ಮಕ್ಕಳು ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಪಾಠ ಓದಿದ್ದನ್ನು 3 ಗಂಟೆಯಲ್ಲಿ ಬರೆಯುವ ಕಾಲ ಬಂದಿದೆ ಮಕ್ಕಳು ಪರೀಕ್ಷೆ ಎಂಬ ಉದ್ವೇಗದಿಂದ ಹೊರ ಬರಲು ಪ್ರಯತ್ನಿಸಬೇಕಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 27 ರಿಂದ ಪ್ರಾರಂಭ. ಇನ್ನು ಉಳಿದ ಕೆಲವು ದಿನಗಳಲ್ಲಿ ಮಕ್ಕಳು ಸರಿಯಾದ ಅಭ್ಯಾಸ ಮಾಡಿದರೆ ಯಶಸ್ಸು ಸಾಧ್ಯ. ಅದಕ್ಕೆ ಕೆಲವು ಸೂತ್ರಗಳನ್ನು ಅನುಸರಿಸಬಹುದಾಗಿದೆ.
ಉಳಿದ ದಿನಗಳ ಕುರಿತು ಲೆಕ್ಕ ಹಾಕಿ:
ಮಕ್ಕಳೆ, ಪರೀಕ್ಷೆಗೆ ಉಳಿದ ದಿಗಳ ಕುರಿತು ಲೆಕ್ಕ ಹಾಕಿ. ಉದಾ: 25 ದಿನ ಉಳಿದರೆ ನಿಮಗಿರುವ 6-8 ವಿಷಯಗಳನ್ನು ಗುರುತಿಸಿಕೊಳ್ಳಿ. ಅವುಗಳಲ್ಲಿ ಸುಲಭವಾದ ವಿಷಯಗಳಿಗೆ ಕಡಿಮೆ ದಿನಗಳನ್ನು ಕಷ್ಟಕರವಾದ ವಿಷಯಗಳಿಗೆ ಹೆಚ್ಚು ದಿನಗಳನ್ನು ಹೊಂದಿಸಿಕೊಳ್ಳಿ. ಈ ಸಮಯವನ್ನು ಹೊಂದಾಣಿಕೆ ಮಾಡುವಾಗ ಕೊನೆಯ 2 ದಿನಗಳನ್ನು ಬಿಡಿ, ಏಕೆಂದರೆ ಆ ದಿನಗಳಲ್ಲಿ ನಿಮ್ಮ ಮನಸ್ಸು ಫ್ರೆಶ್ ಆಗಬೇಕು ಅದಕ್ಕಾಗಿ. ಸುಲಭವಾದ ವಿಷಯಗಳು ಪ್ರತಿಯೊಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ಕೆಲವರಿಗೆ ಗಣಿತ ಸುಲಭವಾದರೆ ಮತ್ತೆ ಕೆಲವರಿಗೆ ಅದು ಕಬ್ಬಿಣದ ಕಡಲೆಯಾಗಿರುತ್ತದೆ.
ಕಷ್ಟವಾದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅದರ ಬಗ್ಗೆ ಗಮನ ಹರಿಸಿ:-
ಕಷ್ಟವಾದ ವಿಷಯಗಳನ್ನು ಮೊದಲು ಕೈಗೆತ್ತಿಕೊಳ್ಳಿ. ಗಣಿತದ ಸೂತ್ರ ಬಿಡಿಸಲು, ಇಂಗ್ಲೀಷ್ ಬರೆಯಲು ಕಷ್ಟವಾಗುತ್ತೆ ಎಂದರೆ ಮೊದಲು ಆ ವಿಷಯಗಳ ಪಠ್ಯಪುಸ್ತಕ, ನೋಟ್ಸ್ ಮಾಡಿಕೊಂಡು ಓದಲು ಪ್ರಾರಂಭಿಸಿ. ಕಡಿಮೆ ಸಮಯ ಇದೆ ಎಂದು ಅವಸರದಿಂದ ಓದದೆ ವಿಷಯವನ್ನುಅರ್ಥ ಮಾಡಿಕೊಂಡು ಓದಿದರೆ ಉತ್ತಮ. ಆದಷ್ಟು ಬರೆದು ಓದಿದರೆ ನೆನಪು ಉತ್ತಮವಾಗಿ ಉಳಿಯುತ್ತದೆ.
ಇಂಗ್ಗೀಷ್ ಸ್ಪೆಲ್ಲಿಂಗ್ ನ್ನು ಬರೆಯಿರಿ ಮತ್ತು ಅದನ್ನು ಮನನ ಮಾಡಿರಿ. ಇದರಿಂದ ತರಗತಿಯಲ್ಲಿ ಶಿಕ್ಕಕರು ಹೇಳಿದ ಮಾತು ಮತ್ತು ನೀವು ಓದಿದ ವಿಷಯ ಪೂರಕವಾಗಿ ನೆನಪು ಉಳಿಯುತ್ತದೆ. ನಿಮಗೆ ಬೇಕಾದಲ್ಲಿ ನಿಮ್ಮ ಹಿರಿಯರನ್ನು ಕೇಳಿರಿ ಅವರು ನಿಮಗೆ ಸಹಾಯ ಮಾಡುತ್ತಾರೆ ಕೀಳರಿಮೆ ಬೇಡ. ಓದಿದ ವಿಷಯ ಅರ್ಥವಾಗದಿದ್ದರೆ ಆ ವಿಷಯದ ಕುರಿತು ಬೇರೆಯವರೊಂದಿಗೆ ಕೇಳಿ ಸರಿಯಾಗಿ ಅರ್ಥಮಾಡಿದ ಬಳಿಕವೇ ಮುಂದೆ ಓದಿ. ಇಲ್ಲವಾದರೆ ಅದು ಸ್ಪಷ್ಟವಾಗಿ ಅರ್ಥವಾಗದಿದ್ದರೆ ಅದೇ ತಲೆಯಲ್ಲಿ ಉಳಿಯುತ್ತದೆ.
ಕೆಲವು ವಿದ್ಯಾರ್ಥಿಗಳಲ್ಲಿ ನಾನಿಗಲೇ 1-2 ಬಾರಿ ರಿವಿಜನ್ ಮಾಡಿದ್ದೇನೆ. ಪರೀಕ್ಷೆಯ ಹಿಂದಿನ ದಿನಬ ಓದಿದರಾಯಿತು ಎಂದು ಉದಾಸೀನ ಮಾಡಿಕೊಂಡು ಬಿಡಬೇಡಿ. ಅತಿಯಾದ ಆತ್ಮವಿಶ್ವಾಸ ಕೂಡ ಉತ್ತಮವಾದದಲ್ಲ. ಮೊದಲು ಓದಿರುವಾಗ ಕೆಲವು ವಿಷಯಗಳನ್ನು ನೀವು ಬಿಟ್ಟಿರಬಹುದು ಅದನ್ನು ಮತ್ತೊಮ್ಮೆ ಓದಿ, ಮುಂದುವರೆಯಿರಿ. ಈ ಸಮಯ ಅತ್ಯಂತ ಮಹತ್ವದ್ದು. ಕೊನೆ ಗಳಿಗೆಯಲ್ಲಿ ಸಾಧ್ಯವಾಗದೆ ಬೇಸರ ಮಾಡಿಕೊಂಡು ಇರಬೇಡಿ.
ಪರೀಕ್ಷಾ ಪಟ್ಟಿಯಲ್ಲಿ ವಿಷಯಗಳ ನಡುವೆ ಮದ್ಯೆ ಬಿಡುವು ಇರುತ್ತದೆ. ಒಂದು ವಿಷಯ ಮುಗಿದ ಕೂಡಲೇ 2-3 ದಿನ ರಜೆಯಿರುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ. ಪರೀಕ್ಷೆಯ ವೇಳಾ ಪಟ್ಟಿಯನ್ನು ನೀವು ಮಲಗುವ ಕೋಣೆಯಲ್ಲಿ ದೊಡ್ಡದಾಗಿ ಬರೆದು ತೂಗು ಹಾಕಿ. ಮತ್ತು ಅದಕ್ಕೆ ಸರಿಯಾಗಿ ಓದಿರಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ದಿನ ಬೇರೆ ವಿಷಯವನ್ನು ಓದಿ ಬರುವುದು ಅಥವಾ ರಜೆಯ ದಿನ ಪರೀಕ್ಷೆಇದೆ ಎಂದು ತಿಳಿದು ಶಾಲೆಗೆ ಬರುವುದು. ಈ ರೀತಿಯ ತಪ್ಪಿನಿಂದ ತೊಂದರೆ ಯಾಗಬಹುದು. ಹೀಗಾಗಿ ಈ ಬಗ್ಗೆ ಗಮನ ವಿರಲಿ.
ಓದುವ ಸಮಯ ನಿದಿಪಡಿಸಿಕೊಳ್ಳಿ:
ಓದಿಗೆ ಕುಳಿತುಕೊಳ್ಳುವ ಸಮಯ ಮತ್ತು ಸ್ಥಳ ಅತ್ಯಂತ ಪ್ರಾಮುಖ್ಯವಾದದು. ಏಕೆಂದರೆ ಇದು ಕೂಡ ಓದಿನಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ಬೆಳಿಗ್ಗೆ ಬೇಗನೆ ಎದ್ದು ಮುಖ ತೊಳೆದು ಓದಿದರೆ ಉತ್ತಮ ಆಗ ವಾತಾವರಣ ಶುಭ್ರವಾಗಿದ್ದು ಯಾವುದೇ ರೀತಿಯ ಗಲಾಟೆಗಳು ಇರುವುದಿಲ್ಲ. ನಿದ್ದೆಗೆಟ್ಟು ಓದಬೇಡಿ. ಇದು ಆರೋಗ್ಯದ ಕಾರಣ ಉತ್ತಮವಲ್ಲ. ಸಂಜೆಯ ವೇಳೆಯು ಕೂಡ ಓದಲು ಉತ್ತಮವಾದ ಸಮಯವಾಗಿದೆ. ನಿಮ್ಮ ಮನೆಯ ಪಕ್ಕದಲ್ಲಿ ಮರಗಳು ಇದ್ದರೆ ಅದರ ಹತ್ತಿರ ಹೋಗಿ ಓದಿದರೆ ಉತ್ತಮ ಅಲ್ಲಿ ಗಾಳಿ ಮತ್ತುಉತ್ತಮ ವಾತಾವರಣ ಇರುತ್ತದೆ.
ಶುದ್ದ ನೀರು ಹೆಚ್ಚು ಕುಡಿಯಿರಿ:
ಈಗಾಗಲೇ ಸೆಕೆಯಿರುವುದರಿಂದ ಅಂಗಡಿಯಲ್ಲಿ ಸಿಗುವ ಪಾನೀಯಗಳನ್ನು ಕುಡಿಯದೆ ಶುದ್ದವಾದ ನೀರು ಆದಷ್ಟು ಹೆಚ್ಚು ಕುಡಿಯಿರಿ ಇದು ಆರೋಗ್ಯಕ್ಕೆ ಉತ್ತಮ ಅಲ್ಲದೆ ಏಕಾಗ್ರತೆಯ ದೃಷ್ಟಿಯಿಂದಲೂ ಉತ್ತಮವಾಗಿದೆ. ಕರಿದ ತಿಂಡಿಗಳ ಬಗ್ಗೆ ಜಾಗರೂಕತೆ ವಹಿಸಿ ನಿಮ್ಮಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನೀವು ಉತ್ತಮವಾಗಿ ಪರೀಕ್ಷೆಯಲ್ಲಿ ಬರೆದು ಉತ್ತಮ ಅಂಕ ಗಳಿಸಬಹುದು. ನಿಮ್ಮ ಪರಿಸರವನ್ನು ಶುದ್ದವಾಗಿರಿಸಿ ಇದು ಆರೋಗ್ಯದ ಕಾರಣದಿಂದ ಅಗತ್ಯವಾಗಿದೆ.
ಓದಿನ ನಡುವೆ ಮದ್ಯೆಯಲ್ಲಿ ಬಿಡುವುಇರಲಿ:
ನಿರಂತರವಾಗಿ ಓದುತ್ತಾ ಇರದೆ ಮದ್ಯೆಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಏಕಾಗ್ರತೆಯ ಆಟವನ್ನು ಆಡಿರಿ ಇದರಿಂದ ಉತ್ತಮವಾದ ನೆನಪು ಉಳಿಯಲು ಸಾದ್ಯ.ಗಟ್ಟಿಯಾಗಿ ಓದುದರಿಂದ ನೆನಪು ಉಳಿಯುದರಿಂದ ಆದಷ್ಟು ಗಟ್ಟಿಯಾಗಿ ಓದಿ.ಅವಸರದಿಂದ ಓದದೆ ಅರ್ಥಮಾಡಿಕೊಂಡು ಓದಿ.ಪರೀಕ್ಷೆಗೆ ಕಡಿಮೆ ದಿನವಿರುದರಿಂದ ಈ ಸಮಯವನ್ನು ಸದುಪಯೋಗಿ ಪಡಿಸಿರಿ.ಮಗ್ಗಿಯನ್ನು ಹೇಳುವಾಗಲೂ ನಿಮಗೆ ಕೇಳುವಷ್ಟು ಸ್ವರದಲ್ಲಿ ಓದಿ ಅತೀಯಾದಗಟ್ಟಿ ಸ್ವರ ಬೇಡ ಗಣಿತದ ಸೂತ್ರವನ್ನುಅರ್ಥಮಾಡಿಕೊಂಡು ನೆನಪು ಮಾಡಿ.
ಟಿ.ವಿ ಮೊಬೈಲ್ಗೆ, ಕಂಪ್ಯೂಟರ್ ಗೆ ವಿರಾಮ ನೀಡಿ:
ಮನಸ್ಸು ಚಂಚಲವಾಗಿರುವ ಟಿ.ವಿ ಕಾರ್ಯಕ್ರಮಗಳು, ಮೊಬೈಲ್ ಆಟ ಕಂಪ್ಯೂಟರ್ ಇತ್ಯಾದಿಗಳನ್ನು ಈ ದಿನಗಳಲ್ಲಿ ಮಾಡಬೇಡಿ. ಅವನ್ನೆಲ್ಲಾ ಪರೀಕ್ಷೆ ಮುಗಿದ ಬಳಿಕವಷ್ಟೆ ಗಮನ ನೀಡಿ ಅದರ ಬದಲು ಓದಿನ ಮಧ್ಯದಲ್ಲಿ ಏಕತಾನತೆ ಸಡಿಲಗೊಳಿಸಲು ಶಾಂತ ಪರಿಸರದಲ್ಲಿ ವಾಕ್ ಮಾಡಿ. ಮನೆಯಲ್ಲಿ ಜೋಕಾಲಿ ಇದ್ದರೆ ಅದರಲ್ಲಿ ಸ್ವಲ್ಪ ಕುಳಿತುಕೊಳ್ಳಿ. ಸಮಯವಿದ್ದರೆ ಹಿಂದಿನ ಪ್ರಶ್ನೆ ಪತ್ರಿಕೆಗೆ ಉತ್ತರಿಸಿ ಇದರಿಂದ ನಿಮಗೆ ಆತ್ಮವಿಶ್ವಾಸ ಅಲ್ಲದೆ ಸಮಯದ ಹೊಂದಾಣಿಕೆಗೆ ಉತ್ತಮ ಪರೀಕ್ಷೆಯಲ್ಲಿ ಬರಹ ಮತ್ತು ಕಾಗುಣಿತ, ಪೂರ್ಣ ವಿರಾಮ, ಅಲ್ಪ ವಿರಾಮದ ಬಗ್ಗೆ ಗಮನಹರಿಸಿ.
ಕಂಬೈಂಡ್ ಸ್ಟಡಿ ಇರಲಿ, ಆದರೆ ಸ್ಪರ್ಧೆಯಲ್ಲಿ ಬಿಳಬೇಡಿ:
ಪಠ್ಯಪುಸ್ತಕ, ನೋಟ್ಸ್, ಗುರುಗಳು ಹೇಳಿದ ಪಾಠ ನಿಮಗೆ ಆಸ್ತಿ ಅದರ ಬದಲು ಮಾರುಕಟ್ಟೆಯಲ್ಲಿರುವ ಗೈಡ್ ಬಗ್ಗೆ ಗಮನ ನೀಡಬೇಡಿ. ಮನೆಯ ಪಕ್ಕದಲ್ಲಿ ನಮ್ಮ ಕ್ಲಾಸ್ ಮೇಟ್ ಗಳ ಜತೆಗೆ ಕಂಬೈಂಡ್ ಸ್ಟಡಿ ಮಾಡಿ. ಆದರೆ ಸ್ಪರ್ಧೆ ಬೇಡ. ಪ್ರತಿಯೊಬ್ಬರಿಗೆ ಅವರದೆ ಆದ ಸಾಮರ್ಥ್ಯ ಇರುತ್ತದೆ. ಆದಷ್ಟು ಬರೆದುಕೊಂಡು ಓದಿ.
ಓದಿನಲ್ಲಿ ನಿರಾಳತೆ ಇರಲಿ:
ಸಮಯವನ್ನು ವಿಷಯಕ್ಕೆ ತಕ್ಕಂತೆ ಮೀಸಲಿಟ್ಟು ಓದಿ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆ ಸಿಕ್ಕಿದ ಕೂಡಲೇ ಬರೆಯದೆ ಅದನ್ನು ಒಂದು ಬಾರಿ ಓದಿ ನಂತರ ಉತ್ತರಿಸಿ ಪ್ರಶ್ನೆಗೆ ಉತ್ತರಿಸುವಾಗ ಸಮಯದ ಬಗ್ಗೆ ಗಮನ ಇರಲಿ. ಗೊತ್ತಿರುವ ಉತ್ತರವನ್ನು ಸ್ಪಷ್ಟವಾಗಿ ಬರೆಯಿರಿ. ಮುಗಿಸಿದಾಗ ಓದಿ ತಪ್ಪಾದ ಉತ್ತರವನ್ನು ಸರಿ ಮಾಡಿ ಬರೆದು ನೀಡಿ ಆರಾಮವಾಗಿ ಉತ್ತರಿಸಿ ಉದ್ವೇಗ ಬೇಡ.
ನಿಮ್ಮ ಪರೀಕ್ಷೆಗಳು ಚೆನ್ನಾಗಿರಲಿ ನಿಮಗೆ ಶುಭವಾಗಲಿ.
ರಾಘವೇಂದ್ರ ಪ್ರಭು, ಕರ್ವಾಲು.
ಸಾಯಿ ಕೃಪಾ ಅಲೆವೂರು ಅಂಚೆ ಕರ್ವಾಲು
ಮೊ-9880811036
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ