ಬೆಂಗಳೂರು: ‘ಅನ್ಯಾಯಕ್ಕೆ ಸಿಡಿಯುವ ಬೆಂಕಿಯ ಕಿಡಿಯಾಗಿ, ಅಮಾಯಕರ ಅಸಹಾಯಕ ಬದುಕಿಗೆ ಸದಾ ಮಿಡಿಯುತ್ತಿದ್ದ ನ್ಯಾಯಾಧೀಶ, ಬರಹಗಾರ, ಸಾಮಾಜಿಕ ಹೋರಾಟಗಾರ, ಕರ್ನಾಟಕದ ಏಕೀಕರಣದ ರೂವಾರಿ ಚನ್ನಬಸಪ್ಪನವರು ಒಬ್ಬ ಒಳ್ಳೆಯ ಕುಟುಂಬಜೀವಿಯೂ ಆಗಿ ನಮಗೆ ಕಲಿಸಿಹೋದ ಪಾಠಗಳು ಅತ್ಯಂತ ಮೌಲಿಕವಾದವುಗಳು’ ಎಂದು ಕೋ.ಚನ್ನಬಸಪ್ಪನವರ ಮಗಳು ಹಾಗೂ ‘ಚನ್ನಬಸಪ್ಪ ಸಾಹಿತ್ಯ ಮತ್ತು ಶಿಕ್ಷಣ ದತ್ತಿ ಪ್ರತಿಷ್ಠಾನ’ದ ಅಧ್ಯಕ್ಷೆ ಶಾಂತಾಜಯಪ್ರಸಾದ್ ಹೇಳಿದರು.
ಅವರು ಕನ್ನಡ ಪುಸ್ತಕ ಪ್ರಾಧಿಕಾರ, ಕೋ.ಚನ್ನಬಸಪ್ಪ ಸಾಹಿತ್ಯ ಮತ್ತು ಶಿಕ್ಷಣ ದತ್ತಿ ಪ್ರತಿಷ್ಠಾನಗಳು ಹಿರಿಯಡಕ ಹಾಗೂ ತೆಂಕನಿಡಿಯೂರು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಿದ ‘ಸ್ವಾತಂತ್ರ್ಯ ಯೋಧ, ಹಿರಿಯಸಾಹಿತಿ ಕೋ.ಚನ್ನಬಸಪ್ಪನವರ ಕೃತಿಗಳ ಅವಲೋಕನ’ ಎಂಬ ಒಂದು ದಿನದ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಗಾರದ ಮೊದಲಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ‘ಜನಪರ ನ್ಯಾಯಾಧೀಶರಾಗಿ ಕೋ.ಚೆ’ ಎನ್ನುವ ವಿಷಯದ ಮೇಲೆ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆಯವರು, ‘ಜನ್ಮತಃ ಜೀವಪರ ನ್ಯಾಯಾಧೀಶರೇ ಆಗಿದ್ದ ಕೋ. ಚೆನ್ನಬಸಪ್ಪನವರು ಜನಸಾಮಾನ್ಯರ ಅನುಭವಗಳನ್ನು ತನ್ನದಾಗಿಸಿಕೊಂಡು ಬದುಕಿದವರು ಮಾತ್ರವಲ್ಲ ಕುವೆಂಪು ಮುಂತಾದವರ ವೈಜ್ಞಾನಿಕ, ವೈಚಾರಿಕತೆಯಿಂದ ಹದಗೊಂಡ ಪ್ರಜ್ಞೆಯಲ್ಲಿ ಲೋಕವನ್ನು ಜಾತಿ, ಲಿಂಗ, ಧರ್ಮದ ಗೋಡೆಯಿಲ್ಲದೆ ಬಯಲಾಗಿಯೇ ಕಂಡವರು’ ಎಂದರು.
ಎರಡನೆಯ ಗೋಷ್ಠಿಯಲ್ಲಿ ‘ಕೋ. ಚೆ ಅವರ ಸಾಹಿತ್ಯದಲ್ಲಿ ಪ್ರಗತಿಶೀಲತೆ’ ಎಂಬ ವಿಷಯದ ಕುರಿತು ಮಾತನಾಡಿದ ಉಜಿರೆ ಎಸ್ ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆಯವರು, ‘ಕೋ. ಚನ್ನಬಸಪ್ಪನವರ ಬರಹಗಳು ಆಲಯವನ್ನು ನಿರಾಕರಿಸಿ ಕನ್ನಡದ ಶರಣ ವಿವೇಕವಾದ ಬಯಲನ್ನು ಅಪ್ಪಿಕೊಂಡವುಗಳು ಮಾತ್ರವಲ್ಲ ವೈಜ್ಞಾನಿಕ ವೈಚಾರಿಕ ತಳಹದಿಯಲ್ಲಿ ರೂಪುಗೊಂಡ ನೈತಿಕ ರಾಜಕೀಯ ಪ್ರಜ್ಞೆಯುಳ್ಳ ವಿಶ್ವಾತ್ಮಕ ಸರ್ವೋದಯ ಸಮನ್ವಯದ ಸಾಂಸ್ಕೃತಿಕ ಅನ್ವೇಷಣೆಯ ಪ್ರಗತಿಶೀಲ ಮಾದರಿಗಳು’ ಎಂದರು.
ಜೊತೆಗೆ ‘ಕರುಣೆಯನ್ನೇ ಧರ್ಮವೆಂಬ ಜೀವಪರ ಸತ್ಯವಾಗಿ ಮಂಡಿಸುವ ಕೋ.ಚೆ ಬರಹಗಳು ಧರ್ಮಾಂಧತೆಯನ್ನು ರೂಪಿಸುವ ಹುಸಿಧಾರ್ಮಿಕತೆಗೆ ಬದಲಾಗಿ ಪರಮಹಂಸ, ವಿವೇಕಾನಂದ, ಅರವಿಂದ ಹಾಗೂ ಕುವೆಂಪು ಅವರ ಸಾಮಾಜಿಕ ಆಧ್ಯಾತ್ಮವನ್ನು ಮುಂದಿಡುತ್ತವೆ ಮತ್ತು ನಿರ್ಲಕ್ಷಿತರ ಬದುಕಿನ ವಿಕಾಸದಲ್ಲಿಯೇ ನಿಜವಾದ ಪ್ರಗತಿಯನ್ನು ಕಾಣುತ್ತವೆ’ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯಡಕ ಸಪ್ರದ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿಯವರು, ‘ಕನ್ನಡದಲ್ಲಿ ಗಾಂಧೀ ಮತ್ತು ಕುವೆಂಪು ಇಬ್ಬರನ್ನೂ ಆವಾಹಿಸಿಕೊಂಡು ಬದುಕಿದ ಕೋ.ಚೆ, ‘ಮನುಷ್ಯಜಾತಿ ತಾನೊಂದೆವಲ’ ಎಂದ ಪಂಪನ ಮಾತನ್ನು ದಿಟವಾಗಿಯೂ ಬಾಳುವ ಮೂಲಕ ಕನ್ನಡದ ಪಾಲಿನ ನಿಜದ ನಾಡೋಜನಾದವರು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೆಂಕನಿಡಿಯೂರು ಸಪ್ರದ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ.ಗಾಂವ್ಕರ್ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಅರ್ಚನಾ ವಂದಿಸಿದ ಈ ಕಾರ್ಯಕ್ರಮವನ್ನು ಶಾಲಿನಿ ಯು.ಬಿ ನಿರೂಪಿಸಿದರು. ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ