ಉಡುಪಿ: ಹುಟ್ಟುವಾಗಲೇ ನಾವೆಲ್ಲ ದೇವ, ಪಿತೃ, ಋಷಿ, ಮನುಷ್ಯ ಹಾಗೂ ಭೂತ ಋಣಗಳೆಂಬ 5 ಬಗೆಯ ಋಣಗಳನ್ನು ಹೊತ್ತುಕೊಂಡೇ ಬರುತ್ತೇವೆ. ಅವುಗಳಲ್ಲಿ ದೇವ ಋಣ ಬಹಳ ದೊಡ್ಡದು. ಹುಟ್ಟಿದ ಮೇಲೆ ವಾಸಿಸಲು ಭೂಮಿ, ತಿನ್ನಲು ಆಹಾರ ತೊಡಲು ಬಟ್ಟೆ ಹೀಗೆ ಯಾವೊಂದೂ ನಾವು ಸೃಷ್ಟಿಸಿದ್ದಲ್ಲ. ಖಾಲಿ ಕೈಲಿ ಬಂದು ಖಾಲಿ ಕೈಯಲ್ಲಿ ಹೋಗುತ್ತೇವೆ. ಹಾಗಿರುವಾಗ ಈ ಭೂಮಿ ಈ ಆಸ್ತಿ ಆ ಹಣ ಇದೆಲ್ಲ ನಮ್ಮದು ನಮ್ಮದು ಅಂತ ಹಾರಾಡುತ್ತೇವೆ. ಆದರೆ ಯಾವುದು ನಾವು ಸೃಷ್ಟಿಸಿದ್ದಲ್ಲವೋ ಅದನ್ನು ನಮ್ಮದು ಎಂದು ಹಕ್ಕು ಸ್ಥಾಪಿಸುವ ಅಧಿಕಾರವೂ ನಮಗಿಲ್ಲ. ಒಂದು ದೈವೀ ಶಕ್ತಿಯ ಕೃಪೆಯಿಂದ ನಮಗೆ ಇದು ದೊರೆತಿದೆ. ಹಾಗಿರುವಾಗ ಆ ದೈವೀ ಋಣದ ಎಚ್ಚರ ನಮಗೆ ಜೀವನಪೂರ್ತಿ ಇರಬೇಕು. ನಾವೇನು ಬೆಳೆಯುತ್ತೇವೆ, ಸಂಪಾದಿಸುತ್ತೇವೆ, ಉಣ್ಣುತ್ತೇವೆ ತೊಡುತ್ತೇವೆ ಅನುಭವಿಸುತ್ತೇವೆ. ಎಲ್ಲವೂ ಹೇ ಭಗವಂತಾ ನನ್ನದು ಏನಿಲ್ಲವೋ ಸ್ವಾಮೀ ನಿನ್ನದೇ ಇದೆಲ್ಲವೂ ಅಂತ ದೇವರಿಗೆ ಅರ್ಪಿಸಿ ಅನುಭವಿಸಿದೆವು ಎಂದಾದರೆ ನಾವು ನಮ್ಮದು ಎಂಬ ಅಹಂಕಾರ ಭಾವ ನಮಗೆ ಬರಲು ಅವಕಾಶ ಇರುವುದಿಲ್ಲ. ಆಗ ನಮಗೆ ಭಗವಂತನ ಅನುಗ್ರಹ ದೊರೆತು ಸಾರ್ಥಕ ಜೀವನ ಸಾಧ್ಯವಾಗುತ್ತದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂದೇಶ ನೀಡಿದರು.
ಪೇಜಾವರ ಮಠದ ಅಧೀನದ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸಂಜೆ ಜರುಗಿದ ವಸಂತೋತ್ಸವ ಕಾರ್ಯಕ್ರಮದಲ್ಲಿ ಪಟ್ಟದ ದೇವರ ಪೂಜೆ ನೆರವೇರಿಸಿ ನೂರಾರು ಭಕ್ತರಿಗೆ ವಸಂತೋತ್ಸವ ಸಂದೇಶ ನೀಡಿದರು.
ಋತುಗಳಲ್ಲಿ ತಾನು ವಸಂತ ಎಂದು ಸ್ವಯಂ ಕೃಷ್ಣನೇ ಸಾರಿದ್ದಾನೆ. ಸಮೃದ್ಧಿ ತುಂಬಿರುವ ಈ ಹೊತ್ತಲ್ಲಿ ಪ್ರಕೃತಿಯಿಂದ ನಾವು ಪಡೆವ ಹಣ್ಣು ಹಂಪಲುಗಳನ್ನು ದೇವರಿಗೆ ಅರ್ಪಿಸಿ ಸ್ವೀಕರಿಸುವುದೇ ವಸಂತೋತ್ಸವದ ಸಾರವಾಗಿದೆ ಎಂದರು.
ಮಠದ ಅಧಿಕಾರಿಗಳು ಅನೇಕ ವಿದ್ವಾಂಸರು, ವಿವಿಧ ಕ್ಷೇತ್ರಗಳ ಗಣ್ಯರು ನೂರಾರು ಭಕ್ತರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ