ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರು-ವಾರ್ಷಿಕ ಕೋಲೋತ್ಸವ

Upayuktha
0


ಬಂಟ್ವಾಳ: ಭಾರತವು ಅತಿ ಪುರಾತನ ಸನಾತನ ಸಂಸ್ಕೃತಿಯನ್ನು ಹೊಂದಿದ್ದು ವಿಶ್ವದಲ್ಲೇ ತನ್ನ ಸಂಸ್ಕೃತಿ ಸಂಸ್ಕಾರಗಳಿಂದ ಹೆಸರು ಪಡೆದ ದೇಶ, ಆದರೆ ಇಂದಿನ ಯುವ ಜನಾಂಗ ಪಾಶ್ಚಾತ್ಯದ ಕಡೆಗೆ ವಾಲುತ್ತಿರುವುದು ವಿಪರ್ಯಾಸವೇ ಆಗಿದೆ. ಇದಕ್ಕೆ ಮೂಲ ಕಾರಣ ಮನೆಗಳಲ್ಲಿ ಸಂಸ್ಕಾರಯುತ ಶಿಕ್ಷಣವು ಕಡಿಮೆಯಾಗುತ್ತಿರುವುದು. ಮನೆಯಲ್ಲಿ ಮಗುವಿಗೆ ಧಾರ್ಮಿಕ ಶಿಕ್ಷಣ ನೀಡುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಭದ್ರ ಪಡಿಸಿಕೊಳ್ಳಬೇಕು. ಮನೆ ಮಂದಿ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ನಮ್ಮ ಹಿರಿಯರಿಂದ ಬಂದ ಸಂಸ್ಕೃತಿ ನಂಬಿಕೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.


ಅವರು ಬಂಟ್ವಾಳ ತಾಲೂಕಿನ ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರು ಶ್ರೀ ಮಂತ್ರ ದೇವತೆ, ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವೈಭವದ ವಾರ್ಷಿಕ ಕೋಲೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಮಂದಿ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.


ಸುಮಾರು 14 ಮಂದಿಗೆ ಆರೋಗ್ಯ ಸಮಸ್ಯೆ, ಮನೆ ರಿಪೇರಿ, ಮದುವೆ, ಶಿಕ್ಷಣ ಮುಂತಾದ ವಿಷಯಗಳ ಸಲುವಾಗಿ ಅರ್ಹರನ್ನು ಹುಡುಕಿ ಧನಸಹಾಯ ಮಾಡಲಾಯಿತು.


ಸರಕಾರಿ ಶಾಲೆಗಳ ಶಿಕ್ಷಣಕ್ಕೆ ಒತ್ತು ನೀಡುವ ಸಲವಾಗಿ ಮೂರು ಶಾಲೆಗಳಾದ ನಡುಮೊಗೇರು, ಏಮಾಜೆ, ಬೊಂಡಾಲ ಶಾಲೆಗಳಿಗೆ ಸ್ಮಾರ್ಟ್ ಟಿವಿ ಹಾಗೂ ನಲ್ಕೇಮಾರ್ ಶಾಲೆಗೆ ಲ್ಯಾಪ್ಟಾಪ್ ನೀಡಲಾಯಿತು.


"ಕಟ್ಟೆಮಾರ್ದ ಸ್ವರ್ಣ ತುಡಾರ್" ಹಾಗೂ "ಕಟ್ಟೆಮಾರ್ದ ಕರ್ತೆದಿ" ಆಲ್ಬಮ್ ಸಾಂಗ್ ಲೋಕರ್ಪಣೆ ಮಾಡಲಾಯಿತು. ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ಇವರಿಂದ ಭಕ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ವೇದಿಕೆಯಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯ ಅಖಿಲ ಭಾರತೀಯ ನಾಥ ಸಂಪ್ರದಾಯ ಬರ್ತ್ರ್ ವರಿ ಗುಫಾ ಮಠಾಧೀಶರಾದ ಪರಮಪೂಜ್ಯ ಯೋಗಿ ಪೀರ್ ರಾಮನಾಥ್ ಜಿ ಮಹಾರಾಜ್, ಹಿಂದೂ ರಾಷ್ಟ್ರ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷ ಸಂದೀಪ್ ನಾಥ್, ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಕೆ ರವೀಂದ್ರ ಕಂಬಳಿ, ಅಶೋಕ್ ಪೂಜಾರಿ ಮುಂಬೈ, ಪ್ರಶಾಂತ್ ಬನ್ನನ್ ಮಾಲಕರು ತಾಜ್ ರೆಸಿಡೆನ್ಸಿ ಮಂಗಳೂರು, ಆಶ್ರಿತ್ ಕಿಶನ್ ಹೆಬ್ಬೇವು ಫಾರ್ಮ್ಸ್ ಫೆನ್ ಕೊಂಡ, ತಾರನಾಥ ಪೂಜಾರಿ ಹೋಟೆಲ್ ನೀಲ್ ಕಮಲ್ ಉಡುಪಿ, ಪ್ರವೀಣ್ ಕೊಟ್ಟಾರಿ ರಾಯಪ್ಪ ಕೋಡಿ, ತಾರನಾಥ ಸಾಲಿಯಾನ್ ಎಇಇ, ನಟೇಶ್ ಪೂಜಾರಿ ಪುಳಿತಡಿ, ಧನರಾಜ್ ಪೂಜಾರಿ, ಬೆಂಗಳೂರು, ಪುತ್ತೂರು ಮಾಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿನಯ ಸುವರ್ಣ, ಕಿಶೋರ್ ಕುಮಾರ್ ಕಟ್ಟೆಮಾರು ಮೊದಲಾದವರು ಉಪಸ್ಥಿತರಿದ್ದರು.


ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯಕ್, ಚಿತ್ರನಟಿ ನವ್ಯ ಪೂಜಾರಿ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.


ಶ್ರೀ ಮಂತ್ರ ದೇವತಾ ಸಾನಿಧ್ಯ ಕಟ್ಟೆಮಾರಿನ ಧರ್ಮದರ್ಶಿ ಶ್ರೀ ಮನೋಜ್ ಕುಮಾರ್ ಕಟ್ಟೆಮಾರು ಸ್ವಾಗತಿಸಿ, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರ ದೇವತೆ ದೈವದ ವೈಭವದ ಕೋಲೋತ್ಸವ ಜರಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top