ಎನ್‌ಎಂಐಟಿ ಹ್ಯಾಕ್ಸ್ 2025: ಹ್ಯಾಕಥಾನ್ ತಂತ್ರಜ್ಞಾನ ಸ್ಪರ್ಧೆ

Upayuktha
0




ಬೆಂಗಳೂರು: ಕಂಪ್ಯೂಟರ್ ಯುಗದಲ್ಲಿ ‘ಹ್ಯಾಕಥಾನ್’ ಸ್ಫರ್ಧೆ ತಂತ್ರಜ್ಞಾನದ ವಿದ್ಯಾರ್ಥಿಗಳ ಜ್ಞಾನ ಹಾಗೂ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ನೆರವಾಗುತ್ತದೆ. ಇದು ಅವರ ಜ್ಞಾನ ಹಾಗೂ ಕೌಶಲ್ಯಗಳನ್ನು ಒರೆಗೆ ಹಚ್ಚುವ ಕ್ರೀಡೆ. ನಿಗದಿತ ಸಮಯದಲ್ಲಿ ಒಡ್ಡಿರುವ ಸವಾಲನ್ನು ಬಗೆಹರಿಸಲು ಕೋಡ್‌ಗಳನ್ನು ಸೃಷ್ಟಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ‘ಹ್ಯಾಕಥಾನ್’ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಕಲ್ಪಿಸುತ್ತದೆ. ಇದು ಅವರ ವೃತ್ತಿಯ ಬಗೆಗಿನ ಅವರ ಅನುರಕ್ತಿಯನ್ನು ಇಮ್ಮಡಿಗೊಳಿಸುವಲ್ಲಿ ಯಾವುದೇ ಸಂಶಯವಿಲ್ಲ. ತಂತ್ರಜ್ಞಾನ ಕಲಿಯುವ ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುವ ‘ಹ್ಯಾಕಥಾನ್’ ಅವರಲ್ಲಿ ನಾಯಕತ್ವದ ಸಾಮರ್ಥ್ಯವನ್ನು ಮೂಡಿಸುವಲ್ಲಿ ಕೂಡಾ ಮಹತ್ವದ ಪಾತ್ರ ವಹಿಸುತ್ತದೆ’, ಎಂದು ಲಾಜಿಟೆಕ್ ಸಂಸ್ಥೆಯ ಇಂಡಿಯಾ ಮುಖ್ಯಸ್ಥ ಚಿರಾಯು ಪಾಂಡ್ಯ ನುಡಿದರು.


ಅವರು ರಾಷ್ಟ್ರಮಟ್ಟದ 48-ಗಂಟೆಗಳ ಹ್ಯಾಕಥಾನ್ ಸ್ಪರ್ಧೆ ‘ಎನ್.ಎಂ.ಐ.ಟಿ ಹ್ಯಾಕ್ಸ್-2025’ರ ಎಂಟನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗ ಪ್ರತಿ ವರ್ಷ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯನ್ನು ಆಯೋಜಿಸುತ್ತದೆ. ಈ ಸ್ಫರ್ಧೆಯು ಟೆಕ್ ಉತ್ಸಾಹಿಗಳು ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ತಮ್ಮ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಎಐ/ಎಂಎಲ್, ಬ್ಲಾಕ್‌ಚೈನ್, ಐಓಟಿ, ಗೇಮ್ ಡೆವಲೆಪ್‌ಮೆಂಟ್ ಹಾಗೂ ಒಪನ್ ಇನೋವೇಶನ್ ಎಂಬ ಐದು ರೋಚಕ ವಿಷಯಗಳ ಕುರಿತಾದ ಚರ್ಚೆ ಹಾಗೂ ಸ್ಫರ್ಧೆ ನಡೆಸಲಾಯಿತು.


ಈ ಸಲ ಸ್ವೀಕೃತ ಅರ್ಜಿಗಳ ಸಂಖ್ಯೆ ಒಟ್ಟು 3,620. ಗುಣಮಟ್ಟದ ಶಿಸ್ತುಬದ್ಧ ಮಾಪನದ ನಂತರ ಅಂತಿಮ ಸುತ್ತಿಗೆ ಆಯ್ಕೆಯಾದ ಅರ್ಜಿಗಳ ಸಂಖ್ಯೆ 218, ಹಾಗೂ ಇವರಲ್ಲಿಯೇ ರೂಪುಗೊಂಡ 64 ತಂಡಗಳು. 48 ಗಂಟೆಗಳ ಸುದೀರ್ಘ ಅವಧಿಯಲ್ಲಿ, ಸ್ಫರ್ಧಾತ್ಮಕ ಉತ್ಸುಕತೆಯಲ್ಲಿ ನಡೆದ ರಾಷ್ಟ್ರಮಟ್ಟದ ಈ ಹ್ಯಾಕಥಾನ್ ಸ್ಫರ್ಧೆಯಲ್ಲಿ ಭಾಗಲ್ಪುರದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿಯ ತಂಡ ಮೊದಲ ಬಹುಮಾನ ಹಾಗೂ ನಗದು ಪುರಸ್ಕಾರಗಳನ್ನು ಗಳಿಸಿತು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ತಂಡ ಎರಡನೆಯ ಬಹುಮಾನವನ್ನು ಪಡೆದರೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ದೊಡ್ಡಬಳ್ಳಾಪುರದ ಆರ್.ಎಲ್. ಜಾಲಪ್ಪ ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ ಮೂರನೇ ಬಹುಮಾನವನ್ನು ಹಂಚಿಕೊAಡವು. 


ಸಮಾರಂಭದಲ್ಲಿ ಮೇಜರ್ ಲೀಗ್ ಹ್ಯಾಕಿಂಗ್ (ಎಂ.ಎಲ್.ಹೆಚ್)ನ ತರಬೇತುದಾರ ಖುಷಿ ಮಹಾವರ್, ಗಿಟ್‌ಹಬ್ ಕ್ಯಾಂಪಸ್ ತಜ್ಞ ಪಟೇಲ್ ಅಹ್ಮದ್, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಶಿಕ್ಷಣ ಸಂಸ್ಥೆಯ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ಸಂಸ್ಥೆಯ ಗೌರವ ಪ್ರಾಧ್ಯಾಪಕ ಡಾ. ವಿ. ಶ್ರೀಧರ್, ಶೈಕ್ಷಣಿಕ ಮುಖ್ಯಸ್ಥ ಡಾ. ಜೆ. ಸುಧೀರ್ ರೆಡ್ಡಿ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಸ್. ಮೀನಾಕ್ಷಿ ಸುಂದರಂ, ಸ್ಫರ್ಧೆಯ ಸಂಯೋಜಕರಾದ ಡಾ. ವಾಣಿ ವಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರದಂದು ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top