ರೈತರು ಭತ್ತ ಬೆಳೆಗೆ ವಿದಾಯ ಹೇಳಿದರೆ ಅದು ಸೈನಿಕರು ವೃತ್ತಿಗೆ ರಾಜೀನಾಮೆ ಕೊಟ್ಟಂತೆ!

Upayuktha
0


ನ್ನೇನು ಯುದ್ಧ ಪ್ರಾರಂಭವಾಗುತ್ತದೆ ಎನ್ನುವಾಗ ಪಾಕಿಸ್ತಾನದಲ್ಲಿ 5,000 ಸೈನಿಕರು "ನಾವು ಯುದ್ದ ಮಾಡುವ ಪರಿಸ್ಥಿತಿಯಲ್ಲಿಲ್ಲ, ಯುದ್ಧ ಮಾಡುವುದಿಲ್ಲ" ಅಂತ ಹಿಂದೆ ಸರಿದರಂತೆ.  


ಸೈನಿಕರು ಯುದ್ಧ ಮಾಡುವುದಿಲ್ಲ ಅಂತ ಹಿಂದೆ ಸರಿದರೆ ಒಂದು ದೇಶಕ್ಕೆ ಹೇಗೆ ಅಪಾಯವೋ, ಅದೇ ರೀತಿ ಅನ್ನ ಬೆಳೆಯುತ್ತಿರುವ ರೈತರು "ನಾವು ಅನ್ನ ಬೆಳೆಯುವುದಿಲ್ಲ, ಅನ್ನ ಬೆಳೆಯುವ ಪರಿಸ್ಥಿತಿ ಯಲ್ಲಿಲ್ಲ"  ಅಂತ ಹಿಂದೆ ಸರಿದರೆ ಅದೂ ದೇಶಕ್ಕೆ ಅಷ್ಟೇ ಅಪಾಯ.  


ಕೃಷಿತೋ ನಾಸ್ತಿ ದುರ್ಭಿಕ್ಷಂ... ಎನ್ನುವಂತೆ, 'ಭತ್ತ ಬೆಳೆಯವ ಕೃಷಿ' ಇಲ್ಲದೆ ಹೋದರೆ ಅನ್ನದ ಭಿಕ್ಷೆ ಬೇಡುವ ಪರಿಸ್ಥಿತಿ ಬರಿ ಕೃಷಿಕರಿಗೆ ಮಾತ್ರ ಅಲ್ಲ, ಊಟ ಮಾಡುವ ಎಲ್ಲರಿಗೂ ಉಂಟಾಗಬಹುದು.    


ರಕ್ಷಣೆಯಲ್ಲಿರುವ ಸೈನಿಕರ, ಅನ್ನ ಬೆಳೆಯುವ ಕೃಷಿಕರ ಬೆವರಿನ ಪರಿಶ್ರಮ ಮತ್ತು ಅವರುಗಳ ತೊಡಗಿಸಿಕೊಳ್ಳುವಿಕೆಯಿಂದ ಸಮಸ್ತ ದೇಶವಾಸಿಗಳು ನೆಮ್ಮದಿಯಿಂದ ಬದುಕು ಕಾಣಲು ಸಾಧ್ಯ. ಅನ್ನದ ತಟ್ಟೆಯೇ ಬರಿದಾದರೆ? ಬೋರಲಾದರೆ?


ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ನಾಗಲಾಪುರದಲ್ಲಿ ಕಾಟಿಗಳ (ಕಾಡುಕೋಣ, ಕಾಡೆಮ್ಮೆ) ಕಾಟದಿಂದಾಗಿ ಭತ್ತ ಬೆಳೆಯುವುದಕ್ಕೆ ರೈತರು ವಿದಾಯ ಹೇಳುತ್ತಿದ್ದಾರೆ ಎನ್ನುವ ಆಘಾತಕಾರಿ ಸುದ್ಧಿ ಪತ್ರಿಕೆಗಳಲ್ಲಿ ಬರುತ್ತಿದೆ.  ಕೊಪ್ಪದ ನಾಗಲಾಪುರದಲ್ಲಿ ಕಾಟಿಗಳ ಕಾಟಕ್ಕೆ ಭತ್ತಕ್ಕೆ ವಿದಾಯ ಎನ್ನುವ ವಿಚಾರ ಕೇವಲ ಕೊಪ್ಪದ ನಾಗಲಾಪುರದ ರೈತರಿಗೆ ಸೀಮಿತವಾದ ಸಮಸ್ಯೆಯಲ್ಲ. ಇಡೀ ಮಲೆನಾಡು, ಕರಾವಳಿಯ ಎಲ್ಲಾ ಕಡೆ ಕಾಟಿ, ಕಾಡಾನೆ, ಕಾಡು ಹಂದಿ, ಮಂಗ, ಅಳಿಲು ಮತ್ತು ಭತ್ತದ ಗದ್ದೆಗೆ ತೀವ್ರವಾಗಿ ಬಾಧಿಸುವ ರೋಗಗಳಿಂದಾಗಿ, ಕೃಷಿ ಸೈನಿಕರು ಭತ್ತ ಬೆಳೆಗೆ ವಿದಾಯ ಹೇಳುತ್ತಿದ್ದಾರೆ. ಈ ವಿಚಾರ ಸುದ್ಧಿಯಾಗುತ್ತಿದ್ದರೂ ಗಂಭೀರತೆ ಪಡೆಯುತ್ತಿಲ್ಲ.  


ಇಲ್ಲಿ ಭತ್ತ ಬೆಳೆಯುವ ಕೃಷಿ ಸೈನಿಕರು ಹಿಂದೆ ಸರಿಯುತ್ತಿರುವುದು ಕೃಷಿಯ ಮೇಲಿನ ಅಭಿಮಾನ ಕಡಿಮೆಯಾಗಿ ಅಲ್ಲ, ಕೃಷಿ ಭೂಮಿಯಲ್ಲಿ ಹೋರಾಡಲು ಸಾಧ್ಯವಾಗದಿರುವಂತಹ ವ್ಯವಸ್ಥೆ ನಿರ್ಮಾಣ ಆಗಿರುವುದಕ್ಕೆ ಕಾರಣಗಳು ಹಲವಾರು. ಅನ್ನ ಬೆಳೆಯುವ ರೈತ ಸೈನಿಕನಿಗೆ ಸರಕಾರ, ಇಲಾಖೆಗಳಿಂದ ಸಹಾಯ ಇಲ್ಲದಿರುವುದು. ಕಾಡು ಪ್ರಾಣಿಗಳಿಂದ ತೊಂದರೆ ಆಗುತ್ತಿರುವುದು. ಆರ್ಥಿಕವಾಗಿ ಭರಿಸಲಾರದ ನಷ್ಟ ಆಗುತ್ತಿರುವುದು. 


ಮಲೆನಾಡು-ಕರಾವಳಿಗಳಲ್ಲಿ, ಕೆಲವು ದಶಕಗಳಿಂದ ಒಂದಲ್ಲ ಒಂದು ಕಾರಣದಿಂದ ಭತ್ತ ಬೆಳೆಯುವ ರೈತರ ಸಂಖ್ಯೆ ಮತ್ತು ಭತ್ತದ ಗದ್ದೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕಾರ್ಮಿಕರ ಸಮಸ್ಯೆ, ಕಾಡುಪ್ರಾಣಿಗಳ ಕಾಟ, ಕಡಿಮೆ ಇಳುವರಿ, ಆದಾಯಕ್ಕಿಂತ ಹೆಚ್ಚಾದ ಖರ್ಚು, ಕ್ಷೀಣಿಸುತ್ತಿರುವ ಹೈನುಗಾರಿಕೆ, ನಗರೀಕರಣ.... ಮಲೆನಾಡು ಮತ್ತು ಕರಾವಳಿಗಳಲ್ಲಿನ ಭತ್ತದ ಬೆಳೆಯನ್ನು ಇನ್ನು ಕೆಲವೇ ವರ್ಷಗಳಲ್ಲಿ ಸಂಪೂರ್ಣ ಇಲ್ಲವಾಗಿಸುತ್ತದೆ.  ಅನ್ನದ ಬಟ್ಟಲು ಬೋರಲು (ತಲೆಕೆಳಗು) ಆಗುತ್ತದೆ.


ಮಲೆನಾಡು-ಕರಾವಳಿಯಲ್ಲಿ ಈ ಎಲ್ಲ ಸಮಸ್ಯೆಗಳಾದರೆ, ರಾಜ್ಯದ ಅರೆ ಮಲೆನಾಡು, ಬಯಲು ಸೀಮೆ ಮತ್ತು ಉಳಿದ ಪ್ರದೇಶಗಳಲ್ಲೂ ಭತ್ತ, ರಾಗಿ ಮತ್ತು ಇತರ ಆಹಾರ ಬೆಳೆಯುವ ಬಟ್ಟಲುಗಳು, ಅಡಿಕೆ ಬೆಳೆಯುವ ಹರಿವಾಣ ಆಗುತ್ತಿದೆ! ನಿಯಂತ್ರಣವಿಲ್ಲದ ಅಡಿಕೆ ಬೆಳೆ ಅನ್ನದ ಗದ್ದೆಗಳ ಮೇಲೆ ದಾಳಿ ಇಟ್ಟಿದೆ!  


ಈ ಭೀಕರ ಸಮಸ್ಯೆಯ ಪರಿಹಾರಕ್ಕೆ ಸರಕಾರ ಮುಂದಾಗುತ್ತಿಲ್ಲ, ಜನಪ್ರತಿನಿಧಿಗಳ ತಲೆಗೆ ಅರಿವಾಗುತ್ತಿಲ್ಲ, ಕೃಷಿ ತಜ್ಞರು ಮಾತಾಡ್ತಾ ಇಲ್ಲ, ಕೃಷಿ ಇಲಾಖೆ-ತೋಟಗಾರಿಕೆ ಇಲಾಖೆಗಳಿಗೆ ವಾಸ್ತವ ಕಾಣುತ್ತಿಲ್ಲ. 


"ರೈತರ ಆದಾಯ ದ್ವಿಗುಣವಾಗುತ್ತದೆ" ಅಂದಿದ್ದು ಕೇವಲ ವಾಣಿಜ್ಯ ಬೆಳೆಯ ರೈತರಿಗೆ ಆಗಿರಬಹುದಾದರೂ, ಆಹಾರ ಬೆಳೆಯುವ ರೈತರಿಗೆ ಆಗಿದ್ದು ನಷ್ಟದ ಗುಣಿತ, ಗಣಿತ!!


ಭತ್ತದ ಗದ್ದೆಗಳಲ್ಲಿ ಅಡಿಕೆ ಬೆಳೆಯಬಹುದು, ಕಾಫಿ ಬೆಳೆಯಬಹುದು, ಅಕೇಶಿಯ-ನೀಲಗಿರಿಯನ್ನೂ ಬೆಳಸಿ ವಿಶ್ವಸಂಸ್ಥೆಗೆ ಹಸಿರು ವಿಸ್ತೀರ್ಣದ ವರದಿ ಕೊಡಬಹುದು. ರಾಜ್ಯದ-ದೇಶದ ವಾಣಿಜ್ಯ GDPಯೂ ಕಾಟಿ ಕೋಣಗಳ ರೀತಿ ದಷ್ಟಪುಷ್ಟವಾಗಿ ಬೆಳೆಯಬಹುದು! ಉದ್ಭವಿಸಬಹುದಾದ ಆಹಾರದ ಹಾಹಾಕಾರಕ್ಕೆ ಪರಿಹಾರ ಎಲ್ಲಿದೆ!?


ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರಲ್ಲ ಅನ್ನೋ ಗಾದೆ ನೆರವೇರಬೇಕಾದರೂ, ದೇವರಿಗೆ ಅನ್ನ ನೇವೇದ್ಯ ಮಾಡುವಷ್ಟು ಅನ್ನ ಬೇಯಿಸಬೇಕಲ್ಲ! ಬೆಳೆಯಬೇಕಲ್ಲ!?


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top