ಮಂಗಳೂರು: ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆ ಇರುವ ಭರತನಾಟ್ಯವು ಹಾಡು, ವೇಷಭೂಷಣ, ನರ್ತನ, ಅಭಿನಯ ಮುಂತಾದ ಎಲ್ಲ ಅಂಗಗಳನ್ನೂ ಹೊಂದಿರುವ ಒಂದು ಪರಿಪೂರ್ಣ ಕಲೆ. ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಭರತನಾಟ್ಯವು ಎತ್ತಿ ಹಿಡಿಯುತ್ತದೆ ಎಂದು ವಸ್ತ್ರೋದ್ಯಮಿ ಎಂ. ಮುರಳೀಧರ ಶೆಟ್ಟಿ ಹೇಳಿದರು.
ಇಂಟ್ಯಾಕ್ (ಭಾರತದ ಪಾರಂಪರಿಕ ಕಲೆ ಮತ್ತು ಸಂಸ್ಕೃತಿ ಕೇಂದ್ರ) ಮಂಗಳೂರು ಘಟಕದ ಆಶ್ರಯದಲ್ಲಿ ನಗರದ ಕೊಡಿಯಾಲಗುತ್ತು ಕಲಾಕೇಂದ್ರದಲ್ಲಿ ಪ್ರಸಿದ್ಧ ನೃತ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರ ನಾಟ್ಯ ಚಾರಿ ಎಂಬ ವಿಶೇಷ ನೃತ್ಯಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸುಮಾರು ಐವತ್ತು ವರ್ಷಗಳ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ಅಷ್ಟೊಂದು ಪ್ರಚಾರದಲ್ಲಿ ಇರದಿದ್ದ ಭರತನಾಟ್ಯವು ಇಂದು ಪ್ರಸಿದ್ಧಿ ಗಳಿಸಿರುವುದು ಸಂತೋಷದ ವಿಷಯ. ಈ ಶ್ರೀಮಂತ ಕಲೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೃತ್ಯ ಗುರು ವಿದುಷಿ ಶಾರದಾಮಣಿ ಶೇಖರ್ ಅವರು ಇಂದು ಭರತನಾಟ್ಯ ಕಲಿಯುವವರ ಮತ್ತು ಆಸ್ವಾದಿಸುವವರ ಸಂಖ್ಯೆ ಹೆಚ್ಚಾಗಿದೆ. ವಿದುಷಿ ಅಯನಾ ಪೆರ್ಲ ಈ ಕ್ಷೇತ್ರದಲ್ಲಿ ಬೆಳೆದು ನಿಂತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.
ವಿದುಷಿ ಅಯನಾ ಪೆರ್ಲ ಅವರು ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನೀಡುತ್ತ ಭರತನಾಟ್ಯದಲ್ಲಿ ವಾಚಿಕದ ಅಥವಾ ಹಾಡಿನ ಅರ್ಥ ಮತ್ತು ಭಾವಕ್ಕೆ ಪೂರಕವಾಗಿ ಅಭಿನಯದಲ್ಲಿ ಸೇರಿಕೊಂಡಿರುವ ಅರ್ಥಪೂರ್ಣವಾದ ಅಂಗಚಲನೆಗಳನ್ನು ಚಾರಿ ಅನ್ನುತ್ತಾರೆ. ಚಾರಿಯು ನಾಟ್ಯವನ್ನು ಸುಂದರವಾಗಿ ಪರಿಪೂರ್ಣಗೊಳಿಸುವ ಅಂಶ ಎಂದು ಹೇಳಿದರು. ಚಾರಿಯ ವಿವಿಧ ಆಯಾಮಗಳನ್ನು ಅವರು ನರ್ತಿಸಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಚಾರಿಯ ಜೊತೆಗೆ ಕರಣದ ಬಗೆಗೆ ಕೂಡ ಅಯನಾ ಪೆರ್ಲ ತಿಳಿಸಿಕೊಟ್ಟರು.
ಇಂಟ್ಯಾಕ್ ಮಂಗಳೂರು ಘಟಕದ ನಿರ್ದೇಶಕ ಸುಭಾಷ್ ಬಸು ಸ್ವಾಗತಿಸಿದರು. ಕಲಾವಿದರಾದ ರಾಜೇಂದ್ರ ಕೇದಿಗೆ, ನೇಮಿರಾಜ ಶೆಟ್ಟಿ, ಮಧುಸೂದನ ಕುಮಾರ್, ಹರೀಶ್ ಕೊಡಿಯಾಲಬೈಲ್, ಪ್ರಸನ್ನ ರೈ ಪುತ್ತೂರು, ಲೇಖಕಿಯರಾದ ಡಾ. ಮೀನಾಕ್ಷಿ ರಾಮಚಂದ್ರ, ರತ್ನಾವತಿ ಜೆ. ಬೈಕಾಡಿ ಮೊದಲಾದವರು ಉಪಸ್ಥಿತರಿದ್ದರು. ಡಾ. ವಸಂತಕುಮಾರ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಕೆ. ಶೈಲಾಕುಮಾರಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ