ರಾಯರನ್ನು ನಂಬಿದವರಿಗೆ ಯಾವತ್ತೂ ವಿಜಯವೇ ಪ್ರಾಪ್ತಿಯಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ ಬೆಂಗಳೂರು ವಿವಿ ನಿವೃತ್ತ ಪ್ರೊಫೆಸರ್ ಉಮಾ ಗಿರಿಮಾಜಿ. ಬೆಂಗಳೂರಿನ ಜಯನಗರ ಐದನೇ ಬಡಾವಣೆಯ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದ ಅನನ್ಯ ಭಕ್ತರಾಗಿರುವ ಅವರು ತಮ್ಮ ಬದುಕಿನಲ್ಲಿ ಆಗಿರುವ ಪವಾಡಗಳನ್ನು ಹೀಗೆ ಹಂಚಿಕೊಳ್ಳುತ್ತಾರೆ.
ನಾನು ಏಳು ವರ್ಷದ ಬಾಲಕಿಯಾಗಿದ್ದಾಗಿಂದಲೂ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನಿತ್ಯವೂ ಹೋಗಿ ದರ್ಶನ ಮಾಡಿಕೊಂಡು ಬರುವ ಪರಿಪಾಠವನ್ನು ರೂಢಿಸಿಕೊಂಡಿದ್ದೇನೆ . ನಮ್ಮ ಮನೆ ಚಾಮರಾಜಪೇಟೆಯಲ್ಲಿ ಇದ್ದ ಕಾರಣಕ್ಕಾಗಿ ಮೊದಲು ನಾನು ಸೀತಾಪತಿ ಅಗ್ರಹಾರದ ರಾಯರ ಮಠಕ್ಕೆ ಪ್ರತಿನಿತ್ಯ ಹೋಗಿ ದರ್ಶನ ಭಾಗ್ಯ ಪಡೆಯುತ್ತಿದ್ದೆ.
ವಿವಾಹ ಮತ್ತು ಕುಟುಂಬ ರೂಪಗೊಂಡ ನಂತರ ಜಯನಗರ 5ನೇ ಬಡಾವಣೆಯ ರಾಯರ ಮಠದೊಂದಿಗೆ ನನ್ನ ಅವಿನಾಭಾವ ಸಂಪರ್ಕ ಬೆಳೆಯಿತು . ಮಠ ಆರಂಭವಾದಾಗಿನಿಂದಲೂ ಇಲ್ಲಿಯವರೆಗೂ ಪ್ರತಿನಿತ್ಯವೂ ಮುಂಜಾನೆ ಗುರುಗಳ ಸನ್ನಿಧಾನಕ್ಕೆ ಬಂದು ಇಲ್ಲಿ ದೀಪವನ್ನು ಬೆಳಗಿ, ಸ್ವಲ್ಪ ಹೊತ್ತು ಕುಳಿತು ಧನ್ಯತೆಯನ್ನು ಅನುಭವಿಸಿ ಹೋಗುವುದು ನನ್ನ ಬದುಕಿನ ಪರಿಪಾಠವಾಗಿದೆ ಎನ್ನುತ್ತಾರೆ ಉಮಾ ಗಿರಿಮಾಜಿ.
ಬೆಂಗಳೂರು ವಿವಿಯಲ್ಲಿ ಪಿಎಚ್ಡಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಪ್ರೌಢ ಪ್ರಬಂಧವು ಅಂತಿಮ ಹಂತವನ್ನು ತಲುಪಿ ಸಮರ್ಪಣೆಗೊಳಿಸಿದ ನಂತರ ಮಂತ್ರಾಲಯಕ್ಕೆ ಹೋಗಿ ನಾನು ಸೇವೆಯನ್ನು ಮಾಡಿದೆ. ಮೂರು ದಿನದ ಸೇವೆಯ ನಂತರ ನನಗೆ ಸ್ವಪ್ನವಾಯಿತು . ನದಿ ತೀರದಲ್ಲಿ ನನಗೆ ಪಿ ಎಚ್ ಡಿ ಪದವಿ ಪ್ರದಾನ ಮಾಡಿದಂತೆ ಕನಸು ಬಿತ್ತು. ಧನ್ಯತೆಯನ್ನು ಅನುಭವಿಸಿದ ನಾನು ಬೆಂಗಳೂರು ವಿವಿಗೆ ಆಗಮಿಸಿ ನನ್ನ ಟೇಬಲನ್ನು ಗಮನಿಸಿದಾಗ ಅದರ ಮೇಲೆ ಪಿ ಎಚ್.ಡಿ ಅಂಗೀಕೃತ ಅಧಿಕೃತ ಪತ್ರ ಇತ್ತು.ಕನಸಿನಲ್ಲಿ ಕಂಡದ್ದು ಇಲ್ಲಿ ನನಸಾಗಿತ್ತು ಎಂದು ಅತ್ಯಂತ ಭಾವುಕರಾಗಿ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ ಪ್ರೊ.ಉಮಾ.
ರಾಯರು ವಿದ್ಯಾ ಸರಸ್ವತಿಯಾಗಿ ನನ್ನನ್ನು ಕೈಹಿಡಿದಿದ್ದಾರೆ . ಕೈ ಹಿಡಿದು ನಡೆಸಿದ್ದಾರೆ. ಅನುಗ್ರಹ ಮಾಡಿದ್ದಾರೆ . ಎಂದೆಂದಿಗೂ ಮಾಡುತ್ತಲೇ ಇದ್ದಾರೆ ಎನ್ನುವುದು ನನ್ನ ಭಾವನೆ ಎಂದು ಅವರು ಹೇಳುತ್ತಾರೆ .
ಇತ್ತೀಚಿಗಷ್ಟೇ ವಯೋ ಸಹಜವಾಗಿ ಕಾಲಿನ ನೋವಿನಿಂದ ಬಳಲುತ್ತಿರುವ ನನಗೆ ಮಂಡಿ ಚಿಪ್ಪು ಬದಲಾವಣೆ (ನೀ ರಿಪ್ಲೇಸ್ಮೆಂಟ್) ಗೆ ವೈದ್ಯರು ಸೂಚನೆ ನೀಡಿದ್ದಾರೆ. ಆದರೂ ನಾನು ನನ್ನ ಪ್ರಯತ್ನದಿಂದಲೇ ಸ್ವಲ್ಪ ಸ್ವಲ್ಪ ಓಡಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ . ವೈದ್ಯರು ಏನೇ ಹೇಳಿದರೂ ಭವರೋಗ ವೈದ್ಯರಾದ ಶ್ರೀ ರಾಘವೇಂದ್ರ ಸ್ವಾಮಿಗಳು ನನಗೆ ನಡೆಯಲು ಶಕ್ತಿ ತುಂಬುತ್ತಿದ್ದಾರೆ .
ಹಂತ ಹಂತವಾಗಿ ನನ್ನ ಕಾಲಿನ ಮೇಲೆ ನಾನೇ ನಂಬಿಕೆ ಇಟ್ಟು ನಡೆಯುತ್ತಿದ್ದೇನೆ ಎಂದರೆ ಅದಕ್ಕೆ ರಾಯರ ಪರಮ ಕೃಪೆಯೇ ಕಾರಣ ಎಂದು ಪ್ರೊ. ಉಮಾ ಹೇಳುತ್ತಾರೆ. ಕಾಲು ನೋವಿನ ನಡುವೆಯೂ ಶ್ರೀ ಮಠಕ್ಕೆ ಆಗಮಿಸಿದ ಅವರು ಬೃಂದಾವನದ ಸನಿಹದಲ್ಲಿಯೇ ನಿಂತುಕೊಂಡು ತಮ್ಮ ಸಮಗ್ರ ಬದುಕಿನಲ್ಲಿ ರಾಯರು ಮಾಡಿದ ಪವಾಡಗಳನ್ನು ಭಕ್ತಿ ಭಾವದಿಂದ ಸ್ಮರಿಸಿಕೊಳ್ಳುತ್ತಾರೆ.
ರಾಘವೇಂದ್ರ ಸ್ತೋತ್ರ ಮತ್ತು ಅಷ್ಟೋತ್ತರಗಳ ಸಾಲುಗಳನ್ನು ಸ್ಮರಣೆ ಮಾಡಿಕೊಂಡು ಅಪೇಕ್ಷಿತ ಪ್ರದಾತಾನ್ಯೊ ರಾಘವೇಂದ್ರನ್ನವಿದ್ಯತೇ. ಎಂದು ಉಚ್ಚರಿಸುತ್ತಾರೆ. ರಾಘವೇಂದ್ರ ಸ್ವಾಮಿಗಳು ಎಂದೆಂದಿಗೂ ಪರಮ ದಯಾಳುಗಳು . ಅವರನ್ನು ನಂಬಿದವರಿಗೆ ಯಾವತ್ತೂ ಮೋಸ ಎಂಬುದೇ ಆಗಿಲ್ಲ.ಹಾಗಾಗಿ ರಾಯರ ಮಂತ್ರ ಜಪವನ್ನು ಯಾರೂ ಬದುಕಿನಲ್ಲಿ ಮರೆಯಬಾರದು ಎಂದು ಅವರು ಅಂತರಂಗ ಪೂರ್ವಕವಾಗಿ ಹೇಳುತ್ತಾರೆ.
ಬೆಂಗಳೂರಿನ ಜಯನಗರ 5ನೇ ಬಡಾವಣೆಯ ಮಠದಲ್ಲಿ ಬೃಂದಾವನದ ಶಕ್ತಿಯನ್ನು ನಂಬಿ ಬಂದ ಅನೇಕರಿಗೆ ಸಾವಿರಾರು ಪವಾಡಗಳು , ನಿದರ್ಶನಗಳು ಈಗಾಗಲೇ ನಡೆದಿವೆ . ಅವುಗಳ ಸಾಲಿನಲ್ಲಿ ಪ್ರೊ. ಉಮಾ ಗಿರಿಮಾಜಿ ಅವರ ವಿಶೇಷ ಅನುಭವ ಕಥನವೂ ಸೇರ್ಪಡೆಗೊಂಡಿದೆ ಎಂಬುದು ವಿಶೇಷದಲ್ಲಿ ವಿಶೇಷವಾಗಿದೆ. ರಾಯರು ಕಲಿಯುಗದ ಕಾಮಧೇನು ಎಂಬುದಕ್ಕೆ ಇವುಗಳಿಗಿಂತ ನಿದರ್ಶನ ಬೇರೆ ಎಲ್ಲೂ ಸಿಗಲಾರದು.
-ರಾಯರ ಪವಾಡಕ್ಕೆ ನಿದರ್ಶನವಾದ
ಪ್ರೊ. ಉಮಾ ಗಿರಿಮಾಜಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ