ಮಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಮ್ಮೆ ಚರ್ಮದ ದಲಿತ ದ್ರೋಹಿ ಸರಕಾರವಾಗಿದ್ದು, ಅದರ ವಿರುದ್ಧ ಬಿಜೆಪಿ 14 ತಂಡಗಳನ್ನು ರಚಿಸಿ ರಾಜ್ಯಾದ್ಯಂತ ಹೋರಾಟ ಆರಂಭಿಸಿದೆ ಎಂದು ಮಾಜಿ ಕೇಂದ್ರ ಸಚಿವರು ಹಾಗೂ ವಿಜಯಪುರದ ಹಾಲಿ ಸಂಸದ ರಮೇಶ್ ಜಿಗಜಿಣಗಿ ಹೇಳಿದರು.
ತನ್ನ ಅತಾರ್ಕಿಕವಾದ ಗ್ಯಾರಂಟಿ ಯೋಜನೆಗಳಿಗೆ ದಲಿತರ ಅಭಿವೃದ್ಧಿಗಾಗಿ ಮೀಸಲಿರುವ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಇಲಾಖೆಯ ಕೋಟ್ಯಂತರ ಹಣದ ದುರ್ಬಳಕೆ ಮಾಡಿಕೊಂಡಿರುವ ಸಿದ್ದರಾಮಯ್ಯ ದಲಿತ ವಿರೋಧಿ ಮತ್ತು ದಲಿತದ್ರೋಹಿ ಯಾಗಿದ್ದಾರೆ ಎಂದು ಜಿಗಜಿಣಗಿ ಆರೋಪಿಸಿದರು.
ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವೂ ಬಜೆಟ್ ನಲ್ಲಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಗಾಗಿ ಶೇ.20ರಷ್ಟು ಹಣವನ್ನು ಮೀಸಲಿಡಲಾಗುತ್ತದೆ. ಆ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಒಟ್ಟು 25,000 ಕೋಟಿಗೂ ಹೆಚ್ಚು ಹಣವನ್ನು ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿ ನಿಧಿಯಿಂದ ತೆಗೆದು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ರಮೇಶ್ ಜಿಗಜಿಣಗಿ ಹೇಳಿದರು.
ಕಳೆದ ಹತ್ತು ತಿಂಗಳಲ್ಲಿ ಯುವ ಸಬಲೀಕರಣ / ಕ್ರೀಡಾ ಇಲಾಖೆ, ಸಣ್ಣ ಕೈಗಾರಿಕೆ, ಕೌಶಲ್ಯಗಳ ಅಭಿವೃದ್ಧಿ, ಆಹಾರ ನಾಗರಿಕ ಪೂರೈಕೆ, ಐಟಿ-ಬಿಟಿ, ಕೃಷಿ ಮತ್ತು ಪ್ರವಾಸೋದ್ಯಮ ಇಲಾಖೆಗಳು ಶೇ 40ರಷ್ಟೂ ಪ್ರಗತಿಯನ್ನು ತೋರಿಸಿಲ್ಲ ಎಂದು ಅವರು ಅಂಕಿ-ಅಂಶಗಳ ಸಮೇತ ಮಾಹಿತಿಯನ್ನು ಮುಂದಿಟ್ಟರು.
2023 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ '7 D' ತಾವೇ ಕಿತ್ತು ಹಾಕಿದ್ದಾಗಿ ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ ಎರಡೇ ವರ್ಷದಲ್ಲಿ 25 ಸಾವಿರ ಕೋಟಿ 'ದಲಿತರ ಮೀಸಲು ನಿಧಿ'ಯನ್ನು ಮುಳುಗಿಸಿದ್ದಾರೆ. ಇಷ್ಟೆಲ್ಲ ಅನಾಹುತ ಮಾಡಿದ ಕಾಂಗ್ರೆಸ್ ಸರಕಾರ ಈಗ ದಲಿತರ ಮೀಸಲು ನಿಧಿಯನ್ನು ದುರ್ಬಳಕೆ ಮಾಡಲು ಮತ್ತೆ ಬಜೆಟ್ ಬರುವುದನ್ನೆ ಕಾಯುತ್ತಿದೆ . 15 ಸಾವಿರ ಕೋಟಿ ರೂ ಮುಳುಗಿಸಲು ಪ್ರಸ್ತಾವನೆ ಸಿದ್ಧವಾಗಿದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಕೂಡ ಕಾಂಗ್ರೆಸ್ ಪಕ್ಷ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಕೇರಳದಲ್ಲಿ ಮಲಪ್ಪುರಂ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಿಯಾಂಕ ವಾಡ್ರಾ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ಖರ್ಗೆಯವರನ್ನು ಜತೆಗೆ ಬರಲು ಹೇಳಿದ್ದರೂ ಒಳಗೆ ಬಿಟ್ಟುಕೊಳ್ಳಲಿಲ್ಲ. ಅವರು ಹೊರಗಿನಿಂದಲೇ ಕಿಟಿಕಿಯ ಮೂಲಕ ಇಣುಕಿ ನಾಮಪತ್ರ ಸಲ್ಲಿಕೆಯನ್ನು ನೋಡಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದು ಅವರಿಗೆ ಮಾಡಿದ ಅವಮಾನವಲ್ಲವೆ? ಎಂದು ಜಿಗಜಿಣಗಿ ಪ್ರಶ್ನಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ನಿಜ. ಅಷ್ಟೇ ಅಲ್ಲ, ಈಗಲೂ ಅದೇ ಪರಂಪರೆಯನ್ನು ಕಾಂಗ್ರೆಸ್ನವರು ಮುಂದುವರಿಸಿದ್ದಾರೆ ಅನ್ನುವುದಕ್ಕೆ ಇದೇ ನಿದರ್ಶನ.
ನಾನು ಸಚಿವನಾಗಿದ್ದಾಗ ಇದೇ ಎಸ್ಸಿಎಸ್ಪಿ ಟಿಎಸ್ಪಿ ಹಣವನ್ನು ಬಳಸಿಕೊಂಡು ದಲಿತರಿಗೆ ಗಂಗಾಕಲ್ಯಾಣ ಯೋಜನೆಯನ್ನು ಜಾರಿ ಮಾಡಿದೆ ಎಂದು ಜಿಗಜಿಣಗಿ ನೆನಪಿಸಿಕೊಂಡರು.
ಹಣ ದುರ್ಬಳಕೆಯಲ್ಲಿ ಚಾಂಪಿಯನ್ ಸಿದ್ದರಾಮಯ್ಯ: ಎನ್. ರವಿಕುಮಾರ್ ಕಿಡಿ
ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯನವರು 7ಡಿ ಆಕ್ಟ್ ತಂದಿದ್ದಾರೆ. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣವನ್ನು ಸಂಪೂರ್ಣ ದಲಿತರಿಗಾಗಿಯೇ ಉಪಯೋಗಿಸಬೇಕು. ಅದರ ಒಂದು ಪೈಸೆಯನ್ನೂ ಇತರ ಇಲಾಖೆಗೆ ಬಳಸಬಾರದು ಎನ್ನುವ ಕಾಯ್ದೆ ಮಾಡಿದ್ದಾರೆ. ಆದರೆ ಅದೇ ಕಾಯ್ದೆಯನ್ನು ಗಾಳಿಗೆ ತೂರಿ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾರೆ ಎಂದರು.
ಮೊದಲನೆ ವರ್ಷದಲ್ಲಿ 11 ಸಾವಿರ ಕೋಟಿ, ಎರಡನೇ ವರ್ಷ 14 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಒಟ್ಟು 25,426 ಕೋಟಿ 68 ಲಕ್ಷ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಹಾಗಾದರೆ ದಲಿತರ ಅಭಿವೃದ್ಧಿ ಎಂದು ನೀವು ಬೊಗಳೆ ಬಿಡುತ್ತಿದ್ದೀರಾ?
ಹಿಂದುಳಿದ ವರ್ಗದವರ ಕಲ್ಯಾಣ ಎಷ್ಟಾಗಿದೆ. ಕೇವಲ 33%. ಇಷ್ಟೇ ಆದರೆ ನೀವು ದಲಿತರ ಅಭಿವೃದ್ಧಿ ಚಾಂಪಿಯನ್ ಆಗ್ತೀರಾ? ಅದು ಹೇಗೆ? ದಲಿತರ ಉದ್ಧಾರ ಎಂದು ನೀವು ಹೇಳುವುದು ಬರೀ ಬೋಗಸ್ ಎಂದು ರವಿಕುಮಾರ್ ಹರಿಹಾಯ್ದರು.
4 ಲಕ್ಷ ಕೋಟಿ ಗಾತ್ರ ಬಜೆಟ್ ಆದರೆ ಅದರಲ್ಲಿ 24% ಅಂದರೆ 43 ಸಾವಿರ ಕೋಟಿ ಹಣ ದಲಿತರ ಅಭಿವೃದ್ಧಿಗೆ ಮೀಸಲಿಡಬೇಕು. ಆದರೆ ಅದರಲ್ಲಿ 14,500 ಕೋಟಿ ಹಣವನ್ನು ಗ್ಯಾರಂಟಿಗೆ ಬಳಸಲು ಮುಂದಾಗಿದ್ದೀರಿ. ಮತ್ತೆ ಬಿಜೆಪಿಯವರು ದಲಿತ ವಿರೋಧಿ ಅಂತ ಹಣೆಪಟ್ಟಿ ಹಚ್ಚಲು ಬರ್ತೀರಿ. ಇದನ್ನು ವಿರೋಧಿಸಿ ರಾಜ್ಯಾದ್ಯಂತ 14 ತಂಡಗಳಲ್ಲಿ ನಾವು ಹೋರಾಟ ಮಾಡಲಿದ್ದೇವೆ ಎಂದು ರವಿಕುಮಾರ್ ತಿಳಿಸಿದರು.
ಹತ್ತು ಕೆ.ಜಿ ಅಕ್ಕಿ ಕೊಡ್ತೇವೆ ಎಂದವರಿಗೆ, ಕೇಂದ್ರ ಸರಕಾರ ಕೊಡುತ್ತಿರುವ ಐದು ಕೆಜಿ ಅಕ್ಕಿಯನ್ನೂ ನೆಟ್ಟಗೆ ಜನರಿಗೆ ವಿತರಿಸಲು ಆಗುತ್ತಿಲ್ಲ ಈ ಭ್ರಷ್ಟ ಸರಕಾರಕ್ಕೆ ಎಂದು ರವಿಕುಮಾರ್ ವಾಗ್ದಾಳಿ ನಡೆಸಿದರು.
ವಿಶ್ವವಿದ್ಯಾನಿಲಯಗಳಿಗೆ ಕೊಡಲು ಇವರಲ್ಲಿ ಹಣವಿಲ್ಲ. ವೇತನ, ಪಿಂಚಣಿ ಕೊಡಲು ಹಣವಿಲ್ಲ. 6,000 ಶಾಲೆಗಳನ್ನು, ವಿಶ್ವವಿದ್ಯಾಲಯ ಗಳನ್ನು ಮುಚ್ಚುತ್ತಿದ್ದಾರೆ. ಇದೊಂದು ಕ್ರೂರ ಅವಮಾನ. ಇಂತಹ ಬರಗೆಟ್ಟ ಸರಕಾರ ಅಧಿಕಾರದಲ್ಲಿರಬಾರದು ಎಂದು ರವಿಕುಮಾರ್ ಹೇಳಿದರು.
ಎಲ್ಲ ದರಗಳನ್ನು ಹೆಚ್ಚಿಸಿದ್ದೀರಿ, ತೆರಿಗೆ ಜಾಸ್ತಿ ಮಾಡಿದ್ದೀರಿ, ಬಹುಶಃ ಪ್ರಾಕೃತಿಕವಾಗಿ ಸಿಗುವ ಗಾಳಿ ಒಂದಕ್ಕೆ ಮಾತ್ರ ತೆರಿಗೆ ಹಾಕದೆ ಬಿಟ್ಟಿರಬಹುದು ಎಂದು ಅವರು ಲೇವಡಿ ಮಾಡಿದರು.
ಸಚಿವ ಸಂಪುಟದಲ್ಲಿ ಶೇ 33 ಮಂದಿ ಶಾಸಕರಿಗೆ ಮಾತ್ರ ಅವಕಾಶವಿದೆ. ಆದರೆ ಸಿದ್ದರಾಮಯ್ಯನವರು ಹಿಂಬಾಗಿಲ ವಿಧಾನದ ಮೂಲಕ ಇದ್ದಬದ್ದವರಿಗೆಲ್ಲ ಕ್ಯಾಬಿನೆಟ್ ದರ್ಜೆ ನೀಡುವ ಮೂಲಕ ಹಿಂಬಾಗಿಲಿನಿಂದ ಮಂತ್ರಿಗಳನ್ನಾಗಿ ಮಾಡಿದ್ದಾರೆ. ನೀವು ಇಂತಹ ಅಕ್ರಮಗಳಲ್ಲಿ ಚಾಂಪಿಯನ್ ಅಷ್ಟೆ. ಈ ಸರಕಾರಕ್ಕೆ ಮಾನವೀಯತೆಯೇ ಇಲ್ಲ ಎಂದು ರವಿಕುಮಾರ್ ವಾಗ್ದಾಳಿ ನಡೆಸಿದರು.
ಬಜೆಟ್ ಪ್ರತಿ ಹರಿದು ಸಿದ್ದರಾಮಯ್ಯ ಮುಖಕ್ಕೆ ಎಸೆಯುತ್ತೇವೆ: ಹರ್ಷವರ್ಧನ್ ಎಚ್ಚರಿಕೆ
ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ದಲಿತರ ಅಭಿವೃದ್ಧಿಗೆ ಮೀಸಲಾದ ಹಣವನ್ನು ದುರ್ಬಳಕೆ ಮಾಡುತ್ತಾರೆ ಅನ್ನುವ ಕಲ್ಪನೆಯೇ ನಮಗಿರಲಿಲ್ಲ. ಅದರ ಒಂದು ಸಣ್ಣ ಸುಳಿವು ಸಹ ಮೊದಲು ಸಿಕ್ಕಿದ್ದರೆ ನಾವು ಅವಕಾಶವನ್ನೇ ನೀಡುತ್ತಿರಲಿಲ್ಲ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಚಿವರೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಗೃಹಸಚಿವರ ಪರಮೇಶ್ವರ್ ಕೂಡ ಹಲ್ಲಿಲ್ಲದ ಹುಲಿಯಾಗಿದ್ದಾರೆ. ಅವರ ಇಲಾಖೆಯ ಗುಪ್ತಚರ ಮಾಹಿತಿಗಳೇ ಅವರಿಗೆ ಸಿಗುತ್ತಿಲ್ಲ. ಸಿದ್ದರಾಮಯ್ಯ ವ್ಯವಸ್ಥಿತವಾಗಿ ದಲಿತ ನಾಯಕರನ್ನು ತುಳಿದು, ದಲಿತರಿಗೆ ಧ್ವನಿ ಇಲ್ಲದಂತೆ ಮಾಡಿದ್ದಾರೆ. ಬಜೆಟ್ನಲ್ಲಿ ಹೆಚ್ಚುವರಿ ಹಣ ಒದಗಿಸಿ ಗ್ಯಾರಂಟಿ ಯೋಜನೆ ಮಾಡಿಕೊಳ್ಳಿ. ಆದರೆ ದಲಿತರ ಹಣ ಮುಟ್ಟಲು ಬರಬೇಡಿ. ಈ ಬಾರಿ ಮಾರ್ಚ್ 7ರಂದು 16ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನಃ ದಲಿತರ ಅಭಿವೃದ್ಧಿ ನಿಧಿಗೆ ಕೈಹಾಕಿದರೆ ಬಜೆಟ್ ಪ್ರತಿಗಳನ್ನು ವಿಧಾನಸೌಧದಲ್ಲೇ ಹರಿದು ಅವರ ಮುಖಕ್ಕೆ ಎಸೆಯಲಾಗುವುದು ಎಂದು ಹರ್ಷವರ್ಧನ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ರಾಜ್ಯ ಎಸ್ಸಿ ಮೋರ್ಚಾದ ಉಪಾಧ್ಯಕ್ಷರಾದ ಗೋಪಾಲ್, ಸಾಬ್ ದೊಡ್ಡಮನಿ, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಗಂಗಪ್ಪ, ಎಸ್ಸಿ ಮೋರ್ಚಾ ದ.ಕ ಜಿಲ್ಲಾಧ್ಯಕ್ಷ ಜಗನ್ನಾಥ, ಎಸ್ಟಿ ಮೋರ್ಚಾ ದ.ಕ ಜಿಲ್ಲಾಧ್ಯಕ್ಷ ಹರೀಶ್ ಸೇರಿದಂತೆ ಹಲವು ಪ್ರಮುಖ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ