ಎನ್‌ಎಂಐಟಿ ಬೆಂಗಳೂರು: ರಾಷ್ಟ್ರ ಮಟ್ಟದ ಐಇಇಇ ಓಪನ್ ಹೌಸ್ ಪ್ರಾಜೆಕ್ಟ್ ಎಕ್ಸ್‌ಪೋ-2025 ಉದ್ಘಾಟನೆ

Upayuktha
0


ಬೆಂಗಳೂರು: 'ಪರಸ್ಪರ ಸಹಯೋಗ, ವಿದ್ವತ್ ಕುತೂಹಲ ಹಾಗೂ ಎಲ್ಲರೊಡನೆ ಹೊಂದಿಕೊಳ್ಳುವ ಸ್ವಭಾವಗಳನ್ನು ನಮ್ಮ ಯುವ ಸಂಶೋಧಕರು ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಬೇಕು. ಆಗ ಮತ್ತೊಬ್ಬರಿಂದ ಕಲಿಯುವುದು, ಕುತೂಹಲದಿಂದ ಹುಟ್ಟಿದ ಕನಸುಗಳ ಬೆನ್ನು ಹಿಡಿಯುವುದು ಮತ್ತು ಪರಿಸ್ಥಿತಿ ಯಾವುದೇ ಇರಲಿ, ಅಲ್ಲಿ ನಮ್ಮನ್ನು ನಾವು ಒಗ್ಗಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಇದು ತಂತ್ರಜ್ಞರ ಜೀವನದಲ್ಲಿ ಅತ್ಯವಶ್ಯ, ಏಕೆಂದರೆ, ನಮ್ಮ ತಂತ್ರಜ್ಞರು, ಸಾಮಾನ್ಯರ ಬದುಕಿನ ಅನೇಕ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಸುಲಭ ಪರಿಹಾರವನ್ನು ತಮ್ಮ ಅನ್ವೇಷಣೆಗಳ ಮೂಲಕ ಕಂಡುಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಕೆಲವೊಮ್ಮೆ ಅವರು ವಿಫಲಗೊಳ್ಳಬಹುದು. ಆದರೆ ಪ್ರತಿ ವೈಫಲ್ಯ ಯಶಸ್ಸಿನ ಶಿಖರವೇರಲು ನೆರವಾಗುವ ಮೆಟ್ಟಿಲು ಎಂಬುದನ್ನು ಮರೆಯಬಾರದು' ಎಂದು ಬೋಯಿಂಗ್ ಇಂಡಿಯಾದ ಮುಖ್ಯ ಇಂಜಿನಿಯರ್ ನೇಹಾ ವಾನಿ ನುಡಿದರು.


ನಮ್ಮ ಅನ್ವೇಷಕರಿಗೆ ಜೀವನವೆನ್ನುವುದು ನಿರಂತರ ಪಯಣ. ಈ ರೋಚಕ ಪಯಣವನ್ನು ಸಂಭ್ರಮದಿಂದ ಅವರು ಆಲಂಗಿಸಿಕೊಳ್ಳಬೇಕು. ಆಗ ನಮ್ಮ ಭಾರತ, ತಂತ್ರಜ್ಞಾನ ಕ್ಷೇತ್ರದಲ್ಲಿ ನಿಜಕ್ಕೂ ಇಡೀ ವಿಶ್ವದಲ್ಲಿಯೇ ಅಗ್ರಸ್ಥಾನ ಪಡೆಯುತ್ತದೆ ಎಂದು ಅವರು ತಿಳಿಸಿದರು.


ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಐ.ಇ.ಇ.ಇ ಬೆಂಗಳೂರು ಶಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ 'ಕೌಶಲ್ಯ: ಓಪನ್ ಹೌಸ್ ಪ್ರಾಜೆಕ್ಟ್ ಎಕ್ಸ್ ಪೋ-2025' ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಈ ತೆರೆನ ಎಕ್ಸ್ ಪೋಗಳನ್ನು ಆಯೋಜಿಸುವ ಸಲುವಾಗಿ ವಿಶ್ವದಾದ್ಯಂತ ಗುರುತಿಸಲ್ಪಟ್ಟ 32 ಪೈಲಟ್ ಕಾಲೇಜುಗಳಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಕೂಡ ಒಂದು. ಪ್ರಸ್ತುತ ಎಕ್ಸ್‌ಪೋದಲ್ಲಿ ಒಟ್ಟು 330 ಅನ್ವೇಷಣಾ ಪ್ರಾಜೆಕ್ಟ್‌ಗಳು ಪ್ರಾತ್ಯಕ್ಷಿಕೆಗಾಗಿ ಸ್ವೀಕೃತವಾಗಿದ್ದವು. ಅತ್ಯುತ್ತಮ ಸಾಧನೆ ಮಾಡುವ ಪ್ರತಿ ವಿಭಾಗದ ಎರಡು ಅನ್ವೇಷಣೆಗಳಿಗೆ ನಗದು ಬಹುಮಾನ ಕೂಡ ನೀಡಲಾಗುತ್ತದೆ.


ಸಮಾರಂಭದ ಮುಖ್ಯ ಅತಿಥಿಗಳಾಗಿ ನೋಕಿಯಾದ ವಾಣಿಜ್ಯಕರಣ ಘಟಕದ ಮುಖ್ಯಸ್ಥ ಜಿ. ಸುನಿಲ್ ಕುಮಾರ್ ಅವರು ಪಾಲ್ಗೊಂಡಿದ್ದರು.


ಅವರು ಮಾತನಾಡುತ್ತ, 'ನಾವು ಮಾಡುವ ಸಂಶೋಧನೆಗಳು ಉತ್ಪನ್ನಗಳಾಗಿ ಹೊರಬಂದಾಗ ಈ ಉತ್ಪನ್ನಗಳು ಪರಿಸರ ಸ್ನೇಹಿಯಾಗಿರಬೇಕೆಂಬುದನ್ನು ಮರೆಯಬಾರದು. ಅಲ್ಲದೆ, ಔದ್ಯಮಿಕ ಪ್ರಗತಿ ಮತ್ತು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಳು ನಮ್ಮೆಲ್ಲರ ಅನ್ವೇಷಣೆಗಳ ಹಿಂದಣ ಪ್ರೇರಣ ಶಕ್ತಿಗಳಾಗಿರಬೇಕು. ನಮ್ಮ ದೇಶದಲ್ಲಿ ಅನಾದಿ ಕಾಲದಲ್ಲಿಯೇ ತಂತ್ರಜ್ಞಾನದ ಸಮರ್ಥ ಹಾಗೂ ಸಮರ್ಪಕ ಅಳವಡಿಕೆಯಾಗಿದೆ. ಈ ಪುರಾತನ ಜ್ಞಾನಸಂಪತ್ತನ್ನು ಮತ್ತೊಮ್ಮೆ ಆಧುನಿಕ ಸಂದರ್ಭಗಳಲ್ಲಿ ಮತ್ತಷ್ಟು ಶ್ರೀಮಂತಗೊಳಿಸಲು ಅನ್ವೇಷಣೆಗಳು ನಡೆಯಬೇಕು', ಎಂದು ನುಡಿದರು.




ಹರ್ಮಾನ್ ಇಂಟರ್‌ನ್ಯಾಶನಲ್‌ನ ಡಾ. ಅನೀಶ್ ಚೆರಿಯನ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ, 'ಈಗ ಗಣಕೀಕರಣ ಹಾಗೂ ತಂತ್ರಾಂಶಗಳು ನಮ್ಮೆಲ್ಲರ ಬದುಕನ್ನೂ ಸುಲಭಗೊಳಿಸಿವೆ. ನಾವು ಬಳಸುವ ವಾಹನಗಳಿಂದ ಹಿಡಿದು ಗಗನಯಾತ್ರೆಯ ನೌಕೆಗಳ ತನಕ ಈ ಪ್ರಕ್ರಿಯೆ ಅಳವಡಿಕೆಯಾಗಿದೆ. ಮಹತ್ವಾಕಾಂಕ್ಷೆಯಿಂದ ಮುಂದಡಿಯಿಡುತ್ತಿರುವ ನಮ್ಮ ಯುವ ತಂತ್ರಜ್ಞರು ಈ ನಿಟ್ಟಿನಲ್ಲಿ ಬಹಳಷ್ಟು ಪ್ರಗತಿ ಸಾಧಿಸುತ್ತಾರೆ ಎಂಬ ಭರವಸೆ ನನಗಿದೆ' ಎಂದು ನಿವೇದಿಸಿದರು.


ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಿ.ಡಿ. ಪರಮೇಶಾಚಾರಿ ಎಕ್ಸ್ ಪೋದ ಧ್ಯೇಯೋದ್ದೇಶಗಳ ಬಗ್ಗೆ ಸ್ಪಷ್ಟನೆ ನೀಡಿದರು.


ಸಮಾರಂಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ; ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್: ಸಮಾರಂಭದ ಸಂಯೋಜಕರು, ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top