ಮಂಗಳೂರು: ಕನ್ನಡ-ತುಳು ಭಾಷೆಗಳ ಹಿರಿಯ ವಿದ್ವಾಂಸ ವಾಮನ ನಂದಾವರ ಇಂದು (ಮಾ.15) ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ತುಳು ಜಾನಪದ ವಿದ್ವಾಂಸರಾಗಿದ್ದ ಅವರು ಕೋಟಿ-ಚೆನ್ನಯರ ಕುರಿತು ಸಂಶೋಧನೆ ಮಾಡಿದ್ದರು. ಅವರು 25 ಕೃತಿಗಳನ್ನು ರಚಿಸಿದ್ದು. ಪ್ರಕಾಶಕ, ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು.
ಅವರಿಗೆ ಪತ್ನಿ, ಲೇಖಕಿ ಚಂದ್ರಕಲಾ ನಂದಾವರ, ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಮೂರು ವರ್ಷಗಳಿಂದ ಉಳಾಯಿಬೆಟ್ಟುವಿನಲ್ಲಿರುವ ವೃದ್ಧಾಶ್ರಮವೊಂದರಲ್ಲಿ ವಾಸವಾಗಿದ್ದರು.
ಇಂದು ಅಪರಾಹ್ನ 2 ಗಂಟೆಯ ಬಳಿಕ ನಗರದ ಉರ್ವ ಸ್ಟೋರ್ ನಲ್ಲಿರುವ ತುಳು ಭವನದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಾಮನ ನಂದಾವರ- ಚಂದ್ರಕಲಾ ನಂದಾವರ ದಂಪತಿ ಈಚೆಗಷ್ಟೆ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿಗೆ ಭಾಜನರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುದುಂಗಾರು ಕಟ್ಟೆ, ಪಾಣೆಮಂಗಳೂರು ಎಸ್.ವಿ.ಎಸ್. ಶಾಲೆ, ಕುರ್ನಾಡು ಹಾಗೂ ಕೋಟೆಕಾರು ಆನಂದಾಶ್ರಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಪಡೆದಿದ್ದರು. ಮಂಗಳೂರು ಸರಕಾರಿ ಬಿಎಡ್ ಕಾಲೇಜಿನಲ್ಲಿ ಬಿಎಡ್ ಶಿಕ್ಷಣ ಪಡೆದು ಸೈಂಟ್ ಆ್ಯನ್ಸ್ ಮಹಿಳಾ ಶಿಕ್ಷಕ- ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾಗಿ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯದ ಅಧ್ಯಯನ ಮಾರ್ಗದರ್ಶಕ ರಾಗಿದ್ದರು. ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು ದರ್ಶನ ಯೋಜನೆಯ ಸಹಾಯಕ ಸಂಪಾದಕ ರಾಗಿಯೂ ಸೇವೆ ಸಲ್ಲಿಸಿದ್ದರು. ಬಂಟ್ವಾಳದ ನಂದಾವರದಲ್ಲಿ ನಡೆದ ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ನ 12 ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ