ಉಡುಪಿ: ಉಡುಪಿಯ ಪುಣ್ಯಕ್ಷೇತ್ರ ಪೆರ್ಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ನೇತೃತ್ವದಲ್ಲಿ ಇದೇ ಬರುವ ಎಪ್ರಿಲ್ 9 ರಿಂದ 13 ರ ವರೆಗೆ ನಡೆಯಲಿರುವ 30 ನೇ ಅಖಿಲ ಭಾರತ ಮಾಧ್ಚತತ್ವಜ್ಞಾನ ಸಮ್ಮೇಳನ, 44 ನೇ ಶ್ರೀ ಮನ್ನ್ಯಾಯಸುಧಾಮಂಗಲೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳ ಅನ್ವಯ ದಶಕೋಟಿ ರಾಮತಾರಕಜಪಯಜ್ಞ ಆಯೋಜಿಸಲಾಗುತ್ತಿದೆ. ಈ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆಯು ಬುಧವಾರ ಸಂಜೆ ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ನಡೆಯಿತು.
ಸಾಮಾಜಿಕ ಧುರೀಣರಾದ ಪ್ರೊ ವಾದಿರಾಜ್ ಭಟ್ ಗೋಪಾಡಿಯವರು ಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಪೂಜ್ಯ ಶ್ರೀಪಾದರ ಸೂಚನೆಯಂತೆ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಸಂಯೋಜಿಸಿ ಜಿಲ್ಲೆಯಲ್ಲಿ ರಾಮನಾಮದ ಬಲದಿಂದ ಧರ್ಮಜಾಗೃತಿ ಮತ್ತು ರಾಷ್ಟ್ರಜಾಗೃತಿಯ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ಚೈತನ್ಯಗಳನ್ನು ತುಂಬುವ ಕಾರ್ಯಮಾಡಬೇಕು.
ಈ ಅಭಿಯಾನದ ಮೂಲಕ ಜಿಲ್ಲೆಯ ಕನಿಷ್ಠ 20 ಸಾವಿರ ಮನೆಗಳನ್ನು ತಲುಪಿ ಕನಿಷ್ಠ ಒಂದು ಲಕ್ಷ ಜನರು ಶ್ರದ್ಧೆಯಿಂದ ಜಪಾನುಷ್ಠಾನ ನಡೆಸುವಂತೆ ವಿನಂತಿಸುವ ಕಾರ್ಯ ನಡೆಸಬಹುದು. ಜಿಲ್ಲೆಯ ಎಲ್ಲ ಕಂದಾಯ ತಾಲೂಕು ಗ್ರಾಮಗಳನ್ನೂ ನಮ್ಮ ತಂಡ ತಲುಪಿ ಈ ಸಂದೇಶಗಳನ್ನು ಮುಂದಿನ15 ದಿನಗಳ ಒಳಗೆ ಮುಟ್ಡಿಸುವ ಕೆಲಸವನ್ನು ಕ್ರಮಬದ್ಧವಾಗಿ ನಿರ್ವಹಿಸುವುದು.
ಮಾರ್ಚ್ 15 ರಿಂದ 30 ರ ತನಕ ದಶಕೋಟಿ ರಾಮತಾರಕ ಮಂತ್ರ ಜಪಾನುಷ್ಠಾನ ನಡೆಯುವುದು. ಬಳಿಕ ಪೆರಣಂಕಿಲದಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಮಹೋತ್ಸವದಲ್ಲಿ ಜಪಾನುಷ್ಟಾನ ನಡೆಸಿದ ಸರ್ವರೂ ಬಂದು ಗುರುಗಳ ಮೂಲಕ ಶ್ರೀರಾಮ ದೇವರಿಗೆ ಅರ್ಪಿಸಿ ಪ್ರಸಾದ ಸ್ವೀಕರಿಸಬೇಕು ಎಂದು ಅಭಿಯಾನದ ಸ್ವರೂಪಗಳನ್ನು ವಿವರಿಸಿದರು.
ಮಹೋತ್ಸವ ಸ್ವಾಗತ ಸಮಿತಿ ಪ್ರಮುಖರುಗಳಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿಯವರಿಂದ ಪ್ರಸ್ತಾವನೆ, ವಿದ್ವಾನ್ ಆನಂದ ತೀರ್ಥಾಚಾರ್ಯ ಸಗ್ರಿಯವರಿಂದ ಸ್ವಾಗತ, ವಿದ್ವಾನ್ ಶಶಾಂಕ ಭಟ್ಟರಿಂದ ರಾಮತಾರಕ ಮಂತ್ರೋಪದೇಶ ನಡೆಯಿತು. ಸುಬ್ರಹ್ಮಣ್ಯ ಭಟ್, ಪೆರಣಂಕಿಲ ಶ್ರೀಶನಾಯಕ್, ವಾಸುದೇವ ಭಟ್ ಪೆರಂಪಳ್ಳಿ, ಶಶಾಂಕ ಶಿವತ್ತಾಯ ಬೆಳ್ವೆ, ಗಣೇಶ ಕಿಣಿ, ವೇದವ್ಯಾಸ ಭಟ್ ಮೊದಲಾದವರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ