ಸುಲ್ಕೇರಿ ಶ್ರೀ ನೇಮಿನಾಥಸ್ವಾಮಿ ಸಭಾಭವನ ಉದ್ಘಾಟನೆ.

Upayuktha
0

ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಶನಿವಾರ ಸುಲ್ಕೇರಿ ಬಸದಿ ವಠಾರದಲ್ಲಿ ನಿರ್ಮಿಸಲಾದ ಶ್ರೀ ನೇಮಿನಾಥಸ್ವಾಮಿ ಸಭಾಭವನವನ್ನು ಉದ್ಘಾಟಿಸಿ ಶುಭ ಹಾರೈಸಿದರು.




ವಿದ್ಯಾವಂತರು ವಿಚಾರವಂತರಾಗುವುದರೊಂದಿಗೆ ಆಚಾರವಂತರೂ  ಆಗಬೇಕು: ಡಿ. ಹರ್ಷೇಂದ್ರ ಕುಮಾರ್.


ಉಜಿರೆ:  ಯುವಜನತೆ ಸಮಾಜದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು,  ವಿದ್ಯಾವಂತರು ವಿಚಾರವಂತರಾಗುವುದರೊಂದಿಗೆ ಪರಿಶುದ್ಧ ಆಚಾರವಂತರು ಆಗಬೇಕು ಎಂದು  ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.



ಅವರು ಶನಿವಾರ ಸುಲ್ಕೇರಿಯಲ್ಲಿ ಭಗವಾನ್ ಶ್ರೀ ನೇಮನಾಥಸ್ವಾಮಿ ಬಸದಿ ವಠಾರದಲ್ಲಿ ನಿರ್ಮಿಸಲಾದ ಶ್ರೀ ನೇಮಿನಾಥಸ್ವಾಮಿ ಸಭಾಭವನವವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಯಾವುದೇ ಸತ್ಕಾರ್ಯ ನಡೆಯಬೇಕಾದರೆ ಯೋಗ ಮತ್ತು ಸಂದರ್ಭ ಒದಗಿ ಬರಬೇಕು ಕಟ್ಟಡ ನಿರ್ಮಾಣದಲ್ಲಿ ವಾಸ್ತುವಿನ ಪ್ರಭಾವ ಇರುತ್ತದೆ. ಧರ್ಮಸ್ಥಳದ ವತಿಯಿಂದ ಕಾರ್ಕಳದಲ್ಲಿರುವ ಜೈನಮಠವನ್ನು ನವೀಕರಣಗೊಳಿಸಿ ಸಮಾಜಕ್ಕೆ ಅರ್ಪಿಸಿದ ಬಳಿಕ ಕಾರ್ಕಳ  ಸೀಮೆಯ ಅನೇಕ ಪ್ರಾಚೀನ ಬಸದಿಗಳು ಜೀರ್ಣೋದ್ಧಾರಗೊಂಡು ಪಂಚಕಲ್ಯಾಣ ಸಹಿತ ಪ್ರತಿಷ್ಠಾ ಮಹೋತ್ಸವಗಳು  ನಡೆಯುತ್ತಿರುವುದು ಶುಭದಾಯಕವಾಗಿದೆ.


ದಾನ - ಧರ್ಮಾದಿ ಸತ್ಕಾರ್ಯಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುತ್ತಿರುವುದು  ಸ್ತುತ್ಯಾರ್ಹವಾಗಿದೆ ಎಂದರು.  ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ  ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ  ಧರ್ಮದ ಮರ್ಮವನ್ನರಿತು  ಆಚರಣೆ ಮಾಡಿದಾಗ ಪಾಪಕರ್ಮಗಳ ಕ್ಷಯವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷಪ್ರಾಪ್ತಿ ಸಾಧ್ಯವಾಗುತ್ತದೆ.


ನಿತ್ಯವೂ ಮಂದಿರಗಳಿಗೆ ಹೋಗಿ ದೇವರದರ್ಶನ, ಜಪ, ತಪ, ಧ್ಯಾನ ಮಾಡಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ವಿಧಾನಪರಿಷತ್ತಿನ ಮಾಜಿ ಸದಸ್ಯ ಕೆ. ಹರೀಶ್‌ಕುಮಾರ್ ಮಾತನಾಡಿ ಅಲ್ಪಸಂಖ್ಯಾತರಾದರೂ ಜೈನರ ಶಿಸ್ತು, ಶ್ರದ್ಧೆ, ಭಕ್ತಿ, ಅಹಿಂಸೆ ಹಾಗೂ ಸಮಾಜ ಸೇವಾಕಳಕಳಿಯನ್ನು ಶ್ಲಾಘಿಸಿದರು.


ಸರ್ಕಾರದಿಂದ ಈಗಾಗಲೇ ಸಭಾಭವನಕ್ಕೆ 5೦ ಲಕ್ಷ ರೂ.  ಮಂಜೂರಾಗಿದ್ದು ಸದ್ಯದಲ್ಲೇ ಇನ್ನೂ3೦ ಲಕ್ಷ ರೂ.  ಅನುದಾನ ದೊರಕಲಿದೆ ಎಂದರು. ಕೆ. ಹರೀಶ್‌ಕುಮಾರ್ ಅವರನ್ನು ಗೌರವಿಸಲಾಯಿತು. ಶಾಸಕ ಹರೀಶ್ ಪೂಂಜ, ತುಮಕೂರಿನ ಉದ್ಯಮಿ ಜಿ.ಎಸ್. ರಾಜೇಂದ್ರ ಕುಮಾರ್ ಮತ್ತು ಅಳದಂಗಡಿ ಅರಮನೆಯ ಶಿವಪ್ರಸಾದ್  ಅಜಿಲ ಶುಭಾಶಂಸನೆ ಮಾಡಿದರು.


ಅಧ್ಯಕ್ಷತೆ ವಹಿಸಿದ ಆಳದಂಗಡಿ ಅರಮನೆಯ  ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ  ಮಾತನಾಡಿ, ಪಂಚಕಲ್ಯಾಣ ಮತ್ತು  ಬಸದಿ ಜೀರ್ಣೋದ್ಧಾರ ಕಾರ್ಯದಲ್ಲಿ ಯುವಜನತೆಯ ಸಕ್ರಿಯ ಸಹಕಾರಕ್ಕೆ ಅಭಿನಂದಿಸಿದರು. ಬಸದಿಯ ಆಡಳಿತ  ಮೊಕ್ತೇಸರ ಎನ್. ರವಿರಾಜ್ ಹೆಗ್ಡೆ ನಾವರಗುತ್ತು ಉಪಸ್ಥಿತರಿದ್ದರು.


ಕುಮಾರಿ ಪ್ರಾಂಜಲಿ, ಪಿಲ್ಯ ಪ್ರಾರ್ಥನೆ ಹಾಡಿದರು ವಕೀಲರಾದ ಅಜಿತ್, ನಾವರಗುತ್ತು ಸ್ವಾಗತಿಸಿದರು. ಉಜಿರೆಯ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನ ಉಪನ್ಯಾಸಕ ಪ್ರೊ. ನವೀನ್‌ಕುಮಾರ್ ಜೈನ್ ಧನ್ಯವಾದವಿತ್ತರು.


ಶಿಕ್ಷಕ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಸದಿಯಲ್ಲಿ ಋಷಿಮಂಡಲ ಆರಾಧನೆ, ಕೂಷ್ಮಾಂಡಿನಿ ಆರಾಧನೆ,  ಪದ್ಮಾವತಿ ದೇವಿಗೆ  ಕುಂಕುಮಾರ್ಚನೆ, ಕ್ಷೇತ್ರಪಾಲ ಮತ್ತು ನಾಗದೇವರಿಗೆ ನವಕಲಶ ಅಭಿಷೇಕ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top