತು. ಅದರೊಳಗೆ ವ್ಯಕ್ತಿಯೊಬ್ಬ ಮೂರ್ಛೆ ತಪ್ಪಿದ್ದರೂ, ಉಸಿರಾಡುತ್ತಲಿದ್ದ. ಆತನಿಗೆ ತಕ್ಷಣ ಚಿಕಿತ್ಸೆ ಕೊಡಿಸಿ ಬಚಾವು ಮಾಡಲಾಯಿತು. ಆಗ ಆತ ಹೇಳಿದ್ದೇನೆಂದರೆ, ಎಷ್ಟೋ ದಿನಗಳ ಹಿಂದೆ ಕಾರಿನಲ್ಲಿ ಕೂತು ಹೊರಡುವಷ್ಟರಲ್ಲಿ ವಿಪರೀತ ಹಿಮಪಾತವಾಗಿ ಕಾರಿನೊಂದಿಗೆ ನಾನು ಅಲ್ಲೇ ಉಳಿದುಕೊಂಡೆ. ಯಾವುದೇ ಸಹಾಯ ಬರಲಿಲ್ಲ. ಮೊಬೈಲ್ ಫೋನೂ ಬಳಿಯಿರಲಿಲ್ಲ. ನಾನಾಗಿಯೇ ಹೊರಬರಲು ಸಾಧ್ಯವಾಗಲಿಲ್ಲ. ಕಾರಿನ ಮೇಲೆ ಬಿದ್ದ ಹಿಮವು ಕಾರಿನೊಳಗೆ ನೀರಿನ ಪಸೆಯಾಗಿ ಜಿನುಗುತ್ತಿದ್ದುದನ್ನು ನೆಕ್ಕಿ ನೆಕ್ಕಿ ಬದುಕಿ ಉಳಿದುಕೊಂಡೆನು ಎಂದು ಕಥೆ ಹೇಳಿದಾಗ ನಂಬಲು ಸುತ್ತಲಿದ್ದವರಿಗೆ ಕಷ್ಟವಾಯಿತು. ಆದರೂ ಅದು ಕಣ್ಣೆದುರು ಕಂಡು, ಪರಾಂಬರಿಸಿದಾಗಲೂ ಸತ್ಯವಾಗಿಯೇ ತೋರಿತು.


ಹಾಗಾದರೆ ಉಪವಾಸ ಎಂದರೆ ಉಸಿದುಕೊಂಡು ಕೂರುವುದು ಎಂದಲ್ಲ. ದೇಹ ದಂಡನೆಯಲ್ಲ. ಉಪವಾಸ ರಚನಾತ್ಮಕವಾಗಿರಬೇಕು. ಅದನ್ನು ಅನುಸರಿಸಿದರೆ ಜಠರ, ಕರುಳು, ಯಕೃತ್ತು, ಇತ್ಯಾದಿ ಜೀರ್ಣಾಂಗಗಳು ಶುದ್ಧೀಕರಿಸಲ್ಪಡುತ್ತವೆ ಹಾಗೂ ಮೂತ್ರಾಂಗ ಮತ್ತು ಪುಪ್ಪುಸ ಮುಂತಾದವುಗಳಿಗೆ ವಿರಾಮ ದೊರಕುತ್ತದೆ. ಜೊತೆಗೆ ಬರುವ ಬೋನಸ್ಸು ಎಂದರೆ ಮೈತೂಕ ಹದವಾಗಿ ಕುಸಿಯುತ್ತದೆ. ಹಾಗೆಯೇ ರಕ್ತದೊತ್ತಡ, ರಕ್ತದೊಳಗಣ ಕೊಬ್ಬಿನಂಶ, ಸಕ್ಕರೆಯಂಶ ಇಂತಹ ಅನಗತ್ಯ ವಸ್ತುಗಳ ಶೇಖರಣೆಯೂ ಇಳಿದು ಅನುಕೂಲವೇ ಆಗುತ್ತದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top