ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗದ ‘ಆದಿ’ ಯುಗಾದಿ ಮತ್ತೆ ಬಂದಿದೆ. ಯುಗಯುಗ ಗಳನ್ನು ಬೆಸೆಯುವ ಈ ಹಬ್ಬ ನಮ್ಮ ಕನಸುಗಳನ್ನು ಸಾಕಾರಗೊಳಿಸುವ ನವಚೈತನ್ಯ ಮತ್ತು ವಾಸ್ತವಗಳಿಗೆ ಪ್ರತ್ಯಕ್ಷವಾಗಿ ಸೆಣಸುವ ದೃಢ ಸಂಕಲ್ಪ ಮಾಡಬೇಕೆಂಬ ಪವಿತ್ರತೆಯ ಸಂದೇಶ ಸಾರುವ ಈ ಹಬ್ಬ ಬೇವು-ಬೆಲ್ಲದ ಹಬ್ಬವೂ ಆಗಿದೆ. ಹಳೆಯದನ್ನು ಮರೆತು ಹೊಸದರತ್ತ ಮುನ್ನುಡಿ ಇಡುವ ಹೊಸ ಆಲೋಚನೆಯತ್ತ ಕರೆದೊಯ್ದು ಬದುಕನ್ನು ಚಲನಶೀಲಗೊಳಿಸುವ ಈ ಹಬ್ಬ ಹಿಂದೂ ಭಾಂಧವರಿಗೆ ಅಮೃತ ಕಾಲವೂ ಹೌದು! ಹೊಸ ಚೈತನ್ಯವನ್ನು ಮನ-ಮನಗಳಲ್ಲಿ ಮೂಡಿಸುವ, ನೋವು-ನಲಿವುಗಳಿಗೆ ವಿರಾಮ ಹೇಳುವ ಈ ಹಬ್ಬದ ಆಗಮನಕ್ಕೆ ಪ್ರಕೃತಿಯೇ ಅಲಂಕೃತಳಾಗುತ್ತಾಳೆ. ಆದ್ದರಿಂದಲೇ ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು
‘ಬನಬನದಲಿ ಅಚ್ಚಾಗಿದೆ
ಹೊಸ ವರ್ಷದ ಹೆಸರು
ಪಲ್ಲವಗಳ ಪಲ್ಲವಿಯು
ಗರಿಗೆದರಿದೆ ಗೀತವು!’... ಎಂದು ಯುಗಾದಿಯ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಪರಂಪರೆ:
ಪುರಮೆರವಣಿಗೆಯ ಸಾಲಿನಂತೆ ಬರುವ ಈ ಹಬ್ಬಗಳಲ್ಲಿ ಮೊದಲನೇಯದೇ ಈ ನಮ್ಮ ಯುಗಾದಿ! ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈಯಂತಾಗಿದೆ. ಯುಗಾದಿ ಹಬ್ಬ ಬದುಕಿನಲ್ಲಿ ಹೊಸತನವನ್ನು ಅಳವಡಿಸುವ ಮತ್ತು ಎಚ್ಚರಿಸುವ ಹಬ್ಬವೂ ಹೌದು. ಋತುಗಳ ರಾಜ ವಸಂತ ಕಾಲ ಆಗಮನದ ಹಬ್ಬವಾದ ಈ ಯುಗಾದಿ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಹರುಷ ತರುವ ಹಬ್ಬವೇ ಆಗಿದೆ.
ಆಚರಣೆ-ಸಡಗರ:
ಯುಗಾದಿ ಬೇರೆಲ್ಲಾ ಹಬ್ಬಗಳಿಗಿಂತ ಭಿನ್ನ. ಹೊಸ ವರ್ಷದ ಮೊದಲ ಹಬ್ಬವೇ ಇದಾಗಿರುವುದರಿಂದ ಮನೆ-ಮನೆಯಲ್ಲೂ ಹಬ್ಬದ ರಂಗು ಮೂಡುತ್ತದೆ. ಪ್ರಾಃತಕಾಲದಲ್ಲಿ ಎದ್ದವರು ನಿತ್ಯಕರ್ಮಗಳನ್ನು ಮುಗಿಸಿ ಅಭ್ಯಂಜನ ಸ್ನಾನ ಮಾಡಿ, ಮನೆಯನ್ನ ತಳಿರು-ತೋರಣಗಳಿಂದ, ಮಾವು-ಬೇವಿನ ಸೊಪ್ಪಿನಿಂದ ಸಿಂಗರಿಸಿ, ಹೊಸ ಬಟ್ಟೆ ಧರಿಸಿ ಕುಲದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಅನಂತರ ಪಂಚಾಂಗ ಶ್ರವಣ ಈ ದಿನದ ವಿಶೇಷ. ಉತ್ತರ ಕನಾ೯ಟಕದಲ್ಲಿ ಈ ಹಬ್ಬವನ್ನು ಒಮ್ಮೆ ನೋಡಬೇಕು ಅದರ ಚೆಂದವೇ ಬೇರೆ.
ಯುಗಾದಿಯ ಬಿದಿಗೆ ಚಂದ್ರ ದರ್ಶನಕ್ಕೆ ವಿಶೇಷ ಮಹತ್ವವೂ ಇದೆ. ಚೌತಿಯ ಚಂದ್ರನ ದರ್ಶನದಿಂದಾದ ದೋಷ ನಿವಾರಣೆ ಬಿದಿಗೆ ಚಂದ್ರನ ದರ್ಶನದಿಂದಾಗುತ್ತದೆಂಬ ಪ್ರತೀತಿ ನಮ್ಮ ಶಾಸ್ತ್ರದಲ್ಲಿ ಇದೆ.
ನಾಡಿನಾದ್ಯಂತ ಎಲ್ಲರ ಮನೆ-ಮನಗಳ ಅಂಗಳದಲ್ಲಿ ಸಂಭ್ರಮ-ಸಡಗರ ಇಂದು ತುಂಬಿರುತ್ತದೆ. ದೇವಸ್ಥಾನಗಳಲ್ಲಿ ಘಂಟೆಯ ನಿನಾದ-ತುಪ್ಪದದೀಪ-ಮಂಗಳಾರತಿ ಇಂದಿನ ವಿಶೇಷ. ಈ ದಿನದ ಮತ್ತೊಂದು ಆಕರ್ಷಣೆಯೆಂದರೆ ಬೇವು-ಬೆಲ್ಲವನ್ನು ಸೇವಿಸುವದು. ಸರ್ವೇ ಜನೋ ಸುಖಿನೋಭವಂತು’ ಎಂಬ ಆಶಯದೊಂದಿಗೆ ಬೇವು-ಬೆಲ್ಲವನ್ನು ಸ್ವೀಕರಿಸುವುದು ಯುಗಾದಿಯ ಸದಾಶಯವನ್ನು ನೆನೆಸುತ್ತದೆ. ಕಳೆದು ಹೋದ ವರುಷದ ನೆನಪುಗಳನ್ನು ಮೆಲುಕು ಹಾಕುವ ಮುಂದೆ ಸಾಧಿಸಬೇಕೆನ್ನುವುದಕ್ಕೆ ಸಂಕಲ್ಪ ತೊಡುವಂತೆ ಮಾಡುವ ಯುಗಾದಿ ಸುಖ-ದುಃಖಗಳ ರೂಪ.
ಪಂಚಾಂಗ ಶ್ರವಣ- ವಿಶೇಷ ಈ ಯುಗಾದಿ ಹಬ್ಬ
ಹೊಸ ಸಂವತ್ಸರದ ಪಂಚಾಂಗಕ್ಕೆ ಅದರ ಶ್ರವಣಕ್ಕೆ ಎಲ್ಲಿಲ್ಲದ ಬೇಡಿಕೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿಗೆ ಎಲ್ಲಿಲ್ಲದ ಮಹತ್ವವಿದೆ. ಹೊಸ ಋತುಚಕ್ರವು, ಮೇಷಾದಿ ಮಾಸ-ಲಗ್ನಗಳು ಅಶ್ವಿನ್ಯಾದಿ ಮಳೆ ನಕ್ಷತ್ರಗಳು, ಹಬ್ಬ-ಜಾತ್ರೆ, ರಥೋತ್ಸವ-ಮದುವೆ... ಇತ್ಯಾದಿ ಇಂದೇ ಆರಂಭವಾಗುವುದರಿಂದ ಇಂದು ಪಂಚಾಂಗಗಳಾದ... ತಿಥಿ (ಐಶ್ವರ್ಯ), ನಕ್ಷತ್ರ (ಆಯುರ್ ವೃದ್ಧಿ) ವಾರ (ಪಾಪ ಪರಿಹಾರ), ಯೋಗ (ರೋಗನಿವಾರಣೆ), ಕರಣ (ಕಾರ್ಯಸಿದ್ಧಿ)ಗಳ ಬಗ್ಗೆ ತಿಳಿಯುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಹು ಹಿಂದಿನಿಂದಲೂ ಇದೆ.
ವ್ಯವಸಾಯಕ್ಕೆ ಸಿದ್ಧವಾಗಿರುವ ರೈತ ತನ್ನ ಜಮೀನು ಈ ಬಾರಿಯಾದರೂ ಹೊನ್ನಾರಾಗಲಿ ಎಂದು ಪ್ರಾರ್ಥಿಸುತ್ತ ಹೊಲವನ್ನು ಉಳುವ ಮೂಲಕ ತನ್ನ ಕೃಷಿ ಬದುಕಿಗೆ ಮುನ್ನಡಿ ಇಡುತ್ತಾನೆ. ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ, ಮೆರವಣಿಗೆ ಮಾಡುತ್ತಾರೆ.
ಯುಗಾದಿಯಂದು ಕ್ರೀಡೋತ್ಸವ ನಡೆಯುತ್ತದೆ. ಮನೆಯಂಗಳದ ಆಟಕ್ಕೆ ಹೆಚ್ಚು ಒತ್ತು ಸಿಗುತ್ತದೆ. ಅದರಲ್ಲೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಯುಗಾದಿ ಸಮಯದಲ್ಲಿ ಕಾರ್ಡ್ಸ್ ಆಟದ ಗಮ್ಮತ್ತೆ ಹೆಚ್ಚು.
ವಿಶಿಷ್ಟ ಅಡುಗೆ: ಯುಗಾದಿ ಹಬ್ಬದ ವೈಶಿಷ್ಟ್ಯ:
ಇಂದು ಎಲ್ಲರ ಮನೆಯಲ್ಲೂ ಘಮ-ಘಮಿಸುವ ಅಡುಗೆ ಸಿದ್ಧವಾಗುತ್ತದೆ. ಮಾವಿನ ಕಾಯಿಯ ಚಿತ್ರಾನ್ನ, ಬಗೆ-ಬಗೆಯ ಭಕ್ಷ್ಯಗಳು ದೇವರ ನೈವೇದ್ಯಕ್ಕೆ ಸಿದ್ಧವಾಗುತ್ತದೆ.
ನಾವು ಕಾಲದಂತೆ ಬದಲಾಗೋಣ ವ್ಯಕ್ತಿತ್ವ ಮೂಡಿಸೋಣ:
ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ನಮ್ಮ ಈ ಬದುಕು ಸದಾ ಬದಲಾವಣೆಗೆ ತೆರೆದುಕೊಂಡಿರಬೇಕು. ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಾಶೆಗಳಿಗೆ ಕುಗ್ಗದೆ ಆಶಾವಾದಿಯಾಗಿರಬೇಕು. ಪ್ರಕೃತಿಯಲ್ಲಿರುವ ಸಮಯಪ್ರಜ್ಞೆಯನ್ನು ನಾವು ನಮ್ಮ-ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡುವುದೇ ಈ ಹಬ್ಬದ ವಿಶೇಷ.
ಪ್ರಕೃತಿಯು ಈ ಹಬ್ಬದಿಂದ ಮುಂದೆ ಯಾವ ರೀತಿಯಲ್ಲಿ ಬದಲಾವಣೆಯಾಗಿ ಹೊಸ ವಧುವಿನಂತೆ ಸಿಂಗಾರಗೊಂಡು ಸಕಲ ಜೀವರಾಶಿಗೆ ಆಶ್ರಯ ನೀಡುತ್ತದೆಯೋ ಅದೇ ರೀತಿ ನಾವು ಕೂಡ ಹೊಸ ಉತ್ಸಾಹದಿಂದ ನಮ್ಮ ಕಾರ್ಯ ಮಾಡಬೇಕು ನಮ್ಮ ಕೆಲಸದಲ್ಲಿ ಭಗವಂತನನ್ನು ಕಾಣುವುದೇ ಸಾರ್ಥಕತೆಯಾಗಬೇಕು.
ನಾವೆಲ್ಲರೂ ನಮ್ಮ ಬದುಕಿನಲ್ಲಿ ಉದಾಸೀನ ತೊರೆದು, ವಿಶಾಲಹೃದಯದ ಮನುಷ್ಯರಾದಾಗ ಮಾತ್ರ ಯುಗಾದಿ ಹಬ್ಬದ ನಿಜವಾದ ಅರ್ಥ. ಬೇವು ತಿಂದವರಿಗೆ ಬೆಲ್ಲ ತಿನ್ನಿಸುವ, ಪರಿಪಾಠವನ್ನು ಬೆಳೆಸುವದೇ ಯುಗಾದಿ ಹಬ್ಬ ಆಚರಣೆಯ ಉದ್ದೇಶ. ಯುಗಾದಿ ಒಂದು ದಿನದ ಜಾತ್ರೆಯಾಗುವುದು ಬೇಡ. ಅದು ನೂರು ದಿನದ ಜಾತ್ರೆಯಾಗಲಿ, ಇಲ್ಲಿನ ದಾರಿದ್ರ್ಯ ಅಸಮಾನತೆ ತೊಲಗಿ ಬಾಳು ಬೆಳಗುವಂತಾಗಲಿ.
ನೆಮ್ಮದಿಯ ನಾಳೆಗಾಗಿ ನಾವೆಲ್ಲ ಇಂದೇ ಪಣತೊಡಬೇಕಾಗಿದೆ:
ಈ ಯುಗಾದಿ ಸಂದರ್ಭದಲ್ಲಾದರೂ ಒಳ್ಳೆಯದರತ್ತ ಹೋಗೋಣ, ಆಲೋಚಿಸೋಣ, ಕಾರ್ಯಸನ್ನದ್ಧರಾಗೋಣ, ಬದಲಾವಣೆ ಇಂದಿನಿಂದ ಪ್ರಾರಂಭವಾಗಲಿ ನಮ್ಮ ಗುರಿ ತಲುಪಲು ಪ್ರಯತ್ನ ನಿರಂತರವಾಗಲಿ ಈ ಪ್ರಯತ್ನದಲ್ಲಿ ಹಲವಾರು ರೀತಿಯ ಕಷ್ಟ-ನಷ್ಟ ಎದುರಾದರೂ ಎದೆಗುಂದದೆ ಗುರಿಯತ್ತ ದೃಷ್ಟಿಯಿರಲಿ ಖಂಡಿತವಾಗಿಯೂ ನಾವು ಗೆಲ್ಲುತ್ತೇವೆ.ಧನಾತ್ಮಕ ಚಿಂತನೆಯಲ್ಲಿ ಹಾದಿ ನಮ್ಮದಾಗಲಿ. ಯುಗ ಯುಗದಲ್ಲಿ ಇದೇ ರೀತಿ ಯುಗಾದಿ ಬರಲಿ.
- ರಾಘವೇಂದ್ರ ಪ್ರಭು ಕರ್ವಾಲು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ