ಒಂದು ಸುವಿಚಾರ ಪುಸ್ತಕದಲ್ಲಿ ಓದಿದ ನೆನಪು. 'ದೇವರ ಮಕ್ಕಳಲ್ಲಿ ಮೂರು ವರ್ಗವಂತೆ. 'ಸುರರು, ನರರು, ಅಸುರರು. ದೇವತೆಗಳ ಬಗ್ಗೆ ನಮಗೆ ಗೊತ್ತೇ ಇದೆ. ಉತ್ತಮೋತ್ತಮರು, ಜೀವಿಗಳಿಗೆ ಸಹಕರಿಸುವವರು, ಪ್ರಕೃತಿಯಲ್ಲೇ ಅಡಗಿರುವವರು, ನೆಲ, ಜಲ, ವಾಯುವಿನಲ್ಲಿದ್ದು ಕಣ್ಣಿಗೆ ಕಾಣಿಸದವರು. ಅತ್ಯಂತ ಮೃದುಭಾಷಿಗಳಂತೆ, ಹಾಗೆಂದು ಮೇಲೇರಿ ಬಂದವರನ್ನು ವಿಚಾರಿಸದೆ ಬಿಡರು. ಇವರಿಂದ ಯಾರಿಗೂ ತೊಂದರೆಯಿಲ್ಲ. ಮೌಲ್ಯಗಳನ್ನು ತುಂಬಿಕೊಂಡವರು. ನಮ್ಮಲ್ಲೂ ಬೆರಳೆಣಿಕೆಯ ಮಂದಿ ಈ ವರ್ಗದವರು ಇದ್ದಾರೆ. 'ಮನುಷ್ಯರನ್ನು' ನರರು ಎಂದು ಬಿಂಬಿಸಬಹುದು.
ಅತ್ತ ದೇವತೆಗಳ ಗುಣವೂ ಇಲ್ಲ, ಇತ್ತ ರಾಕ್ಷಸರಷ್ಟು ಕೆಟ್ಟವರಲ್ಲ. ಎರಡೂ ಬುದ್ಧಿಯಲ್ಲಿರುವ ಜಾಣ್ಮೆಯನ್ನು ಬಳಸಿಕೊಂಡು ತಮ್ಮ ಕೆಲಸ ಮಾಡುವವರು. ಕೆಲವೊಮ್ಮೆ ಬಹಳ ಒಳ್ಳೆಯವರಂತೆ ನಟಿಸುವರು. ಸಮಯ, ಸಂದರ್ಭವರಿತು ವ್ಯವಹಾರ ಮಾಡುವ ಜಾಣರು. ಮಾತುಗಳಲ್ಲಿ ಪರರ ನೋಯಿಸಿ ತೃಪ್ತಿ ಪಡುವವರೂ ಇದ್ದಾರೆ. ಇಂಥವರೆದುರು ನಾವು ಯೋಚಿಸಿ ಮಾತನಾಡಬೇಕು. ಇಲ್ಲದಿರೆ 'ನಾವು ತೋಡಿದ ಹೊಂಡಕ್ಕೆ ನಾವೇ ಬೀಳಬೇಕಾಗಬಹುದು'. ಅಸುರರು (ರಾಕ್ಷಸ ಗುಣದವರು). ಕಣ್ಣಲ್ಲಿ ರಕ್ತವಿಲ್ಲದವರೆಂದು ಹೇಳುವುದಿದೆ. ಸುಳ್ಳುಗಳ ಸರಮಾಲೆ ಇವರಲ್ಲಿ ಹೆಚ್ಚು. ಅರಿಷಡ್ವರ್ಗಗಳು ರಕ್ತದಲ್ಲಿಯೇ ಬೆರೆತಿದೆ. ಪಾಪ-ಪುಣ್ಯಗಳ ಪರಿವೆ ಇಲ್ಲದವರು. ಜಗಳ, ಕೋಪ, ಮನಸ್ತಾಪ, ಮತ್ಸರ ಇವರಲ್ಲಿ ಕಾಣಬಹುದು. ಅನ್ಯರಿಗೆ ಹಿಂಸೆ ನೀಡುವುದೇ ಇವರ ಅಸ್ತ್ರ. ಬೇರೆಯವರನ್ನು ಗದರಿಸಿ ತಮ್ಮ ಬದುಕನ್ನು ಕಟ್ಟುವವರು.
ಒಂದೇ ರೀತಿಯ ವಿದ್ಯೆ ಕಲಿತರೂ ತಮ್ಮ ಹುಟ್ಟುಗುಣವನ್ನು ಬಿಡದವರು ಈ ಮೂರೂ ವರ್ಗದವರನ್ನು ನಾವು ಕಾಣಬಹುದು. ಈ ಎಲ್ಲದರ ನಡುವೆಯೂ 'ಧರ್ಮಾತ್ಮರ'ನ್ನು, 'ದೇವರಂಥ ಮನುಷ್ಯರ'ನ್ನು, 'ಮಹಾತ್ಮಾ' ಎನಿಸಿಕೊಂಡವರನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಆದಷ್ಟೂ ಸಮಾಜದಲ್ಲಿ ಉತ್ತಮ ಗುಣಧರ್ಮಗಳಿಂದ ಬಾಳೋಣ.
- ರತ್ನಾ ಕೆ ಭಟ್
ಸಂಗ್ರಹ ಆಕರ: ಬದುಕು ಬಂಗಾರ-(ಬೃಹದಾರಣ್ಯಕ)
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ