ಸಿದ್ದರಾಮಯ್ಯ ಸರಕಾರದ ವಿರುದ್ಧ ಹರಿಹಾಯ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ನಮ್ಮದೇ ಆದ ಸಮೀಕ್ಷೆ ಪ್ರಕಾರ, ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಚಾರ್ಜ್ಶೀಟ್ ಅನ್ನು ಇವತ್ತು ಮಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದೇವೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ರೈತರಿಗೆ ಮಾಡಿದ ಮೋಸ, ವಕ್ಫ್ ಹೆಸರಿನಲ್ಲಿ ಭೂಗಳ್ಳತನ, ಹಾಲಿನ ದರ ಏರಿಕೆ, 60% ಕಮಿಷನ್, ದಲಿತರ ಹಣ ಲೂಟಿ, ಹನಿಟ್ರಾಪ್, - ಹೀಗೆ ಹತ್ತಾರು ಹಗರಣಗಳು, ಆಡಳಿತದ ವೈಫಲ್ಯದಿಂದ ಗೊಂದಲದ ಗೂಡಾಗಿರುವ ಸಿದ್ದರಾಮಯ್ಯ ಸರಕಾರ. ಈ ಎಲ್ಲ ಮಾಹಿತಿಗಳನ್ನು ಒಳಗೊಂಡಂತೆ ಸಾರ್ವಜನಿಕರ ಗಮನಕ್ಕೆ ತರಲು ಈ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಬಿಡಿಸಿಟ್ಟರು.
ಮುಖ್ಯಾಂಶಗಳು:
ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸಿದ್ದನ್ನೇ ಬಹಳ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಸಾಧನಾ ಸಮಾವೇಶ ಮಾಡಲು ಹೊರಟಿದ್ದಾರೆ.
ಸಿದ್ದರಾಮಯ್ಯ ಸರಕಾರ ದ್ವೇಷದ ಮೇಲೆ, ಸಂಘರ್ಷದ ಮೇಲೆ, ಮತೀಯತೆಯ ಆಧಾರದ ಮೇಲೆ ರಾಷ್ಟ್ರದ್ರೋಹಿಗಳಿಗೆ ಪ್ರಾಧಾನ್ಯತೆ ಕೊಟ್ಟಿರುವ ಹಿನ್ನೆಲೆ, ಇವೆಲ್ಲವೂ ಕೂಡ ಸರಕಾರಕ್ಕೆ ಕಪ್ಪುಚುಕ್ಕೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ.
ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕಾದ ಸರಕಾರವೊಂದು ಕನಿಷ್ಠ ಪ್ರಜ್ಞೆಯನ್ನೂ ಬಳಸದೆ ಸಂಘರ್ಷದ ಹಾದಿಯನ್ನು ಹಿಡಿದಿರುವುದು- ಇಷ್ಟೇ ಈ ಕಾಂಗ್ರೆಸ್ ಸರಕಾರದ ಸಾಧನೆ ಎಂದು ನಾವು ನೇರವಾಗಿ ಆಪಾದನೆ ಮಾಡ್ತೇವೆ.
ಕೇಂದ್ರ ಸರಕಾರವನ್ನು ಕಾರಣವಿಲ್ಲದೆ ದ್ವೇಷಿಸುವುದು, ಬೇರೇನೂ ವಿಚಾರವಿಲ್ಲದೆ ಪ್ರಧಾನಿಯವರ ಶರ್ಟಿನ ಬಗ್ಗೆ, ಉಡುಪಿನ ಬಗ್ಗೆ ತಗಾದೆ ತೆಗೆಯುವ ಕಾಂಗ್ರೆಸ್ ಪಕ್ಷ ಯಾವ ಕೀಳುಮಟ್ಟಕ್ಕೆ ಇಳಿದಿದೆ ಎಂಬುದನ್ನು ರಾಜ್ಯದ ಜನತೆ ಗಮನಿಸಿದ್ದಾರೆ.
ಕಾರ್ಮಿಕ ಮಂತ್ರಿಗಳು ಬಡವರಿಗೆ, ದುರ್ಬಲರಿಗೆ ಯಾವ ರೀತಿ ಸವಲತ್ತು ಕೊಡಬೇಕು ಎಂಬುದನ್ನು ಯೋಚನೆ ಮಾಡದೆ ಪ್ರಧಾನಿಯವರ ಡ್ರೆಸ್ ಬಗ್ಗೆ ಮಾತಾಡುವಂತಹ ಸಣ್ಣ ಮಟ್ಟಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅಂತಹ ಮಂತ್ರಿಯನ್ನು ಕರೆದು ಬುದ್ಧಿ ಹೇಳುತ್ತಿಲ್ಲ.
ಕರ್ನಾಟಕ ರಾಜ್ಯದ ಯಾವುದೇ ಗ್ರಾಮೀಣ ರಸ್ತೆಗಳು ಇವತ್ತು ಹೇಗೆ ಹಾಳಾಗಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲ ರಸ್ತೆಗಳೂ ಹೊಂಡಗುಂಡಿಗಳಿಂದ ತುಂಬಿರುವುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಎರಡು ವರ್ಷಗಳಿಂದ ಈ ರಸ್ತೆಗಳ ದುರಸ್ತಿಗೆ ಒಂದು ರೂ ಸಹ ಖರ್ಚು ಮಾಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಸರಕಾರವಿದೆ.
ಕೇಂದ್ರ ಸರಕಾರ 72 ಸಾವಿರ ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಜಾರಿಗೆ ತರುತ್ತಿದೆ. ಪ್ರತೀ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಸಿಗಬೇಕೆಂಬುದು ಇದರ ಆಶಯ. ಈ ಯೋಜನೆಯ ಜಾರಿಗೆ ಪ್ರತಿ ರಾಜ್ಯಕ್ಕೂ ಕೇಂದ್ರ ಸರಕಾರ 50 ಶೇಕಡಾ ಹಣ ಕೊಡುತ್ತಿದೆ. ಆದರೆ ಈ ಯೋಜನೆಯ ಜಾರಿಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ.
ಗ್ರಾಮ ಪಂಚಾಯತ್ ಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರಕಾರದಿಂದ ಕೋಟ್ಯಂತರ ರೂ ಬಿಡುಗಡೆಯಾಗುತ್ತಿದೆ. ಆ ಮೊತ್ತವನ್ನು ಸರಿಯಾದ ಉದ್ದೇಶಕ್ಕೆ ಖರ್ಚು ಮಾಡುವಲ್ಲೂ ಸಿದ್ದರಾಮಯ್ಯ ಸರಕಾರ ವಿಫಲವಾಗಿದೆ.
ರೈತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರಕಾರ, ಪ್ರಧಾಣಿ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಜಾರಿಗೆ ತಂದ, ಸುಮಾರು 9.5 ಕೋಟಿ ಜನರಿಗೆ ವರ್ಷಕ್ಕೆ 6,000 ರೂ.ಗಳನ್ನು ನೇರ ಜಮಾ ಮಾಡುವ ಕಾರ್ಯಕ್ರಮ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ಅದಕ್ಕೆ 4,000 ರೂ ಸೇರಿಸಿ ಒಟ್ಟು 10,000 ರೂ.ಗಳನ್ನು ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಜಮಾ ಮಾಡುವ ಸ್ಕೀಂ ಜಾರಿ ಮಾಡಿದ್ದರು. ರಾಜ್ಯದ 54 ಲಕ್ಷ ಕುಟುಂಬಗಳು ಇದರ ಫಲಾನುಭವಿಗಳಾಗಿದ್ದರು.
ಈ ರೈತಪರ ಯೋಜನೆಯನ್ನು ಸಿದ್ದರಾಮಯ್ಯ ಸರಕಾರ ಬಂದ ಕೂಡಲೇ ರದ್ದುಪಡಿಸಲಾಯಿತು. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಪಾಲೇ ನಿಂತು ಹೋಯಿತು.
ಬೊಮ್ಮಾಯಿ ಸರಕಾರ ಇದ್ದಾಗ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಓದಿದವರಿಗೆ ಉನ್ನತ ಶಿಕ್ಷಣಕ್ಕಾಗಿ ರೈತ ವಿದ್ಯಾನಿಧಿ ಎಂಬ ಯೋಜನೆ ಜಾರಿ ಮಾಡಿದರು. ಆದರೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮರುಕ್ಷಣದಿಂದ ಇದು ನಿಂತು ಹೋಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ ಸಣ್ಣ ಸಮುದಾಯದವರಿಗೆ, ಅವರ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಬೇಕಾದಂತಹ, ಸಭಾಭವನಗಳನ್ನು ನಿರ್ಮಿಸಲು ಬೇಕಾದ ಧನಸಹಾಯ ಮಾಡಲಾಗುತ್ತಿತ್ತು. ಆ ಯೋಜನೆಯನ್ನು ಸಹ ಸಂಪೂರ್ಣ ನಿಲ್ಲಿಸಿ ಬಿಟ್ಟಿದ್ದಾರೆ ಸಿದ್ದರಾಮಯ್ಯ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಾಡಿದ ಅನ್ಯಾಯ: ಪರಿಷತ್ ನ ಪ್ರತಿಪಕ್ಷ ನಾಯಕಾಗಿದ್ದ ಸಂದರ್ಭದಲ್ಲಿ ನಾನು ಪ್ರಶ್ನಿಸಿದ್ದೆ. ಎಲ್ಲ ಸಮುದಾಯ, ಜಾತಿಗಳ ಜನರಿಗೆ ಸಮಾನ ಪ್ರಾಮುಖ್ಯತೆ ಕೊಡುತ್ತೇವೆ ಎಂದು ಹೇಳಿದ್ರಿ, ಆದರೆ ಪರಿಶಿಷ್ಟ ಜಾತಿಯವರಿಗೆ ನೀಡಬೇಕಾದ ಹಣವನ್ನೇ ನುಂಗಿ ಹಾಕಿದ್ದೀರಲ್ಲ ಸಿದ್ದರಾಮಯ್ಯನವರೇ? ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದೆ.
ಇವತ್ತು ರಾಜ್ಯದಲ್ಲಿ ಪರಿಶಿಷ್ಟ ಜಾತಿ/ ಪಂಗಡವರಿಗೆ ಮೀಸಲಿಟ್ಟ 34,500 ಕೋಟಿ ರೂ.ಗಳ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ. ಆ ಪಂಗಡಗಳ ಮಕ್ಕಳ ಶಿಕ್ಷಣಕ್ಕೋಸ್ಕರ, ಮನೆ ನಿರ್ಮಾಣಕ್ಕಾಗಿ ಇರುವ ಹಣವನ್ನು ಅವರಿಗೆ ನೀಡುವ ಬದಲು, ಅನ್ಯ ಉದ್ದೇಶಗಳಿಗೆ ಬಳಸುವ ಕಾಯ್ದೆ ಜಾರಿಗೆ ತಂದರು. ಪರಿಶಿಷ್ಟ ಜಾತಿ, ಪಂಗಡವರಿಗೆ ನೇರವಾಗಿ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಸರಕಾರ ಎಂದರೆ ಅದಕ್ಕೆ ಉತ್ತರ ಕೊಡುವ ಸ್ಥಿತಿಯಲ್ಲಿ ಸಿದ್ದರಾಮಯ್ಯನವರಿಲ್ಲ. ಸರಕಾರ ಸಂಪೂರ್ಣ ವಿಫಲವಾಗಿದೆ. ಅದನ್ನು ಮರೆಮಾಚಲು ಕೇಂದ್ರ ಸರಕಾರವನ್ನು ಮತ್ತು ಪ್ರಧಾನಿ ಮಂತ್ರಿಗಳನ್ನು ದೂಷಿಸುವುದೇ ಇವರ ಕಾಯಕವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನಿನ್ನೆ ಸಾರ್ವಜನಿಕ ಭಾಷಣದಲ್ಲಿ ಮಾತನಾಡುತ್ತ, ಚಟ್ಪಟ್ ಯುದ್ಧ ನಡೀತು ಎಂದು ಟೀಕಿಸಿದ್ದಾರೆ. ಆ ಮೂಲಕ ಸೇನೆಯನ್ನು ಅವಮಾನಿಸಿದ್ದಾರೆ. ಮಾತಿನ ಭರದಲ್ಲಿ ತಮ್ಮ ಅಂತರಂಗದ ಭಾವನೆಗಳನ್ನು ಹೊರಹಾಕುತ್ತ ನಮ್ಮ ಪಾಕಿಸ್ತಾನ ಎಂದು ಎರಡೆರಡು ಬಾರಿ ಉಲ್ಲೇಖ ಮಾಡಿದ್ದಾರೆ.
ಶಾಸಕ ಕೊತ್ತೂರು ಮಂಜುನಾಥ್ ನಂಥವರನ್ನು ಕಾಯುವುದಕ್ಕೋಸ್ಕರ ನಮ್ಮ ಸೈನಿಕರು ಗಡಿಯಲ್ಲಿ ನಿಲ್ಲಬೇಕೇ? ನಾಲ್ಕು ವಿಮಾನಗಳನ್ನು ಹಾರಿಸಿಬಿಟ್ಟ ಕೂಡಲೇ ಯುದ್ಧ ಅಂತ ಹೇಳ್ತೀರಾ? ಎಂದು ಹೇಳುವ ಮೂಲಕ ಸೈನಿಕರನ್ನೇ ಪ್ರಶ್ನೆ ಮಾಡುತ್ತಾರೆ. ಸೇನಾ ವ್ಯವಸ್ಥೆಯ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ರಾಜಕಾರಣ ಇದ್ದಿದ್ದೇ. ಆದರೆ ಇಂತಹ ಶಾಸಕರನ್ನು ಕರೆದು ಬುದ್ಧಿ ಹೇಳಬಾರದೇ ಸಿದ್ದರಾಮಯ್ಯನವರೇ? ತಮ್ಮ ಕುಟುಂಬವನ್ನು ಬಿಟ್ಟು ದೇಶಕ್ಕೋಸ್ಕರ ಗಡಿ ಕಾಯ್ತಾ ಇದ್ದಾರೋ, ಅವರ ಬಗ್ಗೆ ಲಘುವಾಗಿ ಮಾತನಾಡ್ತೀರಲ್ಲಾ?
ಪೆಹಲ್ಗಾಮ್ ದಾಳಿಗೆ ಭದ್ರತಾ ವೈಫಲ್ಯ ಎನ್ನುವ ಮಾತಾಡ್ತೀರಲ್ಲ? ಇಂದಿರಾಗಾಂಧಿ ಹತ್ಯೆ ಆದಾಗ, ರಾಜೀವ್ ಗಾಂಧಿ ಅವರ ಹತ್ಯೆ ಆದಾಗ ಭದ್ರತಾ ವೈಫಲ್ಯ ಆಗಿರಲಿಲ್ಲವೇ? ಆದರೆ ನಾವು ಅದನ್ನು ಪ್ರಶ್ನಿಸಿರಲಿಲ್ಲ, ಸರಕಾರದ ಬೆಂಬಲಕ್ಕೆ ನಿಂತಿದ್ದೆವು. ಕಾಂಗ್ರೆಸ್ ಪಕ್ಷ ಈಗ ಭಾರತದ ಪಕ್ಷವಾಗಿ ಉಳಿದಿಲ್ಲ. ಅದು ಪಾಕಿಸ್ತಾನದ ಏಜೆಂಟ್ ರೀತಿ ಕೆಲಸ ಮಾಡುತ್ತಿದೆ ಎಂದು ಸಂಸದರು ಟೀಕಿಸಿದರು.
ಹಿಂದೂಗಳ ಪರ ಮಾತನಾಡಿದರೆ ಕೇಸ್ ಹಾಕ್ತೀರಿ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಬುರ್ಖಾಧಾರಿ ಮಹಿಳೆಯರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರೆ ಎಫ್ಐಆರ್ ಹಾಕ್ತೀರಿ. ಶಾಸಕ ಹರೀಶ್ ಪೂಂಜಾ, ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮುಂತಾದ ನಾಯಕರ ವಿರುದ್ಧ ನೂರೆಂಟು ಕೇಸ್ ಗಳನ್ನು ಹಾಕ್ತೀರಿ. ಪಾಕಿಸ್ತಾನದ ಪರ ಜೈಕಾರ ಹಾಕಿದರೆ, ದೇಶದ್ರೋಹಿಗಳ ಪರ ಮಾತನಾಡಿದರೆ ಕರೆದು ಸನ್ಮಾನ ಮಾಡುತ್ತೀರಿ. ಇದು ಯಾವ ಬಗೆಯ ಆಡಳಿತ ಮಾನ್ಯ ಸಿದ್ದರಾಮಯ್ಯನವರೇ? ಎಂದು ಕೋಟ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಮೇಯರ್ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಮುಂತಾದವರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ