ಇಂದು ಜಾಲತಾಣಗಳು ಅದೆಷ್ಟು ವೇಗವಾಗಿ ಬೆಳೆಯುತ್ತಿವೆ ಎಂದರೆ ಕಣ್ಣು ಮುಚ್ಚಿ ಬಿಡುವುದರೊಳಗೆ ಲೋಕದ ಜ್ಞಾನವನ್ನೆಲ್ಲ ಒಂದೆಡೆ ಸೇರಿಸಿ ಕುಡಿಯಬಹುದೇನೊ ಅನ್ನುವಷ್ಟರ ಮಟ್ಟಿಗಿನ ವೇಗವಿದೆ ಅಂತರ್ಜಾಲ ತಾಣಕ್ಕೆ. ಆದರೆ ಇದರ ಸದ್ಬಳಕೆ ಎಷ್ಟರಮಟ್ಟಿಗೆ ಆಗಿದೆ ಆಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಈ ನಿಟ್ಟಿನಲ್ಲಿ ಭಾವಸಂಗಮವೆಂಬ ಸಾಹಿತ್ಯಿಕ ಸಾಂಸ್ಕ್ರತಿಕ ವೇದಿಕೆ ಪ್ರಾರಂಭಿಸಿ ಕನ್ನಡ ಸಾಹಿತ್ಯ ಮತ್ತು ಸಾಹಿತ್ಯೇತರ ಚಟುವಟಿಕೆಗಳನ್ನು ಸತತ ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ "ರಾಜೇಂದ್ರ ಪಾಟೀಲ" ಇವರನ್ನು ಹೆಚ್ಚಾಗಿ ಆತ್ಮೀಯತೆಯಿಂದ ಸ್ನೇಹಿತ ವಲಯದಲ್ಲಿ "ರಾಪಾ" ಎಂದೇ ಕರೆಯುವುದು ವಾಡಿಕೆ.
1965 ಜುಲೈ 10 ರಂದು ತಾಯಿ ಉಮಾಬಾಯಿ ಅವರ ತವರೂರು ಮಹಾರಾಷ್ಟ್ರದ ಸೋಲಾಪುರದಲ್ಲಿ ರಾಪಾ ಅವರ ಜನನ. ವಿಜಯಪುರ ಜಿಲ್ಲೆಯ ಮಿರಗಿ ಗ್ರಾಮದ ಶಂಕರರಾವ್ ಪಾಟೀಲರ 4 ಜನ ಗಂಡುಮಕ್ಕಳಲ್ಲಿ ಹಿರಿಯ ಮಗನೇ ರಾಜೇಂದ್ರ ಪಾಟೀಲ. ಈಗಲೂ ಸಹ ಪಾಟೇಲ ಮನೆತನದ ಗೌಡಿಕೆ ಗೌರವಕ್ಕೆ ಕುಂದಾಗದಂತಹ ಸಂಸ್ಕೃತಿ ಕಾಣಬಹುದು. ತಂದೆಯ ಶಿಕ್ಷಕ ವೃತ್ತಿಯಿಂದಾಗಿ ಮಕ್ಕಳ ಶಿಕ್ಷಣವೂ ಸಹ ಬೇರೆ ಬೇರೆ ಊರಿನಲ್ಲಿ ಸಾಗುತ್ತದೆ. ತಮ್ಮ ಬಾಲ್ಯವನ್ನೆಲ್ಲ ಕನ್ನಡ ನೆಲದಲ್ಲಿ ಕಳೆದು 1990 ರಲ್ಲಿ ಪದವಿ ಪೂರೈಸಿ 1991 ರಲ್ಲಿಯೇ ಬೆಳಗಾವಿಯ "ಕನ್ನಡಮ್ಮ" ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ವಿಜಯಪುರದ ವರದಿಗಾರರಾಗುತ್ತಾರೆ. ಕಲಬುರಗಿಯ ದಿನಪತ್ರಿಕೆಗಳಾದ ಗ್ರಿನೋಬಲ್ಸ್, ಚಿಂತಕ, ಶಾಸನ, ಸತ್ಯಕಾಮ, ಪತ್ರಿಕೆಗಳ ಸಂಪಾದಕರ ನಿಕಟ ಸಂಪರ್ಕವಾಗಿ ಹವ್ಯಾಸಿ ಪತ್ರಕರ್ತರಾಗಿ ರಾಪಾ ಅವರು ರೂಪು ಗೊಳ್ಳುವುದು ವಿಶೇಷ.
"ಉತ್ತರ ಕರ್ನಾಟಕ" ಪತ್ರಿಕೆಯಲ್ಲಿ ಮತ್ತು "ಹಸಿರುಕ್ರಾಂತಿ" ಪತ್ರಿಕೆಗೆ ಹಿರಿಯ ವರದಿಗಾರರಾಗಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ ರಾಪಾ ಅವರು, 1998 ರಿಂದ ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ಉಪಸಂಪಾದಕರಾಗಿ ಸೇರಿಕೊಳ್ಳುತ್ತಾರೆ. ಬೆಳಗಾವಿ, ವಿಜಯಪುರ, ಬೀದರ, ಹುಬ್ಬಳ್ಳಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೆಂಗಳೂರು, ಧಾರವಾಡಗಳಲ್ಲಿ ಕಾರ್ಯನಿರ್ವಹಿಸಿ ಇದೀಗ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಸಾಂಸ್ಕೃತಿಕ ಲೋಕಕ್ಕೆ ಸಮರ್ಪಿಸಿಕೊಂಡಿದ್ದಾರೆ.
ರಾಪಾ ಅವರು ಶಿಕ್ಷಕ ಸಿದ್ದಪ್ಪ ಮಾಸ್ತರಿಂದಾಗಿ ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನ ಒಲವು ಹೊಂದಿ ಬರುಬರುತ್ತಾ, ತ.ಪು. ವೆಂಕಟರಾಮ್, ಎಂ.ಕೆ. ಇಂದಿರ, ಹಾಗೂ ಕಲಬರಗಿ ಜಿಲ್ಲಾ ಗ್ರಂಥಾಲಯದಲ್ಲಿನ ಓದು ಇವರನ್ನು ಬರೆಯುವಂತೆ ಪ್ರೇರಣೆ ನೀಡುವುದರ ಮೂಲಕ ಸುಧಾ, ತರಂಗ, ರಾಗಸಂಗಮ, ಮಂಗಳ, ಮಯೂರ, ಮಲ್ಲಿಗೆ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಪ್ರಜಾಮತ- ಹೀಗೆ ನಾಡಿನ ಪ್ರತಿಷ್ಠಿತ ಪತ್ರಿಕೆಯಲ್ಲಿ ಇವರ ಬರಹಗಳು ಹೊರಬರಲು ಪ್ರಾರಂಭಿಸಿದವು.
ತಂದೆಯವರ ಸಹೋದ್ಯೋಗಿಯಾಗಿದ್ದ ಎ.ಕೆ. ರಾಮೇಶ್ವರ ಅವರ ಪ್ರೋತ್ಸಾಹದಿಂದಾಗಿ ಆಕಾಶವಾಣಿಯಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. 1981-85 ರ ಹೊತ್ತಿಗಾಗಲೇ ಬರಹಗಾರರಾಗಿ ಗುರುತಿಸಿಕೊಂಡಿದ್ದರು ರಾಪಾ ಅವರು. ಚಿತ್ರಶೇಖರ ಕಂಠಿ, ಶಂಕ್ರಯ್ಯ ಘಂಟಿ, ಡಾ.ಬಸವರಾಜ ಸಬರದ, ಡಾ.ಬಸವರಾಜ ಸಾದರ, ಡಾ.ಚೆನ್ನಣ್ಣ ವಾಲಿಕಾರ, ವೀರಭದ್ರ ಸಿಂಪಿ, ಕೆ.ಎಸ್. ರಾಜನಂದಿ ಇಂತಹ ನಾಡಿನ ಪ್ರಖ್ಯಾತ ಕವಿಗಳ ಸಾಮಿಪ್ಯದ ಬರವಣಿಗೆಯಿಂದಾಗಿ ತನ್ನದೆ ಆದ ವೈಶಿಷ್ಟ್ಯಗಳನ್ನು ಪಡೆದುಕೊಂಡಿತು. 1984 ರಲ್ಲಿ ಶಿವರಾಮ ಕಾರಂತರ ಅಧ್ಯಕ್ಷತೆಯಡಿಯಲ್ಲಿ ಧಾರವಾಡದಲ್ಲಿ ಜರುಗಿದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ಇವರ ಆಯ್ಕೆ ಸಾಹಿತ್ಯಿಕ ವಿಚಾರಗಳಿಗೆ ಮತ್ತಷ್ಟು ತೆರೆದುಕೊಳ್ಳಲು ಅನುವು ಆಯಿತು.
"ಉಮಾತನಯರಾಜ್" ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡ ಇವರು "ಕಥಾ ಸೌಗಂಧ", "ಜೇನ್ಗೊಡ", "ನೆನಪರಂಗೋಲಿ" ಇವರ ಪ್ರಮುಖ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಾಲ್ಕು ಸಂಕಲನಗಳಲ್ಲಿ ಇವರ ಕವಿತೆಗಳು ಸಹ ಅಡಕವಾಗಿವೆ. ಕನ್ನಡ ಪಠ್ಯಪುಸ್ತಕದ ಒಂದನೇ ತರಗತಿ, ಎರಡನೇ ತರಗತಿಗಳಿಗೆ ಇವರ ಕವಿತೆಗಳು ಪಠ್ಯವಾಗಿದ್ದವು. ಹಾಗೂ ಮಹಾರಾಷ್ಟ್ರ ಸರಕಾರದ ಗಡಿ ಕನ್ನಡಿಗರ ಪಠ್ಯ ಪುಸ್ತಕದಲ್ಲಿ ಇವರ ಕವನ ಪಠ್ಯವಾಗಿ ಮಕ್ಕಳ ಬಾಯಲ್ಲಿ ಇಂದಿಗೂ ಗುನುಗುನಿಸುವಂತೆ ಮಾಡಿರುವುದು ವಿಶೇಷ. 1989 ರ ಅವಧಿಯಲ್ಲೇ ವಿದ್ಯಾರ್ಥಿ ದೆಸೆಯಲ್ಲೇ ಕಲಬುರಗಿಯಲ್ಲಿ ಮೊತ್ತ ಮೊದಲ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದರು.
1987-90 ರ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಕಲಾ ವೇದಿಕೆ ಸಂಘಟಿಸಿ ಸಾಹಿತ್ಯಿಕ ತ್ರೈಮಾಸಿಕ ಪತ್ರಿಕೆ ಉತ್ಕರ್ಷ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಇವರ ಕವಿತೆ ತಂಗಿಯ ಪತ್ರ ಐದನೆಯ ತರಗತಿಯ ಪಠ್ಯದಲ್ಲಿ ಅಡಕವಾಗಿದೆ. 2015 ರಿಂದ ಭಾವ ಸಂಗಮ ವೇದಿಕೆಯ ಸಂಚಾಲಕರಾಗಿ ಪ್ರತಿವರ್ಷವೂ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ನಡೆಸುತ್ತಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಬಸವ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ, ಲಯನ್ಸ್ ಕ್ಲಬ್ ಹುಬ್ಬಳ್ಳಿ, ರೋಟರಿ ಕ್ಲಬ್ ಹುಬ್ಬಳ್ಳಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅವರ ಸಂಪರ್ಕ ಸಂಖ್ಯೆ 9591323453.
ಸೌಮ್ಯ ಸ್ವಭಾವದ ರಾಪಾ ಅವರು ಬಾಳಸಂಗಾತಿಯಾದ ವಿಜಯಲಕ್ಷ್ಮಿ, ಮಕ್ಕಳಾದ ಉತ್ಕರ್ಷ, ಆಕರ್ಷ ಇವರೊಂದಿಗಿನ ನೆಮ್ಮದಿಯ ಜೀವನ ಸಾಗಿಸುತ್ತಿರುವ ಇವರಿಗೆ ಶುಭವಾಗಲಿ. ರಾಪಾ ಅವರಿಂದ ಮತ್ತಷ್ಟು ಕನ್ನಡದ ಸಾಹಿತ್ಯ ಕೃಷಿ ಜರುಗಿ ಸಾರಸ್ವತ ಲೋಕಕ್ಕೆ ಉತ್ಕೃಷ್ಟ ಕೊಡುಗೆ ಲಭಿಸಲಿ ಎಂಬ ಹಾರೈಕೆ.
- ಸಾವಿತ್ರಮ್ಮ ಓಂಕಾರ್ ಅರಸೀಕೆರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ