ಜನವರಿ 13ರಿಂದ ಶುರುವಾದ ಒಟ್ಟು 45 ದಿನಗಳ ಕುಂಭಮೇಳಕ್ಕೆ ಮಹಾಶಿವರಾತ್ರಿಯಂದು ತೆರೆ ಬಿದ್ದಿದೆ. ಈ ಕುಂಭಮೇಳದಲ್ಲಿ ಸುಮಾರು 47 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಭಾರತದ ಧಾರ್ಮಿಕ ಪರಂಪರೆ ಹಾಗೂ ವೈವಿಧ್ಯಕ್ಕೆ ಕೋಟ್ಯಾಂತರ ಜನರು ಸಾಕ್ಷಿಯಾದರು. ದೇಶ -ವಿದೇಶದಿಂದಲೂ ಜನರು ಪ್ರಯಾಗರಾಜ್ನಲ್ಲಿ ನಿರಾಳವಾಗಿ, ಭಕ್ತಿಯಿಂದ ಸ್ನಾನಮಾಡಿದ್ದು ವಿಶೇಷ ದಾಖಲೆಯೇ ಸರಿ. ಈ ಸಂದರ್ಭದಲ್ಲಿ ಆಡಳಿತಾರೂಢ ಮೋದಿ ಸರ್ಕಾರ ಹಾಗೂ ಯೋಗಿಜೀ ಅಭಿನಂದನಾರ್ಹರು.
ನಮ್ಮ ಅನೇಕ ಬಂಧುಗಳು, ಆಪ್ತರು, ಸ್ನೇಹಿತರು, ಪರಿಚಿತರು ಅಪರಿಚಿತರು ಎಲ್ಲಾ ಕುಂಭಮೇಳಕ್ಕೆ ಖುದ್ದು ಹೋಗಿದ್ದಾರೆ. ತಾವೊಬ್ಬರೇ ಈಮೇಳದಲ್ಲಿ ಭಾಗಿದ್ದೇವೆ ಎನ್ನುವ ಅಹಂಕಾರ ತೋರದೆ ಬರುವಾಗ ಕುಂಭಮೇಳದ ಪರಿಶುದ್ಧ ಗಂಗಾಜಲವನ್ನು ತಮ್ಮ ತಮ್ಮ ಇತಿಮಿತಿ ಮೇಲೆ ಕ್ಯಾನ್ಗಳಲ್ಲಿ ತುಂಬಿಕೊಂಡು ಬಂದಿದ್ದು, ಊರಿಗೆ ಬಂದ ಮೇಲೆ ಅವರವರ ಅನುಕೂಲದಂತೆ ಬಾಟಲಿಯಲ್ಲೋ ಪ್ಲಾಸ್ಟಿಕ್ ಪೊಟ್ಟಣದಲ್ಲೋ ಹಿತೈಷಿಗಳಿಗೆ ಹಂಚಿದ್ದು ಹೃದಯ ತುಂಬಿ ಬಂದಿದೆ.
ಅವರೆಲ್ಲರ ಔದಾರ್ಯವನ್ನು ಇಲ್ಲಿ ಸ್ಮರಿಸಲೇ ಬೇಕು. ಇದೇ ನಮ್ಮ ಭಾರತೀಯ ಸಂಸ್ಕೃತಿಯ ಧ್ಯೇಯೋದ್ದೇಶ. ನಮ್ಮಲ್ಲಿ ಇಂದಿಗೂ ಕಾಶಿಗೆ ಹೋದವರು ಬಂಧುಗಳಿಗೆ ಗಂಗಾಜಲ ಕಾಶಿ ಗಿಂಡಿ ತರುತ್ತಾರೆ. ಅವರನ್ನು ಮನೆ ಒಳಗೆ ಬರಮಾಡಿಕೊಂಡು ಸತ್ಕಾರ ಮಾಡುತ್ತಾರೆ. ಇದು ಕೆಲವು ಕಡೆ ಈಗಲೂ ಚಾಲ್ತಿಇದೆ. ಆದರೆ ಈ ಕುಂಭಮೇಳ ಎಲ್ಲರನ್ನು ಒಗ್ಗೂಡಿಸಿದ್ದು ಮರೆಯಲಾರದ ಸಂಗತಿ. ಹಾಗೂ ಅಲ್ಲಿಗೆ ಹೋಗಲಾಗದಿದ್ದವರು ಹೋದವರು ತಂದು ಕೊಟ್ಟ ಜಲದಲ್ಲಿ ಭಾವನಾತ್ಮಕವಾಗಿ ಭಕ್ತಿಯಿಂದ ಮಿಂದೆದ್ದಿದ್ದಾರೆ. ನಮಗೂ ಬೆಂಗಳೂರು, ಮಂಗಳೂರು ಹಾಗೂ ಸ್ಥಳೀಯವಾಗಿ ಅನೇಕ ಜನರಿಂದ ಕುಂಭ ಜಲ ಬಂದಿದೆ. ಅವರೆಲ್ಲರ ಹಿತಕರವಾದ ಅನುಭವವನ್ನು ಕೇಳುತ್ತಾ ಹೋದಾಗ ನಾವು ಅಲ್ಲಿಗೆ ಹೋಗಿಬಂದ ಭಾವನೆ ಮೂಡಿದೆ.
ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆಯಲು ಇನ್ನೂ 12 ವರ್ಷ ಕಾಯಬೇಕು. ಕುಂಭ ಮೇಳವನ್ನು ಪ್ರತಿ 3 ವರ್ಷಗಳಿಗೊಮ್ಮೆ 4 ಪವಿತ್ರ ಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. ಮುಂದಿನ ಪೂರ್ಣ ಕುಂಭಮೇಳ ಮಹಾರಾಷ್ಟ್ರದ ಗೋದಾವರಿ ನದೀತೀರದಲ್ಲಿ 2027ರಲ್ಲಿ ನಡೆಯಲಿದೆ. ಈ ವರ್ಷದ ಕುಂಭಮೇಳವು ಜನರ ಮನದಲ್ಲಿ ಅಜರಾಮರವಾಗಿರಲಿ.
ಎಸ್. ರೋಹಿಣಿ ಶರ್ಮಾ, ಸಾಗರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ