ಜಾತಿಯಿಂದಲೇ ದೇಶದ ಅಭಿವೃದ್ಧಿಗೆ ತಡೆಗೋಡೆ: ದ್ವಾರಕಾನಾಥ್

Upayuktha
0

 


ಮಂಗಳೂರು: ಭಾರತ ಜಾತಿಗಳ ದೇಶ. ಜಾತಿಯೇ ಯಾವುದೇ ಅಭಿವೃದ್ಧಿಗೆ ತಡೆಗೋಡೆಯಾಗಿದೆ. ಜಾತಿಯನ್ನೇ ಮೇಲ್ವರ್ಗದವರು ಸಾಮಾಜಿಕ ಬಂಡವಾಳವನ್ನಾಗಿಸಿಕೊಂಡು ಮೇಲ್ಮಟ್ಟಕ್ಕೆ ಹೋಗಲು ಸಾಧ್ಯ. ಆದರೆ ಕೆಳ ಜಾತಿಯವರು ಕೆಳಮಟ್ಟದಲ್ಲೇ ಇಂದಿಗೂ ಇರುವುದು ವಿಷಾದನೀಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ. ಎಸ್. ದ್ವಾರಕಾನಾಥ್ ಅವರು ಹೇಳಿದರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠ, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಬೆಂಗಳೂರು ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ ಕುರಿತು ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 


ಇಂದಿನ ರೋಗಗ್ರಸ್ತ ಸಮಾಜಕ್ಕೆ ಸಾವಿರಾರು ಅಂಬೇಡ್ಕರ್ ಅವರ ಅಗತ್ಯತೆ ಇದೆ. ಸಂವಿಧಾನದ ಕಾರಣದಿಂದಾಗಿ ಇಂದು ಎಲ್ಲರೂ ಸಮಾನತೆ, ಸ್ವಾತಂತ್ರ್ಯ ಹಾಗೂ ಬ್ರಾತೃತ್ವವನ್ನು ಅನುಭವಿಸಲು ಸಾಧ್ಯವಾಗುತ್ತಿದೆ. ಅಲ್ಲದೇ, ಒಂದೇ ವೇದಿಕೆಯಲ್ಲಿ ಎಲ್ಲರೂ ಜೊತೆಯಾಗಿ ಕೂರಲೂ ಸಾಧ್ಯವಾಗುತ್ತದೆ. ಜಗತ್ತಿಗೇ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಅವರು ಕೇವಲ ದಲಿತ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಸಮಾಜಕ್ಕೆ ಪ್ರಸ್ತುತವಾಗಿದ್ದಾರೆ ಎಂದರು. 


ಅಂಬೇಡ್ಕರ್ ಅವರನ್ನು ನಾನಾ ದೃಷ್ಟಿಕೋನಗಳಿಂದ ವಿಶ್ಲೇಷಣೆ ಮಾಡಲು ಸಾಧ್ಯವಿದೆ. ಅವರು ಕೊಡುಗೆ ನೀಡದ ಕೇತ್ರವೇ ಇಲ್ಲ. ಅವರನ್ನು ಎಷ್ಟು ಅಧ್ಯಯನ ನಡೆಸಿದರೂ ಮುಗಿಯದ ಅಕ್ಷಯ ಪಾತ್ರೆ ಇದ್ದ ಹಾಗೆ. ದೇಶದಲ್ಲಿ ತಳಸಮುದಾಯಗಳಿಗೆ ಪ್ರಾತಿನಿಧ್ಯದ ಅಗತ್ಯವಿದೆ. ಹಾಗಾಗಿ ಇಂದಿಗೂ ಮೀಸಲಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲಾಗಿದೆ. ಅಂಬೇಡ್ಕರ್ ಒಬ್ಬ ವಾಸ್ತವವಾದಿ. ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ನೀಡಿದವರು. ಹಾಗಾಗಿ ಎಂದೆಂದಿಗೂ ಅವರು ಪ್ರಸ್ತುತರಾಗಿಯೇ ಉಳಿಯುತ್ತಾರೆ ಎಂದು ಹೇಳಿದರು. 


ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ರಾಜು ಮೊಗವೀರ, ದೇಶದಲ್ಲಿ ಸಂವಿಧಾನ ಜಾರಿಯಾಗಿ ಇಷ್ಟು ವರ್ಷ ಕಳೆದರೂ ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರೇ ಆದರೆ ಸಮಾನತೆಯನ್ನು ವಾಸ್ತವಿಕವಾಗಿ ಸಾಧಿಸಲು ಸಾಧ್ಯವಾಗಿಲ್ಲ. ಜಾತಿ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಶಿಕ್ಷಣ ಮತ್ತು ಉನ್ನತ ಚಿಂತನೆಗಳ ಮೂಲಕ ಸಮಾನತೆ ಸಾಧಿಸುವ ಸಾಧ್ಯವಿದೆ. ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡುತ್ತಿದ್ದರೂ ಅದನ್ನು ಸಶಕ್ತವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಸಮಾಜದಲ್ಲಿ ಧ್ವನಿ ರಹಿತರಿಗೆ ಧ್ವನಿಯಾಗಿ ನಿಂತವರು ಅಂಬೇಡ್ಕರ್. ಸಾವಿರಾರು ಕುಟುಂಬಗಳಿಗೆ ನ್ಯಾಯ ಒದಗಿಸಿದ ಅವರ ಚಿಂತನೆಗಳು ಇಂದಿಗೂ ಜೀವಂತವಾಗಿವೆ. ಇಂದು ಯುವ ಜನತೆ ತಮ್ಮ ವೃತ್ತಿ ಧರ್ಮ ಮರೆತು ನಡೆಯುತ್ತಿರುವ ಈ ಹೊತ್ತಿನಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಖಾಸಗೀಕರಣದ ವಿರುದ್ಧ ರಾಷ್ಟ್ರೀಕರಣದ ಪರವಾಗಿ ಅಂದಿನ ಕಾಲದಲ್ಲೇ ಅಂಬೇಡ್ಕರ್ ಅವರು ತಮ್ಮ ಧ್ವನಿ ಎತ್ತಿದ್ದರು. ಆದರೆ ಇಂದು ದೇಶದಲ್ಲಿ ಖಾಸಗೀಕರಣವೇ ಮನೆ ಮಾತಾಗಿರುವುದು ವಿಷಾದನೀಯ ಎಂದರು. 


ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ವಿಶ್ವನಾಥ್, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಾಮಕೃಷ್ಣ ಬಿ.ಎಂ. ಸೇರಿದಂತೆ ನಾನಾ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. 



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top