ನಮ್ಮ ಭಾರತ ದೇಶದಲ್ಲಿ ಆಚರಿಸುವ ಹಬ್ಬಗಳು ಮತ್ತು ಸೃಷ್ಟಿ ಹಬ್ಬ ಮತ್ತು ಮಾನವ ಕುಲಕ್ಕೆ ಒಂದು ಸಂದೇಶ ಸಾರುವಂತೆ ಅಷ್ಟು ವಿಶಷ್ಟತೆಯಿಂದ ಕೂಡಿದೆ. ಹಬ್ಬಗಳು ಉತ್ಸವಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಾರಣ ಮನುಷ್ಯನಿಗೆ ಜೀವನದಲ್ಲಿ ಉತ್ಸವ ತುಂಬಲು ಹಾಗೂ ಸದ್ಗುಣಿಯಾಗಿ ಬಾಳಲು ಸಹಾಯವಾಗುತ್ತದೆ.
ಈ ಹಬ್ಬ ಮತ್ತು ಉತ್ಸವಗಳು ಮನುಷ್ಯನ ಜೀವನದಲ್ಲಿ ಒದಗುವ ಸಂತೋಷದ ಸಂದರ್ಭಗಳು. ಬಂಧು-ಬಳಗ, ಇಷ್ಟಮಿತ್ರರು ಎಲ್ಲ ಒಂದೆಡೆ ಸೇರಿ ಮಾಡುವ ಸಂಪ್ರದಾಯಗಳು ಇವೆ. ಇದರಿಂದ ಸಂಬಂಧಗಳಲ್ಲಿ ಮತ್ತು ನೆರೆಹೊರೆಯವರಲ್ಲಿ ಭಿನ್ನಾಭಿಪ್ರಾಯ ಕಡಿಮೆಯಾಗಿ ಹಾಗೂ ಪ್ರೀತಿ ಸೌಹಾರ್ದಾತೆ ಹೆಚ್ಚಿಸುತ್ತದೆ. ಇದರಿಂದ ಐಂದ್ರಿಯಕ ಹಾಗೂ ಮಾನಸಿಕ ಆನಂದವನ್ನು ಅನುಭವಿಸುವುದಲ್ಲದೆ, ಜೀವನದ ಕಷ್ಟಕಾರ್ಪಣ್ಯಗಳನ್ನು ಮರೆಯಲೂ ಮತ್ತು ನಮ್ಮ ಆಂತರ್ಯವನ್ನು ಸಮೃದ್ಧಗೊಳಿಸುವ ಈ ಹಬ್ಬ ಮತ್ತು ಉತ್ಸವಗಳು ಕಾರಣವಾಗಿವೆ.
ಅತ್ಯಂತ ವರ್ಣಮಯ ಹಬ್ಬ ಎಂದರೆ ಅದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ಹೋಳಿಹಬ್ಬ. ಪ್ರತಿ ವರ್ಷ ಹೋಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ಜಾತಿಭೇದ, ಲಿಂಗಭೇದ ಮರೆತು ಜನರು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಹಾಡುತ್ತ ಕುಣಿಯುತ್ತ ಸಂಭ್ರಮಿಸುವ ಕಾರಣದಿಂದ ಈ ಹಬ್ಬವು ಬೀದಿ ಬೀದಿಗಳಲ್ಲಿ ಬಣ್ಣದ ಲೋಕವನ್ನೆ ಸೃಷ್ಟಿಸುತ್ತದೆ; ಬಾಲವೃದ್ಧರೂ ಸೇರಿದಂತೆ ಎಲ್ಲರಲ್ಲೂ ಸಂಭ್ರಮ ಆಚರಿಸುತ್ತಾರೆ.
ಈ ಹೋಳಿ ಹಬ್ಬದ ಹಬ್ಬದ ಸಂದರ್ಭದಲ್ಲಿ ವಸಂತ ಮಾಸದ ಆಗಮನಕ್ಕೆ ಸೃಷ್ಟಿಯಲ್ಲಿ ತರುಲತೆಗಳೆಲ್ಲಾ ಚಿಗುರಿರುತ್ತವೆ.ಎಲ್ಲೆಲ್ಲೂ ಕೋಗಿಲೆಯ ಪಂಚಮದ ಇಂಚರ ಕೇಳಿ ಬರುತ್ತದೆ.ಮಾವು, ಮಲ್ಲಿಗೆ, ಸಂಪಿಗೆಗಳೆಲ್ಲಾ ಹೂ ಬಿಟ್ಟು ನಿಸರ್ಗ ಕಂಗೊಳಿಸುತ್ತಿರುತ್ತದೆ.
ಹಿನ್ನಲೆ:
ಹೋಳಿ ಹುಣ್ಣಿಮೆ ಅಥವಾ ಕಾಮನ ಹಬ್ಬ ಪಾಲ್ಗುಣ ಮಾಸದ ಶುದ್ಧ ಹುಣ್ಣಿಮೆ ಅಂದರೆ ಚಾಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆ. ಇದನ್ನು ಹೋಳಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈಗ ನಾವು ಆಚರಿಸುವ ಹಬ್ಬ ಕಾಮದಹನ,ಮತ್ತು ಹೋಳಿ ಹುಣ್ಣಿಮೆ.
ಈ ಹಬ್ಬದ ಸಂಕೇತವೆಂದರೆ ಒಳ್ಳೆಯ ವಿಷಯಕ್ಕೆ ಜಯ ಇರುತ್ತದೆ ಹಾಗೂ ನಮ್ಮ ದುರ್ಗಣಗಳನ್ನು ಸುಟ್ಟು ಒಳ್ಳೆಯ ಮನುಜನಾಗಿ ಬಾಳುವುದು ಎಂದು ಈ ಹಬ್ಬದ ಆಚರಣೆಯಿಂದ ತಿಳಿದು ಬರುತ್ತದೆ. ಎಲ್ಲ ವರ್ಗದ ಜನರು ಮತ್ತು ಆ ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.
ಊರಿನ ತರುಣರೂ ಚಿಕ್ಕ ಮಕ್ಕಳು ಹೋಳಿ ಆಚರಿಸಲು ಊರಿನ ಕಾಮನಕಟ್ಟೆಯ ಮುಂದಿನ ಚಪ್ಪರದ ಅಂಗಳದಲ್ಲಿ ಕಾಮನ ಪ್ರತಿಮೆ ಕೂರಿಸುವರು. ಅನಂತರ ಊರಿನ ಸುತ್ತ ತಮಟೆ ಡೋಲಿನ ವಾದ್ಯಗಳ ಅಬ್ಬರದೊಂದಿಗೆ ಕುಣಿದು ಕುಪ್ಪಳಿಸಿ ಮನೆ ಮನೆಯಿಂದ ಸೌದೆ, ಬೆರಣಿ, ಬಿದಿರು, ಹಳೆಯ ಮರದ ಸಾಮಾನುಗಳು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುವರು.
ಇನ್ನು ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ವಾದ್ಯಗಳನ್ನು ಊದುತ್ತಾರೆ ಅದಲ್ಲದೆ ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿಯ ಗಂಜಲಗಳನ್ನು ಎರಚುತ್ತಾರೆ. ಮನೆಯ ಮುಂದೆ ಅಲ್ಲಿಯೂ ಪದ್ಧತಿ ಇಲ್ಲದವರು ತಮ್ಮ ತಮ್ಮ ಮನೆಯ ಮುಂದೆ ಕಾಮಣ್ಣನನ್ನು ಸುಡುವ ಪದ್ಧತಿ ಇಲ್ಲದವರು ಅಂದು ಊರು ಕಾಮನಿಗೆ ನೈವಿದ್ಯ ತೋರಿಸಿತ್ತಾರೆ.ಕೆಲವೊಂದು ಕಡೆ ಈ ಕಾಮನಿಗೆ ಸುಡುಗಾಡದಿಂದ ತಂದ ಅಗ್ನಿಯಿಂದಲೇ ಸುಡುವ ವಾಡಿಕೆಉಂಟು.
ಹೋಳಿಯ ಇತಿಹಾಸ:
ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿ ಬ್ರಹ್ಮನಿಂದ ವರ ಪಡೆಯುತ್ತಾನೆ..
ಶಿವ ಉಗ್ರ ತಪಸ್ಸನ್ನು ಮಾಡುತ್ತಿದ್ದರಿಂದ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರುವುದಿಲ್ಲ . ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಮನ್ಮಥ ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗ ಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು.
ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದುಃಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.
ಮತ್ತೊಂದು ಕಥೆ:
ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶ ಹೋರಡಿಸಿರುತ್ತಾನೆ. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ.
ಆಗ ತನ್ನ ತಂಗಿ ಹೋಲಿಕಾ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದರಿಂದ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳಲು ಆಜ್ಞೆ ಮಾಡಿದಾಗ ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ. ತಕ್ಷಣ ಅಗ್ನಿ ಸ್ಪರ್ಶ ಮಾಡಿದಾಗ ಧಗ ಧಗ ಉರಿಯುತ್ತದೆ.ಆದರೆ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಲ್ಲಿ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕನನ್ನು ಸುಡುತ್ತಾರೆ.
ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕವಾಗಿ, ಹೋಳಿ ಹಬ್ಬದ ಸಮಯದಲ್ಲಿ ಎಸೆಯುವ ವರ್ಣರಂಜಿತ ಪುಡಿಗಳು ಅಥವಾ ಗುಲಾಲ್ ಅನ್ನು ನೈಸರ್ಗಿಕ ಬಣ್ಣಗಳಾದಗಂಧಕುಂಕುಮ , ಬೇವು , ಬಿಲ್ವ ಮತ್ತು ಅರಿಶಿನ ದಂತಹ ಪದಾರ್ಥಗಳಿಂದ ತಯಾರಿಸಿ ಓಕುಳಿ ಅಂತ ಆಡುತ್ತಿದ್ದರು . ಶಿಶಿರ ಋತು ಮುಗಿದು ವಸಂತಕಾಲದ ಆಗಮನದಲ್ಲಿ ಬದಲಾಗುತ್ತಿರುವ ಹವಾಮಾನದೊಂದಿಗೆ ಬರುವ ಜ್ವರ ಮತ್ತು ಶೀತದ ಲಕ್ಷಣಗಳನ್ನು ನಿವಾರಿಸಲು ಇವು ಔಷಧೀಯ ಗಿಡಮೂಲಿಕೆಗಳಾಗಿವೆ. ಇತರ ಬಣ್ಣಗಳನ್ನು ಸಸ್ಯ ಆಧಾರಿತ ಮೂಲಗಳ ಮೂಲಕ ಹೊರತೆಗೆಯಬಹುದು.
ಉದಾಹರಣೆಗೆ:
* ಕೆಂಪು ಮತ್ತು ಕಿತ್ತಳೆ - ಪಲಾಶ ಹೂವುಗಳು, ಹುಚ್ಚು ಮರ, ಶ್ರೀಗಂಧ, ದಾಸವಾಳ ಹೂವುಗಳು, ದಾಳಿಂಬೆ, ಮೂಲಂಗಿ, ಕೇಸರಿ ಮತ್ತು ಸುಣ್ಣದೊಂದಿಗೆ ಬೆರೆಸಿದ ಅರಿಶಿನ.
* ಹಳದಿ - ಅರಿಶಿನ, ಕಡಲೆ, ಚೆಂಡು ಹೂ, ಸೇವಂತಿಗೆ, ಬೇಲ್ ಹಣ್ಣು ಮತ್ತು ಅಮಲ್ಟಾಸ್.
* ಹಸಿರು - ಗುಲ್ಮೊಹರ್ ಎಲೆಗಳು ಮತ್ತು ಮೆಹೆಂದಿ.
* ನೀಲಿ - ದ್ರಾಕ್ಷಿಗಳು, ನೀಲಿ ದಾಸವಾಳ, ಜಕರಂಡಾ ಹೂವುಗಳು, ಇಂಡಿಗೊ ಸಸ್ಯ ಮತ್ತು ಇಂಡಿಗೊ ಹಣ್ಣುಗಳು.
* ನೇರಳೆ ಮತ್ತು ನೇರಳೆ ಬಣ್ಣ - ಬೀಟ್ರೂಟ್.
* ಕಪ್ಪು - ತರಕಾರಿ ಇದ್ದಿಲು, ಮತ್ತು ನೆಲ್ಲಿಕಾಯಿ.
ಒಟ್ಟಾರೆ ಈ ಹಬ್ಬದಿಂದ ತಿಳಿದುಕೊಳ್ಳುವದೇನೆಂದರೆ
"ವಿನಾಶಕಾಲೇ ವಿಪರೀತ ಬುದ್ಧಿ" ವಿನಾಶ ಮಾಡಲು ಕುಬುದ್ದಿ ಉಪಯೋಗಿಸಿದರೆ ಅಂತ್ಯ ಸತ್ಯ ಅನ್ನುವುದು ಖಚಿತವಾಗುತ್ತದೆ.
ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನ ಹಿಡಿದು ಪ್ರತಿಯೊಬರನ್ನು ಒಂದುಗೂಡಿಸುವ ಹಬ್ಬ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ಭಗವಂತನ ಶಕ್ತಿಯ ಮುಂದೆ ನಿಲ್ಲದು. ಹಾಗೇ ಬಣ್ಣಗಳು ಭಿನ್ನ ಭಿನ್ನ ಇದ್ದರೂ ಒಳ್ಳೆಯ ಸಂಕೇತ ಹೊಂದಿ ರಂಗಿನಾತವನ್ನು ರಂಗೇರಿಸುವಂತೆ ನಮ್ಮ ಜೀವನದ ಬಾಳೆಂಬ ರಂಗಮಂಟಪದಲ್ಲಿ ನಕಾರ ತೊರೆದು ಸ್ನೇಹ ಪ್ರೇಮ ಔದಾರ್ಯದಿಂದ ಇರೋಣ ಸ್ನೇಹಿತರೆ. ತಾರಕಾಸುರ ಮತ್ತು ಹೋಳಿಕ ದುಷ್ಟ ಮನಕೆ ಎಂದು ಜಯವಿಲ್ಲ ಎಂದು ಈ ಕಥೆಯಿಂದ ತಿಳಿದುಕೊಳ್ಳೋಣ.
✍️ ಪ್ರಿಯಾ ಪ್ರಾಣೇಶ ಹರಿದಾಸ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ